Advertisement

2 ದಿನಗಳ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

12:20 PM Feb 11, 2018 | Team Udayavani |

ಮುಂಬಯಿ: ಲೇಖಕರು ಜಾತಿ ರಾಜಕೀಯವನ್ನು ಬಿಟ್ಟು ಬೆಳೆಯುವ ಅಗತ್ಯವಿದ್ದು ಅದರಲ್ಲೂ ಕನ್ನಡದ ಲೇಖಕರೆಲ್ಲರೂ ಒಳನಾಡಿನ ಮಟ್ಟವನ್ನು  ಮೀರಿ ಬೆಳೆಯಬೇಕು. ಒಂದು ಮಿತಿಯೊಳಗಿನ ಲೇಖಕರಿಂದ ಏನನ್ನೂ ಅಪೇಕ್ಷಿಸಲಾಗದು. ಹೇಗೆ ಮುಂಬಯಿ ಜಾತಿ ಮುಕ್ತವಾಗಿದ್ದು, ಇಲ್ಲಿನ ಹೊರನಾಡ ಕನ್ನಡಿಗರು ಬರೇ ಕಾಯಕ ಚಿತ್ತರಾಗಿ ಪರಿಶ್ರಮಿಗಳಾಗಿ ದುಡಿಸಿಕೊಂಡು ಬದುಕು ರೂಪಿಸುತ್ತಿದ್ದರೋ ಅಂತೆಯೇ  ಒಳನಾಡ ಜನತೆಯೂ ಇದನ್ನು ಅರ್ಥೈಸಿಕೊಂಡು ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ. ಮುಂಬಯಿಗೆ ಬರುವುದೆಂದರೆ ಒಂದು ರೀತಿಯ ಆಸಕ್ತಿಯಾಗಿದೆ. ಕಾರಣ ಮುಂಬಯಿ ಇಡೀ ಭಾರತದ ಚಿತ್ರಣವಾಗಿದೆ. ಮುಂಬಯಿಯಲ್ಲಿ ಬೆಳೆದವರ ಮನೋಭಾವ ಭವ್ಯವಾಗಿರುತ್ತದೆ. ಆದರೆ ಒಳನಾಡ ಕನ್ನಡಿಗರ ಮನೋಭಾವ ಬೇರೆಯೇ ರೀತಿಯದ್ದಾಗಿದೆ. ಮಾಯಾನಗರಿಯೊಂದು  ಅನುಭವ ನಗರವಾಗಿ ಮಾನವಕುಲ ನಿರ್ಮಾಣದ ಶಹರವಾಗಿದೆ ಎಂದು ನಾಡಿನ ಹಿರಿಯ ಸಾಹಿತಿ, ಪ್ರಸಿದ್ಧ ಕಾದಂಬರಿಕಾರ ನಾಡೋಜ ಡಾ|  ಎಸ್‌. ಎಲ್‌. ಭೈರಪ್ಪ ನುಡಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂಎಸ್‌ನ ಶ್ರೀಮತಿ ಶಾಲಿನಿ ಜಿ. ಶಂಕರ್‌ ಕನ್ವೆಂಕ್ಷನ್‌ ಸೆಂಟರ್‌ ಸಭಾಗೃಹದಲ್ಲಿ  ಆಯೋಜಿಸಲಾಗಿರುವ ಎರಡು ದಿನಗಳ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶವನ್ನು ಫೆ. 10 ರಂದು  ಉದ್ಘಾಟಿಸಿ ಮಾತನಾಡಿದ ಇವರು, ಮುಂಬಯಿಗರಿಗೆ ಭಾರತದ ಸಮಗ್ರ ಪರಿಚಯವಿದ್ದು ಇಡೀ ಮುಂಬಯಿ ಭಾರತಕ್ಕೆ ಸೇರಿದೆ. ಅದರಲ್ಲೂ ಕರಾವಳಿ ಜನರಂತೂ ತುಂಬಾ ಬುದ್ಧಿವಂತರು. ಕರಾವಳಿಯಲ್ಲಿನ ಬಡತನ ಇವರನ್ನು ಮುಂಬಯಿಗೆ ತಳ್ಳಿತ್ತು. ಇಲ್ಲಿ ಕಷ್ಟಪಟ್ಟು ದುಡಿದು ಆತ್ಮವಿಶ್ವಾಸ ಬೆಳೆಸಿಕೊಂಡ ಕರಾವಳಿ ಕನ್ನಡಿಗರು ಬರಿ  ನೌಕರಿಯನ್ನೇ ಅವಲಂಬಿಸದೆ ಸ್ವಯಂಶೀಲ ಉದ್ಯಮಿಗಳಾಗಿ ಬೆಳೆದಿದ್ದಾರೆ. ಅವರು ದುಡಿಮೆಯನ್ನು ಪ್ರೀತಿಸಿ ಪೋಷಿಸುತ್ತಾರೆ. ಭಾಷಾಭಿಮಾನ ಬೆಳೆಸಿ ಬಾಳುತ್ತಾರೆ. ಸಂಸ್ಕೃತಿ, ಶಿಸ್ತು, ಸಂಸ್ಕಾರಕ್ಕೆ ಕರ್ನಾಟಕದ ಕರಾವಳಿ ಜನರೇ ಮಾದರಿ. ಅವರ ಜೀವನ ಅನುಸರಿಸಿದಾಗ ರಾಷ್ಟ್ರದ ಉದ್ಧಾರ ಸಾಧ್ಯ. ಆ ಮಟ್ಟಿಗೆ ಕರಾವಳಿ  ಜನತೆ ಬುದ್ಧಿವಂತರು. ಆದರೆ ಇತ್ತೀಚೆಗೆ ಕರಾವಳಿಯಲ್ಲೂ ಅಸಂಸ್ಕೃತಿಯ ಕೆಟ್ಟ ರೋಗ ಆವರಿಸುತ್ತಿರುವುದು ದುರಾದೃಷ್ಟ. ಕರಾವಳಿ  ಜನತೆಯಿಂದಲೇ  ಭವ್ಯ ಪರಂಪರೆ ಸಂಸ್ಕೃತಿ ನಿರ್ಮಾಣ ಸಾಧ್ಯವಾಗುವುದು. ನಮ್ಮವರಲ್ಲಿ ನುಡಿಯುವ ಕನ್ನಡ ಮಾತ್ರ. ಆದರೆ ನುಡಿದಂತೆ ನಡೆಯುವ ಕನ್ನಡಿಗರು ನಮ್ಮವರಾಗಬೇಕು. ನೌಕರಿಗಾಗಿ ಇಂಗ್ಲೀಷ್‌ ವ್ಯಾಮೋಹಿಗಳಾದರೂ ಕರಾವಳಿ ಜನತೆ ಇಂಗ್ಲೀಷ್‌ ಬಳಕೆಯೊಂದಿಗೆ ಮಾತೃ ಭಾಷಾಭಿಮಾನ ಬೆಳೆಸಿಕೊಂಡಿದ್ದಾರೆ.  ಸ್ವಂತ ದುಡಿಮೆಗಾರರಿಗೆ ಆತ್ಮ ವಿಶ್ವಾಸ ತಮ್ಮತನ ಇರುತ್ತದೆ. ಮುಂಬಯಿಯಲ್ಲೂ ಇಂತಹ ಭಾಷಾಭಿಮಾನಿಗಳಿಂದ ಸಂಸ್ಕೃತಿ ಉಳಿಸಲು ಸಾಧ್ಯವಾಗಿದೆ.  ನೌಕರಿ ಮನೋಭವಿಗಳಿಂದ ಸಂಸ್ಕೃತಿ, ಪರಂಪರೆಗಳ ಉಳಿವು ಅಸಾಧ್ಯ. ಮುಂಬಯಿ ಭಾರತದ ಲವಲವಿಕೆಯ ಪಟ್ಟಣವಾಗಿದ್ದು, ಇಲ್ಲಿ ದುಡಿಮೆಗೆ ಪ್ರಶಸ್ತ್ಯವಿದೆ. ಅದರಲ್ಲೂ ನಗರದ ಸ್ಥಾನೀಯ ಜನಶಕ್ತಿಯ ದುಡಿಮೆಯಿಂದ ಬೆಳೆದ ಪಟ್ಟಣ ಮುಂಬಯಿ ಆಗಿದ್ದರೆ,  ದೆಹಲಿ ಕರ ತೆರುವವರ (ಟ್ಯಾಕ್ಸ್‌ ಪೇಯರ್‌) ನಾಡಾಗಿದ್ದು ಇಲ್ಲಿ ಸಂಸ್ಕೃತಿಯ  ಉಳಿವು ಅಸಾಧ್ಯ.  ಕಷ್ಟಪಟ್ಟು ದುಡಿದರೆ ಮಾತ್ರ ಮನಕುಲದ ಉದ್ಧಾರ ಸಾಧ್ಯವಾಗುವುದು. ಲೋಕದ ಹೊಸ ಅನುಭವಕ್ಕೆ ನಾವೂ ಅಣಿಯಾಗಬೇಕು. ಅಂತಹ ಸಾಹಿತಿಗಳು ಸಮಾಜಕ್ಕೆ ಒಳಿತನ್ನು ಸೃಷ್ಟಿಸಬಲ್ಲರು. ಹಿರಿಯರ ಮಾದರಿ ಕೆಲಸ ಜ್ಞಾಪಿಸಿ ಸಂಸ್ಥೆಗಳನ್ನು ಮುನ್ನಡೆಸಬೇಕು. ಇಂತಹ ಸಾಮಾಜಿಕ ಕ್ರಾಂತಿ ಮಹಾರಾಷ್ಟ್ರದ  ಮುಂಬಯಿಯಲ್ಲಿದೆ. ಇನ್ನಾದರೂ ಕನಸನ್ನು ವಾಸ್ತವತೆಯನ್ನಾಗಿಸಿರಿ ಬಾಳುತ್ತಾ ಕನ್ನಡದ ಕಲ್ಪನೆಗಳ  ಕಾಯಕವನ್ನು ನಿಜವಾಗಿ ಮೂಡಿಸೋಣ  ಎಂದು ಸಾಹಿತಿ ಭೈರಪ್ಪನವರು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್‌ ರಾಷ್ಟ್ರೀಯ ಸಮಾವೇಶದ  ಅಧ್ಯಕ್ಷತೆ ವಹಿಸಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್‌ ಘಟಕಕ್ಕೆ ಚಾಲನೆಯನ್ನಿತ್ತರು. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ  ಕೃಷ್ಣಕುಮಾರ್‌ ಎಲ್‌. ಬಂಗೇರ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ನೆನಹೊತ್ತಿಗೆ ಬಿಡುಗಡೆಗೊಳಿಸಿದರು.

ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ತು  ಘಟಕಕ್ಕೆ ಚಾಲನೆ ನೀಡಿದ ಡಾ| ಮನು ಬಳಿಗಾರ್‌ ಘಟಕದ ಪ್ರಥಮ ಅಧ್ಯಕ್ಷರನ್ನಾಗಿ ಡಾ| ಗಣಪತಿ ಶಂಕರಲಿಂಗ ಅವರಿಗೆ ಕನ್ನಡದ ಧ್ವಜವನ್ನಿತ್ತು ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಗಳಾಗಿ ಡಾ| ಭರತ್‌ಕುಮಾರ್‌ ಪೊಲಿಪು, ಮಲ್ಲಿನಾಥ ಜಲದೆ, ಕೋಶಾಧಿಕಾರಿಯಾಗಿ ಮಂಜುನಾಥ ದೇವಾಡಿಗ, ಮಹಿಳಾ ಪ್ರತಿನಿಧಿಯಾಗಿ ಡಾ| ಸುನೀತಾ ಎಂ. ಶೆಟ್ಟಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಪಿ. ಎಂ. ಕರನಿಂಗ ಅವರಿಗೆ ಹುದ್ದೆ ಆಯ್ಕೆ ಪತ್ರವನ್ನು ಪ್ರದಾನಿಸಿದರು.

ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ವ. ಚ. ಚನ್ನೇಗೌಡ, ಗೌರವ ಕೋಶಾಧಿಕಾರಿ ಪಿ. ಮಲ್ಲಿಕಾರ್ಜುನಪ್ಪ,  ಬಸವರಾಜ ಮಸೂತಿ ಉಪಸ್ಥಿತರಿದ್ದರು. ವಿದುಷಿ ಶ್ಯಾಮಲಾ ರಾಧೇಶ್‌ ತಂಡದ ನಾಡಗೀತೆಯೊಂದಿಗೆ ಸಮಾವೇಶ ಆದಿಗೊಂಡಿತು. ಡಾ| ಬಿ. ಆರ್‌. ಮಂಜುನಾಥ್‌ ಸ್ವಾಗತ ಗೀತೆಹಾಡಿದರು. ಕೃಷ್ಣಕುಮಾರ್‌ ಬಂಗೇರ ಸ್ವಾಗತಿಸಿ ಪ್ರಸ್ತಾವನೆಗೈದರು. ಪತ್ರಕರ್ತ ದಯಾಸಾಗರ್‌ ಚೌಟ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶ‌ನ್‌ ಮುಂಬಯಿ ಅಧ್ಯಕ್ಷೆ ಕು| ಕಮಲಾ ಕಾಂತರಾಜ್‌ ಕೃತಜ್ಞತೆ ಸಲ್ಲಿಸಿದರು.

Advertisement

ಮೊಗವೀರ ಮಂಡಳಿಯ ಲಕ್ಷಿ à ನಾರಾಯಣ ಮಂದಿರದಿಂದ ಭವ್ಯ ಮೆರವಣಿಗೆ ಮೂಲಕ ಅತಿಥಿಗಳನ್ನು ಸಭಾಗೃಹಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಡಾ| ಭೈರಪ್ಪ ಅವರು ಮುಂಬಯಿ ಸಂಘ-ಸಂಸ್ಥೆಗಳ ಸೇವಾ ವೈಖರಿಗಳ ಚಿತ್ರ ಪ್ರದರ್ಶನ ಮುಂಬಯಿ ಕನ್ನಡಿಗರ ಸಾಧನ ಮಂಟಪವನ್ನು ಉದ್ಘಾಟಿಸಿದರು. ಚಿಣ್ಣರ ಬಿಂಬ ತಂಡದ ಕಲಾವಿದರು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಾಲಾ ವಿದ್ಯಾರ್ಥಿಗಳು  ಹಾಗೂ ವಿದ್ಯಾ ಪ್ರಸಾರಕ ಮಂಡಳಿಯ ಶಾಲಾ ವಿದ್ಯಾರ್ಥಿಗಳು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಡಾ| ವಾಣಿ ಉಚ್ಚಿಲ್‌ ಮತ್ತು ಶೇಖರ್‌ ಅಮೀನ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. 

ಮುಂಬಯಿಗರದ್ದು ಅಚ್ಚ ಕನ್ನಡ. ಆದರೆ ಬೆಂಗ್ಳೂರಿಗರದ್ದು ಫ್ಯೂರ್‌ ಕನ್ನಡ. ಆದ್ದರಿಂದ ಮುಂಬಯಿಗರು ಕನ್ನಡ ಮರೆಯದ ಬಂಧುಗಳಾಗಿ ಬಾಳುತ್ತಿದ್ದಾರೆ. ನಿಮ್ಮ ಕನ್ನಡ ಬಳಕೆ ಸ್ತುತ್ಯರ್ಹ. ತಮ್ಮಿಂದಲೇ ಕನ್ನಡವನ್ನು ಅತೀ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಇದನ್ನೇ ಒಳನಾಡ ಕನ್ನಡಿಗರು ಗಾಡ್‌ ಪ್ರಾಮಿಸ್‌ ಸರ್‌…  ಅನ್ನುತ್ತಿದ್ದರು. ಬೆಳಿಗ್ಗಿನಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಅಬ್ಬರದಿಂದ ಸೇರಿದ ನಿಮ್ಮ ಹಬ್ಬದ ಉತ್ಸಾಹ ಕಂಡಾಗ ಏನೋ ಮಗಳ ಮದುವೆ ರಿಸೆಪ್ಶನ್‌ ತರಹ ಭಾಸವಾಗುತ್ತಿತ್ತು. ಸಮಾವೇಶವನ್ನು ಒಳ್ಳೆ ಸಂಭ್ರಮವಾಗಿಸಿರುವುದು ಪ್ರಶಂಸನೀಯ 
– ಎಸ್‌.  ಷಡಕ್ಷರಿ (ಹೆಸರಾಂತ ಅಂಕಣಕಾರರು).

ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ತು ಘಟಕಕ್ಕೆ ಜಿಲ್ಲಾ ಮಟ್ಟದ ಮಾನ್ಯತೆ ನೀಡಿದೆ. ಮುಂಬಯಿಗರಲ್ಲಿ ಶ್ರೀಮಂತರ ಹೆಸರುಗಳೇ ಹೆಚ್ಚಿದ್ದು, ಹೆಚ್ಚಿನವರು ಕೋಟ್ಯಾಧಿಪತಿಗಳೇ. ಶೀಘ್ರವೇ ಕನ್ನಡ ಸಾಹಿತ್ಯ ಪರಿಷತ್ತು ಪ್ರದೇಶ ವ್ಯಾಪ್ತಿಯನ್ನು  ವಿಸ್ತಾರಿಸಿ ಕನ್ನಡ ಕೆಲಸ ಮುನ್ನಡೆಸಲಾಗುವುದು. ಕನ್ನಡಿಗರೆಲ್ಲರಿಗೂ ಸರ್ವ ಶುಭವಾಗಲಿ 
– ಡಾ| ಮನು ಬಳಿಗಾರ್‌ 
(ಅಧ್ಯಕ್ಷರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು).

ಖೆಡ್ಡಸ ಬಂತ್ತ್ಂಡ್‌ಯೇ… ಭೂಮಿಗ್‌ ಖೆಡ್ಡಸ ಬಂತ್ತ್ಂಡ್‌…ಕನ್ನಡದ ನಡುವೆ ಇದೇನು ತುಳು ಹಾಡು ಎನ್ನುವ ಆತಂಕಬೇಡ. ಹಬ್ಬಕ್ಕೆ ಖೆಡ್ಡಸ ಎಂದಾಥ‌ì. ಅಂತೆಯೇ ಸಮಾವೇಶದ ಹೊಸ ಸೃಷ್ಟಿಗೆ ಅಣಿಯಾದ ಪರ್ವ ಕಾಲ ಇದಾಗಿದೆ. ಇಂತಹ ಸಮಾವೇಶ ಮುಂಬಯಿಗರ ಯೋಗಾಯೋಗ. ನಮ್ಮಲ್ಲಿ ರಾಜಕೀಯವಾಗಿ ಗಡಿರೇಖೆ ಇದ್ದಿರಬಹುದು. ಆದರೆ ಮಾನಸಿಕವಾಗಿ ಸೀಮಾ ರೇಖೆ ಪ್ರಶ್ನೆಯಾಗ‌ದು. ನಾವು ಭಾರತೀಯರೆಲ್ಲರೂ ಒಂದೇ ಭೂಮಿಯಲ್ಲಿ ಬದುಕುತ್ತಿದ್ದು  ಸಂಬಂಧಿಗಳು.  ಆದ್ದರಿಂದ ಹೊರನಾಡಿನ ಕನ್ನಡಿಗರೆಲ್ಲರೂ ಒಳಮುಖವಾಗಿ ಕ್ರಿಯಾಶೀಲರಾಗಿ ನಡೆಯುವಂತಾಗಬೇಕು 
– ಡಾ| ಸುನೀತಾ ಎಂ. ಶೆಟ್ಟಿ  (ಹಿರಿಯ ಸಾಹಿತಿ).

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next