Advertisement

ಮಾತ್ರೆ ಸೇವಿಸಿ 40 ಮಕ್ಕಳು ಅಸ್ವಸ್ತ

03:34 PM Aug 19, 2017 | |

ತಾಳಿಕೋಟೆ: ಚೊಕ್ಕಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ನಂತರ ನೀಡಲಾದ ಆನೆಕಾಲು ರೋಗದ ಮಾತ್ರೆ ನುಂಗಿ 40 ಮಕ್ಕಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ. ಆನೆಕಾಲು ರೋಗದ ಮಾತ್ರೆ ಹಾಗೂ ಜಂತುನಾಶಕ ಮಾತ್ರೆ ಮಕ್ಕಳಿಗೆ ನುಂಗಿಸಿದ ನಂತರ ಅಸ್ವಸ್ಥರಾಗತೊಡಗಿದರು. ಇದನ್ನು ಗಮನಿಸಿದ ಶಾಲೆ ಶಿಕ್ಷಕರು ಅಸ್ವಸ್ಥ ಮಕ್ಕಳನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಕೆಲ ಮಕ್ಕಳು ಪಾಲಕರು ತಮ್ಮ ಮಕ್ಕಳು ಅಸ್ವಸ್ಥಗೊಳ್ಳುತ್ತಿರುವ ಸುದ್ದಿ ಅರಿತು ಸರ್ಕಾರಿ
ಆಸ್ಪತ್ರೆಗೆ ಸಂಪರ್ಕಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಇನ್ನೂ ಕೆಲವು ಮಕ್ಕಳ ಪಾಲಕರು ದಿನದ ಕೆಲಸದ ಮೇಲೆ ಹೊರಗಡೆ ಹೋಗಿದ್ದರಿಂದ ಅಸ್ವಸ್ಥ ಮಕ್ಕಳು ಮನೆ ಬಾಗಿಲಿಗೆ ಮಲಗಿದ್ದಾರೆ. ಇದನ್ನು ಗಮನಿಸಿದ ಬಡಾವಣೆ ಜನರು 108 ಆಂಬ್ಯುಲೆನ್ಸ್‌ ಮೂಲಕ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಡಾ| ವಿಜಯಲಕ್ಷ್ಮೀ ಹಜೇರಿ, ಡಾ| ಎಂ.ಬಿ. ಸೀಂಗಲ್‌ ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಕೆಲ ಅಸ್ವಸ್ಥ ಮಕ್ಕಳು ಚೋಕ್ಕಾವಿಯಲ್ಲೇ ಉಳಿದಿದ್ದು ತಾಲೂಕು ವೈದ್ಯಾಧಿಕಾರಿ ಡಾ| ಸತೀಶ ತಿವಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಸಂಪತ್ತಕುಮಾರ ಗುಣಾರಿ ತಮ್ಮ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಎಲ್ಲ ಮಕ್ಕಳಿಗೆ ಚಿಕಿತ್ಸೆ ನೀಡಿದಾರೆ. ಪಾಲಕರ ಆಕ್ರೋಶ: ಆನೆಕಾಲು ಮಾತ್ರೆ ನುಂಗಿ ನಮ್ಮ ಮಕ್ಕಳು ಅಸ್ವಸ್ಥರಾಗಿದ್ದು ಹೆಚ್ಚು ಕಮ್ಮಿಯಾದರೆ ಯಾರು ಹೊಣೆ. ಇಂತಹ ಮಾತ್ರೆಗಳನ್ನು ಮಕ್ಕಳಿಗೆ ನುಂಗಿಸುವುದು ತರವಲ್ಲ ಎಂದು ಪಾಲಕರು ಹರಿಹಾಯ್ದರು. ಈ ವೇಳೆ ಡಾ|ಸತೀಶ ತಿವಾರಿ ಮಕ್ಕಳ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಪಾಲಕ ಮತ್ತು ಗ್ರಾಮಸ್ಥರಿಗೆ ಸಮಾಧಾನ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next