ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಸೇರಿದಂತೆ ಒಟ್ಟು 18 ಹೊಸ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಸಂಸ್ಥೆ/ಟ್ರಸ್ಟ್ಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಸರಕಾರ ಒಪ್ಪಿಗೆ ನೀಡಿದರೆ, ಒಟ್ಟು 14 ಪಿಯು ಕಾಲೇಜುಗಳು 2022-23ರ ಶೈಕ್ಷಣಿಕ ವರ್ಷದಲ್ಲಿ ಚಟುವಟಿಕೆ ಆರಂಭಿಸುವ ನಿರೀಕ್ಷೆಯಿದೆ.
ದ.ಕ. ಜಿಲ್ಲೆಯ ಅಡ್ಡೂರು, ಸೂರಿಂಜೆ, ಬಜಪೆ, ಕಿನ್ನಿಗೋಳಿ, ಪುತ್ತೂರು, ಉಡುಪಿಯ ಕಾಪು, ಕಟಪಾಡಿ, ವಕ್ವಾಡಿ ಒಳಗೊಂಡಂತೆ 18 ಕಡೆಗಳಲ್ಲಿ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ 197 ಹಾಗೂ ಉಡುಪಿಯಲ್ಲಿ 105 ಪದವಿಪೂರ್ವ ಕಾಲೇಜುಗಳಿದ್ದು, ಇದರಲ್ಲಿ ದ.ಕ. 99 ಹಾಗೂ ಉಡುಪಿಯಲ್ಲಿ 45 ಅನುದಾನರಹಿತ ಕಾಲೇಜುಗಳಿವೆ. ಉಡುಪಿಯಲ್ಲಿ ಕಳೆದ ವರ್ಷ 2 ಹೊಸ ಪದವಿ ಕಾಲೇಜಿಗೆ ಅನುಮತಿ ಸಿಕ್ಕಿದ್ದರೆ, ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿ ಯಾವುದೇ ಹೊಸ ಕಾಲೇಜು ಆರಂಭವಾಗಿರಲಿಲ್ಲ.
ಸೇರ್ಪಡೆಗೆ ಹೆಚ್ಚಿನ ಒತ್ತಡ
ಈ ಬಾರಿ ಎಸೆಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪಿಯು ಕಾಲೇಜು ಆರಂಭಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸುವವರು ಅಧಿಕೃತವಾಗಿ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಸಂಸ್ಥೆ/ಟ್ರಸ್ಟ್ನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರಬಾರದು. ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರು ಇರಬೇಕು ಎಂಬಿತ್ಯಾದಿ ನಿಯಮಾವಳಿಗಳಿವೆ. ಇದರಂತೆ 18 ಶಿಕ್ಷಣ ಸಂಸ್ಥೆಯಿಂದ ಅರ್ಜಿ ಸಲ್ಲಿಕೆಯಾಗಿದೆ
Related Articles
ಪಿಯು ದಾಖಲಾತಿ ಬಹು ಗೌಜಿ!
ಪ್ರಥಮ ಪಿಯು ದಾಖಲಾತಿ ಈಗಾಗಲೇ ಆರಂಭವಾಗಿದೆ. ಎಂದಿನಂತೆ ಈ ಬಾರಿಯೂ ಕರಾವಳಿಯ ವಿವಿಧ ಕಾಲೇಜುಘಳಲ್ಲಿ ಕ್ರಮವಾಗಿ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗಕ್ಕೆ ಬೇಡಿಕೆ ವ್ಯಕ್ತವಾಗುತ್ತಿದೆ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಪ್ರಥಮ ಪಿಯು ಪ್ರವೇಶಕ್ಕೆ ಕಾಲೇಜುಗಳಿಂದ ವಿವರ ಪಡೆಯುತ್ತಿದ್ದರೆ, ಕೆಲವೆಡೆ ಫಲಿತಾಂಶಕ್ಕೂ ಮುನ್ನವೇ ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ.
ಈ ಮಧ್ಯೆ 14 ಹೊಸ ಪಿಯು ಕಾಲೇಜು ಆರಂಭಕ್ಕೆ ಸರಕಾರದಿಂದ ಅನುಮತಿ ದೊರೆಯುವ ವೇಳೆ ಬಹುತೇಕ ವಿದ್ಯಾರ್ಥಿಗಳು ಇತರ ಕಾಲೇಜಿಗೆ ದಾಖಲಾತಿಯಾಗಿರುತ್ತಾರೆ. ಹೀಗಾಗಿ ಹೊಸ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ ಆಗುವ ಸಾಧ್ಯತೆಯಿದೆ. ಈ ಕಾರಣದಿಂದ ಅನುಮತಿ ಪ್ರಕ್ರಿಯೆಯನ್ನು ಸರಕಾರ ಶೀಘ್ರ ನಡೆಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಹೊಸ ಪಿಯು ಕಾಲೇಜು ಆರಂಭಕ್ಕೆ ಸಂಬಂಧಿಸಿ ಆನ್ಲೈನ್ ಮೂಲಕ ಸಂಸ್ಥೆ/ಟ್ರಸ್ಟ್ನಿಂದ ಅರ್ಜಿ ಸಲ್ಲಿಕೆಯಾಗಿತ್ತು. ಇದರಂತೆ ಸಂಬಂಧಪಟ್ಟ ಕಾಲೇಜಿನ ನಿವೇಶನ, ಕಟ್ಟಡ ಹಾಗೂ ಇರಬೇಕಾದ ಮೂಲ ಸೌಕರ್ಯಗಳ ಕುರಿತು ಜಿಲ್ಲಾ ತಪಾಸಣ ಸಮಿತಿಯಿಂದ ಸ್ಥಳ ಪರಿಶೀಲನೆ ಹಾಗೂ ತಪಾಸಣೆ ನಡೆಸಿ ವರದಿ ಪಡೆಯಲಾಗಿದೆ. ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದು ಅಂತಿಮ ತೀರ್ಮಾನ ಇನ್ನಷ್ಟೇ ಬರಬೇಕಿದೆ.
– ಜಯಣ್ಣ, ಮಾರುತಿ, ಪದವಿಪೂರ್ವ ಉಪನಿರ್ದೇಶಕರು ದ.ಕ.-ಉಡುಪಿ