Advertisement

ಕರೋಪಾಡಿ ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣ: 11 ಆರೋಪಿಗಳ ಬಂಧನ

11:40 AM Apr 30, 2017 | Team Udayavani |

ಮಂಗಳೂರು: ವಿಟ್ಲ ಸಮೀಪದ ಕರೋಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಎ. ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಆರೋಪಿಗಳನ್ನು ದ.ಕ. ಜಿಲ್ಲಾ ಪೊಲೀಸರ ವಿಶೇಷ ತಂಡ ಬಂಧಿಸಿದೆ.

Advertisement

ಬಂಟ್ವಾಳ ತಾಲೂಕು ಕರೋಪಾಡಿ ಬೇತಮನೆಯ ರಾಜೇಶ್‌ ನಾಯಕ್‌ (39), ಮಾಣಿ ಲಕ್ಕಪ್ಪಕೋಡಿಯ ನರಸಿಂಹ ಯಾನೆ ನರಸಿಂಹ ಶೆಟ್ಟಿ (35), ಪುತ್ತೂರು ತಾಲೂಕು ಪಾತಾಜೆ ಬೆಳಂದೂರಿನ ಪ್ರಜ್ವಲ್‌ ರೈ (27), ಸವಣೂರು ಗ್ರಾಮ ಆರೆಳ್ತಡಿಯ ಪುಷ್ಪರಾಜ್‌ ಯಾನೆ ಪುಟ್ಟ (19) ಮತ್ತು ಸಚಿನ್‌ (24), ಕುದ್ಮಾರು ಗ್ರಾಮ ಬರೆಪ್ಪಾಡಿಯ ರೋಶನ್‌ (26), ಸವಣೂರು ಗ್ರಾಮ ಆರೆಳ್ತಡಿಯ ಪುನೀತ್‌ ಯಾನೆ ಬೊಂಡ (24), ಕರೋಪಾಡಿ ಗ್ರಾಮ ಮಿತ್ತನಡ್ಕದ ವಚನ್‌ (21), ಕನ್ಯಾನ ಗ್ರಾಮ ಪಿಲಿಂಗುಳಿಯ ಸತೀಶ್‌ ರೈ (44), ಮಂಗಳೂರು ಸುರತ್ಕಲ್‌ ಕೃಷ್ಣಾಪುರದ ಪ್ರಶಾಂತ್‌ ಯಾನೆ ಪಚ್ಚು (25) ಮತ್ತು ಬಂಟ್ವಾಳ ತಾಲೂಕು ವೀರಕಂಭದ ಕೇಶವ (33) ಬಂಧಿತರು.

ರಾಜೇಶ್‌ ನಾಯಕ್‌ನಿಗೆ ಅಬ್ದುಲ್‌ ಜಲೀಲ್‌ ಮೇಲೆ ಇದ್ದ ವೈಯಕ್ತಿಕ ದ್ವೇಷ ಮತ್ತು ರಾಜಕೀಯ ವೈಷಮ್ಯ ಈ ಕೊಲೆ ಕೃತ್ಯಕ್ಕೆ ಕಾರಣ ಎಂದು ಪಶ್ಚಿಮ ವಲಯದ ಐಜಿಪಿ ಪಿ. ಹರಿಶೇಖರನ್‌ ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ, ಅಡಿಶನಲ್‌ ಎಸ್‌ಪಿ ಹಾಗೂ ಪ್ರಕರಣದ ತನಿಖಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಉಪಸ್ಥಿತರಿದ್ದರು. 

ಎ. ಅಬ್ದುಲ್‌ ಜಲೀಲ್‌ ಅವರನ್ನು ಎ. 20ರಂದು ಬೆಳಗ್ಗೆ 11.35ಕ್ಕೆ ಕರೋಪಾಡಿ ಗ್ರಾ.ಪಂ. ಕಚೇರಿಯಲ್ಲಿ ಕುಳಿತುಕೊಂಡಿದ್ದ ಸಮಯದಲ್ಲಿ ಮೋಟಾರ್‌ ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮಾರಕಾಯುಧಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಡಹಗಲೇ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಪಿ ಭೂಷಣ್‌ ಜಿ. ಬೊರಸೆ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ 11 ಜನ ಆರೋಪಿಗಳನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ 2 ಮೋಟಾರ್‌ ಬೈಕುಗಳು, 2 ತಲವಾರುಗಳು ಮತ್ತು 1 ಆಮ್ನಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ವಿವರಿಸಿದರು.

