Advertisement

50 ಸಾವಿರ ಕೋ.ರೂ. ವಿಶೇಷ ಪ್ಯಾಕೇಜ್‌ಗೆ ವಿಪಕ್ಷಗಳ ಆಗ್ರಹ

12:39 AM May 09, 2020 | Sriram |

ಬೆಂಗಳೂರು: ಕೋವಿಡ್-19 ಲಾಕ್‌ಡೌನ್‌ನಿಂದ ಪಾರಾಗಲು ರಾಜ್ಯ ಸರಕಾರ ಕೇಂದ್ರದಿಂದ 50 ಸಾವಿರ ಕೋ.ರೂ. ನೆರವು ಪಡೆಯಬೇಕು ಮತ್ತು ರಾಜ್ಯ 50 ಸಾವಿರ ಕೋ. ರೂ. ಪ್ಯಾಕೇಜ್‌ ಘೋಷಣೆ ಮಾಡುವಂತೆ ವಿಪಕ್ಷಗಳು ರಾಜ್ಯ ಸರಕಾರವನ್ನು ಆಗ್ರಹಿಸಿವೆ.

Advertisement

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜೆಡಿಎಸ್‌, ಎಡ ಪಕ್ಷಗಳು ಮತ್ತು ರೈತ ಸಂಘಟನೆಗಳ ಮುಖಂಡರು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವಿಪಕ್ಷಗಳ ಹಕ್ಕೊತ್ತಾಯಗಳು
– ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರಕಾರ ರಾಜ್ಯಕ್ಕೆ ಕನಿಷ್ಠ 50,000 ಕೋ.ರೂ.ಗಳ ಆರ್ಥಿಕ ಪ್ಯಾಕೇಜ್‌ ನೀಡುವಂತೆ ಒತ್ತಾಯಿಸಬೇಕು.
– ರೈತರು ಬೆಳೆದ ಬೆಳೆ, ತರಕಾರಿ, ಹಣ್ಣು, ಹೂವು, ಪೌಲಿó, ರೇಷ್ಮೆ ಮುಂತಾದ ಉತ್ಪನ್ನಗಳ ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ನ್ಯಾಯೋಚಿತವಾಗಿ ಕನಿಷ್ಠ ಶೇ. 50ರಷ್ಟು ಪರಿಹಾರವನ್ನು ನೀಡಬೇಕು.
– ಪೂರ್ವ ಮುಂಗಾರಿನ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಭತ್ತ, ಬಾಳೆ, ದ್ರಾಕ್ಷಿ, ಮಾವು, ಟೊಮೆಟೊ ಬೆಳೆ ಹಾನಿಗೊಳಗಾದ ಪ್ರದೇಶದ ಜಂಟಿ ಸರ್ವೇ ನಡೆಸಿ ಪ್ರತಿ ಹೆಕ್ಟೇರ್‌ಗೆ 25,000 ರೂ. ಪರಿಹಾರ ನೀಡುವುದು.
– ರೈತರಿಗೆ ಪಾವತಿಸಬೇಕಾದ 3,000 ಕೋ. ರೂ. ಪಾವತಿಸುವಂತೆ ಆದೇಶಿಸಬೇಕು. ಜತೆಗೆ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಲ್ಲಿ ಪ್ರೀಮಿಯಂ ಪಾವತಿಸಿರುವ ಸಾವಿರಾರು ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡುವಂತೆ ವಿಮಾ ಕಂಪೆನಿಗಳಿಗೆ ಸೂಚಿಸಬೇಕು.
– ರಾಜ್ಯದಲ್ಲಿ ಮುಂಗಾರು ಪ್ರಾರಂಭ ವಾಗುತ್ತಿರುವುದರಿಂದ ಎಲ್ಲ ಸಹಕಾರಿ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಕನಿಷ್ಠ 10,000 ಕೋ. ರೂ.ಗಳನ್ನು ಬಿಡುಗಡೆ ಮಾಡಿ, ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಾತಿಯನ್ನು ಕೋವಿಡ್-19 ಅವಧಿ ಮುಗಿಯುವವರೆಗೂ ಷರತ್ತು ರಹಿತವಾಗಿ ಮುಂದೂಡಲು ಮತ್ತು ಈ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
– ಲಾಕ್‌ಡೌನ್‌ ಸಂಕಷ್ಟದ ಈ ಅವಧಿಯಲ್ಲಿ ಜನರ ಉತ್ಪನ್ನಗಳನ್ನು ಕೊಂಡುಕೊಳ್ಳಲು ಕೆಎಂಎಫ್‌ ಮತ್ತು ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳನ್ನು ಬಳಸಿಕೊಳ್ಳಬೇಕು.
– ಲಾಕ್‌ಡೌನ್‌ ಕಾರಣದಿಂದಾಗಿ ನಗರ ಗಳಿಂದ ಸಂಘಟಿತ, ಅಸಂಘಟಿತ, ದಿನಗೂಲಿ ಕಾರ್ಮಿಕರು ಅಪಾರ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗಿದೆ. ಹೀಗಾಗಿ ನರೇಗಾ ಮೂಲಕ 250 ದಿನಗಳ ಉದ್ಯೋಗ ನೀಡಿ, ಎರಡು ದಿನದಲ್ಲಿ ಕೂಲಿ ದೊರೆಯುವಂತೆ ಮಾಡಬೇಕು.
– ಎಲ್ಲ ಕುಶಲಕರ್ಮಿ ಸಮುದಾಯಗಳಿಗೆ ಲಾಕ್‌ಡೌನ್‌ ಮುಗಿಯುವವರೆಗೆ ಮಾಸಿಕವಾಗಿ ಕನಿಷ್ಠ 10,000 ರೂಪಾಯಿ, ಆಹಾರದ ಕಿಟ್‌ ನೀಡಬೇಕು.
– ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳು ಮತ್ತು ನಿಗಮ, ಮಂಡಳಿಗಳಲ್ಲಿ ವೆಚ್ಚ ಮಾಡದೆ ಉಳಿದ ಲಕ್ಷಾಂತರ ಕೋಟಿ ರೂ. ಪತ್ತೆಹಚ್ಚಿ ಬಳಸಿಕೊಳ್ಳಬೇಕು. ಸಂಕಷ್ಟ ಪರಿಸ್ಥಿತಿಯ ನೆಪದಲ್ಲಿ ಸರಕಾರದ ಆಸ್ತಿ, ಜಮೀನುಗಳನ್ನು ಮನಸೋ ಇಚ್ಛೆ ಮಾರಾಟ ಮಾಡಿ, ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ಕಲ್ಪಿಸುವುದನ್ನು ಸರಕಾರ ಈ ಕೂಡಲೇ ಕೈಬಿಡಬೇಕು.
– ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, 35,000 ಕೋ. ರೂ. ಪಿ.ಎಂ. ಕೇರ್‌ ನಿಧಿಗೆ ದೇಣಿಗೆ ನೀಡಿದ್ದಾರೆ. ಪಿಎಂ ಕೇರ್‌ ನಿಧಿಗೆ ರಾಜ್ಯದಿಂದ ಸಂಗ್ರಹವಾಗಿರುವ ಹಣದ ಬಗ್ಗೆ ಕೇಂದ್ರದಿಂದ ಮಾಹಿತಿ ನೀಡುವಂತೆ ಒತ್ತಾಯಿಸಬೇಕು.
– ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಆಹಾರದ ಕಿಟ್‌ಗಳನ್ನು ಬಿಜೆಪಿ ನಾಯಕರು ಮಾರಾಟ ಮಾಡಿರುವ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು.
– ಕೋವಿಡ್-19 ವಿಷಯದಲ್ಲಿ ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು.
– ಕೋವಿಡ್-19 ನಿಯಂತ್ರಿಸಲು ಕೇರಳ ಮತ್ತು ತೆಲಂಗಾಣ ಮಾದರಿಯಲ್ಲಿ 50 ಸಾವಿರ ಕೋ.ರೂ. ಪ್ಯಾಕೇಜ್‌ ಘೋಷಣೆ ಮಾಡಬೇಕು.
– ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯುತ್‌ ಬಿಲ್‌ಗ‌ಳನ್ನು ಸರಕಾರವೇ ಭರಿಸಬೇಕು.

