Advertisement

ವಿಸ್ಮಯಗಳ ತೆರೆದಿಡುವ ತಾರಾಲಯಗಳು

12:05 AM Nov 06, 2019 | sudhir |

ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ. ಮೋರ್‌ಹೆಡ್‌ಗೆ ತಮ್ಮಲ್ಲಿರುವ ಒಂದಷ್ಟು ಹಣದ ಸೂಕ್ತ ವಿನಿಯೋಗಕ್ಕೆ ಸಲಹೆ ಬೇಕಾಗಿತ್ತು. “”ಖಗೋಳ ವಿಜ್ಞಾನ ಚಟುವಟಿಕೆಗಳಿಗೆ ನಾನು ಒಂದಿಷ್ಟು ಹಣ ನೀಡಲು ಇಚ್ಛಿಸಿದ್ದೇನೆ. ಅದರಲ್ಲಿ ದೂರದರ್ಶಕ ಇರುವ ಖಗೋಳಾಲಯವನ್ನು ಸ್ಥಾಪಿಸುವುದೇ ಅಥವಾ ಅಥವಾ ತಾರಾಲಯವೇ ಎಂಬ ಗೊಂದಲ ಆಗು ತ್ತಿ ದೆ. ನಿಮ್ಮ ಸಹಾಯ ಬೇಕು” ಎಂದು ಮೋರ್‌ಹೆಡ್‌ ಕೇಳಿದಾಗ ದೂರದರ್ಶಕದಲ್ಲಿಯೇ ದಿನದ ಪ್ರತಿ ಕ್ಷಣಗಳನ್ನು ಕಳೆಯುವ ಶಾರ್ಪ್‌ಲಿ ಉತ್ತರಿಸಿದರಂತೆ “”ತಾರಾಲಯವೇ ಆಗಬಹುದು. ಏಕೆಂದರೆ ಅದು ಎಳೆಯ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರುತ್ತದೆ.”

Advertisement

ಮುಂದಿನದು ಇತಿಹಾಸ. 1949ರಲ್ಲಿ ಸ್ಥಾಪನೆಯಾದ ಮೋರ್‌ಹೆಡ್‌ ತಾರಾಲಯ ಇಂದು ಪ್ರಪಂಚದ ತಾರಾಲಯಗಳಲ್ಲಿ ಅತೀ ಹೆಚ್ಚಿನ ಜನಪ್ರಿಯತೆ ಹೊಂದಿದೆ.

ತಾರಾಲಯ ಏಕೆ ?
ನಿರಭ್ರ ರಾತ್ರಿಯ ಆಕಾಶದ ಸೊಬಗನ್ನು ಸವಿಯಲು, ಖಗೋಳ ವಿಜ್ಞಾನ ವಿಸ್ಮಯಗಳನ್ನು ಅರಿಯಲು ಅಗತ್ಯವಾದ ಮನೋಭೂಮಿ ಕೆಯನ್ನು ಒಂದು ತಾರಾಲಯ ಒದಗಿಸುತ್ತದೆ. ಬಾನಿನ ತುಂಬ ಎರಚಿದಂತೆ ಹರಡಿರುವ ಅಸಂಖ್ಯಾತ ತಾರೆಗಳು, ಅವುಗಳಲ್ಲಿ ಅದೇನೋ ಚಿತ್ರವಿಚಿತ್ರ ಆಕಾರ ಮತ್ತು ಪ್ರರೂಪಗಳು- ತ್ರಾಪಿಜ್ಯಾಕೃತಿ, ಮಾವಿನ ಹಣ್ಣು, ಬೇಟೆಗಾರ, ಗೂಳಿ, ಸಿಂಹದ ಆಕೃತಿ… ಇವೆಲ್ಲವೂ ತಾರಾ ಪುಂಜಗಳು. ಪ್ರತಿಯೊಂದಕ್ಕೂ ಕತೆ, ಐತಿಹ್ಯಗಳು.

ನಡುನಡುವೆ ಹೊಳೆವ ಗ್ರಹಗಳು, ಜ್ವಾಜ್ವಲ್ಯಮಾ ನವಾಗಿ ಸಾಗುವ ಉಲ್ಕೆಗಳು, ಅಪರೂಪದಲ್ಲಿ ಗೋಚರಿಸುವ ಗೊಂಡೆಮಂಡೆ ಮತ್ತು ಉದ್ದ ಬಾಲವಿರುವ ಧೂಮಕೇತು, ಹೊಳೆವ ಚಂದಿರ ಮತ್ತು ಚಂದಿರನ ಬೇರೆ ಬೇರೆ ಸ್ವರೂಪಗಳು, ಸೂರ್ಯ ಚಂದ್ರರನ್ನು ಹಿಡಿವ ನೆರಳು ಬೆಳಕಿನಾಟದ ಗ್ರಹಣಗಳು … ಓಹ್‌! ಒಂದೆ ಎರಡೇ. ಈ ಸೃಷ್ಟಿ ನಿಜಕ್ಕೂ ವಿಸ್ಮಯದ ಗಣಿ. ಮೊಗೆದಷ್ಟೂ ಮುಗಿಯದ ವಿಸ್ಮಯಗಳನ್ನು ಅರಿಯುವ ಮಾನವ ಪ್ರಯತ್ನಗಳೇ ಮನುಕುಲದ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯ ಕತೆ.

