Advertisement

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

05:49 PM Apr 05, 2020 | Suhan S |

ದಾವಣಗೆರೆ: ಜಿಲ್ಲಾದ್ಯಂತ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಸಮಿತಿಯು ಒಟ್ಟು 16 ತಂಡಗಳನ್ನು ರಚಿಸಿದ್ದು, ಈ ತಂಡಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.

Advertisement

ಶನಿವಾರ, ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಪರ್ಕ ಪತ್ತೆ ಜಾಡು ತಂಡ, ಕ್ವಾರಂಟೈನ್‌ ನಿರ್ವಹಣೆ, ಅವಶ್ಯಕ ಸಾಮಗ್ರಿ ಪೂರೈಕೆ, ಬಯೋ ಮೆಡಿಕಲ್‌ ಹಾಗೂ ಮೃತ ದೇಹ ನಿರ್ವಹಣೆ, ಅಂಬುಲೆನ್ಸ್‌ ಸಂಚಾರ ನಿರ್ವಹಣೆ, ತುರ್ತು ಸಂದರ್ಭ ಯೋಜನೆ ನಿರ್ವಹಣೆ, ಕೃಷಿ ಪರಿಕರ ಪೂರೈಕೆ ಸೇರಿದಂತೆ ಒಟ್ಟು 16 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಕ್ವಾರಂಟೈನ್‌ಲ್ಲಿರುವವರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇದಕ್ಕಾಗಿ ಕೆಲ ಲಾಡ್ಜ್ಗಳನ್ನು ಗುರುತಿಸಲಾಗಿದ್ದು, ಅವುಗಳ ಮೇಲುಸ್ತುವಾರಿಗೆ ಸುರೇಶ ರೆಡ್ಡಿ ಅವರನ್ನು ನೋಡಲ್‌ ಅಧಿ ಕಾರಿಯನ್ನಾಗಿ ಮಾಡಲಾಗಿದೆ ಎಂದರು.

ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ವೈದ್ಯಕೀಯ ಹಾಗೂ ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲೆಮಾರಿ, ವಲಸೆ ಕಾರ್ಮಿಕರಿಗೆ ಊಟ ಮತ್ತು ಹಾಲು ವಿತರಿಸಲಾಗುತ್ತಿದೆ. ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳು ಕಾರ್ಯರ್ವಹಿಸುತ್ತಿವೆ. ಪಡಿತರ ಆಹಾರ ಧಾನ್ಯ ವಿತರಣೆಗೆ ಓಟಿಪಿ ಕಡ್ಡಾಯವಲ್ಲ, ಪಡಿತರ ಪಡೆಯಲು ಬಂದ ಎಲ್ಲರಿಗೂ 2 ತಿಂಗಳ ಪಡಿತರ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸುವಂತೆ ಆಹಾರ ಇಲಾಖೆ ಉಪನಿರ್ದೇಶಕ ಮಂಟೆಸ್ವಾಮಿ ಅವರಿಗೆ ಸೂಚಿಸಿದರು.

ಆಹಾರ ಇಲಾಖೆ ಉಪನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, 208 ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್‌ ಅಂತ್ಯೋದಯ ಕಾರ್ಡುದಾರರಿಗೆ ಆಹಾರ ವಿತರಿಸಲಾಗುತ್ತಿದೆ. ಜಿಲ್ಲೆಯ 681 ಅಂಗಡಿಗಳ ಪೈಕಿ, 410 ಅಂಗಡಿಗಳಲ್ಲಿ ಅಕ್ಕಿ ಮಾತ್ರ ಲಭ್ಯವಿದ್ದು, ಶಿವಮೊಗ್ಗದಿಂದ ಗೋಧಿ ಬರಲಿದ್ದು, ಅಕ್ಕಿಯೊಂದಿಗೆ ಗೋಧಿ ವಿತರಿಸಲಾಗುವುದು ಎಂದರು.

ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳ ಅಂಗಡಿಗಳು ತಕ್ಷಣ ತೆರೆಯಬೇಕು. ಈ ಬಗ್ಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಗಮನ ಹರಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ, ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಕುಡಿಯುವ ನೀರು, ಆಹಾರ ಪೊಟ್ಟಣಗಳನ್ನು ಒದಗಿಸಬೇಕು. ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸ್ಥಳಿಯ ದಾನಿಗಳ ನೆರವಿನಿಂದ ಅಗತ್ಯ ಬಟ್ಟೆ ಪೂರೈಸಲು ಕ್ರಮ ವಹಿಸಿ. ಒಂದು ವೇಳೆ ದಾನಿಗಳು ಸಿಗದಿದ್ದರೆ ಎಸ್‌ಡಿಆರ್‌ಎಫ್‌ ನಿ ಧಿಯಿಂದ ಪಂಚೆ,ಅಂಗಿ, ಟವಲ್‌, ಮಹಿಳೆಯರಿಗೆ ಸೀರೆ ನೀಡಿ ಹಾಗೂ ವಲಸೆ ಕಾರ್ಮಿಕರಿಗೆ ಸೂಕ್ತ ಆಪ್ತ ಸಮಾಲೋಚನೆ ನಡೆಸಬೇಕು. ದೇವಾಲಯಗಳಲ್ಲಿ ದೊರೆಯುವ ಸೀರೆಗಳನ್ನು ಅಗತ್ಯವಿರುವವರಿಗೆ ನೀಡಲು ತಿಳಿಸಿದರು.

Advertisement

ಸಂಘ ಸಂಸ್ಥೆಗಳು ಕೆಲವೆಡೆ ಊಟ ತಿಂಡಿ ಸರಬರಾಜು ಮಾಡುತ್ತಿದ್ದು, ಅಂತವರು ಅಪರ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಆಹಾರ ಸುರಕ್ಷತೆ ಪರೀಕ್ಷಕರು ಆಹಾರದ ಗುಣಮಟ್ಟವನ್ನು ಪರೀಕ್ಷಿಸಬೇಕು ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕೆಲವು ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌, ಕುಡಿಯುವ ನೀರು, ಟಾರ್ಚ್‌, ಶಾಮಿಯಾನ, ಗುರುತಿನ ಚೀಟಿಯ ಅಗತ್ಯವಿದೆ ಎಂದರು.

ಡಿಎಚ್‌ಒ ಡಾ| ರಾಘವೇಂದ್ರಸ್ವಾಮಿ ಮಾತನಾಡಿ, ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, ಪ್ರಸ್ತುತ 70 ಮಂದಿಗೆ ಚಿಕಿತ್ಸೆಗೊಳಿಪಡುವಷ್ಟು ಎಲ್ಲ ರೀತಿಯ ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲ ಸಿದ್ದವಿಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ.ರಾಘವನ್‌ ಮಾತನಾಡಿ, ಐಸೋಲೇಷನ್‌ ಕ್ವಾರಂಟೈನ್‌ ಹಾಗೂ ಹೊಮ್‌ ಕ್ವಾರಂಟೈನ್‌ ಅವಧಿ ಮುಗಿದಿರುವವರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ದೃಢೀಕರಣ ಪತ್ರ ನೀಡಲಾಗುವುದು ಹಾಗೂ ಕೋವಿಡ್‌-19 ಕಾರ್ಯದಲ್ಲಿ ಭಾಗವಹಿಸುವ ಆರೋಗ್ಯ ಸಿಬ್ಬಂದಿಗಳಿಗೆ ಐಇಸಿ ತರಬೇತಿ ನೀಡಲಾಗಿದೆ. ಅಗತ್ಯವಿರುವ ಔಷಧ, ಮಾತ್ರೆಗಳು ಲಭ್ಯವಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಸಿಇಒ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ್‌ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಐಆರ್‌ಎಸ್‌ ನೋಡಲ್‌ ಅಧಿಕಾರಿ ಪ್ರಮೋದ ನಾಯಕ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‌ಸಿಟಿ ಎಂಡಿ ರವಿಂದ್ರ ಮಲ್ಲಾಪುರ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next