Advertisement

ಓಖಿ ಚಂಡಮಾರುತ ಅಬ್ಬರಕ್ಕೆ 9 ಬಲಿ

06:00 AM Dec 01, 2017 | Harsha Rao |

ಚೆನ್ನೈ/ತಿರುವನಂತಪುರ: ಬಂಗಾಲ ಕೊಲ್ಲಿಯಲ್ಲಿ ಕಾಣಿಸಿ ಕೊಂಡಿದ್ದ ವಾಯುಭಾರ ಕುಸಿತ ಗುರುವಾರ ಹಠಾತ್‌ ಆಗಿ ಚಂಡ ಮಾರುತದ ರೂಪತಾಳಿದೆ. ಪರಿಣಾಮ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, 9 ಮಂದಿಯನ್ನು ಬಲಿ ಪಡೆದುಕೊಂಡಿದೆ. “ಓಖಿ’ ಚಂಡಮಾರುತ ಲಕ್ಷ ದ್ವೀಪದತ್ತ ಸಾಗಿದೆ. 

Advertisement

ಗಾಳಿಯ ವೇಗ ಗಂಟೆಗೆ 65-75 ಕಿ.ಮೀ. ಇರಲಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಲಕ್ಷದ್ವೀಪ ಪ್ರವೇಶಿಸುತ್ತಿದ್ದಂತೆ, ಇದು ತೀವ್ರ ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆಯಿದ್ದು, ಎಲ್ಲ ರೀತಿಯ ಸವಾಲು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್)ಯ 2 ತಂಡ ಗಳು (60 ಮಂದಿ) ಈಗಾಗಲೇ ಕನ್ಯಾಕುಮಾರಿಯನ್ನು ತಲುಪಿದ್ದು, 47 ಮಂದಿಯ ಇನ್ನೊಂದು ತಂಡವನ್ನು ಕೇರಳದ ಕೊಚ್ಚಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ಸಾವು: ದಕ್ಷಿಣ ತಮಿಳುನಾಡು ಹಾಗೂ ಕೇರಳದಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನಲ್ಲಿ ನಾಲ್ವರು ಮೃತಪಟ್ಟರೆ, ಕೇರಳದಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ, ಚಾಲಕ ಅಸುನೀಗಿದ್ದಾರೆ. ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುಧುನಗರ ಸಹಿತ 7 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಮರಗಳು ಧರೆಗುಳಿದಿದ್ದು, ಹಲವಾರು ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ಇನ್ನೊಂದೆಡೆ, ಬುಧವಾರ ರಾತ್ರಿ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿದ್ದ 13 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ..

ಒಖೀ ಹೆಸರು ಬಂದದ್ದೆಲ್ಲಿಂದ?: ಈ ಚಂಡಮಾರುತಕ್ಕೆ “ಓಖಿ’ ಎಂದು ನಾಮಕರಣ ಮಾಡಿದ್ದು ಬಾಂಗ್ಲಾದೇಶ. ಬಂಗಾಲಿ ಭಾಷೆಯಲ್ಲಿ “ಕಣ್ಣು’ ಎಂದು ಇದರ ಅರ್ಥ.

ರಾಜ್ಯದಲ್ಲೂ ಮಳೆ: ಕೇರಳದ ದಕ್ಷಿಣ ಕರಾವಳಿಯಲ್ಲಿ “ಓಖಿ’ ಚಂಡಮಾರುತದ ಪ್ರಭಾವ ತಕ್ಕಮಟ್ಟಿಗೆ ನೆರೆಯ ಕರ್ನಾಟಕದ ಮೇಲೂ ಆಗಿದೆ. ಇದರಿಂದಾಗಿ ಅಲ್ಲಲ್ಲಿ ಹಗುರವಾದ ಮಳೆಯಾಗುತ್ತಿದ್ದು, ಇನ್ನೂ ಎರಡು-ಮೂರು ದಿನ ಇದೇ ವಾತಾವರಣ ಮುಂದುವರಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next