ಮಂಡ್ಯ: ದೇವಸ್ಥಾನದ ಎದುರು ನಿಂತು ನಾನು ಮಾತನಾಡುತ್ತಿದ್ದೇನೆ. ಗಣಿ ಮಾಲೀಕರಿಂದ ನಾನು ಒಂದೇ ಒಂದು ರೂಪಾಯಿ ಪಡೆದಿಲ್ಲ. ಹೀಗೆಂದು ಹೇಳಿದವರು ಬೇರಾರೂ ಅಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ. ಕೆ.ಆರ್.ಪೇಟೆ ತಾಲೂಕಿನ ಸಾಸಲು ಸೋಮೇಶ್ವರ ದೇವಾಲಯಕ್ಕೆ ಆಗಮಿ ಸಿದ್ದ ವೇಳೆ ಬೇಬಿ ಗ್ರಾಮಸ್ಥರು ಅವರನ್ನು ಭೇಟಿ ಮಾಡಿ ಮಾತನಾಡಿಸಿದರು.
ಬೇಬಿ ಬೆಟ್ಟ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಪಾಯವಾಗುತ್ತಿದೆ. ಗಣಿ ಮಾಲೀಕರು, ನಾವು ವಿಜಯೇಂದ್ರ ಅವರ ಜೊತೆ ಮಾತನಾಡಿದ್ದೇವೆ. 8ರಿಂದ 10 ಕೋಟಿ ರೂ. ಹಣ ಕೊಟ್ಟಿದ್ದೇವೆ. ಜೂ.15ರಿಂದ ಗಣಿಗಾರಿಕೆ ನಡೆಸುವಂತೆ ಸೂಚನೆ ಸಿಕ್ಕಿದೆ ಎಂದು ಹೇಳುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಂತೆ ಕಾರಿನಲ್ಲೇ ಕುಳಿತು ನಾನು ಗಣಿ ಮಾಲೀಕರಿಂದ ಒಂದೇ ಒಂದು ರೂಪಾಯಿ ಪಡೆದಿಲ್ಲವೆಂದು ದೇವರ ಎದುರು ಪ್ರಮಾಣ ಮಾಡಿದರು.
ನಿಮ್ಮ ಹೆಸರಿಗೆ ಕಳಂಕ: ಕೆಆರ್ಎಸ್ ಅಣೆ ಕಟ್ಟು ಸುರಕ್ಷತೆ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ, ನಿಷೇಧಾಜ್ಞೆ ತೆರವುಗೊಳಿಸಲು ನಿಮಗೆ ಲಂಚ ಕೊಟ್ಟಿರುವ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ನಿಮ್ಮ ಹೆಸರಿಗೆ ಕಳಂಕ ತರುತ್ತಿದ್ದಾರೆ. ನಮಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುವುದಾಗಿ ತಿಳಿಸಿದರು.
ಕಲ್ಲು ಸಾಗಣೆಗೆ ಕುಮ್ಮಕ್ಕು: ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಹಾಗೂ ಸಿಪಿಐ ರವೀಂದ್ರ ಅವರು ಗಣಿ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ. ಇವರಿಬ್ಬರೂ ಜೆಡಿಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಾತ್ರಿ ವೇಳೆ ಕಲ್ಲು ಸಾಗಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗಣಿ ಸ್ಥಳಗಳಿಗೆ ಹೋಗದಂತೆ ಪೊಲೀಸರಿಗೆ ನಿರ್ಬಂಧ ಹಾಕಿದ್ದಾರೆ. ಮಠದ ಬಳಿ ಪೊಲೀಸರು ಕಾವಲಿದ್ದು, ಊಟ ಮಾಡಿಕೊಂಡು ಸುಮ್ಮನಿರಿ. ಗಣಿ ಸ್ಥಳಕ್ಕೆ ನೀವು ಏಕೆ ಹೋಗುವಿರಿ, ಅಲ್ಲೆಲ್ಲಾ ಗಸ್ತು ತಿರುಗದಂತೆ ಸೂಚನೆ ನೀಡಿದ್ದಾರೆ. ಅಪ್ಪಾಜಿ (ಯಡಿಯೂರಪ್ಪ)ಅವರಿಗೆ ಹೇಳಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಗಣಿಗಾರಿಕೆ ನಿಷೇಧಿಸಲು ಆಗ್ರಹ: ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆ ಯುವಂತೆ ಸಿಎಂ ಯಡಿಯೂರಪ್ಪ ಅವರ ನ್ನೂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಷಯವನ್ನು ತಾವೂ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ಕೃಷ್ಣರಾಜ ಸಾಗರ ಅಣೆಕಟ್ಟು ಸುತ್ತ ಗಣಿಗಾರಿಕೆ ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.