Advertisement

ಅವ್ಯವಸ್ಥೆ, ಗೊಂದಲಗಳ ನಡುವೆಯೂ ದಸರೆಗೆ ತೆರೆ

01:43 PM Oct 07, 2022 | Team Udayavani |

ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವ ಅವ್ಯವಸ್ಥೆ, ಗೊಂದಲ ಹಾಗೂ ಅಪಸ್ವರಗಳ ನಡುವೆಯೂ ಲಕ್ಷಾಂತರ ಮಂದಿಯ ಉಪಸ್ಥಿತಿಯಲ್ಲಿ ತೆರೆಕಂಡಿತು. ಆ.7ರಲ್ಲಿ ನಡೆದ ಗಜಪಯಣದ ಮೂಲಕ ಆರಂಭವಾದ ದಸರಾ ಸಿದ್ಧತೆಯಿಂದ ಜಂಬೂ ಸವಾರಿವರೆಗೆ ಅಲ್ಲಲ್ಲಿ ಗೊಂದಲ, ಅವ್ಯವಸ್ಥೆ ಹಾಗೂ ಕಾರ್ಯಕ್ರಮಗಳ ಬೇಕಾಬಿಟ್ಟಿ ಆಯೋಜನೆ ದಸರಾ ಉತ್ಸವದ ಘನತೆಗೆ ಕುಂದುಂಟು ಮಾಡಿದ ಪ್ರಸಂಗಗಳು ಕಂಡುಬಂದರೂ ಯಾವುದೇ ಅಡ್ಡಿ ಇಲ್ಲದೆ, ಅದ್ಧೂರಿಯಾಗಿ ತೆರೆಕಂಡಿತು.

Advertisement

ವೀರನಹೊಸಹಳ್ಳಿಯಲ್ಲಿ ಆ.7ರಂದು ನಡೆದ ಗಜಪಯಣದಲ್ಲಿ ಅರಣ್ಯ ಸಚಿವರಾಗಿದ್ದ ದಿವಂಗತ ಉಮೇಶ್‌ ಕತ್ತಿ ಅವರು ಶೂ ಧರಿಸಿಯೇ ಪೂಜೆಯಲ್ಲಿ ಭಾಗವಹಿಸಿ ವಿವಾದಕ್ಕೆ ಕಾರಣರಾದರು. ನಂತರ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಆದರೆ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಿಂದ ಸ್ಥಳೀಯ ಶಾಸಕರನ್ನು ಹಾಗೂ ನಗರದ ಪ್ರಥಮ ಪ್ರಜೆಯಾದ ಮಹಾನಗರ ಪಾಲಿಕೆ ಮೇಯರ್‌ ಅವರನ್ನು ದೂರ ಇಡಲಾಗಿತ್ತು. ಇದು ಮೈಸೂರಿಗರ ಕೆಂಗಣ್ಣಿಗೆ ಗುರಿಯಾಯಿತಲ್ಲದೇ, ಪಕ್ಷದಲ್ಲೇ ಕೆಲವರ ಅಸಮಾಧಾನಕ್ಕೆ ಕಾರಣವಾಯಿತು.

