Advertisement

2095 ಕೋ.ರೂ. ಅನುದಾನದಿಂದ ಬಂಟ್ವಾಳದ ಸಮಗ್ರ ಅಭಿವೃದ್ಧಿ ಕಾರ್ಯ: ರಾಜೇಶ್‌ ನಾೖಕ್‌

11:54 AM Apr 21, 2023 | Team Udayavani |

ಬಂಟ್ವಾಳ: ಕಳೆದ 5 ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸುಮಾರು 2095 ಕೋ.ರೂ.ಗಳ ಅನುದಾನದ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಲಾಗಿದ್ದು, ಬಂಟ್ವಾಳವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಹಲವು ಯೋಜನೆಗಳ ಅನುಷ್ಠಾನಕ್ಕೆ ಕ್ಷೇತ್ರದ ಮತದಾರರು ಮತ್ತೂಮ್ಮೆ ಆಶೀರ್ವಾದ ಮಾಡಬೇಕು ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಮನೆ ಮನೆ ಭೇಟಿಯ ಮೂಲಕ ಮತಯಾಚನೆ ನಡೆಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾನು ಶಾಸಕನಾಗುವ ಮೊದಲು ಬಂಟ್ವಾಳದಲ್ಲಿ ಬರೀ ಕೋಮು ಗಲಭೆಗಳು, ಹತ್ಯೆಗಳು, ಇನ್ನಿತರ ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇತ್ತು. ಹೀಗಾಗಿ ತಾನು ಶಾಸಕನಾದರೆ ಶಾಂತಿಯ ಬಂಟ್ವಾಳವನ್ನು ನಿರ್ಮಾಣ ಮಾಡಬೇಕು ಎಂಬ ಪಣತೊಟ್ಟಿದ್ದು, ಅದರಂತೆ ಕಳೆದ 5 ವರ್ಷಗಳಿಂದ ಒಂದೇ ಒಂದು ಕೋಮುಗಲಭೆ, ಕೊಲೆಗಳು ನಡೆಯದೆ ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಲ್ಲಿ ತೆರಳಿದ ಸಂದರ್ಭ ಕ್ಷೇತ್ರದ ಜನತೆ ಇದೇ ಮಾತನ್ನು ಹೇಳಿ ಮತ್ತೂಮ್ಮೆ ಗೆಲ್ಲಿಸುವ ಭರವಸೆ, ವಿಶ್ವಾಸವನ್ನು ನೀಡುತ್ತಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ಘಟಕ ವಾಮದಪದವು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಗೊಂಡಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ 25 ಐಸಿಯು ಬೆಡ್‌, ಪ್ರತಿನಿತ್ಯ 70 ಮಂದಿಗೆ ಡಯಾಲಿಸೀಸ್‌ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ಪುಂಜಾಲಕಟ್ಟೆ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಈಗಾಗಲೇ 12.44 ಕೋ.ರೂ.ಗಳ ಕಾಮಗಾರಿ ಶಿಲಾನ್ಯಾಸ ನೆರವೇರಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಎಂಬಂತೆ ಕೆಎಸ್‌ಆರ್‌ಟಿಸಿ ಐಸಿಯು ಬಸ್ಸು ಕ್ಷೇತ್ರದ ಮೂಲೆ ಮೂಲೆಗೂ ಸಂಚರಿಸಿ 18 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯ ತಪಾಸಣೆ ನಡೆಸಿದೆ.

ಶಿಕ್ಷಣಕ್ಕೆ ಸಂಬಂಧಿಸಿ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಆದ್ಯತೆಯ ನೆಲೆಯಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಬಂಟ್ವಾಳ ಪಾಲಿಟೆಕ್ನಿಕ್‌ಗೆ 5 ಕೋ.ರೂ.ಗಳ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲೇ ಮೊದಲ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆಯಲ್ಲಿ ಆರಂಭಗೊಂಡಿದ್ದು, ಅದರ ಅನುಷ್ಠಾನಕ್ಕೆ 29 ಕೋ.ರೂ. ಅನುದಾನ ಮಂಜೂರಾಗಿದೆ.

ನೇತ್ರಾವತಿ ನದಿಗೆ ಅಡ್ಡಲಾಗಿ ಜಕ್ರಿಬೆಟ್ಟುನಲ್ಲಿ 135 ಕೋ.ರೂ.ಗಳ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿದ್ದು, ಕ್ಷೇತ್ರದಲ್ಲಿ 34 ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಬಾಳ್ತಿಲ ಗ್ರಾಮದಲ್ಲಿ ಏತ ನೀರಾವರಿಗಾಗಿ 125 ಕೋ.ರೂ.ಗಳ ಯೋಜನೆ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಬೇಕಿದೆ. ಬಿ.ಸಿ.ರೋಡು ನಗರ ಸೌಂದರ್ಯ ಯೋಜನೆಯಾಗಿ 5 ಕೋ.ರೂ.ಗಳ ಕಾಮಗಾರಿ ಪೂರ್ಣಗೊಂಡಿರುತ್ತದೆ ಎಂದು ಹೇಳಿದರು

Advertisement

ಅನಂತಾಡಿ- ಬಂಟ್ರಿಂಜ- ಉಳ್ಳಾಲ್ತಿ ಮಾಡ ರಸ್ತೆಗೆ 2 ಕೋ.ರೂ. ಮಂಜೂರಾಗಿದ್ದು, ಮಾಣಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ರಸ್ತೆಯ ರೀತಿಯಲ್ಲೇ ಮಾದರಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಬಡಗಬೆಳ್ಳೂರು, ತೆಂಕಬೆಳ್ಳೂರು, ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ ಗ್ರಾಮಗಳಿಗೆ 26.50 ಕೋ.ರೂ.ಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರಮುಖರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು, ಗ್ರಾ.ಪಂ. ಜನಪ್ರತಿನಿಧಿಗಳು, ಬೂತ್‌ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ದಾಖಲೆಯ 1514 ರಸ್ತೆ

ಬಂಟ್ವಾಳ ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ಎಂಬಂತೆ 1514 ರಸ್ತೆಗಳ ನಿರ್ಮಾಣವಾಗಿದ್ದು, 318 ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗಿದೆ. ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅಮೃತ್‌-2ನಲ್ಲಿ 40.16 ಕೋ.ರೂ, ಒಳಚರಂಡಿ ವ್ಯವಸ್ಥೆಗೆ 56.54 ಕೋ.ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ ಎಂದು ರಾಜೇಶ್‌ ನಾೖಕ್‌ ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next