Advertisement

ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ

03:49 PM Feb 09, 2018 | Team Udayavani |

ವಿರಾರ್‌: ನಮ್ಮಲ್ಲಿ ಪ್ರತಿಭೆಗಳಿದ್ದರೂ ಅದನ್ನು ಪ್ರದರ್ಶಿಸುವ ಅವಕಾಶ ವಿರಳವಾಗಿತ್ತು. ಅಂದಿನವರ ನೋವಿನ ಧ್ವನಿ ಸಂಘಟನಾತ್ಮಕ ರೂಪ ತಳೆದು ಕಲಾ ವಿಕಾಸನಕ್ಕೆ ನಾಂದಿಯಾಯಿತು. ತಾಯಂದಿರ ನಟನೆಯನ್ನು ಮಕ್ಕಳೂ, ಮಕ್ಕಳ ನೃತ್ಯಗಳನ್ನು ತಾಯಂದಿರು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ದೃಶ್ಯ ಆನಂದಮಯವಾಗಿತ್ತು. ಕರ್ನಾಟಕದ ಬಹು ಸಂಸ್ಕೃತಿಯ ಕಲೆಯನ್ನು ಇಚ್ಛಾಶಕ್ತಿಯೊಂದಿಗೆ ಭದ್ರಪಡಿಸೋಣ ಎಂದು ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ನುಡಿದರು.

Advertisement

ಫೆ. 4 ರಂದು ವಿರಾರ್‌ ಪಶ್ಚಿಮದ ಹಳೆ ವಿವಾ ಕಾಲೇಜು ಸಭಾಗೃಹದಲ್ಲಿ ವಿರಾರ್‌ ನಲಸೋಪರ ಕರ್ನಾಟಕ ಸಂಸ್ಥೆಯ 13ನೇ ವಾರ್ಷಿಕೋತ್ಸವ, ಸಮ್ಮಾನ, ಸಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಇವರು, ವೈಯಕ್ತಿಕವಾಗಿ ಸಾಧ್ಯವಾಗದ ಕಾರ್ಯ ಸಂಘಟನೆಯಿಂದ ಪೂರ್ಣಗೊಳಿಸಬಹುದು ಎಂಬುವುದಕ್ಕೆ ಇಂದಿನ ದಟ್ಟ ಜನ ಸಂದಣಿಯ ತುಳು-ಕನ್ನಡಿಗರು ಸಾಭೀತುಪಡಿಸಿದ್ದಾರೆ. ನಿಮ್ಮ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಜತೆ ನಿಂತು ಸಹಕರಿಸುತ್ತೇನೆ ಎಂದರು.

ವಸಾಯಿ ತಾಲೂಕು ಹೊಟೇಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ನಾಗರಾಜ ಶೆಟ್ಟಿ ಅವರು ಮಾತನಾಡಿ, ಸದಸ್ಯ ಸಂಪತ್ತು ಸಂಘಟನೆಯ ಅಭಿವೃದ್ಧಿಯ ದ್ಯೋತಕವಾಗಿದೆ. ಅರ್ಹರನ್ನು ಸಮ್ಮಾನಿಸಿ ಸಾಮಾಜಿಕ ಸೇವಾಕರ್ತರಿಗೆ ಸ್ಫೂರ್ತಿಯನ್ನು ಕಲ್ಪಿಸಬೇಕು ಎಂದು ನುಡಿದರು.

ಕಲಾಪೋಷಕಿ, ಉದ್ಯಮಿ ಶಾರದಾ ಸೂರು ಕರ್ಕೇರ ಅವರು ಮಾತನಾಡಿ, ಕರ್ನಾಟಕ ಸಂಸ್ಥೆಯಲ್ಲಿ ಜಾತಿಗಳ ಅಡ್ಡಗೋಡೆಗಳನ್ನು ತೊರೆದು ಸಮಾನ ಮನಸ್ಕರಾಗಿ ದುಡಿಯಬೇಕು. ತವರೂರ ಸಂಸ್ಕೃತಿಯನ್ನು ಪ್ರದರ್ಶಿಸಿದ ಕರ್ನಾಟಕ ಸಂಸ್ಥೆಯ ಚಟುವಟಿಕೆಗಳು ನಿರಂತರವಾಗಿ ಸಾಗಲಿ ಎಂದರು.
ಇದೇ ಸಂದರ್ಭದಲ್ಲಿ ವಸಾಯಿ-ವಿರಾರ್‌ ನಗರ ಪಾಲಿಕೆಯ ಮೇಯರ್‌ ರೂಪೇಶ್‌ ಜಾಧವ್‌, ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷೆಯರಾದ ಶುಭಾ ಸತೀಶ್‌ ಶೆಟ್ಟಿ, ಸಹನಿ ವಾಮನ್‌ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು.
ಸಮಾಜ ಸೇವಕ ರಾಜೀವಿ ನಾನಾ ಪಾಟೀಲ್‌ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು. ಮನೆ, ಕಚೇರಿ ಹಾಗೂ ಹೊಟೇಲ್‌ಗ‌ಳನ್ನು ಶುಚಿಗೊಳಿಸುವಂತೆ ಹಾಗೂ  ಪರಿಸರದ ನೈರ್ಮಲ್ಯದ ಬಗ್ಗೆ ಗಮನ ನೀಡುವಂತೆ ವಿನಂತಿಸಿದರು.

ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಲಯನ್‌ ಶಂಕರ್‌ ಕೆ. ಟಿ., ಉಪಾಧ್ಯಕ್ಷ ರವಿ ಶೆಟ್ಟಿ ಕಿಲ್ಪಾಡಿ, ಗೌರವ ಕೋಶಾಧಿಕಾರಿ ವಾಮನ್‌ ಎನ್‌. ಸುವರ್ಣ, ಜತೆ ಕೋಶಾಧಿಕಾರಿ ಬಾಲಕೃಷ್ಣ ಎ. ಕೋಟ್ಯಾನ್‌, ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಪದಾಧಿಕಾರಿಗಳಾದ ಮೋಹನ್‌ದಾಸ್‌ ಬಿ. ಹೆಗ್ಡೆ ಕುಂಠಿನಿ, ಯಶವಂತ್‌ ಸಾಲ್ಯಾನ್‌, ಸರೋಜಾ ಮೂಲಿಮನಿ, ಶಶಿಕಾಂತ್‌ ಸುವರ್ಣ, ಪ್ರವೀಣ್‌ ಶೆಟ್ಟಿ ಕಣಂಜಾರು, ಶುಭಾ ಎಸ್‌. ಶೆಟ್ಟಿ, ಯಶೋದಾ ಕೋಟ್ಯಾನ್‌, ದೇವಕಿ ಎಸ್‌. ಕರ್ಕೇರ, ಶಕುಂತಳಾ ಮೆಂಡನ್‌, ಶೋಭಾ ಸುವರ್ಣ, ಮಲ್ಲಿಕಾ ಪೂಜಾರಿ, ಅರುಣ ಕೆ. ಹೆಗ್ಡೆ, ಚಂದ್ರಕಲಾ ಶೆಟ್ಟಿ, ನಿತೇಶ್‌ ಮೆಂಡನ್‌, ಪ್ರತೀಕ್‌ ಎಸ್‌. ಕರ್ಕೇರ, ಗಣೇಶ್‌ ಸುವರ್ಣ, ಅರುಣ ಕೆ. ಶೆಟ್ಟಿ ಕೊಡ್ಲಾಡಿ, ದಯಾನಂದ ಶೆಟ್ಟಿ, ಉಮೇಶ್‌ ಕೋಟ್ಯಾನ್‌, ದಯಾನಂದ ಶೆಟ್ಟಿ ಶಿರಿಯಾ ಮೊದಲಾದವರು  ಸಹಕರಿಸಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಮಹಿಳಾ ಸದಸ್ಯೆಯರಿಂದ ಕಿರು ನಾಟಕ, ನಾದ ಲಹರಿ ಹೇಮಚಂದ್ರ ಎರ್ಮಾಳ್‌ ತಂಡದವರಿಂದ ಭಕ್ತಿ ರಸಮಂಜರಿ, ಸದಸ್ಯರುಗಳಿಂದ ಲೇಖಕ ನಾಗರಾಜ ಗುರುಪುರ ರಚಿಸಿರುವ ಎಂಕ್‌ ಪುರ್ಸೊತ್ತಿಜ್ಜಿ ತುಳು ನಾಟಕವು ರಹೀಂ ಸಚ್ಚರೀಪೇಟೆ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಸಾಂಪ್ರದಾಯಿಕ ಮೌಲ್ಯಗಳಿಂದ ಕೂಡಿದ, ಸಂಘಟನಾತ್ಮಕ ವಾತಾವರಣದಲ್ಲಿ ನಮ್ಮ ಸಂಸ್ಥೆಯ 13 ವರ್ಷ ಯಶಸ್ವಿಯಾಗಿ ಪೂರೈಸಿದೆ. ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಂಸ್ಕೃತಿಕವಾಗಿ ಸಹಾಯ ಯಾಚಿಸಿದವರಿಗೆ ನೆರವು ನೀಡಿ ಸಹಕರಿಸಿದೆ. ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ರೈ, ಲಯನ್‌ ಶಂಕರ್‌ ಕೆ. ಟಿ. ಅವರ ಸಲಹೆ-ಸೂಚನೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಶಿಕ್ಷಣ ಸಮಿತಿ, ಯುವ ವಿಭಾಗ, ಪೂಜಾ ಸಮಿತಿ, ನಿಧಿ ಸಂಗ್ರಹ ಸಮಿತಿಯವರ ಅವಿಶ್ರಾಂತ ಶ್ರಮ ಹಾಗೂ ತುಳು-ಕನ್ನಡಿಗರ ಸಹಕಾರಕ್ಕೆ ಮನದಾಳದ ಕೃತಜ್ಞತೆಗಳು 
– ಸದಾಶಿವ ಎ. ಕರ್ಕೇರ (ಅಧ್ಯಕ್ಷರು : ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆ).

ಸಂಸ್ಥೆಯ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಲಹೆಯಿಂದ ನಗರ ಸೇವಕನಾಗಿ ಚುನಾಯಿತನಾದೆ. ಅವರು ಸಂಘ-ಸಂಸ್ಥೆಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅನುಭವ,  ಪ್ರೇರಣೆ, ಸಂಸ್ಕಾರಗಳಿಂದ ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಬಿಡುವಿನ ಸಮಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಸಂಘಟನೆಯನ್ನು ಬಲಪಡಿಸಬೇಕು 
– ಅರವಿಂದ ಶೆಟ್ಟಿ (ನಗರ ಸೇವಕರು:  ಮೀರಾ-ಭಾಯಂದರ್‌ 
ಮಹಾನಗರ ಪಾಲಿಕೆ).

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next