ವಿಕ್ಕಿ ಶೆಟ್ಟಿ ವಿರುದ್ಧ ಕೋಕಾ 
ವಿಕ್ಕಿ ಶೆಟ್ಟಿ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಿ ಆತನ ಮೇಲಿರುವ ಪ್ರಕರಣಗಳ ಮಾಹಿತಿ ಕಲೆ ಹಾಕಿ, ಸಾಕ್ಷ é ಸಂಗ್ರಹಿಸಿ ತನಿಖೆ ಮಾಡಿ ಈಆತನ ವಿರುದ್ಧ ಕೋಕಾ ಕಾಯ್ದೆ ಜಾರಿ ಮಾಡಲಾಗುವುದು ಎಂದು ಐಜಿಪಿ ತಿಳಿಸಿದರು. ಡಿವೈಎಸ್‌ಪಿ ರವೀಶ್‌, ಪೊಲೀಸ್‌ ಇನ್ಸ್‌ ಪೆಕ್ಟರ್‌ಗಳಾದ ಮಂಜಯ್ಯ, ಮಹೇಶ್‌ ಪ್ರಸಾದ್‌, ನಾಗರಾಜ್‌ (ವಿಟ್ಲ), ರವಿ (ಬೆಳ್ತಂಗಡಿ), ರಕ್ಷಿತ್‌ (ಬಂಟ್ವಾಳ ನಗರ), ಉಮೇಶ್‌ ಕುಮಾರ್‌ (ಬಂಟ್ವಾಳ ಗ್ರಾಮಾಂತರ), ಚಂದ್ರಶೇಖರ (ಪುಂಜಾಲಕಟ್ಟೆ), ಅಮಾನುಲ್ಲಾ (ಡಿಸಿಐಬಿ) ಮತ್ತು ಸಿಬಂದಿ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.

Advertisement

ಕೊಲೆಗೆ ಕಾರಣಗಳು
2015ರಲ್ಲಿ ತಾನು ಮತ್ತು ತನ್ನ ಸಹಚರರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಲು ಜಲೀಲ್‌ ಅವರೇ ಕಾರಣ ಎಂಬುದಾಗಿ ರಾಜೇಶ್‌ ನಾಯಕ್‌ ಆರೋಪಿಸಿದ್ದು, ಈ ಬಗ್ಗೆ ಜಲೀಲ್‌ ವಿರುದ್ಧ ದ್ವೇಷ ಹೊಂದಿದ್ದನು. ಬಳಿಕ 2016ರಲ್ಲಿ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ರಾಜೇಶ್‌ ನಾಯಕ್‌ ಮತ್ತು ಇತರರು ತೋರಣ ಕಟ್ಟುತ್ತಿದ್ದಾಗ ನವಾಫ್‌, ಸಜಾಜ್‌, ಖಲೀಲ್‌ ಅವರು ಬೈಕ್‌ ಸವಾರಿ ಮಾಡಿಕೊಂಡು ಧೂಳೆಬ್ಬಿಸುತ್ತಾ ಬಂದಿದ್ದು, ಈ ಬಗ್ಗೆ ರಾಜೇಶ್‌ ನಾಯಕ್‌ ಆಕ್ಷೇಪಿಸಿದ್ದನು. ಆಗ ನವಾಫ್‌, ಸಜಾಜ್‌, ಖಲೀಲ್‌ ಅವರು ತಂಡವನ್ನು ಕಟ್ಟಿಕೊಂಡು ಬಂದು ರಾಜೇಶ್‌ ನಾಯಕ್‌ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದರು. ರಾಜೇಶ್‌ ನಾಯಕ್‌ ಮಿತ್ರ ರಮೇಶ್‌ ಅವರಿಗೆ ಜಾತಿ ನಿಂದನೆ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯಿಂದ ರಾಜೇಶ್‌ ನಾಯಕ್‌ಗೆ ಸಾರ್ವಜನಿಕವಾಗಿ ಅವಮಾನವಾಗಿದ್ದು, ಕೃತ್ಯದ ಆರೋಪಿಗಳಿಗೆ ಜಲೀಲ್‌ ಬೆಂಬಲವಾಗಿ ನಿಂತಿದ್ದಾರೆ ಎಂದು ಭಾವಿಸಿದ್ದನು. ಇದೇ ಕೃತ್ಯಕ್ಕೆ ಸಂಬಂಧಿಸಿ ರಾಜೇಶ್‌ ನಾಯಕ್‌ ಮತ್ತು ಸಹಚರರ ವಿರುದ್ಧ ಪ್ರತಿ ದೂರು ಕೂಡ ದಾಖಲಾಗಿತ್ತು. ಇದನ್ನು ಕೂಡ ಜಲೀಲ್‌ ಮಾಡಿಸಿರುತ್ತಾರೆ ಎಂದು ರಾಜೇಶ್‌ ನಾಯಕ್‌ ದ್ವೇಷ ಹೊಂದಿದ್ದನು.