ಖಗೋಳದ ವಿಸ್ಮಯವನ್ನು, ಮನುಕುಲದ ವ್ಯೋಮ ಸಾಹಸವನ್ನು, ವಿಶ್ವದಂತರಾಳದ ಅನೂಹ್ಯ ಪ್ರಪಂಚವನ್ನು ಕತೆಯ ರೂಪದಲ್ಲಿ, ದೃಶ್ಯಕಾವ್ಯವಾಗಿ ನಿರೂಪಿಸಿದರೆ ಹೇಗಿರುತ್ತದೆ? ಅಂಥ ಒಂದು ಪ್ರಯತ್ನವನ್ನು ತಾರಾಲಯ ಅಥವಾ ಪ್ಲಾನೆಟೇರಿಯಮ್‌ ಮಾಡುತ್ತದೆ.

Advertisement

ಒಂದು ತಾರಾಲಯದ ನಡು ಮಧ್ಯಾಹದ ಹೊತ್ತಿನ ಪ್ರದರ್ಶನದ ಸಮಯ. ನಾವು ಪ್ರೇಕ್ಷಕರು ಸುಖಾಸೀನರಾಗಿ ದ್ದೇವೆ. ಸಂಪೂರ್ಣ ಏರ್‌ ಕಂಡಿಶನ್‌ ಇರುವ ಹದಿನೈದು ಡಿಗ್ರಿಗಳಷ್ಟು ಒರಗಿಕೊಂಡು ನೋಡುವ ಕುರ್ಚಿಗಳಲ್ಲಿ ಸುಖಾಸೀನರಾಗಿದ್ದೀರಿ. ನೋಡುತ್ತಿರುವಂತೆ ನಿಮ್ಮ ಮೇಲೆ ಬೋಗುಣಿ ಬೋರಲಾಗಿರಿಸಿದಂತೆ ಆವರಿಸಿರುವ ಗೋಳಾಕಾರದ ಬಿಳಿ ಪರದೆ ಮೇಲೆ ರಾತ್ರಿಯ ಆಕಾಶ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದು ನೀಡುವ ಅನುಭವ ಬಣ್ಣನೆಗೆ ನಿಲುಕದು. ನಿಧಾನವಾಗಿ ತಾರಾಲಯದ ಬೆಳಕು ಮಂದವಾಗುತ್ತ ಸಂಜೆಯ ರಂಗು ಗೋಳದಲ್ಲಿ ಆವರಿಸುತ್ತ ಹೋದಂತೆ ಮುಸ್ಸಂಜೆಯಾಗುತ್ತದೆ. ಅದಕ್ಕೆ ಅನುಗುಣವಾಗಿ ಹಿನ್ನೆಲೆಯಲ್ಲಿ ಮಧುರ ಸಂಗೀತ. ತುಸು ಹೊತ್ತಿನಲ್ಲಿ ಅಲ್ಲಲ್ಲಿ ಮಿನುಗು ತಾರೆಗಳು ಬಾನ ಚತ್ತುವಿನಲ್ಲಿ. ಪ್ರತ್ಯಕ್ಷವಾಗುತ್ತವೆ ನಕ್ಷತ್ರ ಚಿತ್ತಾರಗಳು. ಇಡೀ ಚಿತ್ತಾರ ಪೂರ್ವದಿಂದ ಪಶ್ಚಿಮಕ್ಕೆ ಸರಿಯುತ್ತ ಹೋದಂತೆ ಇರುಳಿನ ಆಗಸ ಗೋಚರಿಸುತ್ತ ಹೋಗುತ್ತದೆ. ಚಲನಚಿತ್ರದ ಪ್ರೊಜೆಕ್ಟರ್‌ ಇಡೀ ಚಿತ್ರವನ್ನು ತಾರಾಲಯದ ಗೋಳಾಕೃತಿಯ ಪರದೆಯಲ್ಲಿ ಮೂಡಿಸುತ್ತದೆ – ಹಿನ್ನೆ°ಲೆಯಲ್ಲಿ ಸಂಗೀತ, ವಿವರಣೆಗಳೊಂದಿಗೆ; ಬೆರಗು, ಮೆರಗು. ನಾವು ಗಮನಿಸಬೇಕಾದದ್ದು – ಪ್ರತ್ಯಕ್ಷ ಬಾನಿನಲ್ಲಿ ಸಂಗೀತವಿಲ್ಲ. ವಿವರಣೆ ಇಲ್ಲ. ಬರಿಗಣ್ಣಿಗೆ ಕಾಣಿಸುವ ಗುರು ಅಥವಾ ಶನಿ ಗ್ರಹ ಕೂಡ ದೂರದರ್ಶಕದಲ್ಲಿ ತುಸು ದೊಡ್ಡದಾಗಿ ಕಾಣಿಸುತ್ತದೆ ಅಷ್ಟೇ. ಅದು ಕೊಡುವ ಅನುಭವ ಬೇರೆಯೇ ನೆಲೆಯದ್ದು. ಅದನ್ನು ನೋಡುವ ಕುತೂಹಲವನ್ನು ತಾರಾಲಯವೊಂದು ಪ್ರೇರೇಪಿಸುತ್ತದೆ.

