Advertisement

ರಾಜ್ಯದಲ್ಲಿ ಕಳೆದ 17 ದಿನಗಳಲ್ಲಿ ಲಕ್ಷಕ್ಕೂ ಅ‍ಧಿಕ ಸೋಂಕು ಪ್ರಕರಣ ದಾಖಲು!

12:03 AM Aug 14, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕಳೆದ 17 ದಿನಗಳಲ್ಲಿಯೇ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿದೆ!

Advertisement

ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ ಎರಡು ಲಕ್ಷ ಗಡಿದಾಟಿವೆ.

ಇದರೊಂದಿಗೆ ಗುರುವಾರ 6,706 ಮಂದಿಗೆ ಸೋಂಕು ತಗುಲಿರುವುದು, ದಾಖಲೆಯ 8,609 ಮಂದಿ ಗುಣಮುಖರಾಗಿರುವುದು, ಚಿಕಿತ್ಸೆ ಫಲಕಾರಿಯಾಗದೆ 103 ಸೋಂಕಿತರು ಮೃತಪಟ್ಟಿರುವುದು ವರದಿಯಾಗಿದೆ.

ಒಟ್ಟಾರೆ ಸೋಂಕು ಪ್ರಕರಣಗಳು 2,03,200ಕ್ಕೆ, ಸೋಂಕಿಗೆ ಬಲಿಯಾದವರ ಸಂಖ್ಯೆ 3,613ಕ್ಕೆ, ಗುಣಮುಖರಾದವರ ಸಂಖ್ಯೆ 1,21,242ಕ್ಕೆ ಏರಿಕೆಯಾಗಿದೆ. ಸದ್ಯ 78,337 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 727 ಸೋಂಕಿತರ ಆರೋಗ್ಯ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜುಲೈ 27 ರಂದು ರಾಜ್ಯದ ಸೋಂಕು ಪ್ರಕರಣಗಳು ಒಂದು ಲಕ್ಷದ ಗಡಿ ದಾಟಿದ್ದವು. ಆ ಬಳಿಕ ನಿತ್ಯ ಸರಾಸರಿ 6,000 ಮಂದಿ ಸೋಂಕು ತಗುಲುವ ಮೂಲಕ ಕೇವಲ 17 ದಿನಗಳ (ಜು.28-ಆ.13) ಅಂತರದಲ್ಲಿ 1,01,734 ಸೋಂಕಿತರಾಗಿದ್ದಾರೆ. ಈ ಮೂಲಕ ಒಟ್ಟಾರೆ ಪ್ರಕರಣಗಳು ಎರಡು ಲಕ್ಷ ಗಡಿದಾಟಿವೆ. ಇನ್ನು ಈ 17 ದಿನಗಳಲ್ಲಿ ಸೋಂಕು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 83 ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, 1,660 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

Advertisement

ಮೊದಲ ಎಂಟು ಸಾವಿರ ಗಡಿದಾಟಿದ್ದು ಗುಣಮುಖರೇ
ಸೋಂಕು ಪ್ರಕರಣಗಳೇ 7,000 ಆಸುಪಾಸಿನಲ್ಲಿದ್ದು, ಈವರೆಗೂ 8000 ಗಡಿದಾಟಿಲ್ಲ. ಈ ನಡುವೆ ಒಂದೇ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಎಂಟು ಸಾವಿರ ಗಡಿದಾಟಿದ್ದು, ಸಮಾಧಾನಕರ ಬೆಳವಣಿಗೆಯಾಗಿದೆ.

ಗುರುವಾರ ಗುಣಮುಖರಾದ 8,609 ಮಂದಿಯಲ್ಲಿ 2,212 ಮಂದಿ ಬೆಂಗಳೂರು ನಗರದವರು. ಉಳಿದಂತೆ ಬೆಂಗಳೂರು ಗ್ರಾಮಂತರ 735, ದಕ್ಷಿಣ ಕನ್ನಡ ಮತ್ತು ಮೈಸೂರಿನವರು ತಲಾ 600ಕ್ಕೂ ಹೆಚ್ಚು, ಹಾಸನ 500ಕ್ಕೂ ಹೆಚ್ಚು, ಕಲಬುರಗಿ ಮತ್ತು ಬಳ್ಳಾರಿ ತಲಾ 500ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

ಗುರುವಾರ ಎಲ್ಲೆಲ್ಲಿ? ಎಷ್ಟು ಮಂದಿಗೆ ಸೋಂಕು?
ಗುರುವಾರ 55,999 ಸೋಂಕು ಪರೀಕ್ಷೆಗಳು ನಡೆದಿದ್ದು, 6,706 ಮಂದಿಗೆ ಪಾಸಿಟಿವ್ ವರದಿ ಬಂದಿವೆ. ಈ ಪೈಕಿ ಬೆಂಗಳೂರು 1,893, ಮೈಸೂರು 522, ಬಳ್ಳಾರಿ ಮತ್ತು ಉಡುಪಿ ತಲಾ 400ಕ್ಕೂ ಹೆಚ್ಚು, ದಾವಣಗೆರೆ 328, ಬೆಳಗಾವಿ, ಕಲಬುರಗಿ, ಧಾರವಾಡ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 200ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಒಂಬತ್ತು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು, 11 ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

