Advertisement

ರಾಜ್ಯದ ಶ್ರಮಿಕರ ಸಂಕ್ಷೇಮಕ್ಕೆ 100 ಸಂಚಾರಿ ಕ್ಲಿನಿಕ್ : ಸಚಿವ ಹೆಬ್ಬಾರ್ ಹರ್ಷ

10:15 PM Dec 22, 2022 | Team Udayavani |

ಬೆಳಗಾವಿ: ರಾಜ್ಯದ ಶ್ರಮಿಕ ವರ್ಗದ ಆರೋಗ್ಯ ಸುಧಾರಣೆಗಾಗಿ ಕಾರ್ಮಿಕ ಇಲಾಖೆ ಈಗಾಗಲೇ ಜಾರಿ ಮಾಡಿರುವ ಸಂಚಾರಿ ಕ್ಲಿನಿಕ್ ಯೋಜನೆಯಡಿ 100 ಹೈಟೆಕ್ ಸಂಚಾರಿ ಕ್ಲಿನಿಕ್‍ಗಳ ಸೇರ್ಪಡೆಗೆ ಗುರುವಾರ ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಪ್ರಸ್ತುತ ರಾಜ್ಯದಲ್ಲಿ 35.40 ಲಕ್ಷ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಕೊಂಡಿದ್ದು, ಶ್ರಮಿಕರು ತಮ್ಮ ಕೆಲಸದ ಒತ್ತಡ ಮತ್ತು ಸಮಯಾಭಾವದಿಂದ ಹಾಗೂ ಶ್ರಮಿಕ ವರ್ಗದ ಕುಟುಂಬದವರು ಆರ್ಥಿಕ ಹೊರೆ ಕಾರಣಗಳಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ, ಹೀಗಾಗಿ ಶ್ರಮಿಕರ ಮತ್ತು ಅವರ ಕುಟುಂಬ ವರ್ಗದವರಿಗೆ ಹೈಟೆಕ್ ಆರೋಗ್ಯ ಸೇವೆಗಳು ಅವರಿದ್ದೇಡೆಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೈಟೆಕ್ ಸಂಚಾರಿ ಕ್ಲಿನಿಕ್ ಸೇವೆ ಆರಂಭಿಸಿದ್ದು, ಈ ಸೇವೆಯನ್ನು ಇನ್ನಷ್ಟು ಶ್ರಮಿಕರಿಗೆ ತಲುಪಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇನ್ನೂ 100 ಹೈಟೆಕ್ ಸಂಚಾರಿ ಕ್ಲಿನಿಕ್‍ಗಳ ಸೇರ್ಪಡೆಗೆ ಸಮ್ಮತಿ ದೊರಕಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರು ಮತ್ತು ಅವರ ಅವಲಂಭಿತರ ಕಲ್ಯಾಣಕ್ಕಾಗಿ 19 ವಿವಿಧ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ ನೊಂದಾಯಿತ ಕಾರ್ಮಿಕರ ಪೈಕಿ 10,704 ಕಾರ್ಮಿಕರಿಗೆ ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ ಮತ್ತು 2,434 ಕಾರ್ಮಿಕರಿಗೆ ವೈದ್ಯಕೀಯ ವೆಚ್ಚದ ಸಹಾಯಧನ ಒದಗಿಸಲಾಗಿದೆ ಎಂದು ತಿಳಿಸಿರುವ ಕಾರ್ಮಿಕ ಸಚಿವರು, ಜಾಗತಿಕ ಸಾಂಕ್ರಾಮಿಕ ಕೋವಿಡ್-19ರ ನಂತರ ಶ್ರಮಿಕ ವರ್ಗದ ಆರೋಗ್ಯ ಮತ್ತು ಉತ್ತಮ ಚಿಕಿತ್ಸೆ ಬಗ್ಗೆ ಕಾಳಜಿವಹಿಸಬೇಕಾದ ಅನಿವಾರ್ಯತೆ ಇದ್ದು, ಇದಕ್ಕಾಗಿ ಇಲಾಖೆಯು ಶ್ರಮಿಕರು ಕೆಲಸ ನಿರ್ವಹಿಸುವ ಸ್ಥಳಗಳಿಗೇ ತೆರಳಿ ಅಗತ್ಯ ಪರೀಕ್ಷೆ, ವರದಿ, ಚಿಕಿತ್ಸೆ ನೀಡುವಂತಹ ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡಿದ್ದು, ಈಗಾಗಲೇ 35 ಸಂಚಾರಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸಚಿವ ಸಂಪುಟ ಇನ್ನೂ 100 ಹೈಟೆಕ್ ಸಂಚಾರಿ ಕ್ಲಿನಿಕ್‍ಗಳಿಗೆ ಅನುಮೋದನೆ ನೀಡುವ ಮೂಲಕ ಇನ್ನಷ್ಟು ಶ್ರಮಿಕರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಸಚಿವ ಹೆಬ್ಬಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next