2015ರ ಗ್ರಾ. ಪಂ. ಚುನಾವಣೆಯ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಶೆಟಿR ಆಕಾಂಕ್ಷಿ
ಯಾಗಿದ್ದು, ದಿನೇಶ್‌ ಶೆಟ್ಟಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಚಿಕ್ಕಪ್ಪನ ಮಗನಾಗಿರುತ್ತಾನೆ. ವಿಕ್ಕಿ ಶೆಟ್ಟಿ ತನ್ನ ಸಂಬಂಧಿ ದಿನೇಶ್‌ ಶೆಟ್ಟಿಯನ್ನು ಬೆಂಬಲಿಸಿದ್ದು, ಆದರೆ ಉಪಾಧ್ಯಕ್ಷ ಸ್ಥಾನ ಆತನಿಗೆ ಸಿಗದೆ ಜಲೀಲ್‌ ಅವರಿಗೆ ಸಿಕ್ಕಿತ್ತು. ಇದರಿಂದ ವಿಕ್ಕಿ ಶೆಟ್ಟಿ ಬೇಸರ ಹೊಂದಿದ್ದು, ಜಲೀಲ್‌ ವಿರುದ್ಧ ಅಸಮಾಧಾನ ಹಾಗೂ ದ್ವೇಷ ಹೊಂದಿದ್ದನು.

ಕರೋಪಾಡಿ ಗ್ರಾ.ಪಂ.ನಲ್ಲಿ ಯಾವುದೇ ಪ್ರಮುಖ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ದಿನೇಶ್‌ ಮತ್ತು ಜಲೀಲ್‌ ಮಧ್ಯೆ ಗಲಾಟೆಗಳು ಸಂಭವಿಸುತ್ತಿದ್ದವು. ಪಂಚಾಯತ್‌ನಲ್ಲಿ ಯಾವುದೇ ತೀರ್ಮಾನಗಳಿದ್ದರೂ ವಿಕ್ಕಿ ಶೆಟ್ಟಿ ದೂರವಾಣಿ ಮುಖಾಂತರ ದಿನೇಶ್‌ ಶೆಟ್ಟಿಗೆ ತಿಳಿಸುತ್ತಿದ್ದನು. ತನ್ನ ಯಾವುದೇ ವಿಚಾರಕ್ಕೂ ಜಲೀಲ್‌ ಬೆಲೆ ನೀಡುತ್ತಿಲ್ಲ ಎಂದು ವಿಕ್ಕಿ ಶೆಟ್ಟಿ ದ್ವೇಷ ಕಟ್ಟಿಕೊಂಡಿದ್ದನು.

