Advertisement

ಒಂದೇ ಗ್ರಾಮದಲ್ಲಿ 6 ತಿಂಗಳಲ್ಲಿ 3 ಕ್ವಿಂ.ಪ್ಲಾಸ್ಟಿಕ್‌ ಸಂಗ್ರಹ

06:00 AM Apr 22, 2018 | Team Udayavani |

ಬ್ರಹ್ಮಾವರ: ಸಮರ್ಪಕ ತ್ಯಾಜ್ಯ ವಿಲೇವಾರಿಯ ಉದ್ದೇಶದೊಂದಿಗೆ ಆರಂಭ ಗೊಂಡ ವಾರಂಬಳ್ಳಿಯ ಘನ-ದ್ರವ ಸಂಪನ್ಮೂಲ- ನಿರ್ವಹಣಾ ಘಟಕ(ಎಸ್‌.ಎಲ್‌.ಆರ್‌.ಎಂ.) ಕೇವಲ 6 ತಿಂಗಳಲ್ಲಿ 3 ಕ್ವಿಂಟಾಲ್‌ಗ‌ೂ ಮಿಕ್ಕಿ ಪ್ಲಾಸ್ಟಿಕ್‌ ಸಂಗ್ರಹಿಸಿ ದಾಖಲೆ ಬರೆದಿದೆ. 
ಸುಮಾರು 250 ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಪ್ಲಾಸ್ಟಿಕ್‌ ಅಲ್ಲದೆ ಪ್ರತಿನಿತ್ಯ 1 ಕ್ವಿಂಟಾಲ್‌ಗ‌ೂ ಮಿಕ್ಕಿ ತ್ಯಾಜ್ಯ ಸಂಗ್ರಹಿಸುತ್ತದೆ. ಅಲ್ಲದೇ ಇದನ್ನು ಮರುಬಳಕೆಗೆ ಆಗುವಂತೆ ಮೌಲ್ಯವರ್ಧನೆಗೊಳಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಿದೆ. 
 
ಹೇಗಿದೆ ಘಟಕ? 
16 ಮಂದಿ ಕಾರ್ಯಕರ್ತರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆಯ ಎರಡು ಅವ ಧಿಯಲ್ಲಿ ಗ್ರಾಮದ ಮನೆಗಳು, ವಾಣಿಜ್ಯ ಸಂಕೀರ್ಣಕ್ಕೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಬಳಿಕ ತರಬೇತಿ ಪಡೆದಂತೆ ವೈಜ್ಞಾನಿಕವಾಗಿ ಬೇರ್ಪಡಿಸಲಾಗುತ್ತಿದೆ. ಬಳಿಕ ಇವುಗಳಲ್ಲಿ ಆಯ್ದವುಗಳನ್ನು ಮೌಲ್ಯವರ್ಧನೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಅನ್ನು ಪುನರ್ಬಳಕೆಗೆ ಬೇರೆ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತದೆ. 

Advertisement

ಕಸದಿಂದ ರಸ
ಹೂವಿನ ತ್ಯಾಜ್ಯದಿಂದ ರಂಗೋಲಿ ಪುಡಿ ತಯಾರಿಸುವ ಹಾಗೂ ಸಾವಯವ ವಸ್ತುಗಳಿಂದ ಅಲಂಕಾರಿಕ ವಸ್ತು ತಯಾರಿಸುವ ಕಾರ್ಯ ಇಲ್ಲಿ ಪ್ರಾರಂಭಿಸಲಾಗಿದೆ. ಕೃಷಿ ಪೂರಕ ಔಷಧೋತ್ಪನ್ನಗಳ ತಯಾರಿ ಹಾಗೂ ಮಾರಾಟಕ್ಕೂ ಸಿದ್ಧತೆ ನಡೆದಿದೆ. ಈ ಬಗ್ಗೆ ತರಬೇತಿಯನ್ನು ಪಡೆದ ಕಾರ್ಯಕರ್ತರು ಉತ್ಪನ್ನ ಸಿದ್ಧಪಡಿಸಲು ತೊಡಗಿದ್ದಾರೆ.

