Advertisement

ಘನತ್ಯಾಜ್ಯ ವಿಲೇವಾರಿಗೆ ರಾಯಚೂರು ಜಿಪಂನಿಂದ ವಾಹನ

12:26 PM Feb 06, 2023 | Team Udayavani |

ದೇವದುರ್ಗ: ತಾಲೂಕಿನ ಮೂವತ್ತೆರಡು ಗ್ರಾಪಂ ವ್ಯಾಪ್ತಿಯ ಮನೆ ಮನೆಯ ಹಸಿ, ಒಣ ಕಸ ಘನತ್ಯಾಜ್ಯ ವಿಲೇವಾರಿ ಮಾಡಲು ಜಿಲ್ಲಾ ಪಂಚಾಯಿತಿ ವತಿಯಿಂದ ವಾಹನಗಳನ್ನು ನೀಡಲಾಗಿದೆ. ಡ್ರೈವರ್‌ ಕೊರತೆ ಹಿನ್ನೆಲೆಯಲ್ಲಿ ಬಹುತೇಕ ಕಡೆ ವಾಹನಗಳನ್ನು ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ಹಸಿ, ಒಣ ಕಸ ಸಂಗ್ರಹಿಸಲು ಮನೆ ಮನೆಗೆ ಗ್ರಾಪಂ ವತಿಯಿಂದ ಬಕೆಟ್‌ ನೀಡಲಾಗಿದೆ. ಗ್ರಾಪಂ ಅಧಿಕಾರಿಗಳಿಗೆ ಕಸ ವಿಲೇವಾರಿಯದ್ದೇ ಚಿಂತೆ ಶುರುವಾಗಿದೆ.

Advertisement

ಜಾಗದ ಸಮಸ್ಯೆ: ಬಹುತೇಕ ಗ್ರಾಪಂ ವ್ಯಾಪ್ತಿಯ ಹಸಿ, ಒಣ ಕಸ ವಿಲೇವಾರಿ ಮಾಡಲು ಜಾಗದ ಸಮಸ್ಯೆ ಹಿನ್ನೆಲೆಯಲ್ಲಿ ವಾಹನಗಳು ಓಡಾಡುತ್ತಿಲ್ಲ. ಗೂಗಲ್‌, ಎಸ್‌.ಸಿದ್ದಪೂರು, ಪಲಕನಮರಡಿ, ಜೇರಬಂಡಿ, ರಾಮದುರ್ಗ ಸೇರಿದಂತೆ ಕಸ ವಿಲೇವಾರಿ ಘಟಕ ನಿರ್ಮಿಸಲು ಜಾಗದ ಸಮಸ್ಯೆ ಉಂಟಾಗಿದೆ. ಗ್ರಾಪಂದಿಂದ ಜಾಗ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ತಿಂಗಳಾದರೂ ಇಲ್ಲಿವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ವಾಹನಗಳು ಓಡಾಡುತ್ತಿಲ್ಲ. ಹಸಿ, ಒಣ ಕಸ ವಿಲೇವಾರಿ ಆಗದೇ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ.

ಸದಸ್ಯರಿಗೆ ತರಬೇತಿ: ಎನ್‌ಆರ್‌ಎಲ್‌ಎಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಸ್ವಹಾಯ ಗುಂಪುಗಳ ಸದಸ್ಯರಿಗೆ ಜಿಪಂದಿಂದ ವಾರಗಳ ಕಾಲ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಸದಸ್ಯರು ಮನೆಯ ಹಸಿ, ಒಣ ಕಸ ವಾಹನಗಳಲ್ಲಿ ಸಂಗ್ರಹಿಸಿ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗಬೇಕು. ಬಹುತೇಕ ಗ್ರಾಪಂಗಳಲ್ಲಿ ಗುಂಪಿನ ಸದಸ್ಯರು ಸ್ಪಂದನೆ ಮಾಡದೇ ಇದ್ದುದರಿಂದ ಕಸ ವಿಲೇವಾರಿ ಸವಾಲಾಗಿದೆ.

