Advertisement

ಗೋಲ್ಡ್‌ಕೋಸ್ಟ್‌ ಗಣಿಯಲ್ಲಿ ಕಾದು ಕುಳಿತಿವೆ ಸಾವಿರ ಸ್ವರ್ಣ ಪುಟಗಳು…

06:25 AM Apr 03, 2018 | |

ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ನಂತರ ವಿಶ್ವಮಟ್ಟದ ಬೃಹತ್‌ ಕ್ರೀಡಾಕೂಟ ಯಾವುದು ಎಂದರೆ ಸಿಗುವ ಉತ್ತರ ಕಾಮನ್‌ವೆಲ್ತ್‌ ಗೇಮ್ಸ್‌. ಬಹುಕ್ರೀಡೆಗಳ ಮಟ್ಟಿಗೆ ಈ ಮೂರು ಕೂಟಗಳಿಗೇ ಅಗ್ರಸ್ಥಾನ.ಬದಲಾಗುತ್ತಿರುವ ಈ ಕಾಲಮಾನದಲ್ಲಿ 2018ರ ಕಾಮನ್‌ವೆಲ್ತ್‌ ಗೇಮ್ಸ್‌ ಮೈಚಾಚಿಕೊಂಡಿದೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ ಆತಿಥೇಯತ್ವದ ಹೊಣೆ ಹೊತ್ತು ಅಥ್ಲೀಟ್‌ಗಳನ್ನು ಸ್ವಾಗತಿಸುವ ತರಾತುರಿಯಲ್ಲಿದೆ. ಭಾರತೀಯರೂ ಆನಂದ, ವಿಸ್ಮಯ, ಕೌತುಕ, ಅಭಿಮಾನ, ನಿರೀಕ್ಷೆಗಳನ್ನು ತುಂಬಿಕೊಂಡು ಕಾಯುತ್ತಿದ್ದಾರೆ. ಏ.4ರಿಂದ 15ವರೆಗೆ ನಡೆಯುವ ಈ ಕೂಟದ ಹಿನ್ನೆಲೆಯಲ್ಲಿ ಇಲ್ಲಿದೆ ವಿಸ್ತಾರ ಪುಟ.

Advertisement

ಮುಗಿಲೆತ್ತರದ ಪದಕದಾಸೆಗಳು,ತಾರೆಯರು
ಕಾಮನ್‌ವೆಲ್ತ್‌ನಲ್ಲಿ ಭಾರತ ಯಾವಾಗಲೂ ಪ್ರಬಲ ಸ್ಪರ್ಧಿ. ಹಲವು ಬಾರಿ ಅತ್ಯುತ್ತಮ ಸಾಧನೆ ಮೂಲಕ ಅದನ್ನು ಸಾಬೀತು ಮಾಡಿದೆ. ಈ ಬಾರಿ ಗೋಲ್ಡ್‌ ಕೋಸ್ಟ್‌ನಲ್ಲಿ ಒಟ್ಟು 225 ಸ್ಪರ್ಧಿಗಳು ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಕಾಲ ಸರಿದಂತೆ ಭಾರತೀಯರೂ ಒಂದೊಂದೇ ಕ್ರೀಡೆಯಲ್ಲಿ ಮೇಲೇರುತ್ತಿದ್ದಾರೆ. ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕುಸ್ತಿ, ಅಥ್ಲೆಟಿಕ್ಸ್‌ನಲ್ಲಿ ವಿಶ್ವದ ಯಾವುದೇ ರಾಷ್ಟ್ರದ ಸ್ಪರ್ಧಿಗಳಿಗೂ ನಾವೇನು ಕಡಿಮೆಯಿಲ್ಲ ಎಂದು ಸಾಬೀತು ಮಾಡಿದ್ದಾರೆ. ಇಂತಹ ಆಶಾಮಯ ಸ್ಥಿತಿಯಲ್ಲಿ ಭಾರತ ಯಾವ್ಯಾವ ಕ್ರೀಡೆಯಲ್ಲಿ ಪದಕ ಗೆಲ್ಲಬಹುದು, ನೆಚ್ಚಿ® ‌ ತಾರೆಯರು ಯಾರು ಎಂಬ ವಿವರಣೆ ಇಲ್ಲಿದೆ.

ಅಗಣಿತ ಪ್ರತಿಭೆಗಳು
ಈ ಕ್ರೀಡೆಯಲ್ಲಿ ಭಾರತ ಇತ್ತೀಚೆಗೆ ಭಾರೀ ಬೆಳವಣಿಗೆ ಸಾಧಿಸಿದೆ.ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌ ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ. 

ಸಿಂಧು, ಸೈನಾ, ಶ್ರೀಕಾಂತ್‌ಗೆ ಸಾಟಿಯಿಲ್ಲ: ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಪ್ರಬಲ ಸ್ಪರ್ಧಿ ಪಿ.ವಿ.ಸಿಂಧು. 
2014ರಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ಸ್‌, ಕಳೆದ ವರ್ಷದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ ಕಂಚು, ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಗೆದ್ದಿರುವ ಸೈನಾ ನೆಹ್ವಾಲ್‌, ಪುರುಷರ ವಿಭಾಗದ ಮಾಜಿ ವಿಶ್ವ ನಂ.2 ಶ್ರೀಕಾಂತ್‌ ಇವರೆಲ್ಲ ಆಶಾಕಿರಣಗಳು.

ಮಲ್ಲರ ಮಲ್ಲರು ಕಣದಲ್ಲಿ
ಕನಿಷ್ಠ ಎಂದರೂ ಕುಸ್ತಿಯಲ್ಲಿ ಈ ಬಾರಿ ಮೂರಕ್ಕಿಂತ ಹೆಚ್ಚು ಪದಕ ಗೆಲ್ಲುವ ನಿರೀಕ್ಷೆ ಇಡಬಹುದು. ಒಲಿಂಪಿಕ್ಸ್‌ ಪದಕ ವಿಜೇತೆ ಸಾಕ್ಷಿ
ಮಲಿಕ್‌ (62 ಕೆ.ಜಿ), ವಿನೇಶ್‌ ಫೊಗಾಟ್‌ (50ಕೆ.ಜಿ), ಬಬಿತಾ ಕುಮಾರಿ (53 ಕೆ.ಜಿ), ಸುಶೀಲ್‌ ಕುಮಾರ್‌ (74 ಕೆ.ಜಿ  ವಿಭಾಗ)
ತುಂಬಿಕೊಂಡಿರುವ ಬಲಿಷ್ಠ ತಂಡ ಕಣದಲ್ಲಿದೆ.

Advertisement

ಸಾಕ್ಷಿ, ಸುಶೀಲ್‌ ಭರವಸೆ: 2008ರ ಬೀಜಿಂಗ್‌ ಒಳಿಂಪಿಕ್ಸ್‌ನಲ್ಲಿ ಕಂಚು, 2012ರ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಗೆದ್ದಿರುವ ಸುಶೀಲ್‌ ಕುಮಾರ್‌, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಸಾಕ್ಷಿ ಮಲಿಕ್‌ ಭಾರತದ ಭರವಸೆಗಳು. 2014ರ ಕಾಮನ್‌ ವೆಲ್ತ್‌ನಲ್ಲಿ ಸಾಕ್ಷಿ ಬೆಳ್ಳಿ ಪದಕ ಗೆದ್ದಿದ್ದರು ಎನ್ನುವುದು ಗಮನಾರ್ಹ.

