Advertisement

110 ಕೆ.ವಿ. ಸಬ್‌ಸ್ಟೇಷನ್‌: ಸರ್ವೆ ವರದಿ ಸಲ್ಲಿಕೆ

10:04 PM Nov 24, 2019 | Team Udayavani |

ಸುಳ್ಯ: ಬಹು ನಿರೀಕ್ಷಿತ 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಸಂಬಂಧಿಸಿ ವಿದ್ಯುತ್‌ ಪ್ರಸರಣ ಮಾರ್ಗ ಹಾದು ಹೋಗುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸರ್ವೆ ಪೂರ್ಣಗೊಳಿಸಿ ಡಿಸಿಎಫ್‌ಗೆ ವರದಿ ಸಲ್ಲಿಸಿದೆ.ಪುತ್ತೂರು ಮತ್ತು ಸುಳ್ಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ವರದಿ ಪರಿಶೀಲನೆ ಬಳಿಕ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ.

Advertisement

ಕೆಪಿಟಿಸಿಎಲ್‌ ಬೇಡಿಕೆ
ಅರಣ್ಯ ಇಲಾಖೆ ಸರ್ವೆ
ಪುತ್ತೂರು – ಕುಂಬ್ರ – ಮಾಡಾವು ಮೂಲಕ ಸುಳ್ಯಕ್ಕೆ ಹಾದು ಹೋಗುವ 110 ಸಬ್‌ಸ್ಟೇಷನ್‌ ಲೈನ್‌ ಮಾರ್ಗ ಅನುಷ್ಠಾನಕ್ಕೆ ಅರಣ್ಯ ಪ್ರದೇಶದೊಳಗೆ ಜಾಗ ನೀಡುವಂತೆ ಕೆಪಿಟಿಸಿಎಲ್‌ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಿತು. ಇದರ ಅನ್ವಯ ಉಭಯ ತಾಲೂಕಿನ ಅರಣ್ಯ ಇಲಾಖೆ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಿ ಲೈನ್‌ ಹಾದು ಹೋಗುವ ಮಾರ್ಗದಲ್ಲಿ ತೆರವಾಗುವ ಮರ, ಬಳಕೆಯಾಗುವ ಜಾಗದ ವಿವರ ಸಂಗ್ರಹಿಸಿ ಡಿಸಿಎಫ್‌ಗೆ ಸಲ್ಲಿಸಿದೆ. ಅಲ್ಲಿ ಪರಿಶೀಲನೆ ಬಳಿಕ ಒಪ್ಪಿಗೆ ದೊರೆಯಬೇಕು. ಆ ಬಳಿಕ ಕೆಪಿಟಿಸಿಎಲ್‌ಗೆ ಆನ್‌ಲೈನ್‌ ಮೂಲಕ ಪಟ್ಟಿ ಕಳುಹಿಸಲಾಗುತ್ತದೆ. ಎರಡು ಕಡೆ ಸಮ್ಮತಿ ವ್ಯಕ್ತವಾದರೆ ಸರಕಾರದ ಹಂತದಲ್ಲಿ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ.

