Advertisement

ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 39,031 ಕೋಟಿ ರೂ. ಮೀಸಲು

10:39 PM Feb 17, 2023 | Team Udayavani |

ರೈತರೇ ದೇಶದ ಬೆನ್ನೆಲುಬು ಎಂಬುದನ್ನು ಅರಿತಿರುವ ಬಸವರಾಜ ಬೊಮ್ಮಾಯಿ, ರೈತರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆ ಪ್ರಕಟಿಸಿದ್ದಾರೆ. ಅಲ್ಲದೆ ಇದು ಚುನಾವಣ ವರ್ಷವಾಗಿರುವುದರಿಂದ ಅನ್ನದಾತರ ವರ್ಗವನ್ನು ಮೆಚ್ಚಿಸುವುದಕ್ಕೆ ಅವರು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ರಾಜ್ಯದ ಕೃಷಿಕರಿಗೆ ಬಿಜೆಪಿ ಸರಕಾರ ದೊಡ್ಡ ಗಿಫ್ಟ್ ನೀಡಿದೆ. ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು. ಇದರೊಂದಿಗೆ ರೈತ ಸಮುದಾಯದ ಬೇಡಿಕೆಗೆ ಸ್ಪಂದಿಸಲು ಸರಕಾರ ಮುಂದಾಗಿದೆ.

Advertisement

ಸಮಾರು 30 ಲಕ್ಷ ರೈತರು ಈ ನಿರ್ಧಾರದ ಫ‌ಲಾನುಭವ ಪಡೆಯಲಿದ್ದು, ವಾರ್ಷಿಕ ಸುಮಾರು 25,000 ಕೋಟಿ ರೂ. ಸಾಲವನ್ನು ಸಹಕಾರ ಸಂಸ್ಥೆಗಳ ಮೂಲಕ ವಿತರಿಸಲು ಸರಕಾರ ನಿರ್ಧರಿಸಿದೆ. ಕೃಷಿ ಚಟುವಟಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಬಜೆಟ್‌ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.

ಭೂ ಸಿರಿ: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆ, ತುರ್ತು ಸಂದರ್ಭ­ದಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರ ಸಂಗ್ರಹಿಸಲು ಇದರಿಂದ ಅನುಕೂಲ. ಪ್ರಸಕ್ತ ಸಾಲಿನಿಂದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ರೈತರಿಗೆ 10 ಸಾವಿರ ರೂ. ಹೆಚ್ಚುವರಿ ಸಹಾಯ ಧನ. ರಾಜ್ಯ ಸರಕಾರದಿಂದ 2,500 ರೂ. ಹಾಗೂ ನಬಾರ್ಡ್‌ ಸಹಾಯಧನ 7500 ರೂ.ನೊಂದಿಗೆ ಯೋಜನೆ ಜಾರಿ. 50 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ.

ರೈತರನ್ನು ವಿಮಾ ಯೋಜನೆ ವ್ಯಾಪ್ತಿಗೆ ತರುವ ಮೂಲಕ ಅವರಿಗೆ ಬದುಕಿಗೆ ಭದ್ರತೆ ಒದಗಿಸಲು ಮುಂದಾಗಿರುವ ಸರಕಾರ 56 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನಜ್ಯೋತಿ ವಿಮಾ ಯೋಜನೆ ಘೋಷಿಸಿದೆ.

ಕೃಷಿ ಯಂತ್ರೋಪಕರಣಗಳು ಸುಲಭವಾಗಿ ದೊರೆಯು­ವಂತೆ ಮಾಡಲು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್‌ ಹಾರ್ವೆಸ್ಟರ್‌ ಪೂರೈಕೆ. ಪ್ರಸಕ್ತ ಸಾಲಿನಲ್ಲಿ 100 ಹೈಟೆಕ್‌ ಹಾರ್ವೆಸ್ಟರ್‌ ಒದಗಿಸಲು ತಲಾ 50 ಲಕ್ಷ ರೂ.ನಂತೆ 50 ಕೋಟಿ ರೂ. ನಿಗದಿಪಡಿಸಲಾಗಿದೆ. ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್‌ ಕೃಷಿಯಲ್ಲಿ ಜಿಯೋ ಸ್ಪೇಶಿಯಲ್‌ ತಾಂತ್ರಿಕತೆ ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆ ಘೋಷಿಸಲಾಗಿದೆ.

Advertisement

ರೈತ ಉನ್ನತಿ ಯೋಜನೆ: ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು (ಎಫ್ಪಿಒ) ತಲಾ 10 ಲಕ್ಷ ರೂ.ವರೆಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯಾಂಕ್‌ಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಬಡ್ಡಿ ಸಹಾಯಧನ ಜತೆಗೆ ಸಿರಿಧಾನ್ಯ, ಕಿರುಧಾನ್ಯ ವಿಸ್ತರಣೆಗೆ ರೈತ ಸಿರಿ ಯೋಜನೆಯಲ್ಲಿ ಬೆಳೆಗಾರರಿಗೆ ಪ್ರತೀ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಘೋಷಿಸಲಾಗಿದೆ. ಕ್ಷೇತ್ರಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್‌, ಪ್ಯಾಕಿಂಗ್‌ ಮಾಡುವ ಸಂಸ್ಥೆಗಳಿಗೆ ರೈತ ಉನ್ನತಿ ಯೋಜನೆಯಲ್ಲಿ ಸಹಾಯಧನಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಇದರೊಂದಿಗೆ ಆಹಾರ ಸಂಸ್ಕರಣ ಉದ್ಯಮಗಳಿಗೆ ಉತ್ತೇಜನ ದೊರೆಯಲಿದೆ.

ನೀರು ಸಂರಕ್ಷಣೆಗೆ ಜಲನಿಧಿ
ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಹಾಗೂ ರೈತರು ಒಲವು ತೋರುತ್ತಿರುವ ನೈಸರ್ಗಿಕ ಹಾಗೂ ಸಮಗ್ರ ಕೃಷಿಗೂ ಆದ್ಯತೆ ಕೊಡಲಾಗಿದೆ. ಪ್ರತೀ ತಾಲೂಕಿಗೆ ಒಂದರಂತೆ ತಲಾ 50 ಹೆಕ್ಟೇರ್‌ ಪ್ರದೇಶದಲ್ಲಿ ಗುತ್ಛ ಮಾದರಿಯಲ್ಲಿ ಮುಂದಿನ 4 ವರ್ಷಗಳಲ್ಲಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನೈಸರ್ಗಿಕ ಹಾಗೂ ಸಮಗ್ರ ಕೃಷಿಗೆ ಒಳಪಡಿಸುವ ಯೋಜನೆ  ಘೋಷಿಸಲಾಗಿದೆ. ಸಹಸ್ರ ಸರೋವರ ಕಾರ್ಯಕ್ರಮದಲ್ಲಿ 1,000 ಸಣ್ಣ ಸರೋವರಗಳ ಅಭಿವೃದ್ಧಿ. ಸಹ್ಯಾದ್ರಿ ಸಿರಿ ಯೋಜನೆಯಲ್ಲಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಪ್ರದೇಶದಲ್ಲಿ  ಜಲಸಂರಕ್ಷಣೆಗಾಗಿ ಬಾವಿ, ಕಿಂಡಿ, ಆಣೆ, ನಾಲಾ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next