ನವೋದಯದ ನಿರೀಕ್ಷೆ
ಅಥ್ಲೆಟಿಕ್ಸ್‌ ಭಾರತ ಗರಿಷ್ಠ ಪದಕ ನಿರೀಕ್ಷೆ ಹೊಂದಿರುವ ವಿಭಾಗ.ಇತ್ತೀಚೆಗೆ ಭಾರತ ಡಿಸ್ಕಸ್‌, ಶಾಟ್‌ಪುಟ್‌, ಓಟ, ಜಾವೆಲಿನ್‌ಗಳಲ್ಲಿ ಸುಧಾರಿಸಿದೆ. ಹಿಂದಿನ ಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿದೆ.

ಅನು ರಾಣಿ (ಜಾವೆಲಿನ್‌ ಥ್ರೋ), ಪಿ.ಯು.ಚಿತ್ರಾ (1500 ಮೀ.), ಸೀಮಾ ಪೂನಿಯಾ (ಡಿಸ್ಕಸ್‌ ಥ್ರೊ) ಮಹಿಳಾ ವಿಭಾಗದಲ್ಲಿ ಪದಕ ಗೆಲ್ಲಬಲ್ಲರು. ಇನ್ನು ಎಂ.ಆರ್‌.ಪೂವಮ್ಮ 4/400 ಮೀ. ರಿಲೇ ತಂಡದಲ್ಲಿ ಚಿನ್ನ ಗೆಲ್ಲಿಸುವ ಭರವಸೆಯಿದೆ.

ನೀರಜ್‌ ದಾಖಲೆ ವೀರ: 2016ರಲ್ಲಿ ಜಾವೆಲಿನ್‌ನಲ್ಲಿ 86.48 ಮೀ.ದೂರ ಎಸೆದು ನೀರಜ್‌ ಚೋಪ್ರಾ ಕಿರಿಯರ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಪ್ರತಿಭೆಯಿಂದ ನಿರೀಕ್ಷೆಯಿದೆ.

ಮತ್ತೆ ಚಿನ್ನದ ಮಳೆ?
ಶೂಟಿಂಗ್‌ನಲ್ಲಿ ಭಾರತ ಬಲಿಷ್ಠ ಹಿಡಿತ ಹೊಂದಿದೆ. 2010ರಲ್ಲಿ ಬರೀ ಶೂಟಿಂಗ್‌ನಲ್ಲೇ 14 ಚಿನ್ನ ಗೆದ್ದಿತ್ತು. 2006ರಲ್ಲಿ ಒಟ್ಟು ಗೆದ್ದಿದ್ದು 22 ಚಿನ್ನ. ಅದರಲ್ಲಿ ಶೂಟಿಂಗ್‌ ಮೂಲಕವೇ ಗೆದ್ದಿದ್ದು 16 ಚಿನ್ನ.ನಾರಂಗ್‌, ಜಿತು, ಹೀನಾ ಆಕರ್ಷಣೆ: ಗಗನ್‌ ನಾರಂಗ್‌, ಜಿತು ರಾಯ್‌, ಹೀನಾ ಸಿಧು, ಅಪೂರ್ವಿ ಚಂಡೀಲ ಅವರಿರುವ ತಂಡ ಬಲಿಷ್ಠವಾಗಿದೆ. ನಾರಂಗ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ 3 ಚಿನ್ನ, 3 ಕಂಚು
ಗೆದ್ದಿದ್ದಾರೆ. 2006ರ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಡಿದು 2014ರ ತನಕ ಒಟ್ಟು 10 ಪದಕ ಗೆದ್ದಿದ್ದಾರೆ. ಜಿತುರಾಯ್‌ 2014ರ ಕಾಮನ್‌ ವೆಲ್ತ್‌ನ 50 ಮೀ.ಪಿಸ್ತೂಲ್‌,ಹೀನಾ ಸಿಧು 2010ರಲ್ಲಿ 1 ಚಿನ್ನ, 1 ಬೆಳ್ಳಿ ಪದಕ ಗೆದ್ದಿದ್ದರು. ಇವರೆಲ್ಲ ಈ ಬಾರಿಯ ಭರವಸೆಗಳು.

ಚಿನ್ನಕ್ಕೆ ಕಾತರಿಸಿದೆ ಅಭಿಮಾನ
ಭಾರತ ವೇಗವಾಗಿ ಸುಧಾರಿಸಿಕೊಳ್ಳುತ್ತಿರುವ ಕ್ರೀಡೆ ಹಾಕಿ. ಗತಕಾಲದಲ್ಲಿ ಅತ್ಯಂತ ವೈಭವದಿಂದ ಮೆರೆದಾಡಿದ್ದ ಭಾರತ ಹಾಕಿ ತಂಡ ಕೆಲವು ವರ್ಷಗಳ ಹಿಂದಂತೂ ದಯನೀಯ ಸ್ಥಿತಿ ತಲುಪಿತ್ತು. ಕಾಲಾನಂತರದಲ್ಲಿ ಚೇತರಿಕೆಯೊಂದಿಗೆ ಮುನ್ನಡೆದಿರುವ ಈಗ ವಿಶ್ವ ನಂ.6ನೇ ತಂಡ.

ಮನ್‌ಪ್ರೀತ್‌, ಸುನೀಲ್‌ ಬಲಿಷ್ಠ ಹಸ್ತ: ಭಾರತ ಪುರುಷರ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಎಸ್‌.ವಿ.ಸುನೀಲ್‌ರಂತಹ ಪ್ರತಿಭೆಗಳು ತಂಡದಲ್ಲಿದ್ದಾರೆ. ಇವರೆಲ್ಲ ವಿಶ್ವದ ಇತರೆ ಪ್ರಬಲ ತಂಡಗಳ ಫಿಟ್ನೆಸ್ ಹೊಂದಿದ್ದಾರೆ.

ಪಂಚ್‌ಗೆ ಉದುರುತ್ತಾ ಚಿನ್ನ?
ಬಾಕ್ಸಿಂಗ್‌ನಲ್ಲಿ ಭಾರತ ವಿಶ್ವದ ಬಲಿಷ್ಠ ತಂಡ. ಒಲಿಂಪಿಕ್ಸ್‌, ವಿಶ್ವಚಾಂಪಿಯನ್‌ಶಿಪ್‌ನಲ್ಲಿ ವಿಜೇಂದರ್‌ ಸಿಂಗ್‌, ವಿಕಾಸ್‌ ಕೃಷ್ಣನ್‌ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ನಲ್ಲೂ ಇದೇ ಯಶಸ್ಸು ಸಿಕ್ಕಿದೆ. ಈ ಬಾರಿ ಕನಿಷ್ಠ 4 ಪದಕ ನಿರೀಕ್ಷಿಸಬಹುದು.

