Advertisement

21 ಜನರಿಗೆ ಕೋವಿಡ್‌ ಪಾಸಿಟಿವ್‌

05:32 PM Jul 06, 2020 | Suhan S |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 21 ಜನರಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಇದರ ಜೊತೆಗೆ ಜನತೆ ರವಿವಾರದ ಲಾಕ್‌ಡೌನ್‌ನನ್ನು ಶ್ರದ್ಧೆಯಿಂದ ಸ್ವಾಗತಿಸಿದ್ದಾರೆ. ಎಲ್ಲೆಡೆ ಬಂದ್‌ ವಾತಾವರಣವಿದ್ದು, ಜನರು ಮನೆಯಿಂದ ಹೊರಬರಲಿಲ್ಲ.

Advertisement

ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು, ಇನ್ನು ರವಿವಾರ ಸಹ ಕೋವಿಡ್‌ ಹಾವಳಿ ಮುಂದುವರಿದಿದ್ದು, 21 ಜನರಲ್ಲಿ ಕೋವಿಡ್‌ ಕಂಡು ಬಂದಿದೆ. 6ಜನಗುಣಮುಖರಾಗಿದ್ದಾರೆ. ಜಿಲ್ಲಾಡಳಿತ 21 ಜನರಿಗೆ ಕೋವಿಡ್‌ ವೈರಾಣು ಪತ್ತೆಯಾಗಿರುವುದನ್ನು ರವಿವಾರ ಸಂಜೆ ದೃಢಪಡಿಸಿದೆ. ಭಟ್ಕಳದ 9 ಜನರಿಗೆ, ಕುಮಟಾ, ಹಳಿಯಾಳ, ಮುಂಡಗೋಡ ತಾಲೂಕಿನಲ್ಲಿ ತಲಾ ಮೂವರಂತೆ 9 ಜನರಿಗೆ, ಕಾರವಾರ, ಕದ್ರಾದಲ್ಲಿ ಒಬ್ಬೊಬ್ಬರಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು, ಅವರನ್ನು ಆಯಾ ತಾಲೂಕುಗಳಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈತನಕ 354 ಜನರಿಗೆ ಕೋವಿಡ್‌ ಪಾಜಿಟಿವ್‌ ಬಂದಿದೆ. ಕೋವಿಡ್‌ ಕಾಣಿಸಿಕೊಂಡವರಲ್ಲಿ ಭಟ್ಕಳದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 132 ಜನ ಭಟ್ಕಳದಲ್ಲಿ ಕೋವಿಡ್‌ನಿಂದ ಬಳಲಿದ್ದರೆ, ಜೋಯಿಡಾದಿಂದ 5, ಅಂಕೋಲಾದಿಂದ 21, ಹಳಿಯಾಳದಿಂದ 31, ಹೊನ್ನಾವರದಿಂದ 34, ಶಿರಸಿಯಿಂದ 25, ಕಾರವಾರದಿಂದ 17, ಕುಮಟಾದಿಂದ 28, ಮುಂಡಗೋಡದಿಂದ 21, ಸಿದ್ದಾಪುರದಿಂದ 6, ಯಲ್ಲಾಪುರದಿಂದ 34 ಜನ ಕೋವಿಡ್‌ ಪಾಸಿಟಿವ್‌ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಇವರಲ್ಲಿ 159 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. 194 ಜನ ಕಾರವಾರದ ಕ್ರಿಮ್ಸ್‌ ಸೇರಿದಂತೆ ವಿವಿಧ ತಾಲೂಕಾ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವೃದ್ಧೆ ಮಾತ್ರ ಮೃತಪಟ್ಟ ಘಟನೆ ನಡೆದಿದೆ. ಉಳಿದಂತೆ ಬಹುತೇಕರು ಗುಣಮುಖರಾಗಿದ್ದಾರೆ. ಕಾರವಾರದ ಕ್ರಿಮ್ಸ್‌ನಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ. 48 ಜನರ ಆರೋಗ್ಯ ಸ್ಥಿರವಾಗಿದ್ದು ಅವರು ಸುಧಾರಿಸಿಕೊಳ್ಳುತ್ತಿದ್ದಾರೆಂದು ವೈದ್ಯಕೀಯ ಕಾಲೇಜಿನ ಮೂಲಗಳು ಹೇಳಿವೆ.

ಹೊರ ಜಿಲ್ಲೆಯಿಂದ ಬಂದವರಿಗೆ ಜ್ವರ ತಪಾಸಣೆ ಕಡ್ಡಾಯ: ಹೊರ ಜಿಲ್ಲೆಯಿಂದ ಉತ್ತರ ಕನ್ನಡಕ್ಕೆ ಬರುವವರು 3 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಜಿಲ್ಲೆಯಲ್ಲಿ ಉಳಿದರೆ ಜ್ವರ ತಪಾಸಣೆ ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜ್ವರ ತಪಾಸಣೆಯಿಂದ ತಪ್ಪಿಸಿಕೊಂಡರೆ, 14 ದಿನ ಕಡ್ಡಾಯ ಕ್ವಾರಂಟೈನ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಈ ಸಂಬಂಧ ಎಲ್ಲಾ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದು, ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ನಿಗಾ ವಹಿಸಲಾಗಿದೆ. ಹೊರ ಜಿಲ್ಲೆಯಿಂದ ಬರುವವರು ಜ್ವರ ತಪಾಸಣಾ ಕೇಂದ್ರಕ್ಕೆ ಸ್ವಯಂ ಪ್ರೇರಿತರಾಗಿ ಬರುವಂತೆ ವಿನಂತಿಸಲಾಗಿದೆ. ನಿಯಮ ಮೀರಿದರೆ, ಪ್ರಾಕೃತಿಕ ವಿಪತ್ತು ನಿಯಮದಡಿ ಕಾನೂನು ಕ್ರಮ ಖಚಿತ ಎಂದು ಜಿಲ್ಲಾಡಳಿತ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next