Advertisement

2022ರ ಅಂತ್ಯಕ್ಕೆ ದೇಶಾದ್ಯಂತ 1.5 ಲಕ್ಷ ಆಯುಷ್ಮಾನ್‌ ಆರೋಗ್ಯ ಕೇಂದ್ರ

10:21 AM Feb 26, 2020 | Lakshmi GovindaRaj |

ಬೆಂಗಳೂರು: 2022ರ ಅಂತ್ಯಕ್ಕೆ ರಾಜ್ಯದ 9 ಸಾವಿರ ಆರೋಗ್ಯ ಕೇಂದ್ರಗಳನ್ನು ಸೇರಿದಂತೆ ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು “ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ವಿಕಾಸ್‌ ಶೀಲ್‌ ತಿಳಿಸಿದರು.

Advertisement

ಸೋಮವಾರ ನಗರದ ಐಎಎಸ್‌ ಆಫೀಸರ್ ಅಸೋಸಿ ಯೇಷನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2018ರಿಂದ ದೇಶದೆಲ್ಲೆಡೆ ಉಪ-ಕೇಂದ್ರಗಳು (5 ಸಾವಿರ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶ ಆರೋಗ್ಯ ಕೇಂದ್ರ), ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು “ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.

ಸದ್ಯ ದೇಶಾದ್ಯಂತ 30,690 ಸಾವಿರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಸಂಖ್ಯೆಯನ್ನು 2021ರಲ್ಲಿ 70 ಸಾವಿರ, 2022 ಮಾರ್ಚ್‌ಗೆ 1.1 ಲಕ್ಷ , 2022 ಡಿಸೆಂಬರ್‌ ಅಂತ್ಯಕ್ಕೆ 1.5 ಲಕ್ಷಕ್ಕೇರಿಸಲಾಗುವುದು. ಅಂತೆಯೇ ಕರ್ನಾಟಕದಲ್ಲಿ ಈಗಾಲೇ 1,930 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಸಂಖ್ಯೆಯನ್ನು 9 ಸಾವಿರಕ್ಕೇರಿಸಲಾಗುವುದು ಎಂದರು.

ಸೇವೆಗಳ ಹೆಚ್ಚಳ: ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಸ್ತರಣೆ ಜತೆಗೆ ಈ ಕೇಂದ್ರಗಳಲ್ಲಿ ಸಿಗುತ್ತಿರುವ 7ಆರೋಗ್ಯ ಸೇವೆಗಳನ್ನು 12ಕ್ಕೆ ಹೆಚ್ಚಳ ಮಾಡಲಾಗುವುದು. ಪ್ರಸ್ತುತ ಪ್ರಸೂತಿ ಹಾಗೂ ಹೆರಿಗೆ, ನವಜಾತ ಶಿಶುಗಳ ಆರೈಕೆ, ಮಕ್ಕಳ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ, ಹೊರ ರೋಗಿಗಳ ಸೇವೆ, ಕುಟುಂಬ ಯೋಜನೆ ಸೇವೆಗಳು, ಕ್ಯಾನ್ಸರ್‌, ರಕ್ತದೊತ್ತಡ, ಮಧುಮೇಹದಂಥ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಇವುಗಳ ಜತೆಗೆ ಹೆಚ್ಚುವರಿ ಸೇವೆಗಳಾಗಿ ಬಾಯಿ ಆರೋಗ್ಯ ಆರೈಕೆ, ನೇತ್ರ ಹಾಗೂ ಕಿವಿ ಸಮಸ್ಯೆಗಳು, ತುರ್ತು ಸೇವೆಗಳಾದ ಅಪಘಾತ ಹಾಗೂ ಸುಟ್ಟಗಾಯಗಳಿಗೆ ಚಿಕಿತ್ಸೆ, ಮಾನಸಿಕ ಆರೋಗ್ಯ ಪ್ರಾಥಮಿಕ ಚಿಕಿತ್ಸೆ, ರೋಗ ಉಪಶಮನ ಹಾಗೂ ವಯೋವೃದ್ಧರ ಚಿಕಿತ್ಸಾ ಕೇಂದ್ರದ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅಸಾಂಕ್ರಾಮಿಕ ರೋಗ ಪರೀಕ್ಷೆಯಲ್ಲಿ ಹೆಚ್ಚುವರಿಯಾಗಿ ಕ್ಷಯ (ಟಿಬಿ) ಹಾಗೂ ಕುಷ್ಠ ರೋಗವನ್ನು ಸೇರಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

10 ಕೋಟಿಗೂ ಅಧಿಕ ಮಂದಿ ಭೇಟಿ: 2018ರಿಂದ ದೇಶಾದ್ಯಂತ 10.07 ಕೋಟಿ ಮಂದಿ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ವಿವಿಧ ರೋಗಗಳ ಪರೀಕ್ಷೆ ಜತೆಗೆ 8 ಲಕ್ಷ ಯೋಗ ಹಾಗೂ ಕ್ಷೇಮ ಶಿಬಿರಗಳನ್ನು ಆಯೋಜಿಸಲಾಗಿದೆ. ಕೇಂದ್ರಗಳಲ್ಲಿ ಹೊರ ರೋಗಿಗಳ ಸಂಖ್ಯೆ 15-30ರವರೆಗೆ ಹೆಚ್ಚಿದೆ. ಇದರಿಂದಾಗಿ ನೇರ ಮತ್ತು ಪರೋಕ್ಷ ಖರ್ಚು ಕಡಿಮೆಯಾಗಿದೆ ಎಂದು ಹೇಳಿದರು.