ಮೇರಿ, ವಿಕಾಸ್‌ ಭರವಸೆ: ಮನೋಜ್‌ ಕುಮಾರ್‌ 2010ರಲ್ಲಿ ಕಾಮನ್‌ವೆಲ್ತ್‌ ಪದಕ ಗೆದ್ದಿದ್ದರು. ಏಷ್ಯನ್‌ ಚಾಂಪಿಯನ್‌ ಕೂಡ
ಆಗಿದ್ದರು. ಈ ಸಲ ಅವರ ಮೇಲೆ ನಿರೀಕ್ಷೆ ಹೆಚ್ಚು. ಜತೆಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿರುವ ವಿಕಾಸ್‌ ಕೃಷ್ಣನ್‌ (60
ಕೆ.ಜಿ) ಮುಖ್ಯ ಹೆಸರು. ಇನ್ನು 5 ಬಾರಿಯ ವಿಶ್ವಚಾಂಪಿಯನ್‌ ಮೇರಿ ಕೋಮ್‌ ಚಿನ್ನ ಗೆಲ್ಲಲೇಬೇಕೆಂಬ ನಿರೀಕ್ಷೆ ಅಭಿಮಾನಗಳದ್ದು.

ಉದ್ದೀಪನ ದುರಂತಗಳು
ಹಾಗೆಲ್ಲ ಮಾಡಾºರ್ಧು ಎಂದಾಕೆಯೇ ಸಿಕ್ಕಿಬಿದ್ದಳು

ಇದು ವಿಶೇಷ, ವಿಡಂಬನಾತ್ಮಕ ಘಟನೆ. ನಡೆದಿದ್ದು 2010ರ ದೆಹಲಿ ಕೂಟದಲ್ಲಿ. ಕೂಟಕ್ಕೂ ಮುನ್ನ ನೈಜೀರಿಯಾದ ಓಟಗಾರ್ತಿ ಒಲುಡಾಮೊಲಾ ಒಸಾಯೊಮಿ ಮಾತನಾಡಿ, ನಿಯಮಗಳನ್ನು ಪಾಲಿಸದವರೆನ್ನಲ್ಲ ಯಾಕೆ ಒಳಗೆ ಬಿಟ್ಟುಕೊಳ್ಳುತ್ತಾರೋ ನನಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ಆಕೆ 100 ಮೀ. ಓಟದಲ್ಲಿ ಚಿನ್ನ ಗೆದ್ದ ನಂತರ ಉದ್ದೀಪನ ಪರೀಕ್ಷೆ ನಡೆಯಿತು. ಅಲ್ಲಿ ಆಕೆಯೇ ಉದ್ದೀಪನ ಸೇವಿಸಿದ್ದು ಖಚಿತವಾಗಿತ್ತು. ಅವರ ಪದಕ ಹಿಂಪಡೆಯುವುದರ ಜೊತೆಗೆ, ನಿಷೇಧವನ್ನೂ ಹೇರಲಾಯಿತು.

ಮೂತ್ರಕ್ಕೆ ವ್ಹಿಸ್ಕಿಬೆರೆಸಿದ ಈಜುಪಟು
ಯಾವುದೇ ಕ್ರೀಡಾಕೂಟಗಳಲ್ಲಿ ಉದ್ದೀಪನ ಪರೀಕ್ಷೆ ಅಥ್ಲೀಟ್‌ಗಳಿಗೆ ದೊಡ್ಡ ತಲೆನೋವು. ಅದನ್ನು ತಪ್ಪಿಸಿಕೊಳ್ಳಲು ಅವರು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಅಂತಹದ್ದೊಂದು ವಿಚಿತ್ರ ಪ್ರಕರಣ 1998ರಲ್ಲಿ ಮಲೇಷ್ಯಾ ಕೂಟದಲ್ಲಿ ನಡೆಯಿತು.

ಐರೆಲಂಡ್‌ನ‌ ಮಿಚೆಲ್‌ ಸ್ಮಿತ್‌ ಉದ್ದೀಪನ ಪರೀಕ್ಷೆ ವೇಳೆ ತಮ್ಮ ಮೂತ್ರಕ್ಕೆ ವ್ಹಿಸ್ಕಿ ಬೆರೆಸಿ ಪರೀಕ್ಷಕರ ದಾರಿ ತಪ್ಪಿಸಲು ಯತ್ನಿಸಿದರು.ಇದು ಗೊತ್ತಾಗಿದ್ದೇ ಆಕೆಯನ್ನು ಕೂಟದಿಂದ ಹೊರಹಾಕಲಾಯಿತು. ಅಲ್ಲದೇ 2 ವರ್ಷ ನಿಷೇಧಿಸಲಾಯಿತು. ಅದು ಆಕೆಯ ವೃತ್ತಿಜೀವನವನ್ನೇ ಅಂತ್ಯಗೊಳಿಸಿತೆನ್ನುವುದು ವಿಪರ್ಯಾಸ.

ನಿಷೇಧ ಪ್ರತಿಭಟಿಸಿಗೆದ್ದ ಇಂಗ್ಲೆಂಡ್‌ ಓಟಗಾರ್ತಿ
1994ರಲ್ಲಿ ಕೆನಡಾದ ವಿಕ್ಟೋರಿಯಾದಲ್ಲಿ ಕೂಟ ನಡೆದಿತ್ತು. ಆಗ ಇಂಗ್ಲೆಂಡ್‌ನ‌ 800 ಮೀ. ಓಟಗಾರ್ತಿ ಡಯಾನ್‌ ಮೊಡಾಹ್ಲರನ್ನು ಉದ್ದೀಪನ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದರು. ಅವರನ್ನು ಅನರ್ಹಗೊಳಿಸಿ ವಾಪಸ್‌ ಕಳುಹಿಸಲಾಯಿತು. ಆದರೆ ಮೊಡಾಹ್ಲ ಸುಮ್ಮನಿರಲಿಲ್ಲ. ನಿರಂತರವಾಗಿ ಹೋರಾಡಿ ಉದ್ದೀಪನ ಪರೀಕ್ಷೆಯಲ್ಲೇ ದೋಷವಿದೆಯೆಂದು ಸಾಬೀತುಮಾಡಿದರು. ಪರಿಣಾಮ ನಿರ್ದೋಷಗೊಂಡು ಹೊರಬಂದರು.1998ರ ಮಲೇಷ್ಯಾ ಕೂಟದಲ್ಲಿ ಸ್ಪರ್ಧಿಸಿ ಕಂಚು ಗೆದ್ದರು.

ಉದ್ದೀಪನ ಸೇವಿಸಿದ್ದರೂ ಪಾರಾದ ಶೂಟರ್‌ ಫಿಲಿಪ್‌ ಆ್ಯಡಮ್ಸ್‌
2002ರ ಮ್ಯಾಂಚೆಸ್ಟರ್‌ ಕೂಟದಲ್ಲಿ ನಡೆದ ಈ ಉದ್ದೀಪನ ಪ್ರಕರಣ ಬಹಳ ಮಹತ್ವದ್ದು. ಆಸ್ಟ್ರೇಲಿಯಾದ ಶೂಟರ್‌ ಫಿಲಿಪ್‌ ಆ್ಯಡಮ್ಸ್‌ ಡಯರೆಟಿಕ್‌ ನಿಷೇಧಿತ ದ್ರವ್ಯ ಸೇವಿಸಿದ್ದು ಪರೀಕ್ಷೆ ವೇಳೆ ದೃಢಪಟ್ಟಿದ್ದು. ಆದರೆ ಅವರು ತನಗೆ ತೀವ್ರ ರಕ್ತದೊತ್ತಡವಿದೆ. ಅದನ್ನು ಸೇವಿಸದಿದ್ದರೆ ತನ್ನ ಆರೋಗ್ಯಕ್ಕೆ ಹಾನಿಯಾಗುತ್ತಿತ್ತು ಎಂದು ವಾದಿಸಿ ಗೆದ್ದರು. ಅದೇ ಕೂಟದಲ್ಲಿ ಅವರು ಶೂಟಿಂಗ್‌ನಲ್ಲಿ ಬೆಳ್ಳಿಯನ್ನೂ ಗೆದ್ದರು. ಆದರೆ ಆಗ ಕೈಹಿಡಿದ ಅದೃಷ್ಟ ಮುಂದೆ ಕೈಕೊಟ್ಟಿತು. ತೀರ್ಪಿನ ಮರುಪರಿಶೀಲನೆ ವೇಳೆ ಅವರು ತಪ್ಪಿತಸ್ಥರೆಂದು ಸಾಬೀತಾಗಿ 2 ವರ್ಷ ನಿಷೇಧಕ್ಕೊಳಗಾದರು.

