Advertisement

ಕಾಲ್ನಡಿಗೆಯಲ್ಲಿ 40 ಕಿ.ಮೀ. ದೂರದಿಂದ ನೀರು ತಂದು ಶಿವನಿಗೆ ಅಭಿಷೇಕ

09:49 PM Feb 21, 2020 | Lakshmi GovindaRaj |

ಚಾಮರಾಜನಗರ: ಗಂಗಾಧರ ಶಿವನಿಗೆ ಗಂಗೆಯೆಂದರೆ ಪ್ರಿಯವಾದವಳು. ಮಹಾ ಶಿವರಾತ್ರಿಯಂದು ಶಿವ ಪೂಜೆ ಅಭಿಷೇಕಕ್ಕೆ 40 ಕಿ.ಮೀ. ದೂರದಿಂದ ಕಪಿಲಾ ನದಿಯ ನೀರನ್ನು ತಲೆಯ ಮೇಲೆ ಹೊತ್ತು ಬರಿಗಾಲಲ್ಲಿ ನಡೆದು ತರುವ ವಿಶಿಷ್ಟ ಆಚರಣೆ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿದೆ.

Advertisement

ಹೆಗ್ಗೊಠಾರ ಗ್ರಾಮದ ಆರು ಕುಟುಂಬದ ಪ್ರತಿನಿಧಿಗಳು 40 ಕಿ.ಮೀ. ದೂರದಿಂದ ಕಪಿಲಾ ನದಿ ನೀರನ್ನು ಬರಿಗಾಲಲ್ಲಿ ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಹೆಗ್ಗೊಠಾರ ಗ್ರಾಮದ ಆರು ಮನೆಗಳ ತಲಾ ಒಬ್ಬೊಬ್ಬರು ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದು ತಾಮ್ರದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಗ್ರಾಮದ ಸಿದ್ಧªರಾಮೇಶ್ವರನ ಅಭಿಷೇಕಕ್ಕೆ ನೀಡುತ್ತಾರೆ.

ಅಭಿಷೇಕದ ಕೈಂಕರ್ಯ: ಗ್ರಾಮದ ಆರು ಮನೆಗಳ ಒಬ್ಬೊಬ್ಬ ಪುರುಷರು ಈ ರೀತಿ ಕಪಿಲಾ ನದಿಯಿಂದ ನೀರು ಹೊತ್ತು ತಂದು ಅಭಿಷೇಕದ ಕೈಂಕರ್ಯ ಸಲ್ಲಿಸುತ್ತಾರೆ. ಈ ಬಾರಿಯೂ ಆ ಕುಟುಂಬದಿಂದ ಒಬ್ಬೊಬ್ಬರು ತಲೆಯ ಮೇಲೆ ಕಪಿಲಾ ನದಿಯ ನೀರನ್ನು ಹೊತ್ತು ಬಿರು ಬಿಸಿಲಿನಲ್ಲಿ 40 ಕಿ.ಮೀ. ದೂರ ಬರಿಗಾಲಲ್ಲಿ ನಡೆದು ತಮ್ಮೂರಿಗೆ ಬಂದು ಶಿವನ ಅಭಿಷೇಕಕ್ಕೆ ಕಪಿಲೆಯನ್ನು ತಂದರು.

