Advertisement

ಬೊಂಬಾ ರೈಡ್ ಶಿಕ್ಷಣದ ಅವ್ಯವಸ್ಥೆಯನ್ನು ಹೇಳುತ್ತಾ ಶೈಕ್ಷಣಿಕ ಅಗತ್ಯ ಪ್ರತಿಪಾದಿಸುವ ಸಿನಿಮಾ

06:57 PM Nov 23, 2021 | ಅರವಿಂದ ನಾವಡ |

ಪಣಜಿ: ಶಿಕ್ಷಣ ವ್ಯವಸ್ಥೆ ದೇಶದ ಪ್ರತಿ ಮೂಲೆಗೂ ತಲುಪಿತೇ? ಎಂಬ ಪ್ರಶ್ನೆ ಕೇಳಿದರೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಎಲ್ಲ ಶಾಲೆಗಳಲ್ಲೂ ಮೂಲ ವ್ಯವಸ್ಥೆಗಳಿವೆಯೇ ಎಂದು ಕೇಳಿದರೂ ಇಲ್ಲ ಎಂಬ ಉತ್ತರ ಸಿಗುತ್ತದೆ.

Advertisement

ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಸೌಕರ್ಯಗಳು ಸಾಧ್ಯವಾಗಬೇಕು, ಮಕ್ಕಳು ಹೆಚ್ಚು ಸರಕಾರಿ ಶಾಲೆಗಳಿಗೆ ಹೋಗಬೇಕು ಎಂಬುದು ಎಲ್ಲರ ಬಯಕೆ. ಇದು ಸಮಸ್ಯೆಯ ಒಂದು ಬದಿಯಾದರೆ, ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ತಮ್ಮ ನೌಕರಿ, ಸಂಬಳ, ಇತರೆ ಭತ್ಯೆಗಳಿಗಾಗಿ ಊರಿನ ಮಕ್ಕಳನ್ನು ಮನವೊಲಿಸಿ ಶಾಲೆಯಲ್ಲಿ ಕುಳ್ಳಿರಿಸಿ ಸರಕಾರಕ್ಕೆ ಲೆಕ್ಕ ಕೊಡುವ ಸಮಸ್ಯೆ ಮತ್ತೊಂದು ಬದಿ. ಹಲವು ರಾಜ್ಯಗಳಲ್ಲಿ ಈ ಸಮಸ್ಯೆ ಇದೆ.

ಇಂಥದೊಂದು ವರದಿಯನ್ನು ಆಧರಿಸಿಯೇ ಅಸ್ಸಾಮಿನ ಚಲನಚಿತ್ರ ನಿರ್ದೇಶಕ ವಿಶ್ವಜಿತ್ ಬೋರಾ ರೂಪಿಸಿದ ಸಿನಿಮಾ ‘ಬೊಂಬಾ ರೈಡ್’. ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಉತ್ಸವ (ಇಫಿ) 52 ನೇ ಆವೃತ್ತಿಯಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರವಿದು.

ಆ ಊರಿನ ಶಾಲೆಗೆ ಬೊಂಬಾ (ಹಿರಣ್ಯ ಪೆಗು) ಒಬ್ಬನೇ ವಿದ್ಯಾರ್ಥಿ. ಅವನು ನಾಳೆಯಿಂದ ಶಾಲೆಗೆ ಬಾರದಿದ್ದರೆ ಶಾಲೆ ಮುಚ್ಚುತ್ತದೆ. ಶಿಕ್ಷಕರು ಬೇರೆಡೆಗೆ ವರ್ಗವಾಗುತ್ತಾರೆ. ವಿವಿಧ ಭತ್ಯಗಳೂ ಕಡಿಮೆಯಾಗಬಹುದು. ಸಂಬಳಕ್ಕೆ ಕುತ್ತೂ ಬಂದರೂ ಅಚ್ಚರಿಯಿಲ್ಲ. ಹೆಚ್ಚುವರಿ ಶಿಕ್ಷಕರೆಂದು ಪರಿಗಣಿತವಾಗಿ ಉದ್ಯೋಗ ಹೋದರೂ ಅಚ್ಚರಿ ಇಲ್ಲ. ಅಂಥದೊಂದು ಸ್ಥಿತಿಯಲ್ಲಿ ಪ್ರತಿದಿನವೂ ಬೊಂಬಾ ಮನೆಗೆ ಹೋಗಿ ಶಿಕ್ಷಕರು ಶಾಲೆಗೆ ಕರೆ ತರುತ್ತಾರೆ. ಅವನ ಮನವೊಲಿಸಿ, ಪುಸಲಾಯಿಸಿ ಕರೆ ತರುವ ಮೂಲಕ ಶಾಲೆಯನ್ನು ಉಳಿಸಿಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ತಮ್ಮ ಸಂಬಳದ ಲೆಕ್ಕಾಚಾರಕ್ಕೆ ಹೆಣೆಯುವ ತಂತ್ರಗಳು, ಮಧ್ಯಾಹ್ನದ ಬಿಸಿಯೂಟದ ಲೆಕ್ಕದಲ್ಲಿ ಲಪಟಾಯಿಸುವ ಅನುದಾನ ಇತ್ಯಾದಿ ಎಲ್ಲವೂ ನಡೆಯುತ್ತದೆ. ಅದಾದ ಮೇಲೂ ಸರಕಾರ ಶಾಲೆಯನ್ನು ಮುಚ್ಚಲು ಮುಂದಾದಾಗ ತನ್ನದೇ ಆದ ಚಾಣಾಕ್ಷತನ, ಬುದ್ಧಿವಂತಿಕೆಯ ಮೂಲಕ ಬೊಂಬಾ ಶಾಲೆಯನ್ನು ಉಳಿಸಿಕೊಳ್ಳುತ್ತಾನೆ. ಯಲು ಸಹಕರಿಸುತ್ತಾನೆ. ಆ ಮೂಲಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತದೆ ಸಿನಿಮಾ.