ಎಡ್ವಿನ್‌, ತೇಜಿಂದರ್‌ಗೆ ಆಜೀವ ನಿಷೇಧ
2006ರಲ್ಲಿ ಮೆಲ್ಬರ್ನ್ನಲ್ಲಿ ನಡೆದ ಕೂಟದಲ್ಲಿ ಭಾರತಕ್ಕೆ ಮುಜುಗರ ಎದುರಾಯಿತು. ಭಾರತದ ಇಬ್ಬರು ಕುಸ್ತಿಪಟುಗಳಾದ ಎಡ್ವಿನ್‌ ರಾಜು, ತೇಜಿಂದರ್‌ಸಿಂಗ್‌ ಉದ್ದೀಪನ ಸೇವನೆ ದೃಢಪಟ್ಟಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಕುಸ್ತಿ ಒಕ್ಕೂಟ ಅವರನ್ನು ಆಜೀವ ನಿಷೇಧಿಸಿತು. ಅಷ್ಟು ಮಾತ್ರವಲ್ಲ ಮಹಿಳಾ ಕುಸ್ತಿಪಟುಗಳಾದ ಪ್ರಮೀಳಾವಲ್ಲಿ ಬೊದಾರಿ, ಶೈಲಜಾ ಪೂಜಾರಿಯನ್ನು ವರ್ಷ ನಿಷೇಧಿಸಲಾಯಿತು. ಆ ವರ್ಷ ಭಾರತ ರಾಷ್ಟ್ರೀಯ ಕೂಟವನ್ನು ಸ್ಥಗಿತಗೊಳಿಸಲಾಯಿತು.

ಭಾರತದ ಪಾಲಿಗೆ ಮರೆಯಲಾಗದ ಕೂಟಗಳು
2010 ದೆಹಲಿಯಲ್ಲಿ 101 ಪದಕ

ಭಾರತದ ಪಾಲಿಗೆ ಮರೆಯಲಾಗದ ಗೇಮ್ಸ್‌ ಎಂದರೆ ಅದು ತನ್ನದೇ ಆತಿಥ್ಯದಲ್ಲಿ 2010ರಲ್ಲಿ ನಡೆದ ದೆಹಲಿ ಕೂಟ. ಕಾಮನ್‌ವೆಲ್ತ್‌ಗೆ ಮೊದಲ ಬಾರಿಗೆ ಆತಿಥ್ಯವಹಿಸಿದ ಭಾರತ ಪದಕ ಬೇಟೆಯಲ್ಲಿ ಮೊದಲ ಬಾರಿ ಶತಕದ ಗಡಿ ದಾಟಿತ್ತು. ತವರಿನ ಸಂಪೂರ್ಣ ಲಾಭ ಪಡೆಯುವಲ್ಲಿ ಭಾರತೀಯ ಅಥ್ಲೀಟ್‌ಗಳು ಯಶಸ್ವಿಯಾಗಿದ್ದರು. ಅದರಲ್ಲಿಯೂ ಶೂಟರ್‌ಗಳು, ಕುಸ್ತಿ ಪಟುಗಳು, ಅಥ್ಲೀಟ್‌ಗಳು ಭರ್ಜರಿ ಪ್ರದರ್ಶನ ನೀಡಿದರು. ಶೂಟಿಂಗ್‌ನಲ್ಲಿ 30 ಪದಕ, ಕುಸ್ತಿಯಲ್ಲಿ 19 ಪದಕ, ಅಥ್ಲೆಟಿಕ್ಸ್‌ನಲ್ಲಿ 12 ಪದಕಗಳು ಬಂದಿದ್ದವು. ಇಲ್ಲಿಯವರೆಗೆ ಭಾರತ ಯಾವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಇಷ್ಟೊಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಒಟ್ಟು 101 ಪದಕ ಗೆದ್ದು ದ್ವಿತೀಯ ಸ್ಥಾನಿಯಾಯಿತು.

2002ರಲ್ಲಿ 69 ಪದಕ
ಪದಕ ಗಳಿಕೆಯಲ್ಲಿ ಭಾರತದ ಪಾಲಿಗೆ ಮರೆಯಲಾಗದ ಮತ್ತೂಂದು ಕೂಟ 2002ರಲ್ಲಿ ಇಂಗ್ಲೆಂಡ್‌ನ‌ ಮ್ಯಾಂಚೆಸ್ಟರ್‌ನಲ್ಲಿ ನಡೆಯಿತು. ಈ ಗೇಮ್ಸ್‌ಗೂ ಮುನ್ನ ಭಾರತೀಯರಿಂದ ಈ ಮಟ್ಟದ ಪ್ರದರ್ಶನದ ನಿರೀಕ್ಷೆ ಇರಲಿಲ್ಲ. ಆದರೆ ಕ್ರೀಡಾಪಟುಗಳು ಅದನ್ನು ಸುಳ್ಳಾಗಿಸಿದರು. ಶೂಟಿಂಗ್‌, ವೇಟ್‌ಲಿಫಿಂಗ್‌ನಲ್ಲಿ ಹೆಚ್ಚಿನ ಪದಕವನ್ನು ಬೇಟೆಯಾಡಿದರು. ವಿಶೇಷವಾಗಿ ಮಹಿಳಾ ಹಾಕಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದಿತ್ತು. ಭಾರತೀಯರು ಪ್ರಬಲವಾಗಿರುವ ಕುಸ್ತಿಯಲ್ಲಿ ದಕ್ಕಿದ್ದು ಏಕೈಕ ಪದಕ! ಅಂತಿಮವಾಗಿ 30 ಚಿನ್ನ ಸೇರಿದಂತೆ 69 ಪದಕ ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

2006ರಲ್ಲಿ 50 ಪದಕ
ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮೆಲ್ಬರ್ನ್ನಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳದ್ದೇ ಮೇಲುಗೈ. ಭಾರತ ಗೆದ್ದಿರುವ 22 ಚಿನ್ನದ ಪದಕದಲ್ಲಿ 16 ಪದಕ ಶೂಟಿಂಗ್‌ನಲ್ಲಿಯೇ ಬಂದಿತ್ತು. ಉಳಿದಂತೆ ವೇಟ್‌ಲಿಫಿಂಗ್‌ನಲ್ಲಿಯೂ ಭಾರತೀಯರು ಹೆಚ್ಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಕೂಟದಲ್ಲಿ 71 ರಾಷ್ಟ್ರಗಳಿಂದ 4071 ಅಥ್ಲೀಟ್‌ಗಳು ಪಾಲ್ಗೊಂಡಿರುವುದರಿಂದ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಭಾರತದಿಂದಲೇ 183 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ 22 ಚಿನ್ನ ಸೇರಿದಂತೆ ಒಟ್ಟಾರೆ 50 ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