ಈ ಹಿನ್ನೆಲೆಯಲ್ಲಿ ವಿಕ್ಕಿ ಶೆಟ್ಟಿ ಹಲವು ಬಾರಿ ರಾಜೇಶ್‌ ನಾಯಕ್‌ನನ್ನು ಇಂಟರ್‌ನೆಟ್‌ ದೂರವಾಣಿ ಮೂಲಕ ಸಂಪರ್ಕಿಸಿ ಜಲೀಲ್‌ ಅವರನ್ನು ಮುಗಿಸುವಂತೆ ಸೂಚನೆ ನೀಡಿದ್ದನು. “ನಿನಗೆ ಹಣ ಕೊಡುತ್ತೇನೆ. ಇನ್ನೂ ಯಾಕೆ ಜಲೀಲ್‌ನನ್ನು ಮುಗಿಸಿಲ್ಲ’ ಎಂದು ಪದೇ ಪದೇ ಫೋನ್‌ ಮಾಡಿ ವಿಕ್ಕಿ ಶೆಟ್ಟಿ ವಿಚಾರಿಸುತ್ತಿದ್ದನು.

ಇದರಿಂದಾಗಿ ರಾಜೇಶ್‌ ನಾಯಕ್‌ ತನ್ನ ಸಹಚರರನ್ನು ಸೇರಿಸಿ ಕೊಲೆಗೆ ಸಂಚು ರೂಪಿಸಿದ್ದನು. ನಂಜನಗೂಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 5 ದಿನ ಜಲೀಲ್‌ ಮೈಸೂರಿಗೆ ಹೋಗಿದ್ದು, ಈ ಸಂದರ್ಭದಲ್ಲಿ ಕೊಲೆಗೆ ಸಂಚು ನಡೆಸಿದ್ದರು. ಆದರೆ ಸಾಧ್ಯವಾಗಿಲ್ಲ. ಆ ಬಳಿಕ ಸಮಯ ಸಾಧಿಸಿ ಎ. 20ರಂದು ಕೊಲೆ ಕೃತ್ಯ ಎಸಗಲಾಯಿತು ಎಂದು ಐಜಿಪಿ ವಿವರಿಸಿದರು.

ಉಡುಪಿಯಲ್ಲಿ ಬಂಧನ
ಕನ್ಯಾನದಲ್ಲಿ ಶಾಮಿಯಾನ ಅಂಗಡಿಯನ್ನು ನಡೆಸುತ್ತಿರುವ ರಾಜೇಶ್‌ ನಾಯಕ್‌ ಮತ್ತು ಮಾಣಿ ಲಕ್ಕಪ್ಪಕೋಡಿಯ ನರಸಿಂಹ ಯಾನೆ ನರಸಿಂಹ ಶೆಟ್ಟಿ ಈ ಪ್ರಕರಣದ ರೂವಾರಿಗಳಾಗಿದ್ದು, ಅವರನ್ನು ಶನಿವಾರ ಉಡುಪಿಯಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಯಾನೆ ವಿಕ್ರಮ್‌ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಸೂಚನೆಯಂತೆ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಅವರು ನೀಡಿದ ಮಾಹಿತಿಯಂತೆ ಕೃತ್ಯಕ್ಕೆ ಸಹಕರಿಸಿದ ಇತರ 9 ಜನ ಆರೋಪಿಗಳನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ರಾಜೇಶ್‌ ನಾಯಕ್‌, ನರಸಿಂಹ ಶೆಟ್ಟಿ ಮತ್ತು ಸತೀಶ್‌ ರೈ ರೌಡಿ ಶೀಟರ್‌ಗಳಾಗಿರುತ್ತಾರೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ರಾಜೇಶ್‌ ನಾಯಕ್‌ ವಿರುದ್ಧ 4 ಪ್ರಕರಣ, ನರಸಿಂಹ ಶೆಟ್ಟಿ ಮೇಲೆ 2 ಕೇಸು ಹಾಗೂ ಸತೀಶ್‌ ರೈ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next