ತಾರಾಲಯಗಳ ಮೂಲ ಉದ್ದೇಶ ಖಗೋಳ ವಿಜ್ಞಾನ ಸಂವಹನ ಮತ್ತು ಪ್ರಸಾರ. ಪ್ರಪಂಚದಾದ್ಯಂತ ಇಂದು ಸುಮಾರು 2000 ತಾರಾಲಯಗಳು ಇವೆ. ಅಮೆರಿಕದಲ್ಲಿ ಸಾವಿರಕ್ಕೂ ಮಿಕ್ಕಿ ತಾರಾಲಯಗಳಿದ್ದರೆ, ಚಿಕ್ಕ ಜಪಾನ್‌ ದೇಶದಲ್ಲಿ ಮುನ್ನೂರಕ್ಕೂ ಮಿಕ್ಕಿ ತಾರಾಲಯಗಳಿವೆ. ನಂತರದ ಸ್ಥಾನ ಜರ್ಮನಿಗೆ. ಅಲ್ಲಿ ನೂರರ ಹತ್ತಿರ ತಾರಾಲಯಗಳಿವೆ. ಭಾರತದಲ್ಲಿ ಒಟ್ಟು 55 ತಾರಾಲಯಗಳಿವೆ.

ಗುಜರಾತ್‌, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಆರು ತಾರಾಲಯಗಳಿವೆ. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ತಲಾ ಮೂರು ತಾರಾಲಯಗಳಿವೆ. ನಮ್ಮಲ್ಲಿರುವ ತಾರಾಲಯಗಳೆಂದರೆ – ಬೆಂಗಳೂರಿನಲ್ಲಿರುವ ನೆಹರೂ ತಾರಾಲಯ (1989), ಮಣಿಪಾಲ ವಿಶ್ವವಿದ್ಯಾಲಯದ ಡಾ|ಟಿ.ಎಮ….ಎ.ಪೈ ತಾರಾಲಯ (1998) ಮತ್ತು ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯ (2018).

ಸ್ವಾಮಿ ವಿವೇಕಾನಂದ ತಾರಾಲಯ
ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯ ಅತ್ಯಾಧುನಿಕ ವಾದದ್ದು. ಇಲ್ಲಿ ಹಳೆಯ ತಾರಾಲಯಗಳಿಗಿಂತ ಭಿನ್ನವಾದ ಡಿಜಿಟಲ್‌ ಪ್ರೊಜೆಕ್ಟರನ್ನು ಬಳಸಲಾಗುತ್ತಿದೆ. ಹಾಗಾಗಿ ಈ ತಾರಾಲಯದ ಪ್ರದರ್ಶನಗಳು ನೀಡುವ ಅನುಭವ ಬೇರೆ ತಾರಾಲಯಗಳಿಗಿಂತ ವಿಭಿನ್ನ. ಚಿತ್ರಗಳು ಅತ್ಯಂತ ಸುಸ್ಪಷ್ಟ. ಇಲ್ಲಿ ಪ್ರದರ್ಶನಗೊಳ್ಳುವ ಹೆಚ್ಚಿನ ಪ್ರದರ್ಶನಗಳು ಮೂರು ಆಯಾಮಗಳ (3ಡಿ) ವಿಶಿಷ್ಟ ಅನುಭವ ನೀಡುತ್ತವೆ – ಅದಕ್ಕೆ ಬೇಕಾದ ಕನ್ನಡಕ ಧರಿಸಿ ನೋಡಿದಾಗ.