ಇವು ಕೂಟದ ಸ್ವಾರಸ್ಯಗಳು
ಸಂಭ್ರಮಾಚರಣೆಯೇ ಕಾರಣ

5ನೇ ಜಾರ್ಜ್‌ ಇಂಗ್ಲೆಂಡ್‌ ರಾಜನಾಗಿ ಪಟ್ಟಾಭಿಷೇಕಗೊಳಗಾದರು. ಆ ಸಂಭ್ರಮಾಚರಣೆ ನಡೆಸಲು ಲಂಡನ್‌ನಲ್ಲಿ 1911ರಲ್ಲಿ ಮೊದಲ ಬಾರಿ ಈ ಕೂಟ ನಡೆಸಲಾಯಿತು. ಆಗ ಕೂಟವನ್ನು “ಫೆಸ್ಟಿವಲ್‌ ಆಫ್ ಎಂಪೈರ್‌’ ಎಂದು ಕರೆಯಲಾಗಿತು

ಮೊದಲ ಅಧಿಕೃತ ಕೂಟ 1930
ಅಧಿಕೃತವಾಗಿ ಮೊದಲ ಕಾಮನ್‌ವೆಲ್ತ್‌ ಗೇಮ್ಸ್‌ ನಡೆದಿದ್ದು 1930ರಲ್ಲಿ. ಕೆನಡಾದಲ್ಲಿ ನಡೆದ ಆ ಕೂಟಕ್ಕಿನ್ನೂ ವ್ಯಾಪ್ತಿ ವಿಸ್ತಾರ ಗಳಿರಲಿಲ್ಲ, ಕಾಮನ್‌ವೆಲ್ತ್‌ ಎಂಬ ಹೆಸರೂ ಇರಲಿಲ್ಲ. ಆಗದನ್ನು ಬ್ರಿಟಿಷ್‌ ಎಂಪೈರ್‌ ಗೇಮ್ಸ್‌ ಎಂದು ಕರೆಯಲಾಗಿತ್ತು. ಅಂದರೆ ಬ್ರಿಟಿಷ್‌ ಅಧೀನ ರಾಷ್ಟ್ರಗಳ ಕ್ರೀಡಾಕೂಟ.

7 ಕೂಟದಲ್ಲಿ ವಿಲಿವುಡ್‌, ಗ್ರೆಗ್‌
ಲಾನ್‌ ಬೌಲಿಂಗ್‌ ಸ್ಪರ್ಧಿಯಾಗಿದ್ದ ವಿಲಿವುಡ್‌ 7 ಕಾಮನ್‌ವೆಲ್ತ್‌ ಕೂಟಗಳಲ್ಲಿ ಭಾಗವಹಿಸಿದ ವಿಶ್ವದ ಮೊದಲ ಸ್ಪರ್ಧಿಯಾಗಿದ್ದಾರೆ. ಸ್ಕಾಟ್ಲೆಂಡ್‌ ದೇಶದ ಇವರು 2 ಚಿನ್ನ ಗೆದ್ದಿದ್ದಾರೆ. ನ್ಯೂಜಿಲೆಂಡ್‌ ಶೂಟರ್‌ ಗ್ರೆಗ್‌ ಯೆಲಾವೆಚ್‌ ಕೂಡ 7 ಬಾರಿ ಸ್ಪರ್ಧಿಸಿ ಒಟ್ಟು 12 ಪದಕ ಗೆದ್ದಿದ್ದಾರೆ.

7 ಚಿನ್ನ ಗೆದ್ದು ರಾಷ್ಟ್ರಾಧ್ಯಕ್ಷರಾದರು
ನೌರು ಎನ್ನುವುದು ಆಸ್ಟ್ರೇಲಿಯಾಕ್ಕೆ ಸಮೀಪವಿರುವ ಸಣ್ಣ ದ್ವೀಪರಾಷ್ಟ್ರ. ಅಲ್ಲಿನ ವೇಟ್‌ಲಿಫ್ಟರ್‌ ಮಾರ್ಕಸ್‌ ಸ್ಟೀಫ‌ನ್‌ 1990ರಿಂದ 2002ರ ಅವಧಿಯಲ್ಲಿ ಒಟ್ಟು 12 ಪದಕಗಳನ್ನು ಗೆದ್ದರು. ಅದರಲ್ಲಿ 7 ಚಿನ್ನದ ಪದಕಗಳೇ ಇದ್ದವು. ಇದರಿಂದ ಅವರು ಜನಪ್ರಿಯತೆಯ ತುದಿಗೇರಿದರು.ಸ್ಟೀಫ‌ನ್‌ 2007ರಲ್ಲಿ ನೌರು ದೇಶದ ಅಧ್ಯಕ್ಷ ಪಟ್ಟಕ್ಕೇರಿದರು!

1998ರಲ್ಲಿ ತಂಡ ಸ್ಪರ್ಧೆ ಆರಂಭ
1998ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ಕೂಟ ನಡೆಯಿತು. ಇದು ಹಲವು ಕಾರಣಗಳಿಗಾಗಿ ವಿಶೇಷ.ಮೊದಲ ಬಾರಿ ಇಲ್ಲಿ ತಂಡದ ಸ್ಪರ್ಧೆಗಳನ್ನು ಆಯೋಜಿಸ ಲಾಯಿತು. ಕ್ರಿಕೆಟ್‌, , ನೆಟ್‌ಬಾಲ್‌, ಹಾಕಿ ಸ್ಪರ್ಧೆಗಳು ಆರಂಭವಾಗಿದ್ದು ಈ ಕೂಟದಿಂದಲೇ.

1930ರಿಂದಲೇ ಭಾರತದ ಸ್ಪರ್ಧೆ
ಭಾರತ ಮೊದಲ ಬಾರಿ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿದ್ದು 1930ರಲ್ಲಿ. ಇಂಗ್ಲೆಂಡ್‌ನ‌ಲ್ಲಿ ನಡೆದ ಇದು ಅಧಿಕೃತವಾಗಿ ನಡೆದ ಮೊದಲ ಕೂಟ. ಅದಕ್ಕೂ ಮುನ್ನ 1911ರಲ್ಲಿ ನಡೆದ ಅನಧಿಕೃತ ಕೂಟದಲ್ಲಿ ಭಾರತದ ಭಾಗೀದಾರಿಕೆಯಿರಲಿಲ್ಲ. ಭಾರತ ಕೂಟದ ಯಶಸ್ವಿ ಪದಕ ವಿಜೇತ ದೇಶಗಳಲ್ಲೊಂದು.

