Advertisement

ಮಾರಣಾಂತಿಕ ಹಲ್ಲೆಗೈದವನಿಗೆ 3 ವರ್ಷ ಕಠಿಣ ಶಿಕ್ಷೆ

02:35 PM Apr 01, 2022 | Team Udayavani |

ಚಳ್ಳಕೆರೆ: ಮಾರಣಾಂತಿಕವಾಗಿ ಹಲ್ಲೆ ನಡೆಸಿ ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿದ ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ, ತಪ್ಪಿದಲ್ಲಿ 6 ತಿಂಗಳ ಸದಾ ಶಿಕ್ಷೆ ಹಾಗೂ 500 ರೂ. ದಂಡ ವಿಧಿಸಿ ಚಿತ್ರದುರ್ಗದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾವತಿ ಎಂ. ಮನಗೂಳಿ ತೀರ್ಪು ನೀಡಿದ್ದಾರೆ.

Advertisement

ಸಂತೋಷ್‌ಕುಮಾರ್‌ ಶಿಕ್ಷೆಗೊಳಗಾದವ. ಈತ ಇಲ್ಲಿನ ತ್ಯಾಗರಾಜನಗರದ ಮಯೂರ ಬೇಕರಿ ಬಳಿ 2020ರ ಮಾರ್ಚ್‌ 23ರಂದು ಸ್ನೇಹಿತ ನಂದೀಪ ಎಂಬುವವನೊಂದಿಗೆ ಜಗಳ ಮಾಡಿದ್ದ. ನನ್ನ ಹೆಂಡತಿ ಶ್ವೇತಾಳಿಗೆ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ನನ್ನ ಸಂಸಾರದಲ್ಲಿ ಹುಳಿ ಹಿಂಡಿರುವೆ ಎಂದೆಲ್ಲ ಜಗಳ ಮಾಡಿ ಮಚ್ಚಿನಿಂದ ತಲೆ ಮತ್ತು ಮೈಕೈಗೆ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಂದಿನ ಪಿಎಸ್‌ಐ ಪಿ.ಆರ್‌. ರಾಘವೇಂದ್ರ ಮತ್ತು ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಗಾಯಗೊಂಡಿದ್ದ ನಂದೀಪನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಳ್ಳಕೆರೆ ಪೊಲೀಸರು ಆರೋಪಿ ಸಂತೋಷ್‌ಕುಮಾರ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿ ಕಟ್ಟುವ 50 ಸಾವಿರ ರೂ. ದಂಡದಲ್ಲಿ 45 ಸಾವಿರ ರೂ.ಗಳನ್ನು ಗಾಯಗೊಂಡ ನಂದೀಪನಿಗೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ. ಗಣೇಶ್‌ ನಾಯ್ಕ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next