Advertisement

3 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಮತ್ತೆ ಕ್ಯಾತೆ

03:45 AM Mar 11, 2017 | Team Udayavani |

ಬೆಂಗಳೂರು:ರಾಜ್ಯದಲ್ಲಿ ತೀವ್ರ ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುತ್ತಿರುವಾಗ ತಮಿಳು ಸರ್ಕಾರ ಮತ್ತೆ ಕಾವೇರಿ ನೀರಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

Advertisement

ಕೃಷ್ಣರಾಜ ಅಣೆಕಟ್ಟೆಯಿಂದ ಕುಡಿಯುವ ನೀರಿಗೆ 3 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಅವರಿಗೆ ಪತ್ರ ಬರೆದಿದ್ದಾರೆ.ಮಾರ್ಚ್‌ 9 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ತಮಿಳುನಾಡು ಮುಖ್ಯ ಕಾರ್ಯದರ್ಶಿ, ತಮಿಳುನಾಡಿನಲ್ಲಿ ಈ ವರ್ಷ ಮಳೆಯ ಅಭಾವದಿಂದ ಜನರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಕಾವೇರಿ ನದಿಯಿಂದ ಕುಡಿಯುವ ನೀರಿಗಾಗಿ 3 ಟಿಎಂಸಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕ ಸರ್ಕಾರ ಪ್ರತಿ ದಿನ 2000 ಕ್ಯೂಸೆಕ್‌ ನೀರು ಬಿಡಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ  ತಮಿಳು ನಾಡಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಈ ಬಗ್ಗೆ ವಿಳಂಬ ಮಾಡದೇ ಮೆಟ್ಟೂರು ಜಲಾಶಯಕ್ಕೆ ನೀರು ಬಿಡುವಂತೆ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಮಗೆ ಬಂದಿರುವ ಪತ್ರವನ್ನು ಮುಖ್ಯ ಕಾರ್ಯದರ್ಶಿ ಸುಭಾಸ್‌ ಚಂದ್ರ ಕುಂಟಿಯಾ ಅವರು, ಜಲ ಸಂಪನ್ಮೂಲ ಇಲಾಖೆಗೆ ರಾಜ್ಯದ ಕೆಆರ್‌ಎಸ್‌ ಹಾಗೂ ಇತರ ಜಲಾಶಯಗಳ ನೀರಿನ ವಾಸ್ತವ ಪರಿಸ್ಥಿತಿ ಹಾಗೂ ಕಾವೇರಿ ಕೊಳ್ಳದ ಭಾಗದಲ್ಲಿ ಈ ವರ್ಷ ಉಂಟಾಗಿರುವ ಬರಗಾಲದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದು, ಅವರ ಪತ್ರದನ್ವಯ ರಾಜ್ಯದ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಈ ವರ್ಷ ತೀವ್ರ ಬರ ಇರುವುದರಿಂದ ರಾಜ್ಯದಲ್ಲಿಯೂ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನಮ್ಮ ರಾಜ್ಯದ ಜನರಿಗೂ ಕುಡಿಯುವ ನೀರಿಗೂ ಬಳಸಿಕೊಳ್ಳಲು ಜಲಾಶಯಗಳಲ್ಲಿ ನೀರಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಮುಖ್ಯಕಾರ್ಯದರ್ಶಿಗೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು  ತಿಳಿದು ಬಂದಿದೆ.
ಆ ವರದಿ ಆಧರಿಸಿ ಮುಖ್ಯಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಸೋಮವಾರ ತಮಿಳುನಾಡಿಗೆ ರಾಜ್ಯದ ವಾಸ್ತವ ಮನವರಿಕೆ ಮಾಡಿ ಕೊಟ್ಟು ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಜಲ ಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಈ ವರ್ಷ ತೀವ್ರ ಬರ ಎದುರಿಸುತ್ತಿರೋದ್ರಿಂದ ನಮಗೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಕೊಳ್ಳದಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗಿದೆ. ತಮಿಳುನಾಡಿನ ಬೇಡಿಕೆಗೆ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ.
-ಎಂ.ಬಿ.ಪಾಟೀಲ್‌, ಜಲ ಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next