2ನೇ ಗರಿಷ್ಠ ಜನಸಂಖ್ಯೆ ದೇಶ ಪಾಕ್‌
ಈ ಕೂಟದಲ್ಲಿ ಭಾಗವಹಿಸುತ್ತಿರುವ ಗರಿಷ್ಠ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಭಾರತ,ಪಾಕಿಸ್ತಾನ. ವಿಶ್ವದಲ್ಲೇ 2ನೇ ಗರಿಷ್ಠ ಜನಸಂಖ್ಯೆ ಹೊಂದಿರುವ ಹೆಗ್ಗಳಿಕೆ ಭಾರತದ್ದಾದರೆ, ಕಾಮನ್‌ವೆಲ್ತ್‌ ರಾಷ್ಟ್ರಗಳ ಮಟ್ಟಿಗೆ 2ನೇ ಗರಿಷ್ಠ ಜನ ಸಂಖ್ಯೆ ಹೊಂದಿರುವ ಹೆಗ್ಗಳಿಕೆ ಪಾಕಿಸ್ತಾನದ್ದು (20.77 ಕೋಟಿ).

1978ರಲ್ಲಿ ಮೊದಲ ಲಾಂಛನ
1978ರವರೆಗೆ ಕಾಮನ್‌ವೆಲ್ತ್‌ ಕೂಟಗಳಲ್ಲಿ ಲಾಂಛನ ಬಳಸುತ್ತಿರಲಿಲ್ಲ. ಆ ವರ್ಷ ಕೆನಡಾದ ಎಡ್ಮಂಟನ್‌ನಲ್ಲಿ ನಡೆದಾಗ ಲಾಂಛನವೊಂದನ್ನು ಮೊದಲ ಬಾರಿಗೆ ರೂಪಿಸಲಾಯಿತು. ಕೆಯಾನೊ ಎಂಬ ಹೆಸರಿನಿಂದ ಅದನ್ನು ಕರೆಯಲಾಯಿತು. ಇದು ಕೆನಡಾದ ಸ್ವಾನ್‌ ಹಿಲ್ಸ್‌ನಲ್ಲಿ ಕಂಡುಬರುವ ವಿಶಿಷ್ಟ ಜಾತಿಯ ಕರಡಿಯನ್ನು ಪ್ರತಿನಿಧಿಸುತ್ತದೆ.

ಕೂಟದಲ್ಲಿ ಕನ್ನಡದ ಗೋಲ್ಡ್‌ಗಳು
ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ಗೆಲ್ಲಲು ಕರ್ನಾಟಕದಿಂದ ಒಟ್ಟಾರೆ 6 ಕ್ರೀಡಾಪಟು ಗಳು ತಯಾರಾಗಿದ್ದಾರೆ. ಮುಖ್ಯವಾಗಿ ಅಥ್ಲೆಟಿಕ್ಸ್‌ನಿಂದ ಎಂ.ಆರ್‌.ಪೂವಮ್ಮ 400 ಮೀ. ರಿಲೇ ತಂಡದಲ್ಲಿದ್ದಾರೆ. ಪೂವಮ್ಮ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ಆದರೆ ಕಾಮನ್‌ವೆಲ್ತ್‌ನಲ್ಲಿ ಇನ್ನು ಪದಕ ಗೆಲ್ಲುವ ಭಾಗ್ಯ ಅವರಿಗೆ ದೊರೆತಿಲ್ಲ. ಜೀವನ್‌ ಕಾರಕೊಪ್ಪ ಪುರುಷರ ವಿಭಾಗದಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಅಥ್ಲೀಟ್‌. ಇನ್ನು ಹಾಕಿಯಲ್ಲಿ ಮಡಿಕೇರಿಯ ಎಸ್‌.ವಿ.ಸುನೀಲ್‌ ಇದ್ದಾರೆ. ಈಜಿನಲ್ಲಿ ಶ್ರೀಹರಿ ನಟರಾಜ್‌ ಪದಕ ಗೆಲ್ಲಬಲ್ಲ ಸ್ಪರ್ಧಿ. ಬಾಸ್ಕೆಟ್‌ಬಾಲ್‌ ಮಹಿಳಾ ತಂಡದಲ್ಲಿ ಕೊಡಗಿನ ನವನೀತ ಹಾಗೂ ಮಂಡ್ಯದ ಎಚ್‌.ಎಂ.ಬಾಂಧವ್ಯ ಸ್ಥಾನ ಪಡೆದಿದ್ದಾರೆ.

ವಿಜಯಗೆ ಸ್ಥಾನ ಖಚಿತಗೊಂಡಿಲ್ಲ
4/400 ಮೀ. ರಿಲೇ ತಂಡದಲ್ಲಿ ಖ್ಯಾತ ಅಥ್ಲೀಟ್‌ ವಿಜಯ ಕುಮಾರಿಗೆ ಸ್ಥಾನ ಇನ್ನೂ ಖಚಿತಗೊಂಡಿಲ್ಲ. ಭಾರತ ತಂಡದ ಶಿಬಿರದಲ್ಲಿ 2020 ರವರೆಗೆ ಇರಲು ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕು ಎನ್ನುವ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ ಕರಾರನ್ನು ವಿಜಯ ಒಪ್ಪಿರಲಿಲ್ಲ. ಕೂಟಕ್ಕೆ ತಯಾರಾಗಲು ಕ್ಯಾಂಪ್‌ಗೆ ಬರುತ್ತೇನೆ. ಆದರೆ ಶಿಕ್ಷಣದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇರುವುದು ನನ್ನ ನಿರ್ಧಾರ. ಇದನ್ನು ಪರಿಗಣಿಸಬೇಕೆಂದು ಒಕ್ಕೂಟಕ್ಕೆ ವಿಜಯ ಪತ್ರ ಬರೆದಿದ್ದರು. ವಿಜಯ ಕುಮಾರಿ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಅಂತಿಮ ಕ್ಷಣದಲ್ಲಿ ಇವರು ತಂಡದೊಳಗೆ ಸೇರಿಕೊಂಡರೂ ಅಚ್ಚರಿಯೇನಿಲ್ಲ.

ವಿಶ್ವದ 3ನೇ ಬೃಹತ್‌ ಕೂಟಕ್ಕೆ ದೆಹಲಿ ಆತಿಥ್ಯ
ವಿಶ್ವದ ವಿವಿಧೆಡೆ ಇದುವರೆಗೆ ಒಟ್ಟು 20 ಕಾಮನ್‌ವೆಲ್ತ್‌ ಕ್ರೀಡಾಕೂಟಗಳು ನಡೆದಿವೆ. ಭಾರತ ಒಮ್ಮೆ ಮಾತ್ರ ಈ ಕೂಟದ ಆತಿಥ್ಯವಹಿಸಿದೆ. 2010ರಲ್ಲಿ ನವದೆಹಲಿಯ ಜವಾಹರ್‌ ಲಾಲ್‌ ನೆಹರೂ ಕ್ರೀಡಾಂಗಣ ದಲ್ಲಿ ನಡೆದ ಕೂಟ 30,000 ಕೋಟಿ ರೂ. ವೆಚ್ಚದಲ್ಲಿ ನಡೆದು ಹಲವು ದಾಖಲೆ ನಿರ್ಮಿಸಿತು. ಆದರೂ ಸಿಕ್ಕಿದ ಅವಕಾಶವನ್ನು ಭಾರತ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಲವು ವಿವಾದ, ಅವ್ಯವಸ್ಥೆಗಳಿಗೆ ಸಿಕ್ಕಿ ಒದ್ದಾಡಿತು. 21 ಕ್ರೀಡೆಯ ಒಟ್ಟು 272 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. 6089 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮೊದಲ ಪದಕ ಗೆದ್ದಿದ್ದು ರಶೀದ್‌
1930ರ ಮೊದಲ ಅಧಿಕೃತ ಕಾಮನ್‌ವೆಲ್ತ್‌ ಗೇಮ್ಸ್‌, ಬ್ರಿಟಿಷ್‌ ಎಂಪೈರ್‌ ಗೇಮ್ಸ್‌ ಎಂದು ಕರೆಸಿಕೊಂಡಿತ್ತು. ನಂತರ 1934ರಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತ ಪಾಲ್ಗೊಂಡಿತ್ತು. ಇಲ್ಲಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರಶೀದ್‌ ಅನ್ವರ್‌ ಕಂಚಿನ ಪದಕ ಗೆದ್ದರು. ಇದು ಕಾಮನ್‌ವೆಲ್ತ್‌ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕ ಮೊಟ್ಟ ಮೊದಲ ಪದಕವಾಗಿದೆ. ಆ ಸಂದರ್ಭದಲ್ಲಿ ಇದು ಭಾರತದಲ್ಲಿ ಭಾರೀ ಸುದ್ದಿಯಾಗಿತ್ತು.ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು.

