Advertisement

ಹೈಕೋರ್ಟ್‌ನಲ್ಲಿ ಸಿಕ್ತು ಲೆಕ್ಕ ಶಾಸ್ತ್ರಕ್ಕೆ  ಶೇ. 100 ಅಂಕ!

06:54 PM Jan 23, 2021 | Team Udayavani |

ಹೊಸನಗರ: ಹೊಸನಗರ ಸರ್ಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಶೇ. 96 ಅಂಕ ಪಡೆದ ಧಾರಿಣಿ ಎಚ್‌. ಆರ್‌. ಅವರಿಗೆ ಲೆಕ್ಕಶಾಸ್ತ್ರದಲ್ಲಿ ಎಣಿಕೆ ತಪ್ಪಾಗಿರುವುದನ್ನು ಸರಿಪಡಿಸುವಂತೆ ರಾಜ್ಯ ಹೈಕೋರ್ಟ್‌ ಆದೇಶಿಸಿದ ಕಾರಣ ಪಿ.ಯು.ಬೋರ್ಡ್‌ ಎಣಿಕೆ ಸರಿಪಡಿಸಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿದೆ.

Advertisement

ಇದನ್ನೂಓದಿ·ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!

ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನಿರೀಕ್ಷಿಸಿ 99 ಅಂಕ ಪಡೆದಿದ್ದ ಧಾರಿಣಿ ಒಂದು ಅಂಕ ಎಲ್ಲಿ ತಪ್ಪಾಗಿದೆ ನೋಡಬೇಕೆಂಬ ಕಾರಣಕ್ಕೆ ಹಣ ಕಟ್ಟಿ ಉತ್ತರ ಪತ್ರಿಕೆ ತರಿಸಿದ್ದಳು. ಉತ್ತರ ಪತ್ರಿಕೆ ನೋಡಿದಾಗ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರ ಬರೆದಲ್ಲಿ ಹೆಚ್ಚು ಅಂಕ ಬಂದ ಉತ್ತರವನ್ನು ಪರಿಗಣಿಸಬೇಕೆಂಬ ನಿಯಮಕ್ಕೆ ಬದಲಾಗಿ ಕಡಿಮೆ ಅಂಕವನ್ನು ಪರಿಗಣಿಸಿದ ಪರಿಣಾಮ ನೂರರ ಬದಲು 99 ಅಂಕ ಬಂದಿತ್ತು. ಇದನ್ನು ಉಲ್ಲೇಖೀಸಿ ಸರಿಪಡಿಸುವಂತೆ ಕಾಲೇಜಿನ ಮೂಲಕವೇ ಪಿ.ಯು.ಬೋರ್ಡ್ ಮನವಿ ಮಾಡಲಾಗಿತ್ತು. ಎರಡನೇ ಬಾರಿ ನೂರರ ಬದಲು 88 ಅಂಕ ಬಂದಿತ್ತು. ಇದನ್ನು ನೋಡಿದಾಗ ಒಂದು ಉತ್ತರವನ್ನೇ ಪರಿಗಣಿಸದ ಕಾರಣ ಮತ್ತೆ ಪಿ.ಯು.ಬೋರ್ಡ್‌ಗೆ ಮನವಿ ಮಾಡಲಾಗಿತ್ತು. ಆಗಲೂ 88 ಅಂಕವೇ ಬಂತು. ಇದರ ಕುರಿತು ಕೇಳಿದಾಗ ಎರಡನೇ ಬಾರಿ ಮೂರು ಜನ ತಜ್ಞರು ಎಣಿಕೆ ಮಾಡಿದ್ದು ಅದನ್ನು ಬದಲಾಯಿಸುವಂತಿಲ್ಲವೆಂಬ ಉತ್ತರ ಬಂತು. ತೀವ್ರ ಕೋವಿಡ್‌ ಆತಂಕದ ಆ ದಿನಗಳಲ್ಲೂ ವಾಹನ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಪಿ.ಯು. ಬೋರ್ಡಿಗೆ ಸಂಬಂಧಿಸಿದ ಅಧಿ ಕಾರಿಗಳನ್ನೆಲ್ಲ ಭೇಟಿ ಆದರೂ ಎರಡನೇ ಬಾರಿ ಎಣಿಕೆ ಮಾಡಿದ ನಂತರ ಮತ್ತೆ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನು ಪ್ರಶ್ನಿಸಿ ಧಾರಿಣಿಯ ತಂದೆ ಹನಿಯ ರವಿ ಅವರು ರಾಜ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್‌ ಪೂರ್ಣ ಪರಿಶೀಲನೆಯ ನಂತರ ಎರಡು ವಾರಗಳೊಳಗೆ ಸರಿಪಡಿಸುವಂತೆ ಆದೇಶಿಸಿ ತಪ್ಪಿದ್ದಲ್ಲಿ ನಿಗದಿತ ದಿನದ ನಂತರ ವಾರಕ್ಕೆ ತಲಾ ಎರಡು ಸಾವಿರ ರೂ ನಂತೆ ಅರ್ಜಿದಾರರಿಗೆ ದಂಡ ನೀಡಬೇಕೆಂದು ಆದೇಶಿಸಿತು. ಈ ಪ್ರಕಾರ ಪಿ.ಯು. ಬೋರ್ಡ್‌ ಅಂಕವನ್ನು ಸರಿಪಡಿಸಿ ಧಾರಿಣಿಗೆ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿ ಹೊಸ ಅಂಕಪಟ್ಟಿ ನೀಡಲು ಅಣಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಧಾರಿಣಿ ನ್ಯಾಯಾಲಯ ನ್ಯಾಯ ಒದಗಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿ ತನಗೆ ಅಂಕ ವ್ಯತ್ಯಾಸ ಆದುದಕ್ಕೆ ಬೇಸರವಿಲ್ಲ. ಆದರೆ ಈ ರೀತಿ ಹೋರಾಟ ಮಾಡಲು ಸಾಧ್ಯವಾಗದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಬೇಕೆಂದರು.

ಅರ್ಜಿದಾರ ಹನಿಯರವಿ ಪ್ರತಿಕ್ರಿಯಿಸಿ ತನ್ನ ಮಗಳಿಗೆ ಅಂಕ ಹೆಚ್ಚು ಕಮ್ಮಿಯಾದರೆ ವಿದ್ಯಾಭ್ಯಾಸಕ್ಕೆ ಭಾರೀ ವ್ಯತ್ಯಾಸವೇನೂ ಆಗದು. ಆದರೆ ತಪ್ಪನ್ನು ಸರಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಧಿಕಾರಿಗಳ ಮಾತಿಗೋಸ್ಕರ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಕೆಲವೇ ಕೆಲವು ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಎಷ್ಟೋ ಪ್ರತಿಭಾವಂತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಈಗಲಾದರೂ ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಬೇಕೆಂದರು. ಅರ್ಜಿದಾರರ ಪರವಾಗಿ ಬಿ.ಎಸ್‌. ಪ್ರಸಾದ್‌ ಹನಿಯ ವಾದಿಸಿದ್ದರು.

Advertisement

ಇದನ್ನೂಓದಿಧರ್ಮಸ್ಥಳ ಗ್ರಾಮಾಭಿವೃದ್ಧಿ ಜನಸೇವಾ ಯೋಜನೆ·:

Advertisement

Udayavani is now on Telegram. Click here to join our channel and stay updated with the latest news.

Next