Advertisement

1.83 ಲಕ್ಷ ಹೆಕ್ಟೇರ್‌ ಮುಂಗಾರು ಬೆಳೆಹಾನಿ

01:08 PM Oct 21, 2021 | Team Udayavani |

ಬೀದರ: ಧರಿನಾಡು ಬೀದರನಲ್ಲಿ ಆರ್ಭಟಿಸಿರುವ ಮುಂಗಾರು ಮಳೆ ಬೆಳೆಯನ್ನಷ್ಟೇ ಅಲ್ಲ ರೈತರ ಬದುಕನ್ನು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ.

Advertisement

ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಪ್ರಕಾರ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆ, ‘ಮಹಾ’ ನೀರಿನ ಕಂಟಕದಿಂದ 1.83 ಲಕ್ಷ ಹೆಕ್ಟೇರ್‌ ಬೆಳೆ ನೀರು ಪಾಲಾಗಿದ್ದು, ನೆರವಿಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಬಿಸಿಲೂರಿನ ಅನ್ನದಾತರು ಕಳೆದೆರಡು ವರ್ಷದಿಂದ ವರುಣನ ಅವಕೃಪೆಗೆ ಒಳಗಾಗುತ್ತಿದ್ದು, ಅಕ್ಷರಶಃ ನಲುಗಿ ಹೋಗಿದ್ದಾರೆ.

ಒಂದೆಡೆ ಎಡಬಿಡದೇ ಮಳೆ ಸುರಿದಿದ್ದರೆ, ಮತ್ತೂಂದೆಡೆ ಮಹಾರಾಷ್ಟ್ರದ ಧನೇಗಾಂವ್‌ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು ಮಾಂಜ್ರಾ ನದಿಗೆ ಹರಿಬಿಟ್ಟಿರುವುದರಿಂದ ಕಟಾವಿಗೆ ಬಂದಿದ್ದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಕೃಷಿಕರನ್ನು ಕೋಟ್ಯಂತರ ರೂಪಾಯಿ ನಷ್ಟಕ್ಕೆ ಸಿಲುಕಿಸಿದೆ.

ಜಿಲ್ಲಾದ್ಯಂತ ಈ ಹಿಂದೆ ಸುರಿದ ಮಳೆಗೆ ಸಮೃದ್ಧವಾಗಿ ಬೆಳೆದಿದ್ದ ಉದ್ದು ಮತ್ತು ಹೆಸರು ಬೆಳೆ ಹಾನಿಗೀಡಾಗಿತ್ತು. ನಂತರ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬೀನ್‌ ನೀರು ಪಾಲಾಗಿದೆ. ಕಟಾವು ಮಾಡಿ ಕೂಡಿಟ್ಟಿದ್ದ ಬೆಳೆ ಕೊಳೆತು ಹೋಗುತ್ತಿದ್ದರೆ, ಇನ್ನೂ ಕೆಲವೆಡೆ ಭೂಮಿಯಲ್ಲಿನ ತೇವಾಂಶದಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲ ಸೂಲ ಮಾಡಿ ಭೂಮಿಗೆ ಸಾವಿರಾರು ರೂ. ಹಾಕಿದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

Advertisement

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೀದರ ಜಿಲ್ಲೆಯಲ್ಲಿ ಕಳೆದ ಜನವರಿ 1ರಿಂದ ಅಕ್ಟೋಬರ್‌ 20ರವರೆಗೆ 882 ಮಿ.ಮೀ. (795 ಮಿ.ಮೀ.) ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ 1,83,660 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಆಗಿದ್ದು, ಅ.18ರಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ನಷ್ಟದ ಬಗ್ಗೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹಾನಿಯಾದ ಬೆಳೆಗಳ ಪೈಕಿ ಸೊಯಾಬಿನ್‌ ಅತಿ ಹೆಚ್ಚು 1,01,981 ಹೆಕ್ಟೇರ್‌ ಪ್ರದೇಶ ಸೇರಿದೆ. ಇನ್ನುಳಿದಂತೆ 60,502 ಹೆಕ್ಟೇರ್‌ ತೊಗರಿ, 9882 ಹೆಕ್ಟೇರ್‌ ಹೆಸರು, 8551 ಹೆಕ್ಟೇರ್‌ ಉದ್ದು, 2054 ಹೆಕ್ಟೇರ್‌ ಕಬ್ಬು ಮತ್ತು 688 ಹೆಕ್ಟೇರ್‌ ಇತರೆ ಬೆಳೆಗಳು ಹಾನಿಯಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

 “ನೆರೆ ಪೀಡಿತ ಜಿಲ್ಲೆ ಘೋಷಿಸಿ”

ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್‌ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸಿದೆ. ಬೆಳೆಹಾನಿ ಸಮೀಕ್ಷೆ ವರದಿ ಸಲ್ಲಿಸಿ ಎರಡು ದಿನ ಕಳೆದಿದ್ದು, ಯಾವಾಗ ಪರಿಹಾರ ಸಿಗುತ್ತದೇ ಕಾದು ನೋಡಬೇಕಿದೆ. ಇನ್ನೂ ಬೀದರನ್ನು ನೆರೆ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಕೃಷಿಕರ ಒತ್ತಾಯ ಇದ್ದು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ.

-ಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next