Advertisement

ಕೇಂದ್ರ ನೆರೆ ಪರಿಹಾರದಲ್ಲಿ ಬೆಳೆಹಾನಿಗೆ 1,035 ಕೋಟಿ

11:17 PM Oct 09, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಬಂದಿರುವ 1,200 ಕೋಟಿ ರೂ.ಗಳ ಪೈಕಿ ರೈತರ ಬೆಳೆ ಹಾನಿಗೆ 1,035 ಕೋಟಿ ರೂ.ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಗರದಲ್ಲಿ ಬುಧವಾರ ನೆರೆ ಹಾಗೂ ಬರ ಸಂಬಂಧದ ಸಂಪುಟ ಉಪಸಮತಿ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ 1,200 ಕೋಟಿ ರೂ.ಬಿಡುಗಡೆ ಮಾಡಿದೆ. ಅದರಲ್ಲಿ 1,035 ಕೋಟಿ ರೂ.ಗಳನ್ನು ರೈತರ ಬೆಳೆ ಹಾನಿಗೆ ಪರಿಹಾರವಾಗಿ ನೀಡಲು ಸೂಚಿಸಲಾಗಿದೆ ಎಂದರು.

Advertisement

ಉಳಿದ ಹಣವನ್ನು ಶಾಲೆ, ಜಿಲ್ಲಾ ಪಂಚಾಯತಿಗೆ ರಸ್ತೆ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಗಿದೆ. ಲೋಕೋ ಪಯೋಗಿ ಇಲಾಖೆಯಿಂದ ಈಗಾಗಲೇ 500 ಕೋಟಿ ರೂ.ಬಿಡುಗಡೆಯಾಗಿದ್ದು, ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ಪೈಕಿ 50 ಲಕ್ಷ ರೂ. ವರೆಗಿನ ಕಾಮಗಾರಿಗಳಿಗೆ ಟೆಂಡರ್‌ ಇಲ್ಲದೆ ಒಪ್ಪಿಗೆ ನೀಡಲು ಸೂಚಿಸಲಾಗಿದೆ. 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿ ಗಳನ್ನು ಟೆಂಡರ್‌ ಮೂಲಕ ನೀಡಲು ತಿಳಿಸಲಾಗಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಮುಂಗಾರಿನಲ್ಲಿ ವಾಡಿಕೆ ಮಳೆಗಿಂತ ಶೇ.15ರಷ್ಟು ಮಳೆ ಹೆಚ್ಚಳ ಆಗಿದೆ. ಎನ್‌ಡಿಆರ್‌ಎಫ್ ನಿಯ ಮದ ಪ್ರಕಾರ ಪೆಟ್ಟಿಗೆ ಅಂಗಡಿ ಹಾಗೂ ಮಗ್ಗದ ಮಳಿಗೆಗಳು ಹಾಗೂ ಗುಡಿಸಲುಗಳಿಗೆ ಕೇಂದ್ರದಿಂದ ಹಣ ಬರುವುದಿಲ್ಲ. ಅದನ್ನು ರಾಜ್ಯ ಸರ್ಕಾರ ದಿಂದ ನೀಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

2018-19 ರಲ್ಲಿ ರಾಜ್ಯದಲ್ಲಿ ಉಂಟಾದ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ದಿಂದ 1,029 ಕೋಟಿ ರೂ. ಪರಿಹಾರದ ಹಣ ಬಿಡುಗಡೆಯಾಗಿದ್ದು, ಆ ಹಣವನ್ನು ರೈತರ ಬೆಳೆ ನಷ್ಟಕ್ಕೆ ಆರ್‌ಟಿಜಿಎಸ್‌ ಮೂಲಕ ತಲುಪಿಸಲು ಸೂಚಿಸಲಾಗಿದೆ. ಇದೇ ವೇಳೆ, ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ 1,200 ಕೋಟಿ ರೂ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಡಗು ಅತಿವೃಷ್ಟಿ ಪರಿಹಾರಕ್ಕೆ ಕೇಳಿದ್ದ ಅನುದಾನ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಅದಕ್ಕೂ, ಈ ಪರಿಹಾರ ಮೊತ್ತಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ದೇವೇಗೌಡರಾಗಲಿ, ಜೆಡಿಎಸ್‌ ಪಕ್ಷವಾಗಲಿ ಗೊಂದಲಕ್ಕೀಡಾಗುವುದು ಬೇಡ ಎಂದು ಅಶೋಕ್‌ ಸ್ಪಷ್ಟಪಡಿಸಿದರು.

ಅ.30ರೊಳಗೆ ಬರ ತಾಲೂಕುಗಳ ಪಟ್ಟಿ ಸಿದ್ಧ: ಈ ವರ್ಷವೂ ರಾಜ್ಯದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಬರ ತಾಲೂಕುಗಳ ಪಟ್ಟಿ ಸಿದ್ಧ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಕ್ಟೋಬರ್‌ 30ರೊಳಗೆ ಬರ ತಾಲೂಕುಗಳ ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಸಚಿವ ಆರ್‌.ಅಶೋಕ್‌ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next