Advertisement

2021ರ ಹಿನ್ನೋಟ: ರಾಜ್ಯದ ಪ್ರಮುಖ ಘಟನಾವಳಿ

11:13 AM Dec 30, 2021 | Team Udayavani |

ಕೋವಿಡ್ , ಒಮಿಕ್ರಾನ್ ಭೀತಿ ನಡುವೆಯೇ 2021ಕ್ಕೆ ವಿದಾಯ ಹೇಳಿ, ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ರಾಜ್ಯರಾಜಕಾರಣದಲ್ಲಿ ಬಿಎಸ್ ಯಡಿಯೂರಪ್ಪ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದು, ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಿಟ್ ಕಾಯಿನ್ ಜಟಾಪಟಿ, ಮತಾಂತರ ನಿಷೇಧ ಕಾಯ್ದೆ ಜಾರಿ ಸೇರಿದಂತೆ ವರ್ಷದ ಕಿರುನೋಟದ ಚಿತ್ರಣ ಇಲ್ಲಿದೆ…

Advertisement

ಸಿಎಂ ಬದಲಾವಣೆ :

ಕಳೆದ ಜುಲೈ ೨೬ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಹಾಗೂ ಜುಲೈ ೨೮ರಂದು ಬಸವರಾಜ್‌ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಈ ವರ್ಷದ ಬಹುದೊಡ್ಡ ರಾಜಕೀಯ ಬೆಳವಣಿಗೆ. ಐದಾರು ತಿಂಗಳಿಂದ ತೆರೆಮರೆಯಲ್ಲಿ ನಡೆದ ರಾಜಕೀಯ ಚಟುವಟಿಕೆಯ ಭಾಗವಾಗಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯಲ್ಲಿ ಚಾಲ್ತಿಯಲ್ಲಿರುವ ೭೫ ವರ್ಷದ ಅಘೋಷಿತ ನಿವೃತ್ತಿ ವಯಸ್ಸು ಯಡಿಯೂರಪ್ಪ ಸ್ಥಾನಕ್ಕೆ ಚ್ಯುತಿ ತಂದಿತ್ತು.

ಚಾಮರಾಜನಗರ ಆಕ್ಸಿಜನ್‌ ದುರಂತ :

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ಗಮನ ಸೆಳೆದ ಅವಘಡ ಇದು. ಆಕ್ಸಿಜನ್‌ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 24 ಮಂದಿ ಕೊರೋನಾ ಸೋಂಕಿತರು ಒಂದೇ ದಿನ ಮರಣ ಹೊಂದಿದ್ದರು. ಈ ಘಟನೆಯಿಂದ ರಾಜ್ಯ ಸರಕಾರ ತೀವ್ರ ಮುಜುಗರ ಅನುಭವಿಸಬೇಕಾಯ್ತು. ಮೃತರ ಕುಟುಂಬಕ್ಕೆ ೨ ಲಕ್ಷ ಪರಿಹಾರ ಘೋಷಿಸಲಾಗಿತ್ತು. ನ್ಯಾ.ಗೋಪಾಲ ಗೌಡ ನೇತೃತ್ವದಲ್ಲಿ ಮೂವರು ಸದಸ್ಯರ ತನಿಖಾ ಆಯೋಗವನ್ನು ರಾಜ್ಯ ಸರಕಾರ ರಚಿಸಿತ್ತು.

Advertisement

ರೋಹಿಣಿ ಸಿಂಧೂರಿ ವರ್ಗವಣೆ ಪ್ರಹಸನ :

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಹಸನ ಮೂರ್ನಾಲ್ಕು ತಿಂಗಳು ಕಾಲ ರಾಜ್ಯದಲ್ಲಿ ಸದ್ದು ಮಾಡಿತ್ತು. ಸ್ಥಳೀಯ ಸಂಸದ ಪ್ರತಾಪ ಸಿಂಹ, ಶಾಸಕ ಸಾ.ರಾ.ಮಹೇಶ್‌ ಸೇರಿದಂತೆ ಜನಪ್ರತಿನಿಧಿಗಳ ಜತೆಗೆ ಮುನಿಸು ಸೃಷ್ಟಿಸಿಕೊಂಡಿದ್ದ ರೋಹಿಣಿ ಸಿಂಧೂರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆ ಬಳಿಕ ಮೈಸೂರು ಆಯುಕ್ತೆ ಶಿಲ್ಪಾ ನಾಗ್‌ ಜತೆಗೂ ಸಿಂಧೂರಿ ವಿವಾದ ಮಾಡಿಕೊಂಡಿದ್ದರು. ಕೊನೆಗೆ ಶಿಲ್ಪಾ ನಾಗ್‌ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದಾಗ ಎಚ್ಚೆತ್ತ ಸರಕಾರ ಸಿಂಧೂರಿ ಅವರನ್ನು ಮುಜರಾಯಿ ಇಲಾಖೆಗೆ ವರ್ಗಯಿಸಿತ್ತು.

ಕೇಂದ್ರ ಸಂಪುಟ ಸೇರ್ಪಡೆ :

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ ಲಭಿಸಿದ್ದು, ಈ ವರ್ಷದ ಮಹತ್ವದ ಬೆಳವಣಿಗೆಗಳಲ್ಲಿ ಒಂದು. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್‌ ಸಂಸದ ಭಗವಂತ ಖೂಬಾ, ರಾಜ್ಯ ಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹಾಗೂ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಈ ಬಾರಿ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದರು.

