Advertisement

ಮತಯಂತ್ರಗಳಿಗೆ ಇನ್ನೂ 45 ದಿನ ಭದ್ರತೆ !

08:54 PM May 24, 2019 | Sriram |

ಮಂಗಳೂರು: ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮೇ 23ರಂದು ಪೂರ್ಣಗೊಂಡು ಫಲಿತಾಂಶ ಹೊರ ಪ್ರಕಟವಾಗಿದ್ದರೂ ಮತಯಂತ್ರಗಳಿಗೆ ಮುಂದಿನ 45 ದಿನಗಳ ಕಾಲ ವಿಶೇಷ ಭದ್ರತೆ ಮುಂದುವರಿಯಲಿದೆ.

Advertisement

ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು 45 ದಿನಗಳೊಳಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆ ಬಳಿಕ ಆಕ್ಷೇಪಣೆಗೆ ಅವಕಾಶವಿರುವುದಿಲ್ಲ. ಒಂದುವೇಳೆ 45 ದಿನದೊಳಗೆ ನ್ಯಾಯಾಲಯಕ್ಕೆ ಯಾರಾದರೂ ಆಕ್ಷೇಪಣೆ ಸಲ್ಲಿಸಿ, ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡರೆ ಆ ಕ್ಷಣದಿಂದ ಆ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಜಿಲ್ಲಾಡಳಿತವು ಅತ್ಯಂತ ಭದ್ರತೆಯಿಂದ ನೋಡಿಕೊಳ್ಳಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೆ ಆ ಯಂತ್ರಗಳ ಮತಗಳನ್ನು ಅಳಿಸುವುದು ಅಥವಾ ಇತರ ಚುನಾವಣೆಗೆ ಬಳಸುವಂತಿಲ್ಲ. ಒಂದುವೇಳೆ ನ್ಯಾಯಾಲಯವು ಮರು ಎಣಿಕೆ ಮಾಡಲು ಸೂಚಿಸಿದರೆ ಅದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.

ದ.ಕ. ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಸಂಜೆ ವೇಳೆಗೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಪೂರ್ಣಗೊಂಡಿತ್ತು. ಫಲಿತಾಂಶ ಘೋಷಣೆಯಾದ ಬಳಿಕ ಮತ ಯಂತ್ರಗಳನ್ನು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ (ಹಳೆಯ ಕಟ್ಟಡ) ಸ್ಟ್ರಾಂಗ್‌ರೂಂನಲ್ಲಿಇರಿಸಲಾಗಿತ್ತು. ಜಿಪಿಎಸ್‌ ಹೊಂದಿರುವ ವಾಹನ ಹಾಗೂ ಪೊಲೀಸ್‌ ಭದ್ರತೆಯ ಜತೆಗೆ ಲಾರಿಗಳ ಮೂಲಕಮತಯಂತ್ರಗಳನ್ನು ತರಲಾಗಿತ್ತು. ಕಂಟ್ರೋಲಿಂಗ್‌ ಯುನಿಟ್‌, ಬ್ಯಾಲೆಟ್‌ಯುನಿಟ್‌ ಹಾಗೂ ವಿವಿ ಪ್ಯಾಟ್‌ ಸೇರಿ
ದಂತೆ ಸುಮಾರು 7,000 ಮತಯಂತ್ರಗಳು ಇಲ್ಲಿವೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಟ್ರಾಂಗ್‌ ರೂಂ ವ್ಯಾಪ್ತಿಯಲ್ಲಿ ಮುಂದಿನ ದಿನದಲ್ಲಿ ಬಿಗಿಭದ್ರತೆ ಇರುತ್ತದೆ. ಕೊಠಡಿ ಸುತ್ತ ಸಿಸಿ ಕೆಮರಾ ಅಳವಡಿಸಲಾಗಿದೆ. ವಿಧಾನಸಭಾವಾರು ಮತಯಂತ್ರ ಗಳನ್ನು ಜೋಡಿಸಿಡಲಾಗಿದ್ದು, 24 ಗಂಟೆಯೂ ಬಿಗಿ ಪೊಲೀಸ್‌ ಭದ್ರತೆ ಇರಲಿದೆ. ಯಾವುದೇ ಕಾರಣಕ್ಕೂ ಸ್ಟ್ರಾಂಗ್‌ ರೂಂ ತೆರೆಯುವಂತಿಲ್ಲ. ತೆರೆಯಲೇ ಬೇಕಾದರೆ ಎಲ್ಲ ರಾಜಕೀಯ ಪಕ್ಷಗಳವರ ಗಮನಕ್ಕೆ ತರಲಾಗುತ್ತದೆ.
ವಿಧಾನಸಭೆ ಹಾಗೂ ಲೋಕಸಭೆಗೆ ಬಳಸುವ ಮತಯಂತ್ರಗಳನ್ನು ಸ್ಥಳೀಯ ಚುನಾವಣೆಗೆ ಬಳಸುವುದಿಲ್ಲ. ಮತ ಎಣಿಕೆ ಆದ ಬಳಿಕ ನ್ಯಾಯಾ ಲಯದಲ್ಲಿ ಆಕ್ಷೇಪಣೆ ಇಲ್ಲದ ಮತಯಂತ್ರಗಳನ್ನು ಮತ್ತೂಂದು ಚುನಾವಣೆಗೆ ಬಳಸಲಾಗುತ್ತದೆ.

