Advertisement

Karnataka ಗ್ರಾಮಗಳಲ್ಲಿ 100 ಕಟ್ಟೆ ಪಂಚಾಯತ್‌ಗೆ ಅಸ್ತು

01:21 AM Jul 05, 2024 | Team Udayavani |

ಬೆಂಗಳೂರು: ಇನ್ನು ಮುಂದೆ ಸಣ್ಣ ಪುಟ್ಟ ವ್ಯಾಜ್ಯಗಳೆಲ್ಲ ನಿಮ್ಮೂರಿನ ಕಟ್ಟೆ ಪಂಚಾಯತ್‌ಗಳಲ್ಲೇ ಇತ್ಯರ್ಥವಾಗಲಿವೆ!

Advertisement

ನ್ಯಾಯಕ್ಕಾಗಿ ಕೋರ್ಟ್‌ಗಳಿಗೆ ಅಲೆಯುವ ಬದಲಿಗೆ ಜನರ ಮನೆಬಾಗಿಲಿಗೆ ನ್ಯಾಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾ ಲಯದಂತಹ ವಿನೂತನ ಪರಿಕಲ್ಪನೆ ಜಾರಿಗೆ ಮುಂದಾಗಿರುವ ಸರಕಾರ, “ಕಾನೂನು ಮತ್ತು ನೀತಿ-2023′ ರೂಪಿಸಿದೆ. ಇದಕ್ಕೆ ಗುರುವಾರ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಕಾನೂನು ಮತ್ತು ನೀತಿಯಡಿ ಮುಖ್ಯವಾಗಿ ಗ್ರಾಮದತ್ತ ನ್ಯಾಯದಾನ ವ್ಯವಸ್ಥೆ ತರುವುದಾಗಿದೆ.

ಪ್ರತೀ ಜಿಲ್ಲೆಯ ಆಯ್ದ 2-3 ಹಳ್ಳಿಗಳಲ್ಲಿ ಜೆಎಂಎಫ್ಸಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗು ತ್ತದೆ. ಪ್ರಸ್ತುತ ಜೆಎಂಎಫ್ಸಿ ನ್ಯಾಯಾ ಲಯಗಳಲ್ಲಿ ಇರುವಂತೆಯೇ ಗ್ರಾಮಗಳಲ್ಲೂ ನ್ಯಾಯಾಧೀಶರನ್ನು ನೇಮಿಸ ಲಾಗುತ್ತದೆ. ಅಲ್ಲಿ ಸಾಧ್ಯವಾದಷ್ಟು ವ್ಯಾಜ್ಯಗಳನ್ನು ರಾಜಿ-ಸಂಧಾನಗಳ ಮೂಲಕವೇ ಬಗೆಹರಿಸಲಾಗುತ್ತದೆ. ಒಟ್ಟು 100 ಗ್ರಾಮ ನ್ಯಾಯಾ ಲಯಗಳನ್ನು ಸ್ಥಾಪಿಸುವ ಗುರಿಯನ್ನು ಸರಕಾರ ಹೊಂದಿದೆ. ಇದು ಗ್ರಾಮ ನ್ಯಾಯಾಲಯ ಕಾಯ್ದೆಯ ಭಾಗವಾಗಿದೆ ಎಂದರು.

ತ್ವರಿತ ನ್ಯಾಯ ಒದಗಿಸುವುದು, ಆ ಮೂಲಕ ವ್ಯಾಜ್ಯಮುಕ್ತ ಗ್ರಾಮ ನಿರ್ಮಾಣದ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ, ಹೊಸ ತಾಲೂಕುಗಳಲ್ಲಿ ನ್ಯಾಯಾಲ ಯಗಳ ಸ್ಥಾಪನೆ, ನ್ಯಾಯಾಂಗದ ಮೂಲಸೌಕರ್ಯ ನವೀಕರಣ, ಆಧುನೀಕರಣ ಮತ್ತು ತಂತ್ರಜ್ಞಾನ ಬಳಕೆ, “ನಾಗರಿಕ ಸ್ನೇಹಿ’ ಆಡಳಿತ ಸಹಿತ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಲು ಸರಕಾರ ಉದ್ದೇಶಿಸಿದೆ.

Advertisement

ಕಾನೂನು ಮತ್ತು ನೀತಿ ಅಡಿ ನ್ಯಾಯಿಕ ಮೂಲಸೌಕರ್ಯ ನವೀಕರಣಕ್ಕಾಗಿಯೇ ಸರಕಾರವು ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಇಚ್ಛಾಶಕ್ತಿ ವ್ಯಕ್ತಪಡಿಸಿದೆ. ಇದರಲ್ಲಿ ವಕೀಲರು, ಅಭಿಯೋಜಕರು, ಕಕ್ಷಿದಾರರಿಗೆ ಮೂಲಸೌಲಭ್ಯ ಕಲ್ಪಿಸುವುದು, ಸಂಧಾನ, ಮಾತುಕತೆ ಮತ್ತಿತರ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳನ್ನು ನಿರ್ವಹಿಸಲು ಹೆಚ್ಚುವರಿ ಮೂಲಸೌಕರ್ಯ ಸೃಷ್ಟಿಸುವುದು, ತಂತ್ರಜ್ಞಾನಗಳ ಅಳವಡಿಕೆ ಮತ್ತಿತರ ಅಂಶಗಳು ಒಳಗೊಂಡಿವೆ.