ಮೊದಲ ಚಿನ್ನ ಗೆದ್ದಿದ್ದು ಮಿಲಾV
ಕಾಮನ್‌ವೆಲ್ತ್‌ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದಿರುವುದು ಕಾರ್ಡಿಫ್ನಲ್ಲಿ ನಡೆದ 1958ರ ಕೂಟದಲ್ಲಿ.
ಹಾರುವ ಸಿಖ್‌ ಖ್ಯಾತಿಯ ಅಥ್ಲೀಟ್‌ ಮಿಲಾV ಸಿಂಗ್‌ ಈ ಸಾಧನೆ ಮಾಡಿದರು. 440 ಯಾರ್ಡ್‌ ಟ್ರ್ಯಾಕ್‌ ಇವೆಂಟ್‌ನಲ್ಲಿ
ಪಾಲ್ಗೊಂಡ ಮಿಲಾV ಸಿಂಗ್‌ ಅಮೋಘ ಪ್ರದರ್ಶನ ನೀಡುವ ಮೂಲಕ ಫೈನಲ್‌ನಲ್ಲಿ ಸ್ವರ್ಣ ಧರಿಸಿದರು.ಭಾರತದ ಕ್ರೀಡೆಗೆ ಮಿಲಾVಸಿಂಗ್‌ ಕೊಡುಗೆ ಅನನ್ಯ.

ಚಿನ್ನ ಗೆದ್ದ ಮಹಿಳೆ ಪೂನಿಯಾ
2010 ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಡಿಸ್ಕಸ್‌ ಥ್ರೋನಲ್ಲಿ ಕೃಷ್ಣ ಪೂನಿಯಾ 61.51 ಮೀ. ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಮಹಿಳೆಯೊಬ್ಬರು ಗೆದ್ದ ಮೊದಲ ಚಿನ್ನ. ಅಷ್ಟೇ, ಅಲ್ಲ ಟ್ರ್ಯಾಕ್‌ ಆ್ಯಂಡ್‌ ಫೀಲ್‌ನಲ್ಲಿ ಮಿಲಾV ನಂತರ ಚಿನ್ನ ದಕ್ಕಿದೂಪೂನಿಯಾಗೆ. ಮಿಲಾV ನಂತರ ಸುಮಾರು 50 ವರ್ಷಗಳ ಕಾಲ ಭಾರತಕ್ಕೆ ಈ ವಿಭಾಗದಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿರಲಿಲ್ಲ!

ಬಾಕ್ಸಿಂಗ್‌ ಅಲೆ ಸೃಷ್ಟಿಸಿದ ಅಲಿ
ಭಾರತದಲ್ಲಿ ಇಂದು ಬಾಕ್ಸಿಂಗ್‌ ಜನಪ್ರಿಯ ಕ್ರೀಡೆ. ಆದರೆ, ಈ ದೇಶದಲ್ಲಿ ಬಾಕ್ಸಿಂಗ್‌ ಅಲೆ ಹುಟ್ಟಿಸಿದ್ದು ಅಲಿ ಖಾಮರ್‌. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಲೈಟ್‌ ಫ್ಲೈವೇಟ್‌ನಲ್ಲಿ ಭಾಗವಹಿಸಿದ್ದ ಅಲಿ ಅದ್ಭುತ ಪಂಚ್‌ ಮೂಲಕ ಫೈನಲ್‌ ಪ್ರವೇಶಿಸಿದರು. ಫೈನಲ್‌ನಲ್ಲಿ ಇಂಗ್ಲೆಂಡ್‌ನ‌ ಡ್ಯಾರೆನ್‌ ಲ್ಯಾಂಗ್ಲೆ ಮಣಿಸಿ ಚಿನ್ನ ಗೆದ್ದರು. ಇದು ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಸಿಕ್ಕ ಮೊದಲ ಚಿನ್ನ.

ಚಿನ್ನಕ್ಕೆ ಪಂಚ್‌ ಮಾಡಿದ ಅಖೀಲ್‌
ಕಿರಿಯರ ಚಾಂಪಿಯನ್‌ಶಿಪ್‌ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಪದಕ ಗೆದ್ದ ಅಖೀಲ್‌ ಕುಮಾರ್‌ 2006ರ ಮೆಲ್ಬರ್ನ್ ಗೇಮ್ಸ್‌ನಲ್ಲಿ 54 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಮೆರೆದಾಡಿದರು. ಇವರ ಸಾಧನೆಗೆ ಈ ಪರಿಯ ಮಹತ್ವ ಬರಲು ಕಾರಣ ಅವರಲ್ಲಿದ್ದ ಅದ್ಭುತ ಬಾಕ್ಸಿಂಗ್‌ ಕೌಶಲ್ಯ. ಅವರು ಫೈನಲ್‌ನಲ್ಲಿ ಮಾರಿಷಸ್‌ ಬಾಕ್ಸರ್‌ ಬ್ರೂನೊ ಜುಲಿಯಾರನ್ನು ಸೋಲಿಸಲು ಪ್ರದರ್ಶಿಸಿದ ಕೌಶಲ್ಯ ಭಾರತದ ಬಾಕ್ಸಿಂಗ್‌ ಇತಿಹಾಸದ ಅತ್ಯುತ್ತಮ ಸಾಧನೆಗಳಲ್ಲೊಂದಾಗಿ ಪರಿಗಣಿಸಲ್ಪಟ್ಟಿದೆ.