ಕಾರ್ಯಕ್ರಮಗಳ ಬೇಕಾಬಿಟ್ಟಿ ಆಯೋಜನೆ: ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ಆಯೋಜನೆಗೆ ಸರ್ಕಾರ ತೀರ್ಮಾನಿಸಿದರೂ, ನವರಾತ್ರಿಗೆ ಹದಿನೈದು ದಿನಗಳಷ್ಟೇ ಬಾಕಿ ಇದೆ ಎನ್ನುವಾಗ ಎಲ್ಲಾ ಉಪಸಮಿತಿಗಳಿಗೆ ಅಧಿಕಾರಿಗಳನ್ನಷ್ಟೇ ನೇಮಕ ಮಾಡಲಾಯಿತು. ಬಳಿಕ ದಸರಾ ಉದ್ಘಾಟನೆಗೆ ಎರಡು ದಿನ ಎನ್ನುವಾಗ ಅಧಿಕಾರೇತರ ಪದಾಧಿಕಾರಿಗಳನ್ನು ನೇಮಕ ಮಾಡಿದ್ದರಿಂದ ಅಧಿಕಾರಿಗಳು ಯುವ ಸಂಭ್ರಮ, ಯುವ ದಸರಾ, ದಸರಾ ಕ್ರೀಡಾಕೂಟ,
ಆಹಾರ ಮೇಳ, ಕವಿಗೋಷ್ಠಿಯಂತ ಹಲವು ಕಾರ್ಯಕ್ರಮಗಳನ್ನು ಯಾವುದೇ ಪೂರ್ವ ತಯಾರಿ ಇಲ್ಲದೇ, ನುರಿತ ತಜ್ಞರ ಸಲಹೆ ಇಲ್ಲದೇ ಬೇಕಾಬಿಟ್ಟಿ ಆಯೋಜನೆ ಮಾಡಿದ್ದು ಹಲವು ಗೊಂದಲಗಳಿಗೆ ಕಾರಣವಾಯಿತು. ಪರಿಣಾಮ ದಸರೆಯ ಯಾವೊಂದು ಕಾರ್ಯಕ್ರಮವೂ ಗುಣಮಟ್ಟದಿಂದ ಕೂಡರಲಿಲ್ಲ ಎಂಬ ಅಪಸ್ವರ ಜನಸಾಮಾನ್ಯರಿಂದ ಕೇಳಿಬಂದಿತು.

ವಿವಾದಕ್ಕೀಡಾದ ಕವಿಗೋಷ್ಠಿ: ದಸರಾ ಉತ್ಸವದ ಪ್ರಮುಖ ಭಾಗವಾದ ಕವಿಗೋಷ್ಠಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿವಾದಕ್ಕೀಡಾಯಿತು. ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮೃತರ ಹೆಸರು, ಸಂಘಟಕರ ಹೆಸರು ಸೇರಿಸಲಾಗಿತ್ತು. ಜತೆಗೆ, ಸಂಸದರ ಕ್ಷೇತ್ರವನ್ನೇ ಬದಲಿಸಲಾಗಿತ್ತು. ಇದಿಷ್ಟೇ ಅಲ್ಲದೇ ಅನುಮತಿ ಪಡೆಯದೆ ಕವಿಗಳ ಹೆಸರು ಹಾ ಕಲಾಗಿತ್ತು. ಈ ಮೂಲಕ ದಸರಾ ಕವಿಗೋಷ್ಠಿಗಿದ್ದ ಘನತೆ ಮಣ್ಣುಪಾಲಾಯಿತು.

ಅಸಮರ್ಪಕ ದೀಪಾಲಂಕಾರ: ಅದ್ಧೂರಿ ದಸರಾ ಉತ್ಸವ ಆಚರಣೆ ಮಾಡದರೂ ಸೆಸ್ಕ್ ನಿಂದ ಮಾಡಿದ್ದ 124 ಕಿ.ಮೀ. ದೀಪಾಲಂಕಾರ ಅಸಮರ್ಪಕದಿಂದ ಕೂಡಿದ್ದಲ್ಲದೇ ಬೇಕಾಬಿಟ್ಟಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾಲಂಕಾರ ವ್ಯವಸ್ಥೆ ಆಕರ್ಷಣೀಯವಾಗಿರಲಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತು.