ಮುಂದಿನ ಯೋಜನೆ
ದ್ರವತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನೈಸರ್ಗಿಕವಾಗಿ ಇಲ್ಲಿ ರೂಪಿಸಲಾಗಿದೆ. ಕಾಬಾಳೆಗಿಡ, ಕಾಂಪೋಸ್ಟ್‌ ತೊಟ್ಟಿಯ ಮೂಲಕ ಹೊಸ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಬಯೋಗ್ಯಾಸ್‌ನ್ನು ತ್ಯಾಜ್ಯದಿಂದ ತಯಾರಿಸುವ ಯೋಜನೆಗೂ ಪಂಚಾಯತ್‌ ಚಿಂತನೆ ನಡೆಸಿದೆ. ಉಡುಪಿಯ ಕೈಗಾರಿಕಾ ತರಬೇತಿ ಕಾಲೇಜು ತ್ರಿಚಕ್ರವಾಹನ ಒದಗಿಸಿದ್ದು, ಕೆಲಸಕ್ಕೆ ಉಪಯೋಗವಾಗಿದೆ. 
 
ವಿಸ್ತರಣೆ ಯೋಜನೆ
ಪ್ರಾಯೋಗಿಕವಾಗಿ 250 ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರಾರಂಭಿಸಿದ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನಷ್ಟು ವಿಸ್ತರಿಸಲು ಯೋಜಿಸಲಾಗಿದೆ. ಘಟಕಕ್ಕೆ ಹೆಚ್ಚಿನ ಮಾನವ ಶ್ರಮ ಅಗತ್ಯವಿರುವುದರಿಂದ ಯಂತ್ರಗಳ ಬಳಕೆಯತ್ತ ಯೋಚಿಸಲಾಗಿದೆ.

4 ಲಕ್ಷ ರೂ. ಆದಾಯ
ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಪುನರ್ಬಳಕೆಗೆ ಯೋಗ್ಯವಾಗುವಂತೆ ಮೌಲ್ಯವಧನೆ ಮಾಡಲಾಗಿದೆ. ಈ ಕಾರಣ ಪಂಚಾಯತ್‌ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಕಳೆದ 6 ತಿಂಗಳಿಂದ ಮೌಲ್ಯವರ್ಧನೆಗೊಳಿಸಿದ ಉತ್ಪನ್ನಗಳು ಮಾರಾಟಕ್ಕೆ ಸಿದ್ಧವಾಗಿದ್ದು 4 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ.

ಕೊಕ್ಕರ್ಣೆಯಲ್ಲಿ ಶೀಘ್ರ ಆರಂಭ
ಘನ ದ್ರವ ಸಂಪನ್ಮೂಲ ನಿರ್ವಹಣೆ ಯೋಜನೆಯಡಿ ಕೊಕ್ಕರ್ಣೆ ಗ್ರಾ.ಪಂ. ಕೂಡಾ ಆಯ್ಕೆಯಾಗಿದೆ. ಪ್ರಾಯೋಗಿಕವಾಗಿ ಪೇಟೆಯ ಸುಮಾರು 200ರಷ್ಟು ಅಂಗಡಿ, ಮನೆಗಳನ್ನು ಆಯ್ಕೆ ಮಾಡಲಾಗಿದೆ. ತ್ಯಾಜ್ಯ ಸಂಗ್ರಹಿಸಲು ಬೇಕಾದ ಬಕೆಟ್‌, ವಾಹನ ಇತ್ಯಾದಿಗಳ ಪೂರ್ವಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ.

Advertisement

ಸಾರ್ವಜನಿಕರ ಸಹಭಾಗಿತ್ವ  ಅಗತ್ಯ
ಪಂಚಾಯತ್‌ ಮತ್ತು ಎಸ್‌ಎಲ್‌ಆರ್‌ಎಂ ಕಾರ್ಯಕರ್ತರ ಪ್ರಯತ್ನ ಮಾತ್ರ ಸಾಲದು, ಸಾರ್ವಜನಿಕರ ಸಹಭಾಗಿತ್ವ ಅತೀ ಅಗತ್ಯ. ಮನೆಯಲ್ಲಿಯೇ ಘನ ಹಾಗೂ ದ್ರವ ತ್ಯಾಜ್ಯವನ್ನು ವಿಂಗಡಿಸಿ ಇಡುವಲ್ಲಿ, ಕನಿಷ್ಠ ಶುಲ್ಕ ನೀಡುವಲ್ಲಿ ಸಹಕಾರ ಅವಶ್ಯ. ಆಗ ಮಾತ್ರ ಇನ್ನಷ್ಟು ಭಾಗಕ್ಕೆ ವಿಸ್ತರಿಸಲು ಸಾಧ್ಯ.

– ದಿವ್ಯಾ ಎಸ್‌. ಪಿಡಿಒ, ವಾರಂಬಳ್ಳಿ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next