ಪರ್ಯಾಯ ಭೂಮಿ
ಬೇಡಿಕೆಗೆ ವಿನಾಯಿತಿ
110 ಕೆ.ವಿ. ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದಲ್ಲಿ 7.723 ಹೆಕ್ಟೇರ್‌ ಅರಣ್ಯ ಭೂಮಿ ಬಿಡುಗಡೆಗಾಗಿ ವಿದ್ಯುತ್‌ ಪ್ರಸರಣ ನಿಗಮ 2017 ಮಾರ್ಚ್‌ನಲ್ಲಿ ಬೇಡಿಕೆ ಸಲ್ಲಿಸಿತ್ತು. ಆದರೆ ಪ್ರಸ್ತಾವನೆ ಪರಿಶೀಲಿಸಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಭೂಮಿ ಬಿಡುಗಡೆಗಾಗಿ ಅರಣ್ಯ ಸಂರಕ್ಷಣೆ ಕಾಯ್ದೆ 1980ರಂತೆ 20 ಎಕರೆ ಭೂಮಿಯನ್ನು ಪರ್ಯಾಯ ಅರಣ್ಯೀಕರಣಕ್ಕೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲೂಕಿನ 65 ಎಕ್ರೆ 7 ಗುಂಟೆಯಲ್ಲಿ 20 ಎಕ್ರೆ ಅರಣ್ಯೀಕರಣಕ್ಕೆ ಸಂಬಂಧಿಸಿ ಹಸ್ತಾಂತರಿಸಲು ಪ್ರಕ್ರಿಯೆ ನಡೆಯಿತು. ಆದರೆ ಅರಣ್ಯ ಪ್ರದೇಶದಲ್ಲಿ ಲೈನ್‌ ಮಾರ್ಗ ಮಾತ್ರ ಹಾದು ಹೋಗುವುದಿದ್ದರೆ ಅರಣ್ಯ ಸಂರಕ್ಷಣ ಕಾಯಿದೆ ಅನ್ವಯ ಪರ್ಯಾಯ ಜಾಗ ನೀಡಬೇಕಿಲ್ಲ ಎಂಬ ಅಂಶ ಉಲ್ಲೇಖವಾದ ಕಾರಣ ಅರಣ್ಯ ಇಲಾಖೆ ಪರ್ಯಾಯ ಜಾಗ ಬೇಡಿಕೆ ಕೈಬಿಟ್ಟಿತ್ತು. ಯೋಜನೆ ಕಾರ್ಯಗತಗೊಳ್ಳುವ ವೇಳೆ ತೆರವು ಆಗುವ ಮರಗಳಿಗೆ ಪರ್ಯಾಯವಾಗಿ ಅರಣ್ಯ ಇಲಾಖೆ ಸೂಚಿಸುವ ಡಿ ಗ್ರೇಡ್‌ ಅರಣ್ಯದಲ್ಲಿ ಅರಣ್ಯೀಕರಣಕ್ಕೆ ತಗಲುವ ಅಭಿವೃದ್ಧಿ ಹಣವನ್ನು ಕೆಪಿಟಿಸಿಎಲ್‌ ಪಾವತಿ ಮಾಡಬೇಕು.

ಎರಡು ಆಕ್ಷೇಪಣೆ ಅರ್ಜಿ
ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿದ 38 ಆಕ್ಷೇಪಣೆ ಅರ್ಜಿಗಳ ಪೈಕಿ 36 ವಿಚಾರಣೆ ಪೂರ್ಣಗೊಂಡು, 2 ಅರ್ಜಿಗಳು ವಿಲೇ ವಾರಿಗೆ ಬಾಕಿ ಉಳಿದಿವೆ. ಹೈಕೋರ್ಟ್‌ಗೆ ಸಲ್ಲಿಸಿದ ಎರಡು ಅರ್ಜಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ 23 ಮತ್ತು ಪುತ್ತೂರು, ಸುಳ್ಯ ಮಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ದಾಖ ಲಾಗಿದ್ದ 11 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಇತ್ಯರ್ಥಗೊಳಿಸಲಾಗಿದೆ.

ವಿದ್ಯುತ್‌ ಲೈನ್‌ ಮಾರ್ಗದಲ್ಲಿ ಏನು ಸಮಸ್ಯೆ?
18 ವರ್ಷಗಳ ಹಿಂದೆ ಮಂಜೂರುಗೊಂಡಿದ್ದ ಸುಳ್ಯ 110 ಕೆ.ವಿ. ಸಬ್‌ಸ್ಟೇಷನ್‌ ಕಾಮಗಾರಿಗೆ ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದಲ್ಲಿನ ಆಕ್ಷೇಪಣೆ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯೊಳಗಿನ ತೊಡಕು ಅನುಷ್ಠಾನಕ್ಕೆ ಅಡ್ಡಿಯಾಗಿತ್ತು. ಪ್ರಸರಣ ಮಾರ್ಗ ನಿರ್ಮಾಣಕ್ಕೆ ಸರ್ವೆ ಸಂದರ್ಭದಲ್ಲಿ ಭೂ ಮಾಲಕರು ವಿರೋಧ ಸೂಚಿಸಿದ್ದರಿಂದ ಬದಲಿ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಕಾರ್ಯಸಾಧುವಾಗದ ಕಾರಣ ಹಳೆ ಮಾರ್ಗದಲ್ಲೇ ಲೈನ್‌ ಎಳೆಯಲು ನಿರ್ಧರಿಸಲಾಯಿತು. ಆದರೆ ಲೈನ್‌ ಹಾದು ಹೋಗುವ ಸ್ಥಳದ ಹಕ್ಕುದಾರರು ನ್ಯಾಯಾಲಯಗಳಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಅತಿ ಹೆಚ್ಚು ಅರಣ್ಯ ಪ್ರದೇಶದ ವ್ಯಾಪ್ತಿ ಸೇರುವ ಕಾರಣ ಇಲಾಖೆಯೂ ಒಪ್ಪಿಗೆ ನೀಡಿರಲಿಲ್ಲ. ಪರ್ಯಾಯ ಜಮೀನು ನೀಡಿದ ಬಳಿಕ ಜಾಗ ಬಿಟ್ಟು ಕೊಡುವ ವರದಿ ನೀಡಿತು. ಹೀಗಾಗಿ ಈ ಯೋಜನೆ ಸರ್ವೆ ಹಂತದಲ್ಲಿ ಸ್ಥಗಿತವಾಯಿತು.

