ಎಷ್ಟು ಚೆಂದವಾಗಿ ಅರವತ್ತು ಸಂವತ್ಸರಗಳಿಗೆ ಚೆಂದದ ಹೆಸರುಗಳು ಇಟ್ಟಿಹರು ನಮ್ಮ ಹಿರಿಯರು. ಕ್ರೋಧಿ ಸಂವತ್ಸರ 38ನೇ ಹೆಸರು. ನೂತನ ವರ್ಷ ವಿಶ್ವದ ಕಾಂತಿಯಾಗಿ, ವಿಶ್ವ ಶಾಂತಿ ತರಲಿ.
Advertisement
ಯುಗಾದಿ ಪದದ ಅರ್ಥ ಯುಗದ ಆರಂಭದ ದಿನ, ಸತ್ಯ, ತ್ರೇತಾ, ದ್ವಾಪರ ಯುಗಗಳ ಅನಂತರ ಕಲಿಯುಗ ಆರಂಭವಾದ ದಿನ. ಕ್ರಿ.ಪೂ. 5,123ರಲ್ಲಿ ಕಲಿಯುಗ ಜನಿಸಿದ್ದು, ಈ ದಿನದ ಆಚರಣೆಯೇ ಯುಗಾದಿಯ ವೈಭವ ಹಬ್ಬ . ಮತ್ತೆ ಕೆಲವರ ಅಭಿಪ್ರಾಯದಂತೆ ಬ್ರಹ್ಮ ಈ ದಿನ ವಿಶ್ವ ಸೃಷ್ಟಿಸಿದ್ದು ಎಂದು. ಮತ್ತೊಂದು ಅಭಿಪ್ರಾಯ ಈ ದಿನ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿಬಂದು ಸಿಂಹಾಸನ ಸ್ವೀಕರಿಸಿ ಪಟ್ಟಾಭಿಷೇಕ ಆದ ದಿನ. ಹೀಗೆ ಅನೇಕ ಪ್ರಾಮುಖ್ಯವನ್ನು ಈ ಹಬ್ಬಕ್ಕೆ ನೀಡಲಾಗದೆ. ಇದು ದೇಶಾದ್ಯಂತ ಬೇರೆ ಬೇರೆ ಹೆಸರಿನಿಂದ ಆಚರಿಸಲ್ಪಡುತ್ತದೆ. ದಕ್ಷಿಣ ಭಾರತದಲ್ಲಿ ಯುಗಾದಿ ಆದರೆ ಮಹಾರಾಷ್ಟ್ರದಲ್ಲಿ ಇದಕ್ಕೆ ಗುಡಿಪಾಡುವಾ ಎಂದು ಕರೆಯುತ್ತಾರೆ.
ಹಬ್ಬ ಅಂದರೆ ದೇವರನ್ನು ಕರೆದು ಆತಿಥ್ಯ ಮಾಡಿ ಅವನ ಕೃಪೆಗೆ ಪಾತ್ರರಾಗುವುದು. ನಮ್ಮ ಭಾರತೀಯರಿಗೆ ನಿತ್ಯೋತ್ಸವ ನಿತ್ಯ ಮಂಗಳ ಅನ್ನುತ್ತಾರೆ. ನಮಗೆ ಪ್ರತಿನಿತ್ಯವೂ ಹಬ್ಬ, ಇದರ ಗೂಡಾರ್ಥ ದೈವ ಕೃಪೆ ಬೇಡುವುದು, ನಾಮ ಸ್ಮರಣೆಮಾಡುವುದು. ಇದು ಮೋಕ್ಷ ಮಾರ್ಗಕ್ಕೆ ಹೆದ್ದಾರಿಯೂ ಹೌದು. ಬರುವ ನೂತನ ಸಂವತ್ಸರ ಸ್ವಾಗತಿಸುವುದೇ ಯುಗಾದಿಯ ಸಂಕೇತ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ವಸಂತ ಋತುವಿನ ಆರಂಭದೊಡನೆ ಈ ಹಬ್ಬ ಬರುತ್ತದೆ. ಹೊಸ ಪಂಚಾಂಗ, ಹೊಸ ವರುಷದ ಆರಂಭ, ಅಂತೆಯೇ ಪ್ರಕೃತಿಯಲ್ಲಿ ಕೂಡ ಲವಲವಿಕೆ, ಗಿಡಮರಗಳು ಚಿಗುರುತ್ತವೆ, ಪಾಶ್ಚಾತ್ಯ ದೇಶಗಳಲ್ಲಿ ಚಳಿ ಮಾಯವಾಗಿ ಹಿತಕರ ವಾತಾವರಣ ಅಡಿಯಿಟ್ಟು ಆಹ್ಲಾದವನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ಈ ಹಬ್ಬ ಹೊಸ ಪಂಚಾಂಗ, ಹೊಸ ಪ್ರಕೃತಿ, ಹೊಸ ಆನಂದದ ಮಿಶ್ರಣ, ಇದನ್ನು ಸವಿಯುವುದೇ ಹಬ್ಬದ ಆಚರಣೆ. ಯುಗಾದಿ ಏಕೆ ಆಚರಿಸಬೇಕು ? ಹೇಗೆ ಆಚರಿಸಬೇಕು ?
