Advertisement

ಕಾರ್ಕಳದಲ್ಲಿ ಒಂದೇ ದಿನ 2 ಮಳಿಗೆಗೆ ನುಗ್ಗಿದ ಕಳ್ಳ‌ರು

03:32 PM Jun 14, 2017 | Harsha Rao |

ಕಾರ್ಕಳ: ಚಿನ್ನಾಭರಣ ಮಳಿಗೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಮಳಿಗೆಯ ಸಿಬಂದಿಯ ಗಮನಕ್ಕೆ ಬಾರದೇ ಸುಮಾರು 32 ಗ್ರಾಂನ ಕರಿಮಣಿ ಸರ ಮತ್ತು 40 ಗ್ರಾಂ ಕರಿಮಣಿ ಸರವನ್ನು ಕಳವುಗೈದ ಘಟನೆ ನಗರದ ರಥಬೀದಿಯಲ್ಲಿರುವ ಆಭರಣ ಜುವೆಲ್ಲರ್ಸ್ನಲ್ಲಿ ಸೋಮವಾರ ಸಂಭವಿಸಿದೆ.

Advertisement

ಸೋಮವಾರ ಸಾಯಂಕಾಲ ಜುವೆಲ್ಲರ್ಸ್ಗೆ ಬಂದ ಇಬ್ಬರು ಅಪರಿಚಿತ ಮಹಿಳೆ ಹಾಗೂ ಓರ್ವ ಪುರುಷ ಶೋರೂಂನ ನೆಲ ಅಂತಸ್ತಿನ ಸಿಬಂದಿಯ ಗಮನಕ್ಕೆ ಬಾರದ ರೀತಿಯಲ್ಲಿ ಟ್ರೇಯಲ್ಲಿದ್ದ ಸುಮಾರು 2,35,000 ರೂ. ಮೌಲ್ಯದ ಕರಿಮಣಿ ಸರಗಳನ್ನು ಕಳವುಗೈದಿದ್ದಾರೆ ಎಂದು ಶೋರೂಂನ ಮ್ಯಾನೇಜರ್‌ ಸತೀಶ ಪ್ರಭು ಅವರು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳವುಗೈದ ವ್ಯಕ್ತಿಗಳ ಪೈಕಿ ಓರ್ವ ಯುವತಿ, ಓರ್ವ ಯುವಕ ಹಾಗೂ ಮಹಿಳೆ ಇದ್ದು ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.ಇದೇ ವ್ಯಕ್ತಿಗಳು ನಗರದ ಬಂಡೀಮಠದಲ್ಲಿರುವ ಬಟ್ಟೆ ಮಳಿಗೆಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ನುಗ್ಗಿ ಸಾವಿರಾರು ರೂ. ಮೌಲ್ಯದ ಬಟ್ಟೆಗಳನ್ನು ಕಳವುಗೈದಿದ್ದಾರೆ.

ಬಟ್ಟೆ ಮಳಿಗೆಗೆ ನುಗ್ಗಿ ಕಳವು
ಬಂಡೀಮಠದಲ್ಲಿರುವ ಬಟ್ಟೆ ಮಳಿಗೆ ಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸ್ವತ್ತುಗಳನ್ನು ಕಳವುಗೈದಿದ್ದಾರೆ. ಇಲ್ಲಿನ ಫ್ಯಾಕ್ಟರೀಸ್‌ ಬಟ್ಟೆ ಮಳಿಗೆಗೆ ಮಧ್ಯಾಹ್ನ ಎರಡು ಬಾರಿ ನುಗ್ಗಿದ ಕಳ್ಳರು ಗ್ರಾಹಕರ ಸೋಗಿನಲ್ಲಿ ಮಳಿಗೆಯ ಸಿಬಂದಿಗೆ ತಿಳಿಯದ ಹಾಗೆ ಬಟ್ಟೆಯನ್ನು ಸೀರೆಯ ಮರೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದಾರೆ.

ಮೊದಲು ಚಿನ್ನಾಭರಣ ಮಳಿಗೆಯಲ್ಲಿ ಕಳವುಗೈದ ಒಬ್ಬ ಯುವಕ ಹಾಗೂ ಇಬ್ಬರು ಹೆಂಗಸರು ಮಳಿಗೆಗೆ ಬಂದು ಬಟ್ಟೆ ಕಳವುಗೈದಿದ್ದಾರೆ.

Advertisement

ಆ ಬಳಿಕ ಬಂದ ಓರ್ವ ಗಂಡಸು, ಇಬ್ಬರು ಹೆಂಗಸರು ಹಾಗೂ ಓರ್ವ ಯುವಕ ಕೂಡ ಬಟ್ಟೆಗಳನ್ನು ಸೀರೆಯ ಮರೆಯಲ್ಲಿ ಅಡಗಿಸಿ ಕಳವುಗೈದಿದ್ದಾರೆ.

ಕಳವುಗೈದ ವ್ಯಕ್ತಿಗಳು ಒಂದೇ ಗುಂಪಿನವರಾಗಿದ್ದು ಇವರ ಚಲನವಲನಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಕಳ್ಳರನ್ನು ಹಿಡಿಯಲು ಶೋಧ ಚುರುಕುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next