Advertisement

ವೇಗ ನೀಡಲು ಸೂಚನೆ
ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದ ಸರ್ವೆ ಪೂರ್ಣ ಗೊಂಡಿದೆ. ಮುಂದಿನ ಪ್ರಕ್ರಿಯೆಗೆ ವೇಗ ನೀಡಲು ಸೂಚಿಸಲಾಗಿದೆ.
– ಎಸ್‌. ಅಂಗಾರ, ಶಾಸಕ, ಸುಳ್ಯ

ಬದಲಿ ಜಾಗಕ್ಕೆ ವಿನಾಯಿತಿ
ಕೆಪಿಟಿಸಿಎಲ್‌ ಸಲ್ಲಿಸಿದ ಬೇಡಿಕೆ ಅನುಸಾರ ಅರಣ್ಯ ಇಲಾಖೆ ಲೈನ್‌ ಹಾದುಹೋಗುವ ಮಾರ್ಗದಲ್ಲಿ ಸರ್ವೆ ನಡೆಸಿ ವರದಿ ತಯಾರಿಸಿದೆ. ಅರಣ್ಯ ಇಲಾಖೆಯ ಡಿಸಿಎಫ್‌ ಹಂತದಲ್ಲಿ ಪರಿಶೀಲನೆ ಬಳಿಕ ಒಪ್ಪಿಗೆ ಆಗಿ ಮತ್ತೆ ಕೆಪಿಟಿಸಿಎಲ್‌ಗೆ ಕಳುಹಿಸಬೇಕಿದೆ. ಈ ಹಿಂದೆ ಅರಣ್ಯ ಇಲಾಖೆ ಅರಣ್ಯೀಕರಣಕ್ಕೆ ಪರ್ಯಾಯ ಜಾಗ ಬೇಡಿಕೆ ಸಲ್ಲಿಸಿದ ಪರಿಣಾಮ ಬದಲಿ ಜಾಗ ಗುರುತಿಸಿದ್ದೆವು. ಆದರೆ ಅರಣ್ಯ ಕಾಯಿದೆಯಲ್ಲಿ ವಿನಾಯಿತಿ ಅವ ಕಾಶ ಇರುವ ಕಾರಣ ಬದಲಿ ಜಾಗ ಬೇಡಿಕೆಯನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ.
– ಸತೀಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌
ಕೆಪಿಟಿಸಿಎಲ್‌, ಮಂಗಳೂರು

ವರದಿ ಸಲ್ಲಿಕೆ
ಪುತ್ತೂರು, ಸುಳ್ಯ ವ್ಯಾಪ್ತಿಯ ಲೈನ್‌ ಮಾರ್ಗ ಹಾದು ಹೋಗುವ ಅರಣ್ಯ ಭಾಗದಲ್ಲಿ ಆಯಾ ವ್ಯಾಪ್ತಿಗೆ ಒಳಪಟ್ಟ ಅರಣ್ಯ ಅಧಿ ಕಾರಿಗಳು ಸರ್ವೆ ನಡೆಸಿದ್ದಾರೆ. ಆ ವರದಿಯನ್ನು ಡಿಸಿಎಫ್‌ ಅವರಿಗೆ ಸಲ್ಲಿಸಲಾಗಿದೆ.
– ಮಂಜುನಾಥ, ವಲಯ ಅರಣ್ಯಾಧಿಕಾರಿ, ಸುಳ್ಯ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next