ಏನಿದು ಗ್ರಾಮ ನ್ಯಾಯಾಲಯ?
-ಕಟ್ಟೆ ಪಂಚಾಯತ್‌ ರೀತಿಯಲ್ಲಿ ಗ್ರಾಮಗಳಲ್ಲಿ ಕೋರ್ಟ್‌ಗಳನ್ನು ಸ್ಥಾಪಿಸಲಾಗುತ್ತದೆ.
-ಪ್ರತೀ ಜಿಲ್ಲೆಯ ಆಯ್ದ 2-3 ಹಳ್ಳಿಗಳಲ್ಲಿ ಈ ನ್ಯಾಯಾಲಯಗಳು ತಲೆ ಎತ್ತಲಿವೆ.
-ಈ ಗ್ರಾಮಗಳಲ್ಲೂ ನ್ಯಾಯಾಧೀಶ ರನ್ನು ನೇಮಕ ಮಾಡಲಾಗುತ್ತದೆ
-ಇಲ್ಲಿ ಸಾಧ್ಯವಾದಷ್ಟು ವ್ಯಾಜ್ಯಗಳನ್ನು ರಾಜಿ-ಸಂಧಾನಗಳ ಮೂಲಕವೇ ಬಗೆಹರಿಸಲಾಗುತ್ತದೆ.
-ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಮತ್ತು ತ್ವರಿತ ನ್ಯಾಯದಾನ ಇದರ ಮುಖ್ಯ ಉದ್ದೇಶ

ಗ್ರಾಮ ನ್ಯಾಯಾಲಯದ ಕಾರ್ಯಾಚರಣೆ ಹೇಗೆ?
– ಆಯ್ಕೆಯಾದ ಗ್ರಾಮಗಳಿಗೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಮೀಕ್ಷೆ
-ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಪ್ರಕರಣಗಳ ಮೇಲ್ವಿಚಾರಣೆ
– ಸರಳ ಭಾಷೆಯಲ್ಲಿ ಕಾನೂನುಗಳ ರಚನೆ ಮತ್ತು ಪ್ರಕಟನೆ
– ಸಾರ್ವಜನಿಕ ಕಾನೂನು ಶಿಕ್ಷಣಕ್ಕಾಗಿ ಪೂರಕ ಕ್ರಮ
-ಕಾನೂನು ಶಿಕ್ಷಣಕ್ಕಾಗಿ ವಕೀಲರ ಅಕಾಡೆಮಿ ಸ್ಥಾಪನೆ
– ಅಗತ್ಯ ಇರುವ ಕಡೆ ಮಾದರಿ ನ್ಯಾಯಾಲಯಗಳ ಸ್ಥಾಪನೆ
-ಹದಿಹರೆಯದವರು ಇಂಟರ್‌ನೆಟ್‌ ವ್ಯಸನಿಗಳಾಗದಂತೆ ಸೂಕ್ತ ನೀತಿ ನಿರೂಪಣೆ
-ಕೆಲವು ಚಟುವಟಿಕೆಯನ್ನು ನಿಷೇಧಿಸಲು ಕಾನೂನು ಜಾರಿ ಬಗ್ಗೆ ಚಿಂತನೆ

ಏಕೆ ಗ್ರಾಮ ನ್ಯಾಯಾಲಯ?
-ನ್ಯಾಯ “ದಾನ’ವಲ್ಲ. ಅದು ಸಾಂವಿಧಾನಿಕ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ 100 ಗ್ರಾಮ ನ್ಯಾಯಾಲಯಗಳ ಸ್ಥಾಪನೆ.
-ನ್ಯಾಯಿಕ ಮೂಲಸೌಕರ್ಯ ನವೀಕರಣಕ್ಕೆ 2 ಸಾವಿರ ಕೋಟಿ ರೂ. ಹೂಡಿಕೆಗೆ ಇಚ್ಛಾಶಕ್ತಿ
– ಎಲ್ಲ ಹೊಸ ತಾಲೂಕುಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ

ಇಲಾಖೆಗಳಿಗೂ ಕಾನೂನು!
ಸರಕಾರಿ ನಿಯಮಾವಳಿಗಳಡಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸು
ವಂತೆ ಮಾಡಲು ಹೊಸ ನೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಪ್ಪಿದರೆ ಸಂಬಂಧಪಟ್ಟ ಅಧಿಕಾರಿ ಹೊಣೆಗಾರನಾಗಿರುತ್ತಾರೆ. ಅಧಿಕಾರಿಗಳು ಕಾನೂನಿಗೆ ಬದ್ಧರಾಗಿರಲು ಮತ್ತು ವೈಫ‌ಲ್ಯದ ಸಂದರ್ಭದಲ್ಲಿ ಅನುಸರಿಸಬಹುದಾದ ಪರಿಣಾಮಗಳನ್ನು ಎದುರಿಸಲು ಸೂಕ್ತ ಕಾನೂನು ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡ “ಕಾನೂನು ಮತ್ತು ನೀತಿ- 2023’ರಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ನ್ಯಾಯದಾನ ಮಾಡಬೇಕು ಎನ್ನುವುದು ಕಾನೂನು ಇಲಾಖೆಯ ಇಚ್ಛೆ. ಇದಕ್ಕಾಗಿ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕಟ್ಟೆ ಪಂಚಾಯತ್‌ ಮಾದರಿಯಲ್ಲಿ ಗ್ರಾಮ ನ್ಯಾಯಾಲಯದ ವ್ಯವಸ್ಥೆ ತರಲಾಗುತ್ತದೆ. ಜಿಲ್ಲಾ ನ್ಯಾಯಾಧೀಶರೇ ಅದನ್ನು ನಡೆಸುತ್ತಾರೆ. ರಾಜಿ-ಸಂಧಾನದ ಮೂಲಕ ಶೀಘ್ರ ನ್ಯಾಯದಾನ ಮಾಡಲಾಗುತ್ತದೆ.
-ಡಾ| ಪರಮೇಶ್ವರ್‌, ಗೃಹ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next