ಸರಕಾರದ ತಪ್ಪು ತೋರಿಸಿದ್ದೇವೆ: ಡಿಕೆಶಿ
ಬೆಂಗಳೂರು: ತಾವು ನೀಡಿದ ರಚನಾತ್ಮಕ ಸಲಹೆ ಸ್ವೀಕರಿಸಿ, ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲು ಸಚಿವರು ತಮ್ಮ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಾಕ್‌ಡೌನ್‌ನಿಂದ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶುಕ್ರವಾರ ಕರೆದಿದ್ದ ಕಾಂಗ್ರೆಸ್‌ ಸಹಿತ ನಾನಾ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಡಿ.ಕೆ. ಶಿವಕುಮಾರ್‌, ವಿಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡಬಾರದೇ? ಸರಕಾರದ ಅನ್ಯಾಯ, ಅಕ್ರಮಗಳನ್ನು ನೋಡಿಕೊಂಡು ಸುಮ್ಮನ್ನಿರಬೇಕೇ ಎಂದು ಪ್ರಶ್ನಿಸಿದರು.

Advertisement

ನಮ್ಮ ಸಲಹೆ ಮತ್ತು ಟೀಕೆಗಳನ್ನು ಸ್ವೀಕರಿಸುವ ವಿಶಾಲ ಮನೋಭಾವ ನಿಮ್ಮ ಸಚಿವರಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ನಾವು ಕಷ್ಟದ ಸಮಯದಲ್ಲಿ ರಾಜಕೀಯ ಬದಿಗೊತ್ತಿ ನಿಮಗೆ ಸಂಪೂರ್ಣ ಸಹಕಾರ ನೀಡಲಿಲ್ಲವೇ? ಇಡೀ ಪಕ್ಷ ನಿಮ್ಮ ಬೆನ್ನಿಗೆ ನಿಂತಿಲ್ಲವೇ? ನಿಮಗೂ ಸ್ವಲ್ಪ ಆತ್ಮಸಾಕ್ಷಿ ಇರಬೇಕಲ್ಲವೇ? ನಾವು ಕೊಟ್ಟ ಸಹಕಾರವನ್ನು ನಮ್ಮ ನ್ಯೂನತೆ, ದೌರ್ಬಲ್ಯ ಎಂದು ಭಾವಿಸಬೇಡಿ. ನಮಗೆ ಸಹಕಾರ ಕೊಡುವುದೂ ಗೊತ್ತಿದೆ. ತಪ್ಪು ಮಾಡಿದಾಗ ಬೀದಿಗಿಳಿದು ಹೋರಾಡುವುದೂ ಗೊತ್ತಿದೆ ಎಂದು ಸಭೆಯಲ್ಲಿ ಖಾರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next