Advertisement

ಪರಿಸರ ಸ್ನೇಹಿ ಸಾರಿಗೆಗೆ ಜೈ ಎಂದ ಯುವಜನತೆ

06:02 PM Nov 21, 2022 | Team Udayavani |

ಹುಬ್ಬಳ್ಳಿ: ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಂಡಿರುವ ಸ್ಮಾರ್ಟ್‌ ಸೈಕಲ್‌ ಸವಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿ ಸಮೂಹವನ್ನು ಗುರಿಯಾಗಿಸಿಕೊಂಡು ಆರಂಭವಾಗಿರುವ ಪರಿಸರ ಸ್ನೇಹಿ ಸಾರಿಗೆಗೆ ಫಿದಾ ಆಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ ಮೂರುಸಾವಿರಕ್ಕೂ ಹೆಚ್ಚು ಜನರು ಸ್ಮಾರ್ಟ್‌ ಸೈಕಲ್‌ ತುಳಿದಿದ್ದಾರೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಸಮಾಧಾನ, ಆರೋಪಗಳ ನಡುವೆ ಸ್ಮಾರ್ಟ್‌ ಸೈಕಲ್‌ ಸವಾರಿ ಜನರಿಗೆ ಖುಷಿ ನೀಡಿದೆ. ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ಶಿರೂರ ಪಾರ್ಕ್‌, ರವಿ ನಗರ, ವಿದ್ಯಾನಗರ, ತೋಳನ ಕೆರೆ ಭಾಗದಲ್ಲಿ 8.5 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸೈಕಲ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ. 32 ಸೈಕಲ್‌ ನಿಲ್ದಾಣ (ಡಾಕಿಂಗ್‌ ಕೇಂದ್ರ)ಗಳಿಂದ 340 ಸೈಕಲ್‌ಗ‌ಳು ಲಭ್ಯವಿವೆ. ಇವುಗಳಲ್ಲಿ 310 ಸಾಮಾನ್ಯ ಸೈಕಲ್‌, 30 ಎಲೆಕ್ಟ್ರಿಕ್‌ ಮತ್ತು ಪೆಡಲ್‌ ಆಧಾರಿತ ಸೈಕಲ್‌ಗ‌ಳಿವೆ. ಕಳೆದ ಒಂದೂವರೆ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ.

ಸೈಕಲ್‌ ಸವಾರಿಗೆ ಮೆಚ್ಚುಗೆ: ಸ್ಮಾರ್ಟ್‌ ಸೈಕಲ್‌ ಯೋಜನೆ ಆರಂಭವಾಗಿರುವ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು, ಪಿಜಿ, ಮೆಸ್‌, ಕಾಲೇಜು, ಟ್ಯೂಷನ್‌ ಕ್ಲಾಸ್‌, ಬಿಆರ್‌ಟಿಎಸ್‌ ಬಸ್‌ಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ 500 ಮೀಟರ್‌ಗೆ ಒಂದರಂತೆ ನಿಲ್ದಾಣ ನಿರ್ಮಿಸಲಾಗಿದೆ. ಸಾಮಾನ್ಯ ಸೈಕಲ್‌ ಒಂದು ಗಂಟೆಗೆ 5 ರೂ., ಎಲೆಕ್ಟ್ರಿಕ್‌ ಸೈಕಲ್‌ ಗಂಟೆಗೆ 10 ರೂ. ಬಾಡಿಗೆ ನಿಗದಿಪಡಿಸಲಾಗಿದೆ.

ಹೀಗಾಗಿ ಆ ಭಾಗದ ಪ್ರಮುಖ ಐದಾರು ಪ್ರದೇಶಗಳ ಓಡಾಟಕ್ಕೆ ಸೈಕಲ್‌ ಬಳಸುತ್ತಿದ್ದಾರೆ. ಒಂದು ನಿಲ್ದಾಣಕ್ಕೆ ಸೈಕಲ್‌ ಪಡೆದರೆ ಇನ್ನೊಂದು ನಿಲ್ದಾಣದಲ್ಲಿ ಬಿಟ್ಟು ತಮ್ಮ ಸ್ಥಳಕ್ಕೆ ಹೋಗಬಹುದಾಗಿದ್ದು, ಕಾಯುವ ಪ್ರಮೇಯವಿಲ್ಲ. ಆರೋಗ್ಯ ದೃಷ್ಟಿಯಿಂದ ಸೈಕಲ್‌ ತುಳಿಯುವುದು ಉತ್ತಮ ಎನ್ನುವ ಕಾರಣಕ್ಕೆ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಬಳಕೆಯಾಗುತ್ತಿವೆ.