Advertisement

ಪೊಲೀಸ್‌ ಬಂದೋಬಸ್ತ್ ವಿಫ‌ಲ: ದಸರೆಯ ಅಂತಿಮ ದಿನವಾದ ವಿಜಯ ದಶಮಿಯಂದು ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರೂ, ಅರಮನೆ ಮತ್ತು ಮೆರವಣಿಗೆ ಸಾಗುವ ರಾಜ ಮಾರ್ಗದಲ್ಲಿ ಸಾವಿರಾರು ಜನರ ಮೆರವಣಿಗೆ ಮಧ್ಯೆ ನುಸುಳಿ ಗೊಂದಲವುಂಟುಮಾಡಿದ ಪ್ರಸಂಗ ನಡೆಯಿತು. ಅದೃಷ್ಟವಶಾತ್‌ ಈ ವೇಳೆ ಯಾವ ಅಪಾಯಗಳು ಸಂಭವಿಸಲಿಲ್ಲ. ಬ್ಯಾರಿಕೆಡ್‌ ದಾಟಿ ಜನರು ಮೆರವಣಿಗೆ ಮಧ್ಯಕ್ಕೆ ಆಗಮಿಸಿದರೂ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದು ಕಂಡುಬಂದಿತು.

ಖ್ಯಾತ ಕಲಾವಿದರ ಕೊರತೆ: ನವರಾತ್ರಿ ಆರಂಭಕ್ಕೆ ಎರಡು ದಿನ ಬಾಕಿ ಇರುವಂತೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಯಿತಲ್ಲದೆ, ಕಲಾವಿದರ ಆಯ್ಕೆಯೂ ಅಸ್ಪಷ್ಟವಾಗಿತ್ತು. ಸಾಂಸ್ಕೃತಿಕ ಲೋಕದಲ್ಲಿ ಖ್ಯಾತಿಗಳಿಸಿದ ಅರಮನೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಕಳಪೆಯಾಗಿತ್ತು. ಅಂತಾರಾಷ್ಟ್ರೀಯ, ರಾಷ್ಟ್ರೀಯ ಸೇರಿದಂತೆ ಪ್ರಮುಖ ಕಲಾವಿದರ ಕೊರತೆ ಎದ್ದುಕಂಡಿತು.

ಜತೆಗೆ ಯುವ ದಸರಾ ಉದ್ಘಾಟನೆಗೆ ನಿಗದಿಯಂತೆ ನಟ ಸುದೀಪ್‌ ಅವರನ್ನು ಕರೆತರಲು ಆಗಲಿಲ್ಲ. ಹೀಗಾಗಿ, 7 ದಿನದ ಯುವ ದಸರಾವನ್ನು 6 ದಿನಕ್ಕೆ ಕಡಿತಗೊಳಿಸಲಾಯಿತು. ಕೊನೆ ವರೆಗೂ ಕಲಾವಿದರನ್ನು ಅಂತಿಮವಾಗಿರಲಿಲ್ಲ. ಕಾರಣ ತಿಳಿಸದೆ ಗಾಯಕ ರಘು ದೀಕ್ಷಿತ್‌ ಸಂಗೀತ ಕಾರ್ಯಕ್ರಮವನ್ನು ಕೈಬಿಡಲಾಯಿತು. ಸನ್ಮಾನ, ಸಚಿವರ ಭಾಷಣ ಕಿರಿಕಿರಿ ಸಂಗೀತ ರಸಿಕರಿಗೆ ರಸಭಂಗ ಉಂಟು ಮಾಡಿತು.

ಹೊರಗಿನವರಿಗಿಲ್ಲ ಅವಕಾಶ: ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮೇಳದಲ್ಲಿ ಬಹುಪಾಲು ಮಳಿಗೆಗಳು ಸ್ಥಳೀಯ ವ್ಯಾಪಾರಿಗಳಿಮದಲೇ ತುಂಬಿ ಹೋಗಿತ್ತು. ರಾಜ್ಯದ ವಿವಿಧ ಭಾಗದ ತಿನಿಸುಗಳು, ಹೊರ ರಾಜ್ಯದ ಆಹಾರ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಆಹಾರ ಮೇಳ ವಿಫ‌ಲವಾಯಿತು.

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next