Advertisement

2 ವರ್ಷಗಳಿಂದ 1,700 ಕೋ.ರೂ. “ನರೇಗಾ ಬಾಕಿ’

09:51 AM Mar 31, 2020 | Sriram |

ಬೆಂಗಳೂರು: ಕೋವಿಡ್-19 ವೈರಸ್‌ ನಿಯಂತ್ರಿಸಲು ಕೇಂದ್ರ ಸರಕಾರ ದೇಶದ ಜನತೆಗೆ ಪ್ರೋತ್ಸಾಹ ಧನಗಳನ್ನು ಘೋಷಣೆ ಮಾಡುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯದ ನರೇಗಾ ಕಾರ್ಮಿಕರಿಗೆ ನೀಡಬೇಕಿರುವ ಕೂಲಿ ಹಣ 1,744 ಕೋ. ರೂ. ನೀಡದೆ ಬಾಕಿ ಉಳಿಸಿಕೊಂಡಿದೆ. ಈಗ ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಇತ್ತ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ನರೇಗಾ ಕಾರ್ಮಿಕರು ಹಳೆಯ ಬಾಕಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳೆದ ಎರಡು ದಿನಗಳ ಹಿಂದೆ ನರೇಗಾ ಕೂಲಿ ಕಾರ್ಮಿಕರಿಗೆ ಎರಡು ತಿಂಗಳುಗಳ ಕೂಲಿಯನ್ನು ಮುಂಗಡವಾಗಿಯೇ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈಗಾಗಲೇ ದುಡಿದ ಕೂಲಿಯೂ ಬರದಿರುವುದರಿಂದ ಹಳೆಯ ಬಾಕಿಯನ್ನಾದರೂ ಸರಕಾರ ಮೊದಲು ನೀಡಲಿ ಎಂಬ ಬೇಡಿಕೆ ಕೂಲಿ ಕಾರ್ಮಿಕರದ್ದಾಗಿದೆ.
ರಾಜ್ಯ ಸರಕಾರವೂ ಕೂಡ ನರೇಗಾ ಕಾರ್ಮಿಕರ 755 ಕೋ. ರೂ. ಕೂಲಿ ಹಣ ಬಾಕಿ ಉಳಿಸಿಕೊಂಡಿದೆ. 2018-19 ನೇ ಸಾಲಿನ 32.81 ಕೋ.ರೂ. ಕೂಲಿ ಮತ್ತು 119.17 ಕೋ. ರೂ. ಸಾಮಗ್ರಿ ಖರೀದಿ ಹಣ, 2019-20 ನೇ ಸಾಲಿನ 53.61 ಕೋ. ರೂ. ಕೂಲಿ ಹಣ ಮತ್ತು 549.81 ಕೋ.ರೂ. ಸಾಮಗ್ರಿ ಹಣವನ್ನು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2005 ರ ಸೆಕ್ಸೆನ್‌ 3(3)ರ ಪ್ರಕಾರ ವಾರಕ್ಕೊಮ್ಮೆ ಅಥವಾ ಹಾಜರಾತಿ ಮುಕ್ತಾಯಗೊಳಿಸಿದ 15 ದಿನಗಳಲ್ಲಿ ಕೂಲಿ ನೀಡಬೇಕೆಂಬ ನಿಯಮ ಇದೆ. ಆದರೂ ಕೇಂದ್ರ ಸರಕಾರ ನಿಗದಿತ ಸಮಯದಲ್ಲಿ ಕೂಲಿ ಹಣ ಬಿಡುಗಡೆ ಮಾಡದಿರುವುದರಿಂದ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

ನರೇಗಾ ಯೋಜನೆ ಅಡಿಯಲ್ಲಿ 2015-16 ನಿಂದ ಇಲ್ಲಿಯವರೆಗೆ ರಾಜ್ಯ ಸರಕಾರ 3,513 ಕೋ.ರೂ. ಪಾವತಿಸಿದ್ದು, ಅದರಲ್ಲಿ ಕೇಂದ್ರ ಸರಕಾರ 3,097.10 ಕೋ. ರೂ. ಮರು ಪಾವತಿ ಮಾಡಿದೆ. ಇನ್ನೂ 416 .12 ಕೋ.ರೂ. ಗಳನ್ನು ಕೇಂದ್ರ ಸರಕಾರ ಮರು ಪಾವತಿ ಮಾಡಬೇಕಿದೆ.

ಗೊಂದಲದ ಆದೇಶ
ರಾಜ್ಯ ಸರಕಾರ ಈಗ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕವಾಗಿ ಯಾವುದೇ ಆ್ಯಕ್ಷನ್‌ ಪ್ಲಾನ್‌ ಇಲ್ಲದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿ ಆದೇಶಿಸಿದೆ. ಇದು ಪಿಡಿಒ ಮತ್ತು ಪಂಚಾಯತ್‌ ಸದಸ್ಯರು ಬೇಕಾದವರಿಗೆ ಮಾತ್ರ ಅನುಕೂಲ ಕಲ್ಪಿಸಲು ಮಾಡಿಕೊಟ್ಟಂತಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಕೋವಿಡ್-19 ಭೀತಿ: ಕೂಲಿಗೆ ಕತ್ತರಿ
ನರೇಗಾ ಯೋಜನೆ ಅಡಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಾರ್ಷಿಕ ನೂರು ದಿನಗಳ ಕೂಲಿ ಒದಗಿಸಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾಗಿರುವುದರಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 150 ದಿನಗಳ ಕೂಲಿ ಕೊಡಲು ರಾಜ್ಯ ಸರಕಾರ ಕೇಂದ್ರದಿಂದ ಅನುಮತಿ ಪಡೆದಿದೆ. ಆದರೆ ಈಗ ರಾಜ್ಯಾದ್ಯಂತ ಕೋವಿಡ್-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ನರೇಗಾ ಯೋಜನೆ ಅಡಿಯಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಹಳೆಯ ಕೂಲಿಯ ಹಣವೂ ಬಾರದೆ ಈಗಲೂ ಕೂಲಿ ಸಿಗದೆ ನರೇಗಾ ಕಾರ್ಮಿಕರು ಕಂಗಾಲಾಗಿದ್ದಾರೆ. ಅಲ್ಲದೆ ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಿದ್ದ ಕಾರ್ಮಿಕರೂ ಈಗ ಕೋವಿಡ್-19 ಭೀತಿಯಿಂದ ಹಳ್ಳಿಗಳಿಗೆ ತೆರಳಿದ್ದು, ಅವರಿಗೂ ಉದ್ಯೋಗ ಒದಗಿಸುವ ಸವಾಲು ರಾಜ್ಯ ಸರಕಾರದ ಮುಂದಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next