2 ಬಂಗಾರ ಗೆದ್ದ ಜಸ್ಪಾಲ್‌ ದಾಖಲೆ
1994ರಲ್ಲಿ ನಡೆದ ಕಾಮನ್‌ವೆಲ್ತ್‌ ಭಾರತದ ಪಾಲಿಗೆ ಇತಿಹಾಸವಾಗಿ ಉಳಿಯುವ ಗೇಮ್ಸ್‌ ಆಗಿದೆ. 94ರವರೆಗೆ ಯಾವುದೇ ಒಬ್ಬ ಭಾರತೀಯ ಸ್ಪರ್ಧಿ ಎರಡು ಪದಕ ಗೆದ್ದ ಇತಿಹಾಸ ಇರಲಿಲ್ಲ. ಆದರೆ ಆ ಸಾಧನೆಮಾಡಿದವರು ಶೂಟರ್‌ ಜಸ್ಪಾಲ್‌ ರಾಣಾ. ಪಿಸ್ತೂಲ್‌ನ ವೈಯಕ್ತಿಕ ಮತ್ತುಗುಂಪು ವಿಭಾಗದಲ್ಲಿ ಸ್ಪರ್ಧಿಸಿದ ರಾಣಾ ಎರಡರಲ್ಲಿಯೂ ಚಿನ್ನದ ಪದಕಗೆಲ್ಲುವಲ್ಲಿ ಯಶಸ್ವಿಯಾದರು. ಉತ್ತರ ಪ್ರದೇಶದ ಶೂಟರ್‌ ರಾಣಾ ನಂತರದ ಮುಂದಿನ ಗೇಮ್ಸ್‌ನಲ್ಲಿಯೂ ಪದಕ ಗೆದ್ದಿದ್ದಾರೆ.

ಮೊದಲ ಬ್ಯಾಡ್ಮಿಂಟನ್‌ ಚಿನ್ನ ಪ್ರಕಾಶ್‌
ಇಂದು, ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಚೀನಾಗೆ ಸೆಡ್ಡು ಹೊಡೆದಿರುವ ಭಾರತ ಜಗತ್ತಿನಲ್ಲಿ ಪ್ರಕಾಶಿಸುತ್ತಿದೆ. ಆದರೆ ಕಾಮನ್‌ವೆಲ್ತ್‌ನಲ್ಲಿ ಮೊಟ್ಟ ಮೊದಲಿಗೆ ಪದಕ ತಂದವರು ಕನ್ನಡಿಗ ಪ್ರಕಾಶ್‌ ಪಡುಕೋಣೆ. 1978ರಲ್ಲಿ ನಡೆದ ಗೇಮ್ಸ್‌ನಲ್ಲಿ ಪಡುಕೋಣೆ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆ ಈ ಮಟ್ಟದಲ್ಲಿ ಜನಪ್ರಿಯಗೊಳ್ಳಲು ಪ್ರಕಾಶ್‌ ಪಡುಕೋಣೆ ಪಾತ್ರ ಬಹಳ ಮಹತ್ವದ್ದು.

ಇಲ್ಲಿಯವರೆಗೆ ನಡೆದ ಇಪ್ಪತ್ತೂ ಕೂಟದಲ್ಲಿ ಸ್ಪರ್ಧಿಸಿದ ತಂಡಗಳು 6 ಮಾತ್ರ. ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಸ್ಕಾಟ್ಲೆಂಡ್‌, ವೇಲ್ಸ್‌ ಅಷ್ಟೂ ಕೂಟಗಳಲ್ಲಿ ಸ್ಪರ್ಧಿಸಿವೆ.

ಈ ಬಾರಿ ನಡೆಯುತ್ತಿರುವುದು 21ನೇ ಕೂಟ. ಈ ಕೂಟಕ್ಕೆ ಏಷ್ಯಾಖಂಡದ ರಾಷ್ಟ್ರಗಳು ಆತಿಥ್ಯ ವಹಿಸಿರುವುದು ಕೇವಲ 2 ಬಾರಿ. ಮೊದಲ ಬಾರಿ 1998ರಲ್ಲಿ ಮಲೇಷ್ಯಾ ಆತಿಥ್ಯ ವಹಿಸಿದ್ದರೆ, 2010ರಲ್ಲಿ ಭಾರತ ಆತಿಥ್ಯ ವಹಿಸಿತ್ತು.

2002ರಂದು ಮ್ಯಾಂಚೆಸ್ಟರ್‌ನಲ್ಲಿ 72 ದೇಶ ಪಾಲ್ಗೊಂಡಿದ್ದವು. ಇದು ಕಾಮನ್‌ವೆಲ್ತ್‌ಇತಿಹಾಸದಲ್ಲಿ ಗರಿಷ್ಠ ರಾಷ್ಟ್ರ ಪಾಲ್ಗೊಂಡ ಸಂಖ್ಯೆ.

2018ರ ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಳ್ಳುವ ಒಟ್ಟು ರಾಷ್ಟ್ರಗಳ ಸಂಖ್ಯೆ 71. 2014ರಲ್ಲಿ ಇಂಗ್ಲೆಂಡ್‌ನ‌ ಗ್ಲಾಸೊYàದಲ್ಲಿನಡೆದ ಕೂಟದಲ್ಲೂ ಇಷ್ಟೇ ದೇಶಗಳು ಭಾಗವಹಿಸಿದ್ದವು.

ಕಾಮನ್‌ವೆಲ್ತ್‌ ಇತಿಹಾಸದ ದುಬಾರಿ ಕೂಟ ನಡೆದಿದ್ದು 2010ರಲ್ಲಿ. ಆತಿಥೇಯ ರಾಷ್ಟ್ರ ಭಾರತ.ಅಧಿಕೃತವಾಗಿ ಖರ್ಚಾಗಿದ್ದು 30,000 ಕೋಟಿ ರೂ.

ಭಾರತ ಇದುವರೆಗೆ ಒಟ್ಟು 438 ಪದಕಗಳನ್ನು ಗೆದ್ದಿದೆ. ಅದರಲ್ಲಿ 155 ಚಿನ್ನ, 155 ಬೆಳ್ಳಿ, 128 ಕಂಚಿನ ಪದಕಗಳು ಸೇರಿವೆ.

ಕೂಟವೊಂದರಲ್ಲಿ ಭಾರತಕ್ಕೆ ಗರಿಷ್ಠ ಪದಕ ಗೆದ್ದುಕೊಟ್ಟ ಕ್ರೀಡೆಶೂಟಿಂಗ್‌. 2010ರಲ್ಲಿ ಭಾರತದಲ್ಲಿ ನಡೆದ ಕೂಟದಲ್ಲಿ ಒಟ್ಟು 14 ಚಿನ್ನ ಲಭಿಸಿತು. ಒಟ್ಟಾರೆ 30 ಪದಕ ಲಭಿಸಿತು.

2010ರ ದೆಹಲಿ ಕೂಟದಲ್ಲಿ 6089 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಇದು ಕೂಟದ ಇತಿಹಾಸದಲ್ಲೇ ಗರಿಷ್ಠ ಅಥ್ಲೀಟ್‌ಗಳು ಪಾಲ್ಗೊಂಡ ಸಂಖ್ಯೆ

ಇಲ್ಲಿಯವರೆಗೆ ಕಾಮನ್‌ವೆಲ್ತ್‌ನಲ್ಲಿ ಗರಿಷ್ಠ ಯಶಸ್ಸು ಕಂಡ ದೇಶ ಆಸ್ಟ್ರೇಲಿಯಾ. ಅದು 852 ಚಿನ್ನ ಸೇರಿ ಒಟ್ಟು 2000ಕ್ಕೂ ಅಧಿಕ ಪದಕ ಗಳಿಸಿದೆ.

ಮಾಹಿತಿ: ಹೇಮಂತ್‌ ಸಂಪಾಜೆ, ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next