ಯುಗಾದಿ ಬರುವಿಕೆ ವಸಂತ ಋತು ಸಾರುತ್ತದೆ. ಪ್ರಕೃತಿ ಕೂಡ ನೂತನ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ.
ಏಕೆ ಆಚರಿಸಬೇಕು ಅಂದರೆ ಮುಂಬರುವ ಈ ಸಂವತ್ಸರ ಎಲ್ಲರಿಗೂ ಶುಭ ತರಲಿ ಅನ್ನುವ ಉದ್ದೇಶ. “ಕಾಲಾಯ ತಸ್ಮೈ„ ನಮಃ’ ಹಳೆಯ ಕಾಲ ಅಥವಾ ಸಂವತ್ಸರದ 12 ತಿಂಗಳು ಕಳೆದು ಹೊಸ ಕಾಲ ಆರಂಭ, ಅದಕ್ಕೆ ಕಾಲಕ್ಕೂ ನಮಿಸಿ ಕೃಪೆಗೆ ಪಾತ್ರರಾಗಬೇಕು.
Related Articles
ಸಂವತ್ಸರದ ಪ್ರಥಮ ಮಾಸ ಚೈತ್ರ ಮಾಸದ ಪ್ರಥಮ ದಿನ ಪಾಡ್ಯ ಪವಿತ್ರವಾದ ದಿನವನ್ನು ಸಂಭ್ರಮದಿಂದ ಆಧ್ಯಾತ್ಮಿಕ ನಿಟ್ಟಿನಿಂದ ಆಚರಿಸಬೇಕು. ಹೌದು ಹಬ್ಬ ಅಂದರೆ ಆನಂದ ಹಾಗೂ ಭೋಗ ಜೀವನ ಕೂಡ ಇರಬೇಕು. ಎರಡಕ್ಕೂ ಸಮಾನ ಪ್ರಾಮುಖ್ಯ ಅದೇ ಆತ್ಮ ತೃಪ್ತಿ.
Advertisement
ಹಬ್ಬದ ತಯಾರಿ ಎಲ್ಲರ ಮನೆಗಳಲ್ಲಿ ಬಹಳ ದಿನಗಳ ಮುಂಚೆಯೇ ಆರಂಭವಾಗುತ್ತದೆ. ಮನೆಗೆ ಸುಣ್ಣ ಬಣ್ಣ, ಗೃಹ ಅಲಂಕರಿಸುವುದು ಹಾಗೆಯೇ ನಮ್ಮ ಹೊರ ವಾತಾವರಣದಲ್ಲಿ ಕೂಡ ಸಂಭ್ರಮ ಕಾಣುತ್ತೇವೆ. ಯುಗಾದಿ ಸೇಲ್ ಸೀರೆ, ಬಟ್ಟೆ , ಚಿನ್ನ , ಬೆಳ್ಳಿ ಅಂಗಡಿಗಳಲ್ಲಿ ಜನಜಂಗುಳಿ, ಪುಸ್ತಕದ ಅಂಗಡಿಗಳ ಪಂಚಾಂಗಗಳ ಪ್ರದರ್ಶನ, ದಿನಸಿ ಅಂಗಡಿಗಳು, ಹೂವಿನ ಅಂಗಡಿಗಳು ಭಾಗವಹಿಸುತ್ತಾ ಇದ್ದರೆ ಊರು ಕಂಗೊಳಿಸುತ್ತದೆ. ಹೊಸ ವಾತಾವರಣ ಶುದ್ಧಿಯಾದಾಗ ಅಂತರಂಗ ಕೂಡ ಶುದ್ಧಿಯಾಗುತ್ತದೆ.
ಹೊಸ ಬಟ್ಟೆಗಳನ್ನು ತೊಡುವುದು ಹಳೆಯ ಬಟ್ಟೆಗಳನ್ನು ತೊರೆಯುವ ಸಂಕೇತ ನಮ್ಮಲ್ಲಿರುವ ನಿರ್ಗುಣ ತೊಲಗಿಸಿ ಸಗುಣ ಮನದಲ್ಲಿ ತುಂಬಿ ಧಾರ್ಮಿಕ ಜೀವನ ನಡೆಸಿರಿ ಅನ್ನುವುದೇ ಆಗಿರುತ್ತದೆ.