ಟೆಲಿ ಕನ್ಸಲ್ಟೆಷನ್‌ ಸರ್ವೀಸ್‌: ಗ್ರಾಮೀಣ ರೋಗಿಗಳಿಗೆ ಪರಿಣಿತರ ಸೇವೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಟೆಲಿ ಕನ್ಸಲ್ಟೆಷನ್‌ (ದೂರವಾಣಿ ಆಪ್ತ ಸಮಾಲೋಷನೆ) ಸೌಲಭ್ಯವನ್ನು ಒದಗಿಸಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ಒಮ್ಮೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಮುಂದಿನ ದಿನಗಳಲ್ಲಿ ಈ ಕೇಂದ್ರಗಳಿಗೆ ಭೇಟಿ ನೀಡಿದರೆ ದೂರವಾಣಿಯ ಮೂಲಕ ಹಿಂದೆ ಚಿಕಿತ್ಸೆ ನೀಡಿದ ವೈದ್ಯರ ಅಥವಾ ಪರಿಣಿತ ವೈದ್ಯರ ಆಪ್ತಸಮಾಲೋಚನೆ ಸೌಲಭ್ಯ ಲಭ್ಯವಾಗಲಿದೆ.

ಕಲಬೆರಕೆ ಪತ್ತೆಗೆ ಮ್ಯಾಜಿಕ್‌ ಬಾಕ್ಸ್‌: ಸ್ಥಳೀಯ ಮಟ್ಟದಲ್ಲಿಯೇ ಆಹಾರ ಪೌಷ್ಟಿಕತೆ, ಕಲಬೆರಕೆಯನ್ನು ಅಳತೆ ಮಾಡಲು ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆಹಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಈ ಸೇವೆ ಆರಂಭವಾಗಲಿದ್ದು, ಅಗತ್ಯ ಯಂತ್ರೋಪಕರಣ ಗಳನ್ನು ನೀಡಲಾಗುತ್ತದೆ. ಇದರಿಂದ ಅಗತ್ಯ ಪೌಷ್ಟಿಕ ಆಹಾರ ಬಳಸಿ ಸದೃಢವಾಗಲು ಸಹಕಾರಿ ಎನ್ನುತ್ತಾರೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು.

ವೇತನ ನೀಡಲು ಸಾಧ್ಯವಿಲ್ಲ: ಆಶಾ ಕಾರ್ಯಕರ್ತೆಯರಿಗೆ ಸೂಕ್ತ ವೇತನ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ವಿಕಾಸ್‌ ಶೀಲ್‌, ಆಶಾ ಕಾರ್ಯಕರ್ತರು ಸ್ವಯಂ ಸೇವಕರು. ಅವರನ್ನು ಪ್ರೋತ್ಸಾಹ ಧನ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ವೇತನ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದರೆ ರಾಜ್ಯ ಸರ್ಕಾರ ವೇತನ ನೀಡಬಹುದು. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದರು.

(2018 ಏಪ್ರಿಲ್‌ರಿಂದ 2020 ಫೆಬ್ರವರಿ )
1,930 ರಾಜ್ಯದ ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು
59,56,152 ಮಂದಿ ಭೇಟಿ ನೀಡಿದ ಹೊರ ರೋಗಿಗಳು (ಒಪಿಡಿ)
57,02,236 ಒಟ್ಟು ಔಷದಿ ವಿತರಣೆ
15,84,771 ಜನಕ್ಕೆ ಪ್ರಯೋಗ ಸೌಲಭ್ಯ
40,119 ಒಟ್ಟು ನಡೆದ ಯೋಗ ಶಿಬಿರಗಳು
6,71,021 ಮಂದಿಗೆ ರಕ್ತದೊತ್ತಡ ತಪಾಸಣೆ
6,20,267 ಜನರಿಗೆ ಮಧುಮೇಹ ತಪಾಸಣೆ
2,47,305 ಮಂದಿಗೆ ಬಾಯಿ ಕ್ಯಾನ್ಸರ್‌ ತಪಾಸಣೆ
36,557 ಜನರಿಗೆ ಸ್ತನ ಕ್ಯಾನ್ಸರ್‌ ತಪಾಸಣೆ
12,233 ಮಂದಿಗೆ ಗರ್ಭ ಕೋರಳಿನ ಕ್ಯಾನ್ಸರ್‌ ತಪಾಸಣೆ

Advertisement

Udayavani is now on Telegram. Click here to join our channel and stay updated with the latest news.

Next