Advertisement

ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದರೆ 5,000 ರೂ. ಪ್ರೋತ್ಸಾಹಧನ

09:34 PM Jul 29, 2019 | mahesh |

ಮಹಾನಗರ: “ಮನೆ ಮನೆಗೆ ಮಳೆಕೊಯ್ಲು’ ಕುರಿತ ಜಲ ಸಂರಕ್ಷಣೆಯ “ಉದಯವಾಣಿ’ ಅಭಿಯಾನವು ಜಿಲ್ಲೆಯಾದ್ಯಂತ ಸಾವಿರಾರು ಜನರಿಗೆ ಪ್ರೇರಣೆ ನೀಡುತ್ತಿದ್ದು ಜಲಾಂದೋಲನ ರೂಪಿಸುತ್ತಿದೆ. ಇದನ್ನು ಮತ್ತಷ್ಟು ಹುರಿದುಂಬಿಸುವಂತೆ ಮೂಡುಬಿದಿರೆಯ ಸಹಕಾರಿ ಕೋ-ಆಪರೇಟಿವ್‌ ಸರ್ವಿಸ್‌ ಬ್ಯಾಂಕ್‌ ತನ್ನ ಸದಸ್ಯರಿಗೆ ಮಳೆಕೊಯ್ಲು ಅನುಷ್ಠಾನಕ್ಕಾಗಿ ಮಾದರಿ ಕಾರ್ಯಕ್ಕೆ ಮುಂದಾಗಿದೆ.

Advertisement

ಬ್ಯಾಂಕ್‌ನ ಸದಸ್ಯರು ತಮ್ಮ ಮನೆಯಲ್ಲಿ ಮಳೆಕೊಯ್ಲು ಅನುಷ್ಠಾನಿಸಿದರೆ ಅವರಿಗೆ ಬ್ಯಾಂಕ್‌ ವತಿಯಿಂದ 5 ಸಾವಿರ ರೂ. ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಇದೊಂದು ಅತ್ಯಂತ ಮಹತ್ವದ ಹೆಜ್ಜೆ. ಈ ಮೂಲಕ ಗ್ರಾಮ ಮಟ್ಟದಲ್ಲಿ ಜಲ ಸಂರಕ್ಷಣೆಗೆ ಸಹಕಾರ ಬ್ಯಾಂಕೊಂದು ಜನರನ್ನು ಬೆಂಬಲಿಸುತ್ತಿರುವುದು ನಿಜಕ್ಕೂ ಮಾದರಿ ನಡೆ. ಜಿಲ್ಲೆಯ ಮತ್ತಷ್ಟು ಸಹಕಾರ ಬ್ಯಾಂಕ್‌ಗಳು, ಬ್ಯಾಂಕ್‌ಗಳು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮಳೆಕೊಯ್ಲು ಸೇರಿದಂತೆ ಜಲ ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಬೇಕೆಂಬುದು “ಉದಯವಾಣಿ’ಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಆಶಯವೂ ಸಹ.

1916ರಲ್ಲಿ ಮೂಡುಬಿದಿರೆಯಲ್ಲಿ ಹುಟ್ಟಿದ ಈ ಬ್ಯಾಂಕ್‌ ರವಿವಾರ 103ನೇ ವರ್ಷದ ಸಂಭ್ರಮದೊಂದಿಗೆ ಮಹಾಸಭೆ ನಡೆಸಿದೆ. ಪ್ರಾಂತ್ಯ ಹಾಗೂ ಮಾರ್ಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 9000 ಮಂದಿ ಸದಸ್ಯರಿದ್ದಾರೆ. ಸುಮಾರು 5 ಕಿ.ಮೀ.ವ್ಯಾಪ್ತಿಯಲ್ಲಿ ಇದರ ಕಾರ್ಯ ನಿರ್ವಹಣೆ. ಹನುಮಾನ್‌ ದೇವಸ್ಥಾನದ ಬಳಿ ಇರುವ ಬ್ಯಾಂಕ್‌ನ ಅಧ್ಯಕ್ಷರು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಸ್ಯರಿಗೆ ಪ್ರೋತ್ಸಾಹ ಧನ
ತನ್ನ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಬ್ಯಾಂಕ್‌, ಈಗ ಮಳೆ ನೀರು ಸಂರಕ್ಷಣೆಯ ಜಾಗೃತಿಗೆ ಮುಂದಾಗಿದೆ. ಇದಕ್ಕಾಗಿ ವಿಶೇಷ ಪ್ರೋತ್ಸಾಹ ಧನವನ್ನೂ ಘೋಷಿಸಿದೆ. ಪ್ರಾಂತ್ಯ ಹಾಗೂ ಮಾರ್ಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಂತ ಮನೆ ಹಾಗೂ ಬಾವಿ ಹೊಂದಿದ್ದವರು ಮಳೆ ಕೊಯ್ಲು ಅಳವಡಿಸಿ ಪ್ರೋತ್ಸಾಹ ಧನ ಪಡೆಯಬಹುದು. ಇದಕ್ಕೆ ಮಳೆಕೊಯ್ಲು ಮಾಡಿರುವ ಫೋಟೋ ಹಾಗೂ ಬಿಲ್‌ ಅನ್ನು ಬ್ಯಾಂಕ್‌ಗೆ ನೀಡಬೇಕಿದೆ.

