Advertisement

ಶೋಕ ತಾಳದೆ 5 ಮಂದಿ ಸಾವು

11:51 PM Oct 30, 2021 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ನಟ ಪುನೀತ್‌ ಸಾವಿನಿಂದ ಮನನೊಂದು ಅವರ ಇಬ್ಬರು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರೆ, ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಪುನೀತ್‌ ನಿಧನದ ಸುದ್ದಿ ಕೇಳಿ ಶುಕ್ರವಾರದಿಂದ ಅಳುತ್ತಾ ಕುಳಿತಿದ್ದ ಚಿಕ್ಕಮಗಳೂರು ನಗರ ರಾಂಪುರದ ಶರತ್‌ (30)ಗೆ ಮನೆಯವರು ಸಮಾಧಾನ ಹೇಳಿದ್ದರು. ನಂತರ ಏಕಾಏಕಿ ರೂಮಿಗೆ ಹೋದ ಶರತ್‌ ನೇಣಿಗೆ ಶರಣಾಗಿದ್ದಾನೆ. ಈತನಿಗೆ ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭಿಣಿ.

ಪುನೀತ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ: ಪುನೀತ್‌ ಸಾವಿನ ಸುದ್ದಿ ಕೇಳಿ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಯುವಕ ರಾಹುಲ್‌ ಗಾಡಿವಡ್ಡರ (22) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಶುಕ್ರವಾರ ಅಪ್ಪು ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದ. ರಾತ್ರಿ ಮನೆಯಲ್ಲಿ ಪುನೀತ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮನೆಯೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗಾವಿಯ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಎಂಬ ಯುವಕ ಹೃದಯಾಘಾತದಿಂದ ಶನಿವಾರ ಕೊನೆಯುಸಿರೆಳೆದಿದ್ದಾನೆ. ಶುಕ್ರವಾರ ಸಂಜೆಯಿಂದ ಟಿವಿ ಎದುರು ಕುಳಿತಿದ್ದ. ಅಪ್ಪುವಿನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಶನಿವಾರ ಬೆಳಗಿನ ಜಾವ ಆಘಾತಗೊಂಡು ಮೃತಪಟ್ಟಿದ್ದಾನೆಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಜ್ಞಾನಮೂರ್ತಿ ನಿಂಗಾಪುರ(40) ಹೃದಯಾಘಾತದಿಂದ ಸಾವನ್ನಪಿದ್ದಾನೆ. ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಅವರು ಸಾವಿನ ಸುದ್ದಿ ತಿಳಿದು ತೀವ್ರ ನೊಂದಿದ್ದರು. ರಾತ್ರಿ ಎದೆನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ

ಪುನೀತ್‌ ಅಭಿಮಾನಿಯಾಗಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಭಾರತೀನಗರ ಸಮೀಪದ ಯಲಾದಹಳ್ಳಿ ಗ್ರಾಮದ ಸುರೇಶ್‌(46) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಟಿ.ವಿ.ಯಲ್ಲಿ ನೇರ ಪ್ರಸಾರ ದೃಶ್ಯ ನೋಡುತ್ತಿದ್ದಂತೆಯೇ ಮನೆಯಲ್ಲಿ ಕುಸಿದುಬಿದ್ದಾರೆ. ಈತ “ಹಳ್ಳಿಲೈಪು, ಪ್ಯಾಟೆ ಹುಡುಗರು’ ಎಂಬ ಸಿನಿಮಾದ ಚಿತ್ರಕಥೆ ಬರೆದಿದ್ದ ಎನ್ನಲಾಗಿದೆ.

ಈ ನಡುವೆ, ಪುನೀತ್‌ ನಿಧನಕ್ಕೆ ಮನನೊಂದು ದೇವರಹಿಪ್ಪರಗಿ ಪಟ್ಟಣದ ಶರಣಪ್ಪ ಅಮೋಘಿ ಬಿಸನಾಳ (24) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ತನ್ನ ತಾಯಿಯ ಡಯಾಬಿಟಿಸ್‌ಗೆ ಸಂಬಂಧಿಸಿದ 40 ಮಾತ್ರೆಗಳನ್ನು ಸೇವಿಸಿ ಅಸ್ವಸ್ಥನಾಗುತ್ತಿದ್ದಂತೆಯೇ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗಣೇಶ್‌ ಕುಮಾರ್‌ (22)ಬ್ಲೇಡ್‌ನಿಂದ ಕೈ ಹಾಗೂ ಎದೆ ಭಾಗವನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಮನೆಯವರು ಹಾಗೂ ಸ್ನೇಹಿತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next