Advertisement

ವಿಶ್ವಜಿತ್ ಅವರು ಸಮಸ್ಯೆಯ ಎರಡು ಮುಖಗಳನ್ನೂ ಹೇಳುತ್ತಾ, ಮೌನವಾಗಿ ಬಿಡುವುದಿಲ್ಲ. ಪ್ರತಿ ಗ್ರಾಮೀಣ ಪ್ರದೇಶದ ಮೂಲೆ ಮೂಲೆಗೂ ಶಿಕ್ಷಣ ತಲುಪಬೇಕಿದೆ ಎಂದು ಪ್ರತಿಪಾದಿಸುತ್ತಾರೆ. ಅದರೊಂದಿಗೇ ಪ್ರಸ್ತುತ ವ್ಯವಸ್ಥೆಯಲ್ಲಿನ ಲೋಪದೋಷಗಳು, ಭ್ರಷ್ಟಾಚಾರ ಎಲ್ಲವನ್ನೂ ವಿವರಿಸುತ್ತಾರೆ. ಒಂದು ಬಗೆಯಲ್ಲಿ ಚಿಕಿತ್ಸಕ ನೆಲೆಯಲ್ಲಿ ನೋಡುತ್ತಾರೆ ಎನ್ನಬಹುದು. ವಿಡಂಬನಾತ್ಮಕವಾಗಿ ಕಥೆಯನ್ನು ಹೇಳುತ್ತಾ ಇದಕ್ಕೆ ಔಷಧ ಬೇಕಿದೆ ಎಂಬ ಆಗ್ರಹವೂ ಸಿನಿಮಾದಲ್ಲಿ ವ್ಯಕ್ತವಾಗುತ್ತದೆ. ಭ್ರಷ್ಟ ವ್ಯವಸ್ಥೆಯನ್ನು ಹೀಗಳೆಯುವಾಗ ಇಂಥ ಇಡೀ ವ್ಯವಸ್ಥೆಯೇ ಬೇಡ ಎನ್ನುವ ದನಿಯಲ್ಲೆಲ್ಲೂ ಹೊರಡಿಸುವುದಿಲ್ಲ. ಅದು ಬೊಂಬಾ ರೈಡ್ ನಲ್ಲಿ ಸ್ಪಷ್ಟವಾಗುತ್ತದೆ. ಸರಕಾರಿ ವ್ಯವಸ್ಥೆಯ ಕುರಿತು ಚಿಕಿತ್ಸಾ ನೆಲೆಯಲ್ಲಿ ನೋಡುವ ಸಿನಿಮಾ.

ವಿಶ್ವಜಿತ್‍ ಬೋರಾ ಅವರ ಮತ್ತೊಂದು ಪ್ರಯತ್ನವೆಂದರೆ, ವೃತ್ತಿಪರರಲ್ಲದ ಹೊಸ ಕಲಾವಿದರನ್ನು ಬಳಸಿಕೊಳ್ಳುವ ಮೂಲಕ ಸಿನಿಮಾಕ್ಕೆ ಸಹಜತೆ ತರುವುದು. ಅವರ ಹಿಂದಿನ ಸಿನಿಮಾ ಗಾಡ್ ಆನ್ ದಿ ಬಾಲ್ಕನಿಯಲ್ಲೂ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಸೆಳೆದಿದ್ದರು.

ತಮ್ಮ ಸಿನಿಮಾದ ಬಗ್ಗೆ ಮಾತನಾಡುವಾಗಲೂ ವಿಶ‍್ವಜಿತ್,’ಜಗತ್ತನ್ನು ಬದಲಾಯಿಸುವಲ್ಲಿ ಶಿಕ್ಷಣವೆಂಬುದು ಅತ್ಯಂತ ಪರಿಣಾಮಕಾರಿ ಸಾಧನ. ಆದರೆ ಇದು ಜನರಿಗೆ ಅರ್ಥವಾಗಬೇಕು. ಇಲ್ಲವಾದರೆ ಏನು ಮಾಡುವುದು?’ ಎಂದು ಪ್ರಶ್ನಿಸುತ್ತಾರೆ.

‘ಈ ನೆಲೆಯಲ್ಲೇ ಶಿಕ್ಷಣದ ವ್ಯವಸ್ಥೆಯ ಲಾಭವನ್ನು ಹೇಳಲೆಂದೇ ಈ ಸಿನಿಮಾ ಮಾಡಿರುವೆ. ಇದರೊಂದಿಗೆ ಶಿಕ್ಷಣ ವ್ಯವಸ್ಥೆಯಲ್ಲಿನ ವಿರೋಧಾಭಾಸಗಳನ್ನೂ ಕಟ್ಟಿಕೊಟ್ಟಿರುವೆ. ಈ ಸಿನಿಮಾದ ಮೂಲಕ ಶಿಕ್ಷಣ ಹೇಗೆ ಜಗತ್ತನ್ನು ಬದಲಾಯಿಸಬಲ್ಲದು ಎಂದನ್ನು ಹೇಳಿದ್ದೇನೆ. ಇದರೊಂದಿಗೇ ಗ್ರಾಮೀಣ ಶಾಲೆಗಳ ಅವ್ಯವಸ್ಥೆಯನ್ನು ವಿವರಿಸಿದ್ದೇನೆ. ಇದು ಅಸ್ಸಾಮಿನ ಗ್ರಾಮೀಣ ಶಿಕ್ಷಣ ವ್ಯವಸ್ಥೆಯೂ ಹೌದು. ಸರಕಾರ ಸಹಕಾರ ನೀಡಿದರೂ, ಜನ ಮುಂದೆ ಬಂದರೂ ಶಿಕ್ಷಕ ಸಮುದಾಯ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದರು.

ಈ ಸಿನಿಮಾ ನಿರ್ಮಾಣವಾಗಿದ್ದರ ಹಿಂದೆ 2003 ರಲ್ಲಿ ಪ್ರಕಟವಾದ ಟಿವಿ ಯ ಸುದ್ದಿಯ ತುಣುಕಿದೆ. ಇಂಥದೊಂದು ಸುದ್ದಿಯ ಎಳೆ ಸಿಕ್ಕ ಕೂಡಲೇ ನನ್ನ ಗುರು ಜಾನು ಬರುವಾರೊಂದಿಗೆ ಚರ್ಚಿಸಿದೆ. ಅವರು ಒಪ್ಪಿದರು. ಆನಂತರ ಸಿನಿಮಾ ನಿರ್ಮಾಣಕ್ಕೆ ಇಳಿದೆ. ನನ್ನ ಗೆಳೆಯರು ಕೋವಿಡ್ ಸಂದರ್ಭದಲ್ಲಿ ನೆರವಿಗೆ ಬಂದರು. ಎಲ್ಲರ ಪ್ರಯತ್ನವಾಗಿ ಸಿನಿಮಾ ಸಿದ್ಧವಾಗಿದೆ’ ಎಂದು ಹೇಳಿದರು.

ವಿಶ‍್ವಜಿತ್ ಬಸು ಹಿಂದಿ ಮತ್ತು ಅಸ್ಸಾಮಿಯಲ್ಲಿ ಸಿನಿಮಾಗಳನ್ನು ನಿರ್ದೇಶಿಸುತ್ತಿರುವವರು. ಐಸಾ ಎ ಜಹಾನ್, ಬಹ್ನಿಮಾನ್, ರಕ್ತಬೀಜ್, ಪೆಹುಜಲಿ, ಗಾಡ್ ಆನ್ ದಿ ಬಾಲ್ಕನಿ ಅವರ ಇತರೆ ಚಲನಚಿತ್ರಗಳು.

Advertisement

Udayavani is now on Telegram. Click here to join our channel and stay updated with the latest news.

Next