ತಾರಾಲಯ ಕಾರ್ಯಾಚರಿಸಲು ತೊಡಗಿದ ಮೇಲೆ ಪಿಲಿಕುಳಕ್ಕೆ ಭೇಟಿ ನೀಡುವ ಪ್ರವಾಸಿಗರ ಮತ್ತು ಶಾಲೆ-ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಹೆಚ್ಚಿದೆ. ಶನಿವಾರ ಮತ್ತು ಆದಿತ್ಯವಾರ ದಿನ ಉಳಿದವರಿಗೆ ರಜೆ; ನಮಗೆ ಮಾತ್ರ ಸಜೆ, ಆ ದಿನ ಇನ್ನಷ್ಟು ಕೆಲಸ ಎನ್ನುತ್ತಾರೆ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕರು ಮತ್ತು ತಾರಾಲಯದ ಸ್ಥಾಪನೆಯ ಹಿಂದಿನ ಶಕ್ತಿಯಾದ 75ರ ತರುಣ ಡಾ.ಕೆ.ವಿ.ರಾವ್‌.

ಪಿಲಿಕುಳದಲ್ಲಿ ವಿಚಾರ ಸಂಕಿರಣ
ತಾರಾಲಯ ಇನ್ನಷ್ಟು ಜನರನ್ನು ತಲಪಬೇಕು ಅನ್ನುವ ಆಕಾಂಕ್ಷೆಯಿಂದ ನವಂಬರ್‌ 6,7, ಮತ್ತು 8 ರಂದು ತಾರಾಲಯದ ಮತ್ತು ಒಟ್ಟು ಖಗೋಳ ವಿಜ್ಞಾನದ ಇತ್ತೀಚೆಗಿನ ಬೆಳವಣಿಗಗಳ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಪಿಲಿಕುಳದ ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಅಮೆರಿಕದ ಎಡ್ಲರ್‌ ತಾರಾಲಯ ಮತ್ತು ಖಗೋಳಾಲಯದ ನಿರ್ದೇಶಕರೂ, ಬ್ರಹ್ಮಾಂಡಗಳ ಬಗೆಗೆ ಆಳ ಸಂಶೋಧನೆಯನ್ನು ಮಾಡಿದ ವಿಜ್ಞಾನಿ ಮತ್ತು ಇಂಟರ್‌ನ್ಯಾಶನಲ್‌ ಪ್ಲಾನೆಟೋರಿಯಮ್‌ ಸೊಸೈಟಿಯ ಪ್ರಸ್ತುತ ಅಧ್ಯಕ್ಷರಾಗಿರುವ ಮಾರ್ಕ್‌ ಸುಬ್ಬರಾವ್‌, ಇಸ್ರೋ ಸಂಸ್ಥೆಯ ವಿಜ್ಞಾನಿ ಡಾ|ಶ್ರೀಕುಮಾರ್‌ ತಾರಾಲಯಕ್ಕೆ ಬೇಕಾದ ಉಪಕರಣಗಳನ್ನು ತಯಾರಿಸುವ ಇವಾನ್ಸ್‌ ಆ್ಯಂಡ್‌ ಸದರ್ಲೆಂಡ್‌ ಸಂಸ್ಥೆಯ ನಿರ್ದೇಶಕ ಸ್ಕಾಟ್‌ ನಿಶ್‌ಚಾRಚ್‌ ಮತ್ತು ಇನ್ನೂ ಹಲವರು ಈ ಸಂಕಿರಣದಲ್ಲಿ ಭಾಗವಹಿಸಲಿದ್ದು ಉಪನ್ಯಾಸ ನೀಡಲಿ¨ªಾರೆ. ದೇಶದ ಬೇರೆ ಬೇರೆ ಕಡೆಯ ತಾರಾಲಯ ಮತ್ತು ವಿಜ್ಞಾನ ಕೇಂದ್ರದ ನಿರ್ದೇಶಕರು, ವಿಜ್ಞಾನಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿ¨ªಾರೆ. ಅದೇ ಸಂದರ್ಭದಲ್ಲಿ ಐದು ದಿನಗಳ ಕಾಲ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ 3ಈಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.

ವಿಜ್ಞಾನೋತ್ಸವಕ್ಕಾಗಿಯೇ ರೂಪಿಸಿದ ಜಾಲತಾಣದಿಂದ ( www.ifpf.in ) ಬುಕ್‌ ಮೈಶೋ ಮೂಲಕ ಮುಂಗಡವಾಗಿ ಟಿಕೇಟ್‌ ಖರೀದಿಸಬಹುದು.

– ಡಾ|ಎ.ಪಿ.ರಾಧಾಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next