ಈ ಆರು ಮಂದಿ ಬೆಳಿಗ್ಗೆ ಆರು ಗಂಟೆಗೆ ಬಸ್‌ನಲ್ಲಿ ನಂಜನಗೂಡು ಮೂಲಕ ನಗರ್ಲೆ ಗ್ರಾಮಕ್ಕೆ ತೆರಳಿದರು. ಅಲ್ಲಿರುವ ಕಪಿಲಾ ತಟಕ್ಕೆ ಹೋಗಿ ಸ್ನಾನ ಮಾಡಿ, ತಾಮ್ರದ ಬಿಂದಿಗೆಗಳನ್ನು ಬೆಳಗಿ, ಅದಕ್ಕೆ ವಿಭೂತಿ, ಅರಿಶಿನ ಕುಂಕುಮ ಹಚ್ಚಿ, ಕಾಯಿ ಒಡೆದು ಪೂಜೆ ಮಾಡುತ್ತಾರೆ. ಬಳಿಕ ಕಪಿಲೆಯನ್ನು ಬಿಂದಿಗೆಗೆ ತುಂಬಿಕೊಂಡು ತಲೆಮೇಲೆ ಹೊತ್ತು 10 ಕಿ.ಮೀ. ದೂರ ನಡೆದು ಆನಂಬಳ್ಳಿ ತಲುಪಿ,

ಅಲ್ಲಿ ಪದ್ಧತಿಯಂತೆ ಬಸವರಾಜಪ್ಪ ಎಂಬುವರ ಮನೆಯಲ್ಲಿ ಬಿಂದಿಗೆ ಇಳಿಸಿ, ಉಪಾಹಾರ ಸೇವಿಸಿ ಬಳಿಕ ಹೊರಡುತ್ತಾರೆ. ಅಲ್ಲಿಂದ ದೇವನೂರಿಗೆ ಬಂದು ಅಲ್ಲಿನ ಗುರುಮಲ್ಲೇಶ್ವರ ಮಠದಲ್ಲಿ ಕೊಡವನ್ನು ಇಳಿಸಿ, ಪ್ರಸಾದ ಸೇವಿಸಿ ಮತ್ತೆ ಬಿಂದಿಗೆ ಹೊತ್ತು, ಕೌಲಂದೆ, ಹೆಗ್ಗವಾಡಿ, ಬೆಂಡರವಾಡಿಗೆ ಬರುತ್ತಾರೆ. ಬೆಂಡರವಾಡಿ ಕೆರೆಯ ಬಳಿ ಸ್ವಲ್ಪ ವಿಶ್ರಾಂತಿ ಪಡೆದು ತಮ್ಮೂರಿಗೆ ಸಂಜೆ ತಲುಪುತ್ತಾರೆ.

Advertisement

ಸಿದ್ಧರಾಮೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ: ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಬಿಂದಿಗೆ ಇಳಿಸುತ್ತಾರೆ. ಇವರ ಜೊತೆಗೆ ಗ್ರಾಮದ ಬಾವಿಯಿಂದ 101 ಬಿಂದಿಗೆ ನೀರು ಹೊತ್ತುಕೊಂಡು ಜನರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ, ಸಿದ್ಧರಾಮೇಶ್ವರನ ಸನ್ನಿಧಿಯಲ್ಲಿ ಕಪಿಲಾ ಜಲಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಕಪಿಲಾ ಜಲದೊಂದಿಗೆ ಬಿಲ್ವಪತ್ರೆಯನ್ನು ಹಾಕಿ ಸಿದ್ಧರಾಮೇಶ್ವರನಿಗೆ ರಾತ್ರಿಯಿಡೀ 5 ಬಾರಿ ಅಭಿಷೇಕ, ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ಗ್ರಾಮಸ್ಥರೆಲ್ಲ ಒಟ್ಟಾಗಿ ದೇವಸ್ಥಾನದಲ್ಲಿ ಜಾಗರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಚೋಳರ ಕಾಲದ ಸಿದ್ಧರಾಮೇಶ್ವರ ದೇಗುಲ: ಹೆಗ್ಗೊಠಾರ ಗ್ರಾಮದಲ್ಲಿ ಸುಮಾರು 700 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ಧರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಪೂಜೆ ನಡೆಯುತ್ತದೆ. ಸಿದ್ಧರಾಮೇಶ್ವರನಿಗೆ ಕಪಿಲಾ ನದಿಯಿಂದ ನೀರು ತಂದು ಪೂಜೆ ಸಲ್ಲಿಸುವ ವಾಡಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next