ಬಿಟ್‌ ಕಾಯಿನ್‌ ಸದ್ದು :

ಕ್ರಿಪ್ಟೋ ಕರೆನ್ಸಿ “ಬಿಟ್‌ ಕಾಯಿನ್‌ ʼʼ ವಿವಾದ ಈ ವರ್ಷದ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಪ್ರಕರಣ. ಡ್ರಗ್ಸ್‌ ಪ್ರಕರಣದಲ್ಲಿ ಸಿಸಿಬಿಗೆ ಸಿಕ್ಕಿಬಿದ್ದ ಅಂತಾರಾಷ್ಟ್ರೀಯ ಕುಖ್ಯಾತಿ ಪಡೆದ ಹ್ಯಾಕರ್‌ ಶ್ರೀ ಕೃಷ್ಣ ಅಲಿಯಾಸ್‌ ಶ್ರೀಕಿ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ಕಪ್ಪ ನೀಡಿದ್ದಾನೆ ಎಂಬ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಮೊದಲು ಟ್ವೀಟ್‌ ಮಾಡಿ ವಿವಾದವನ್ನು ಹೊರಗೆಳೆದಿದ್ದರು.

ಕೆಪಿಸಿಸಿ ಪಿಸುಮಾತು :

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಹಾಗೂ ಮಾಧ್ಯಮ ಕಾರ್ಯದರ್ಶಿ ಸಲೀಂ ಅಹ್ಮದ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಗ್ಗೆ ಆಡಿದ “ಪಿಸುಮಾತುʼʼ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ರಾಜ್ಯದಲ್ಲಿ ಪರ್ಸಂಟೇಜ್‌ ಹೆಚ್ಚಳ ಮಾಡಿದ್ದೆ ಡಿಕೆಶಿ ಎಂದು ಸಲೀಂ ಆರೋಪಿಸಿದ್ದರೆ, ಡಿಕೆಶಿ ತಕ್ಕಡಿ ಎದ್ದೇಳುತ್ತಿಲ್ಲ ಎಂದು ಉಗ್ರಪ್ಪ ವ್ಯಂಗ್ಯವಾಡಿದ್ದರು. ಆಡಳಿತ ಪಕ್ಷ ಬಿಜೆಪಿಗೆ ಇದು ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು.

40 ಪರ್ಸೆಂಟ್‌ ಸರಕಾರ :

ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ನಡೆಸುವುದಕ್ಕೆ 40 ಪರ್ಸೆಂಟ್‌ ಕಮಿಷನ್‌ ನೀಡಬೇಕು ಎಂದು ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರ ರಾಜ್ಯದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ಇದು ಭಾರಿ ವಾಗ್ವಾದಕ್ಕೆ ಕಾರಣವಾಗಿದೆ.

ಉಪಚುನಾವಣಾ ಫಲಿತಾಂಶ :

ಸಿಂಧಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಇತ್ತೀಚಿನ ಪ್ರಮುಖ ಬೆಳವಣಿಗೆಗಳಲ್ಲಿ ಒಂದು. ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದೆ. ವಾರಗಳ ಕಾಲ ಸಿಎಂ ಜಿಲ್ಲೆಯಲ್ಲಿ ಮುಕ್ಕಾಂ ಹೂಡಿದ್ದರೂ ಗೆಲುವು ಕಾಂಗ್ರೆಸ್‌ ಪಾಲಾಯ್ತು.

ಪರಿಷತ್‌ ಫಲಿತಾಂಶ :

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಈ ವರ್ಷದ ಪ್ರಮುಖ ರಾಜಕೀಯ ಘಟನೆಗಳಲ್ಲಿ ಒಂದು. ಅಧಿಕ ಸ್ಥಾನಗಳೊಂದಿಗೆ ಪರಿಷತ್‌ ನಲ್ಲಿ ಬಹುಮತಗಳಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಲಘು ಆಘಾತವಾಗಿದೆ. 15 ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ದಕ್ಕಿದ್ದು 11 ಸ್ಥಾನ ಮಾತ್ರ. ಕಾಂಗ್ರೆಸ್‌ 11, ಜೆಡಿಎಸ್‌ ೨ ಹಾಗೂ ಪಕ್ಷೇತರ ಲಖನ್‌ ಜಾರಕಿಹೊಳಿ ೧ ಸ್ಥಾನದಲ್ಲಿ ಗೆಲುವು ಸಾಧಿಸಿದರು.

ಮತಾಂತರ ನಿಷೇಧ ಕಾಯಿದೆ :

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರಕಾರ ಮತಾಂತರ ನಿಷೇಧ ಕಾಯಿದೆ ಮಂಡಿಸಿದೆ. ವಿಧಾನಸಭೆಯಲ್ಲಿ ಒಪ್ಪಿಗೆ ಲಭಿಸಿದ್ದು, ಸುಗ್ರೀವಾಜ್ಞೆ ಮೂಲಕ ಜಾರಿಗೆ ಸರಕಾರ ಚಿಂತನೆ ನಡೆಸಿದೆ. ಕ್ರೈಸ್ತ ಸಮುದಾಯದಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲೇ ಕಾಯ್ದೆ ವಾಪಾಸ್‌ ಪಡೆಯುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರೆ.

Advertisement

Udayavani is now on Telegram. Click here to join our channel and stay updated with the latest news.

Next