ವಿಲೇವಾರಿ ಘಟಕ ನಿರ್ಮಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಜಾಗದ ಸಮಸ್ಯೆ ಇಲ್ಲದ ಕಡೆ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ನಾಗಡದಿನ್ನಿ, ಮಲ್ಲೇದೇವರಗುಡ್ಡ, ಮಸರಕಲ್‌, ಜಾ.ಜಾಡಲದಿನ್ನಿ ಸೇರಿ ಕಾಮಗಾರಿ ಪ್ರಗತಿಯಲ್ಲಿವೆ. 10 ಕ್ಕೂ ಅ ಧಿಕ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಕಸ ವಿಲೇವಾರಿ ಮಾಡುವ ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಘಟಕಗಳು ನಿರುಪಯುಕ್ತವಾಗಿವೆ.

ಕ‌ಸ ವಿಲೇವಾರಿ ಮಾಡಲು ಡ್ರೈವರ್‌ ಕೊರತೆ ಇರುವ ಕಡೆ ಗ್ರಾಪಂ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಅಧಿ ಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಹಲವೆಡೆ ಜಾಗ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ- ಪಂಪಾಪತಿ ಹಿರೇಮಠ, ತಾಪಂ ಇಒ.

Advertisement

ಹಸಿ, ಒಣ ಕಸ ವಿಲೇವಾರಿ ಮಾಡಲು ಗ್ರಾಪಂಗೆ ನೀಡಿದ ವಾಹನಗಳು ಡ್ರೈವರ್‌ ಇಲ್ಲದೇ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ಇಂತಹ ಸಮಸ್ಯೆ ಕುರಿತು ಮೇಲಧಿ ಕಾರಿಗಳು ಕ್ರಮ ವಹಿಸಬೇಕು.-ವೆಂಕಟೇಶ ಕ್ಯಾದಿಗೇರಾ, ಕರವೇ ತಾಲೂಕಾಧ್ಯಕ್ಷ

ಡ್ರೈವರ್‌ಗಳ ಕೊರತೆ: ಗ್ರಾಪಂ ವ್ಯಾಪ್ತಿಯ ಮನೆ ಮನೆಯ ಹಸಿ, ಒಣ ಕಸ ವಿಲೇವಾರಿ ಮಾಡಲು ಜಿಪಂಯಿಂದ ವಾಹನಗಳು ನೀಡಲಾಗಿದೆ. ಎನ್‌ಆರ್‌ಎಲ್‌ಎಂನಲ್ಲಿ ಕಾರ್ಯ ನಿರ್ವಹಿಸುವ ಸಸ್ವಹಾಯ ಗುಂಪುಗಳ ಸದಸ್ಯರು ಡ್ರೈವರ್‌ ನೇಮಕ ಮಾಡಬೇಕು. ಹಸಿ, ಒಣ ಕಸ ವಿಲೇವಾರಿ ಘಟಕದಲ್ಲಿ ಬೇರೆ ಬೇರೆ ಕಸ ಸಂಗ್ರಹಿಸಿ ಕಸ ಮಾರಾಟ ಬಂದ ಹಣದಲ್ಲಿ ಡ್ರೈವರ್‌ಗಳಿಗೆ ಸಂಬಳ ನೀಡಬೇಕು. ಹೀಗಾಗಿ ಬಹುತೇಕ ಗ್ರಾಪಂಗಳಲ್ಲಿ ಡ್ರೈವರ್‌ ಸಿಗದೇ ಇದ್ದುದರಿಂದ ವಾಹನಗಳು ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ಕೆಲ ಗ್ರಾಪಂಗಳಲ್ಲಿ ಸಿಬ್ಬಂದಿಗಳಿಗೆ ವಾಹನ ಚಲಾಯಿಸಲು ಬರುತ್ತಿರುವುದರಿಂದ ಅಂತಹ ಗ್ರಾಪಂಗಳಲ್ಲಿ ವಾಹನಗಳು ಓಡಾಡುತ್ತಿವೆ.

„ನಾಗರಾಜ ತೇಲ್ಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next