Advertisement

“2030ರ ವೇಳೆಗೆ ವಿಶ್ವ ಮಟ್ಟದಲ್ಲಿ 5 ಸಾವಿರ ಕೊಂಕಣಿ ನಾಯಕರ ಸೃಷ್ಟಿ’

01:28 AM Aug 26, 2019 | Sriram |

ಮಂಗಳೂರು: ಕೊಂಕಣಿ ಭಾಷಿಕರಲ್ಲಿ ಅಪಾರ ಬೌದ್ಧಿಕ ಶಕ್ತಿಸಾಮರ್ಥ್ಯವಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು 2030ರ ವೇಳೆಗೆ 5 ಸಾವಿರ ಕೊಂಕಣಿ ಭಾಷಿಕರನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಭಾನ್ವಿತರನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ಇದೆ ಎಂದು ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನ ಯೋಜನೆಯ ಮೂಲ ಪ್ರೇರಕ ಟಿ.ವಿ. ಮೋಹನದಾಸ ಪೈ ಹೇಳಿದರು.

Advertisement

ಅವರು ರವಿವಾರ ಕೊಡಿಯಾಲ್‌ಬೈಲ್‌ನ ಟಿ.ವಿ. ರಮಣ್‌ ಪೈ ಕನ್ವೆನ್ಶನ್‌ ಹಾಲ್‌ನಲ್ಲಿ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ದಶಮಾನೋತ್ಸವ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಆರ್ಥಿಕ ಅಡಚಣೆಯಿಂದ ಕೊಂಕಣಿ ಭಾಷಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿಶ್ವ ಕೊಂಕಣಿ ಕೇಂದ್ರವು ವಿದ್ಯಾರ್ಥಿವೇತನ ಯೋಜನೆಯನ್ನು 10 ವರ್ಷಗಳ ಹಿಂದೆ ಆರಂಭಿಸಿತ್ತು. ಇದರ ಪ್ರಯೋಜನ ಪಡೆದು 10 ವರ್ಷಗಳಲ್ಲಿ ನಮ್ಮ ಯುವಕರು ಜಾಗತಿಕ ಮಟ್ಟದಲ್ಲಿ ಬಲಿಷ್ಠರಾಗಬೇಕು ಎಂದರು.

ಕೌನ್ಸೆಲಿಂಗ್‌ ಅಗತ್ಯ
ಉನ್ನತ ಶಿಕ್ಷಣ ಸಂದರ್ಭ ವಿಷಯ ಆಯ್ಕೆಯ ವಿಚಾರದಲ್ಲಿ ಹೆತ್ತವರು ಒತ್ತಡ ತರುವುದು ಸರಿಯಲ್ಲ. ಮಕ್ಕಳು 9ನೇ ತರಗತಿಯಲ್ಲಿ ಇರುವಾಗಲೇ ಕೌನ್ಸೆಲಿಂಗ್‌ ಆರಂಭಿಸಬೇಕು. ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೊದಲ ವಿದ್ಯಾರ್ಥಿ ವೇತನವನ್ನು ವಿತರಿಸಿದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಟ್ರಸ್ಟಿ ವಸಂತಿ ರಾಮದಾಸ್‌ ಪೈ ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌, ಕೊಂಕಣಿ ಸಮಾಜದ ಎಲ್ಲರೂ ಮುಖ್ಯ ವಾಹಿನಿಗೆ ಬರಬೇಕೆಂದು ವಿಶ್ವ ಕೊಂಕಣಿ ಕೇಂದ್ರವು ವಿದ್ಯಾರ್ಥಿ ವೇತನ ಯೋಜನೆ ಹಮ್ಮಿಕೊಂಡಿರುವುನು ಶ್ಲಾಘನೀಯ ಎಂದರು.

Advertisement

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಇಚ್ಛಿಸುವ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ ಪ್ರವೇಶದ ಸಂದರ್ಭ ಎಲ್ಲ ಪ್ರಕ್ರಿಯೆಗಳನ್ನು ಉಚಿತವಾಗಿ ಒದಗಿಸುವುದಾಗಿ ಝೂಮ್‌ಬ್ರಾಡ್‌ ಡಾಟ್‌ಕಾಂ ಸಿಇಒ ಅಭಿಷೇಕ್‌ ನಖಾಟೆ ಹೇಳಿದರು.

ಎಂಟರ್‌ಪ್ರೈಸ್‌ 5ಸಿ ಸಂಸ್ಥೆಯ ಸಿಇಒ ಜಗನ್ನಾಥ ಕಿಣಿ, ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾ ಸಭಾದ ಅಧ್ಯಕ್ಷ ಕೆ.ಬಿ. ಖಾರ್ವಿ, ಕುಡುಬಿ ಸಮಾಜದ ಪ್ರತಿನಿಧಿ ನಾರಾಯಣ ನಾಯಕ್‌ ಅತಿಥಿಗಳಾಗಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿ, ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಕಾರ್ಯದರ್ಶಿ ಪ್ರದೀಪ್‌ ಜಿ. ಪೈ ಪ್ರಸ್ತಾವನೆಗೈದರು. ವಿದ್ಯಾರ್ಥಿ ವೇತನ ಯೋಜನೆಯ ಹಳೆ ವಿದ್ಯಾರ್ಥಿಗಳು ಸಹಕರಿಸುತ್ತಿದ್ದು, ಕಳೆದ ವರ್ಷ 18 ಲಕ್ಷ ರೂ. ನೀಡಿದ್ದರು. ಈ ವರ್ಷ 35 ಲಕ್ಷ ರೂ. ನೀಡಿದ್ದಾರೆ ಎಂದು ಪ್ರದೀಪ್‌ ಜಿ. ಪೈ ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿರೋಶ್‌ ಕುಮಾರಿ ಹಳೆವಿದ್ಯಾರ್ಥಿಗಳಿಂದ ಸಂಗ್ರಹಿಸಿದ 35.38 ಲಕ್ಷ ರೂ.ಗಳ ಚೆಕ್ಕನ್ನು ಮೋಹನ್‌ದಾಸ್‌ ಪೈ ಅವರಿಗೆ ಹಸ್ತಾಂತರಿಸಿದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಶಕುಂತಳಾ ಆರ್‌. ಕಿಣಿ ಉಪಸ್ಥಿತರಿದ್ದರು. ವಿನೀತ್‌ ಶಾನುಭೋಗ್‌ ವಂದಿಸಿದರು. ಸ್ಮಿತಾ ಶೆಣೈ ನಿರ್ವಹಿಸಿದರು.

3.5 ಕೋಟಿ ರೂ. ವಿತರಣೆ
ವಿವಿಧ ಶೈಕ್ಷಣಿಕ ಶ್ರೇಣಿಗಳಲ್ಲಿ ಅಧ್ಯಯನ ಮಾಡುತ್ತಿರುವ 135 ಮಂದಿ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ 3.5 ಕೋಟಿ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next