ಬ್ಯಾಂಕ್‌ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಹಾಗೂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ ಎಂ. ಅವರ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ಪ್ರೋತ್ಸಾಹ ಧನ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಆ. 3 ರಂದು ಏರ್ಪಡಿಸಿರುವ ಕೃಷಿ-ಖುಷಿ ಮಾಹಿತಿ ಕಾರ್ಯಕ್ರಮದಡಿ ಮಳೆ ಕೊಯ್ಲು ಯೋಜನೆ ಉದ್ಘಾಟಿಸಲಾಗುತ್ತಿದೆ. ಇದರೊಂದಿಗೆ ಯೋಜನೆ ಕುರಿತು ಮಾಹಿತಿ ನೀಡಲಾಗುತ್ತಿದೆ.

Advertisement

ಜು. 31: ಎಸ್‌ಡಿಎಂನಲ್ಲಿ ಉಪನ್ಯಾಸ
ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ ವತಿಯಿಂದ ಎಸ್‌ಡಿಎಂ ಸ್ನಾತಕೋತ್ತರ ಉದ್ಯಮಾಡಳಿತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮಳೆಕೊಯ್ಲು ಉಪನ್ಯಾಸ ಜು. 31ರಂದು ಸಂಜೆ 6 ಗಂಟೆಗೆ ಕೊಡಿಯಾಲ್‌ಬೈಲ್‌ ಎಸ್‌ಡಿಎಂ ಎಂಬಿಎ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಉಪನ್ಯಾಸ ನೀಡಲಿದ್ದಾರೆ ಎಂದು ಅಸೋಸಿಯೇಶನ್‌ ಉಪಾಧ್ಯಕ್ಷ ಕೆ. ಜೈರಾಜ್‌ ಬಿ. ರೈ ತಿಳಿಸಿದ್ದಾರೆ.

ನಾಳೆ ಮಳೆಕೊಯ್ಲು ಅರಿವು ಕಾರ್ಯಕ್ರಮ
ಜಿಲ್ಲೆಯಲ್ಲಿ ಉದಯವಾಣಿ ಪತ್ರಿಕೆ ಅಭಿಯಾನದಿಂದ ಪ್ರೇರಣೆಗೊಂಡು ಒಂದೆಡೆ ಮಳೆಕೊಯ್ಲು ಅಳವಡಿಸಿಕೊಳ್ಳುತ್ತಿರುವ ಜನರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದರೆ, ಮತ್ತೂಂದೆಡೆ ಮಳೆ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ವಿವಿಧ ಸಂಘಸಂಸ್ಥೆಗಳು ಮುಂದಾಗುತ್ತಿವೆ. ಸೈಂಟ್‌ ಆಗ್ನೆಸ್‌ ಕಾಲೇಜು “ಉದಯವಾಣಿ’ ಸಹಯೋಗದಲ್ಲಿ ಜು.31ರಂದು ಬೆಳಗ್ಗೆ 11.15ಕ್ಕೆ ಮಳೆಕೊಯ್ಲು ಅರಿವು ಕಾರ್ಯಕ್ರಮ ಆಯೋಜಿಸಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಅವರು ವಿಶೇಷ ಉಪನ್ಯಾಸ ನೀಡುವರು. ಆಗ್ನೆಸ್‌ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್‌ ನೋರಿನೊ ಡಿಸೋಜಾ, ಉಪ ಪ್ರಾಂಶುಪಾಲರಾದ ಸಿಸ್ಟರ್‌ ಜಾನೆಟ್‌ ಸಿಕ್ವೇರಾ, ಡಾ| ಟ್ರೆಸ್ಸಿ ಮಿನೇಜಸ್‌ ಮುಂತಾದವರು ಮುಖ್ಯ ಅಥಿಗಳಾಗಿ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬಂದಿ ಪಾಲ್ಗೊಳ್ಳುವರು.

 ”ಮಳೆಕೊಯ್ಲು ಜಾಗೃತಿಗಾಗಿ ಅನುಷ್ಠಾನ’
ನಮ್ಮ ಸದಸ್ಯರ ಸ್ವಂತ ಮನೆ ಹಾಗೂ ಬಾವಿ ಹೊಂದಿದವರು ಮಳೆಕೊಯ್ಲು ಅನುಷ್ಠಾನಿಸಿದ್ದರೆ ಅವರಿಗೆ 5 ಸಾವಿರ ರೂ. ಪ್ರೋತ್ಸಾಹಧನ ನೀಡಲು ಬ್ಯಾಂಕ್‌ ನಿರ್ಧರಿಸಿದೆ. ಸುಮಾರು 150 ರಷ್ಟು ಸದಸ್ಯರು ಈ ಬಗ್ಗೆ ವಿಚಾರಿಸಿದ್ದಾರೆ. ಮಳೆ ನೀರು ಸಂರಕ್ಷಣೆಯ ಜಾಗೃತಿ ಎಲ್ಲೆಡೆಯೂ ಅನುಷ್ಠಾನವಾಗಲಿ ಎಂಬ ಆಶಯದಿಂದ ಈ ಪರಿಕಲ್ಪನೆ ಜಾರಿಗೊಳಿಸಲಾಗಿದೆ.
– ಚಂದ್ರಶೇಖರ ಎಂ., ಸಿಇ ಒ, ಮೂಡುಬಿದಿರೆ ಕೋ-ಆಪರೇಟಿವ್‌ ಸರ್ವಿಸ್‌ ಬ್ಯಾಂಕ್‌.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next