ಮಂಗಳೂರು ದ. ಇವಿಎಂಗೆ ಈಗಲೂ ಭದ್ರತೆ!
ಕಳೆದ ವರ್ಷ ನಡೆದ ಮಂಗಳೂರು ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಮೊದಿನ್‌ ಬಾವಾ ಹಾಗೂ ಜೆ.ಆರ್‌.ಲೋಬೋ ಅವರು ನ್ಯಾಯಾಲಯದ ಮೊರೆಹೋಗಿದ್ದರು. ಹೀಗಾಗಿ ಮತ ಎಣಿಕೆಯಾದ ಅನಂತರವೂ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಇಡಲಾಗಿತ್ತು. ಈ ಪೈಕಿ ಮೊದಿನ್‌ ಬಾವಾ ಅವರ ಪ್ರಕರಣ ಇತ್ಯರ್ಥವಾಗಿದ್ದರೆ, ಜೆ.ಆರ್‌. ಲೋಬೋ ಅವರ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ಕಾರಣಕ್ಕಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲ ಮತಯಂತ್ರಗಳನ್ನು ಈಗಲೂ ಮಂಗಳೂರಿನಲ್ಲಿ ಬಿಗಿಭದ್ರತೆಯಲ್ಲಿ ಕಾಯಲಾಗುತ್ತಿದೆ.

Advertisement

“ಆಕ್ಷೇಪಣೆ ಇಲ್ಲವಾದರೆ ಮತ ಯಂತ್ರ ಬಳಕೆ’
ಮತ ಎಣಿಕೆ ನಡೆದ ಬಳಿಕ 45 ದಿನಗಳವರೆಗೆ ಎಲ್ಲ ಮತಯಂತ್ರಗಳಿಗೆ ಬಿಗಿಭದ್ರತೆ ನೀಡಲಾಗುತ್ತದೆ. ಅಲ್ಲಿಯವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಯಾರಿಂದಲೂ ಆಕ್ಷೇಪಣೆ ಬಾರದಿದ್ದರೆ ಅಂತಹ ಮತಯಂತ್ರಗಳನ್ನು ಇತರ ಚುನಾವಣೆಗೆ ಬಳಸಲಾಗುತ್ತದೆ. ಆಕ್ಷೇಪಣೆಯಿದ್ದರೆ ನ್ಯಾಯಾಲಯದ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
– ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next