103 ಸೋಂಕಿತರ ಸಾವು
ಬೆಂಗಳೂರಿನಲ್ಲಿ 22, ಮೈಸೂರು 12, ಕಲಬುರಗಿ ಮತ್ತು ಬಳ್ಳಾರಿ ತಲಾ 9, ಬೆಳಗಾವಿ, ಧಾರವಾಡ ಹಾಗೂ ದಕ್ಷಿಣ ಕನ್ನಡ ತಲಾ 6 ಸೋಂಕಿತರು ಸೇರಿ ಒಟ್ಟು ರಾಜ್ಯದಲ್ಲಿ 103 ಸೋಂಕಿತರ ಸಾವಾಗಿರುವುದು ಗುರುವಾರ ವರದಿಯಾಗಿದೆ.

ತಜ್ಞರು ಅಂದಾಜಿಸಿದ್ದು ಸತ್ಯವಾಗಿದೆ!
ಜುಲೈಗಿಂತ ಆಗಸ್ಟ್ ತಿಂಗಳಿನಲ್ಲಿ ಸೋಂಕು ತೀವ್ರವಾಗುತ್ತದೆ ಎಂದು ಆರೋಗ್ಯ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ತಿಂಗಳಾಂತ್ಯಕ್ಕೆ 3 ಲಕ್ಷ ಗಡಿದಾಟುತ್ತವೆ ಎಂದು ಅಂದಾಜಿಸಿದ್ದಾರೆ.

ಅವರು ಹೇಳಿದಂತೆ ಸದ್ಯ 17 ದಿನಗಳಲ್ಲಿಯೇ ಒಂದು ಲಕ್ಷ ಮಂದಿ ಸೋಂಕಿತರಾಗಿದ್ದು, ಮುಂದಿನ ಸೋಂಕಿನ ತೀವ್ರತೆ ಮುಂದುವರೆದು ಮುಂದಿನ 17 ದಿನಗಳಲ್ಲಿ ಅಂದರೆ ಆಗಸ್ಟ್ ಮುಕ್ತಾಯಕ್ಕೆ ಮತ್ತೊಂದು ಲಕ್ಷ ಸೋಂಕು ಪ್ರಕರಣಗಳು ಕಾಣಿಸಿಕೊಂಡು ಒಟ್ಟಾರೆ ಪ್ರಕರಣಗಳು ಮೂರು ಲಕ್ಷ ದಾಟುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸೋಂಕು ಪೀಕ್ ಹಂತ
ರಾಜ್ಯದಲ್ಲಿ ಮಾರ್ಚ್ 9 ರಿಂದ ಜುಲೈ 27ರವರೆಗೂ ಅಂದರೆ 140 ದಿನಗಳಲ್ಲಿ ವರದಿಯಾದ ಒಂದು ಸೋಂಕು ಪ್ರಕರಣಗಳು, ಮತ್ತೆ ಕೇವಲ 17 ದಿನದಲ್ಲಿ (ಜು.27-ಆ.13) ಕಾಣಿಸಿಕೊಂಡಿರುವುದು ರಾಜ್ಯದಲ್ಲಿ ಸೋಂಕಿನ ತೀವ್ರತೆ ಉಚ್ಛ್ರಾಯ ಹಂತದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಸೋಂಕಿತರಲ್ಲಿ
ಗುಣಮುಖ -ಶೇ 59.6
ಚಿಕಿತ್ಸೆ ಮತ್ತು ಆರೈಕೆಯಲ್ಲಿರುವವರು – ಶೇ. 38.6
ಮೃತಪಪಟ್ಟವರು – ಶೇ. 1.8

ಪ್ರಕರಣಗಳು – ದಿನಾಂಕ

ಮೊದಲ ಪ್ರಕರಣ – ಮಾರ್ಚ್ 9

1,000 – ಮೇ 15

10,000 – ಜೂನ್ 24

25,000 – ಜುಲೈ 6

50,000 – ಜುಲೈ 16

1,00,000 – ಜುಲೈ 27

1,50,000 – ಆಗಸ್ಟ್ 5

2,00,000 – ಆಗಸ್ಟ್ 13

ಸೋಂಕು ಪ್ರಕರಣಗಳಲ್ಲಿ ಟಾಪ್ ಐದು ಜಿಲ್ಲೆಗಳು

ಜಿಲ್ಲೆ – ಒಟ್ಟು ಪ್ರಕರಣ – ಗುಣಮುಖರು -ಸಾವು

ಬೆಂಗಳೂರು 81733 –  47246 – 1338

ಬಳ್ಳಾರಿ – 12440 – 6671 – 139

ಮೈಸೂರು – 8989 – 5418 – 274

ಕಲಬುರಗಿ – 8122- 5774-154

ದಕ್ಷಿಣ ಕನ್ನಡ – 8066-5864- 248

Advertisement

Udayavani is now on Telegram. Click here to join our channel and stay updated with the latest news.

Next