ಮಾವಿನ ತೋರಣ ಬಾಗಿಲನ್ನು ಅಲಂಕರಿಸಿದರೆ ರಂಗೋಲಿ ಮನೆಯ ಮುಂದೆ ಕಂಗೊಳಿಸುತ್ತದೆ. ದೇವರ ಗುಡಿ ದೀಪಗಳಿಂದ ಬೆಳಗಿ ಪಂಚಾಂಗ ಶ್ರವಣಕ್ಕೆ ತಯಾರಿ ನಡೆಯುತ್ತದೆ. ಮನೆಯಲ್ಲಿ ಹೋಳಿಗೆ, ಪಾಯಸ ಮುಂತಾದ ಖಾದ್ಯ ಪದಾರ್ಥಗಳನ್ನು ತಯಾರಿಸಿ ದೇವರಿಗೆ ಅರ್ಪಿಸಿ ಸವಿಯುವುದರ ಅರ್ಥ ವರ್ಷಪೂರ್ತಿ ಆನಂದದ ಹೊಳೆ ಹರಿಯಲಿ ಎಂದು.
ಮತ್ತೊಂದು ಮುಖ್ಯ ಸಂಗತಿ “ಸ್ಥಿತ ಪ್ರಜ್ಞ’ ಕೃಷ್ಣ ಬೋಧಿಸಿದ ನೀತಿಯನ್ನು ಪಾಲಿಸುವುದು. ಏನೇ ಕಷ್ಟಗಳು ಬರಲಿ, ಏನೇ ಸುಖ ಬರಲಿ ಸಮವಾಗಿ ಸ್ವೀಕರಿಸು ಮಾನವ, ಭಗವದ್ಗೀತೆಯಲ್ಲಿ ಮಾನವ ಜನಾಂಗಕ್ಕೆ ಕೃಷ್ಣ ನ ಸಂದೇಶ. ಕಷ್ಟದಲ್ಲಿ ಕುಗ್ಗದೆ, ಸುಖದಲ್ಲಿ ಹಿಗ್ಗದೇ ಸಮತೋಲನ ಜೀವನ ನಡೆಸಬೇಕು ಇದರ ಅರ್ಥ. ಇದೇ ಕಾರಣ ಯುಗಾದಿಯ ದಿನದಂದು ಬೇವು, ಬೆಲ್ಲ ಮಿಶ್ರಣ ನೈವೇದ್ಯ ಭಂಜಿಸುವುದು. ಬೇವು ಕಹಿ, ಬೆಲ್ಲ ಸಿಹಿ ಇದು ಒಂದು ನಾಣ್ಯದ ಎರಡು ಮುಖಗಳು ಎಲ್ಲರ ಬಾಳಿನಲ್ಲಿ, ಇದನ್ನು ಭಕ್ಷಿಸುವಾಗ ಈ ಕೆಳಕಂಡ ಮಂತ್ರ ಪಠನೆ ಮುಖ್ಯವಾದ ಅಂಗ.“ಶತಾಯು ವಜ್ರ ದೇಹಾಯಾ
ಸರ್ವ ಸಂಪತ್ ಕರಾಯಚ
ಸರ್ವಾರಿಷ್ಟ ವಿನಾಶಾಯ
ನಿಂಬ ಕಂಬಳ ಭಕ್ಷಣಂ ‘
ಓ ಭಗವಂತ ನೂರು ವರುಷ ಆಯಸ್ಸು, ಆರೋಗ್ಯವಾದ ದೇಹ, ಸುಖ – ಸಂಪತ್ತು, ಕಷ್ಟಗಳ ನಿವಾರಣೆ ನಮಗೆ ಕರುಣಿಸು.
ಈ ದಿನ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ದೇವರಿಗೆ ಅರ್ಚನೆ ಸಲ್ಲಿಸಿ ಹೊಸ ವರುಷಕ್ಕೆ ನಾಂದಿಯಾಗಲಿ ಎನ್ನುವ ನಂಬಿಕೆ. ಬರಲಿರುವ ಯುಗಾದಿ ಕ್ರೋಧಿ ನಾಮ ಸಂವತ್ಸರವನ್ನು ವೈಭವದಿಂದ ಆಚರಿಸೋಣ, ವಿಶ್ವಕ್ಕೆ ಶಾಂತಿ ಕೋರೋಣ.
ಓಂ ನಮೋ ಭಗವತೇ ವಾಸುದೇವಾಯ, ಕೃಷ್ಣ ಕರುಣಿಸಲಿ ವಿಶ್ವ ಶಾಂತಿ. ರಾಮರಾಜ್ಯ ಬರಲಿ ಎಂದು ರಾಮ್ ಲಲ್ಲಾನ ಪ್ರಾರ್ಥಿಸೋಣ. ವಸುಧೈವ ಕುಟುಂಬದ ಸದಸ್ಯರು ನಾವು. ಯುಗಾದಿಯ ಶುಭಾಶಯಗಳು.