Advertisement

1,484 ಸಂಶಯಾಸ್ಪದ ಕುಷ್ಠರೋಗ ಪ್ರಕರಣ ಪತ್ತೆ

03:46 PM Sep 27, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಸೆ.5 ರಿಂದ 23ರ ವರೆಗೂ ಹಮ್ಮಿಕೊಳ್ಳಲಾಗಿದ್ದ ಕುಷ್ಠರೋಗ ಪತ್ತೆ ಅಭಿಯಾನಕ್ಕೆ ತೆರೆ ಬಿದ್ದಿದೆ.

Advertisement

ಜಿಲ್ಲೆಯಲ್ಲಿ 15 ಜನರಲ್ಲಿ ಕುಷ್ಠರೋಗ ಇರುವುದು ಪತ್ತೆಯಾದರೆ, 1,484 ಸಂಶಯಾಸ್ಪದ ಪ್ರಕರಣಗಳು ಬೆಳಕಿಗೆ ಬಂದಿವೆ. 2025ಕ್ಕೆ ರಾಜ್ಯವನ್ನು ಕುಷ್ಠರೋಗ ಮುಕ್ತಗೊಳಿಸುವ ದಿಸೆಯಲ್ಲಿ ರಾಜ್ಯದಲ್ಲಿ 9 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ಸೆ.5ರಿಂದ 23 ರ ವರೆಗೂ ನಡೆದಿದ್ದು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆದ ಅಭಿಯಾನ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 2,94,909 ಮನೆಗಳಿಗೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗ ಪತ್ತೆ ಪರೀಕ್ಷೆ ಮಾಡಿದ್ದಾರೆ.

11,41,241 ಮಂದಿಗೆ ಪರೀಕ್ಷೆ: ಕುಷ್ಠರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿಜಿಲ್ಲಾದ್ಯಂತ ಒಟ್ಟು 11,41,241 ಮಂದಿಗೆ ಪರೀಕ್ಷೆ ನಡೆಸಲಾಗಿದೆ. 15 ಜನರಲ್ಲಿ ಮಾತ್ರ ಕುಷ್ಠರೋಗ ಇರುವುದು ದೃಢಪಟ್ಟಿರುವುದು ಕಂಡು ಬಂದಿದೆ. ಅವರನ್ನು ಆರೋಗ್ಯ ಇಲಾಖೆ ಚಿಕಿತ್ಸೆಗೆ ಆಯ್ಕೆ ಮಾಡಿಕೊಂಡಿದೆ. ಉಳಿದ 1,484 ಮಂದಿ ಜನರಲ್ಲಿ ಕುಷ್ಠರೋಗದ ಗುಣಲಕ್ಷಣಗಳು ಕಂಡು ಬಂದರೂ ಅವರಿಗೆ ಇನ್ನೂ ಹೆಚ್ಚಿನ ಪರೀಕ್ಷೆ ಅವಶ್ಯಕವಾಗಿರುವುದರಿಂದ ಅವರನ್ನು ಸಂಶಯಾಸ್ಪದ ಪ್ರಕರಣಗಳೆಂದು ಆರೋಗ್ಯ ಇಲಾಖೆ ಪರಿಗಣಿಸಿದೆ.

ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಅಭಿಯಾನದಲ್ಲಿ ಒಟ್ಟು 1,287 ತಂಡಗಳು, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಹಿಡಿದು ಮೇಲ್ವಿಚಾರಕರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆ ಯರು ಸೇರಿ ಒಟ್ಟು 3,114 ಮಂದಿ ಅಧಿಕಾರಿ, ಸಿಬ್ಬಂದಿ ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

ಗೌರಿಬಿದನೂರು ಪ್ರಥಮ: ಸದ್ಯ ಜಿಲ್ಲೆಯಲ್ಲಿ ದೃಢಪಟ್ಟಿರುವ 15 ಮಂದಿ ಕುಷ್ಠರೋಗ ಪ್ರಕರಣ ಪೈಕಿ ಗೌರಿಬಿದನೂರು ತಾಲೂಕು ಮೊದಲ ಸ್ಥಾನದಲ್ಲಿದ್ದು, ಉಳಿದಂತೆ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕುಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿ 2ನೇ ಸ್ಥಾನ, ಗುಡಿ ಬಂಡೆ ಯಲ್ಲಿ 1 ಪ್ರಕರಣ ದಾಖಲಾಗಿದೆ. ಶಿಡ್ಲಘಟ್ಟದಲ್ಲಿ ಪ್ರಕರಣ ದಾಖಲಾಗಿಲ್ಲ. ಗೌರಿಬಿದನೂರು ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಆರೋಗ್ಯಇಲಾಖೆಯನ್ನು ಚಿಂತೆಗೀಡು ಮಾಡಿದೆ. 3 ಬಿಳಿ ಮಚ್ಚೆಗಳು ಇದ್ದರೆ, ಸಂಶಯಾಸ್ಪದ ಕುಷ್ಠರೋಗ ಪ್ರಕರಣಗಳೆಂದು ಹಾಗೂ 5 ಮಚ್ಚೆಗಿಂತ ಹೆಚ್ಚು ಬಿಳಿ ಮಚ್ಚೆಗಳು ಇದ್ದರೆ ಕುಷ್ಠರೋಗ ಪ್ರಕರಣಗಳೆಂದು ಆರೋಗ್ಯ ಇಲಾಖೆ ಪರಿಗಣಿಸಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 1,082 ಪ್ರಕರಣ: ಸದ್ಯ ಜಿಲ್ಲೆಯಲ್ಲಿ ಇದುವರೆಗೂ ಕುಷ್ಠರೋಗ ಪ್ರಕರಣಗಳು ಎಲ್ಲಾ ತಾಲೂಕುಗಳು ಸೇರಿ ಒಟ್ಟು 1,082 ಪ್ರಕರಣಗಳು ದಾಖಲಾಗಿವೆ. ಎಲ್ಲಾ ವ್ಯಕ್ತಿಗಳಿಗೆ ಆರೋಗ್ಯ ಇಲಾಖೆ ಮನೆಬಾಗಿಲಿಗೆ ಚಿಕಿತ್ಸೆ ತಲುಪಿಸುತ್ತಿದೆ. ಈ 1,082 ಪ್ರಕರಣಗಳಲ್ಲಿ ಪ್ರತಿಯೊಬ್ಬರು ಆರೋಗ್ಯವಾಗಿದ್ದಾರೆ. ಯಾರು ಮೃತಪಟ್ಟಿಲ್ಲವೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಮೋಹನ್‌ ಉದಯವಾಣಿಗೆ ತಿಳಿಸಿದರು.

ಕುಷ್ಠರೋಗ ನಿರ್ಮೂಲನೆಗೆ ಸಾಕಷ್ಟು ಔಷಧ ಲಭ್ಯವಿದ್ದು, ರೋಗಿಗಳು ಸಮರ್ಪಕವಾಗಿ ಔಷಧ ಸೇವಿಸುವುದರಿಂದ ರೋಗದಿಂದ ಶೀಘ್ರ ಗುಣಮುಖರಾಗಬಹುದುಎಂದರು.

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next