ಬರೋಬ್ಬರಿ ಐದು ತಿಂಗಳ ಕಾಲ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲಾಗಿತ್ತು. ಅಕ್ಟೋಬರ್‌ ಮೊದಲ ವಾರದಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ. ಅಕ್ಟೋಬರ್‌ ತಿಂಗಳೊಂದರಲ್ಲೇ ಬರೋಬ್ಬರಿ 2866 ಜನರು ಸ್ಮಾರ್ಟ್‌ ಸೈಕಲ್‌, 231 ಜನರು ಎಲೆಕ್ಟ್ರಿಕ್‌ ಸೈಕಲ್‌ ಹತ್ತಿದ್ದಾರೆ. ಈಗಾಗಲೇ 1612 ಜನರು ಸೈಕಲ್‌ ಪ್ರಿಯರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 719 ಜನರು ನಿರಂತರ ಸೈಕಲ್‌ ಬಳಸುತ್ತಿದ್ದಾರೆ. ರಜೆ ದಿನಗಳಲ್ಲಿ ಈ ಪ್ರಮಾಣ ಹೆಚ್ಚುತ್ತದೆ. ತೋಳನಕೆರೆ, ರೇಣುಕಾ ನಗರ, ಶಿರೂರ ಪಾರ್ಕ್‌ ಸೇತುವೆ, ತೋಳನಕೆರೆ ಹಿಂಬದಿ ಪ್ರವೇಶ ದ್ವಾರ, ಕೋಟಿಲಿಂಗ ನಗರ ನಿಲ್ದಾಣದಲ್ಲಿ ಬಳಕೆದಾರರ ಸಂಖ್ಯೆ ಮೂರು ಅಂಕಿಯಿದ್ದರೆ ಉಳಿದೆಡೆ ಎರಡಂಕಿಯಲ್ಲಿದೆ.

Advertisement

ಬಳಕೆದಾರ ಸ್ನೇಹಿ: ಚಿಕ್ಕಮಕ್ಕಳು, ಹಿರಿಯರು ಕೂಡ ಈ ಸೈಕಲ್‌ಗ‌ಳನ್ನು ಬಳಸಬಹುದಾಗಿದೆ. ಅಗತ್ಯಕ್ಕೆ ತಕ್ಕಂತೆ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೋಂದಣಿ, ಬಿಡುಗಡೆ, ಸವಾರಿ ಹಾಗೂ ಹಿಂದಿಸುಗಿಸುವಿಕೆ ನಾಲ್ಕು ಹಂತಗಳ ಯೋಜನೆಯಾಗಿದೆ. ಪ್ರತಿಯೊಂದು ಸೈಕಲ್‌ಗ‌ಳು ಜಿಪಿಎಸ್‌ ಹೊಂದಿವೆ. ಹೀಗಾಗಿ ಕಳ್ಳತನ ಅಸಾಧ್ಯ. ಜಿಯೋ ಫಿನಿಷಿಂಗ್‌ ಮಾಡಿರುವ ಪ್ರದೇಶದಿಂದ ಹೊರಹೋದರೂ ಇಲ್ಲಿನ ಕಾಟನ್‌ ಮಾರುಕಟ್ಟೆಯ
ಸಾಂಸ್ಕೃತಿಕ ಭವನದಲ್ಲಿ ನಿರ್ಮಿಸಿರುವ ಇಂಟಿಗ್ರೇಟೆಡ್‌ ಕಮಾಂಡಿಂಗ್‌ ಕಂಟ್ರೋಲ್‌ ಸೆಂಟರ್‌ಗೆ ಸಂದೇಶ ರವಾನೆಯಾಗುತ್ತದೆ.

ನೋಂದಣಿ ಕಾರ್ಯ ಸುಲಭ
ಸ್ಮಾರ್ಟ್‌ ಸೈಕಲ್‌ಗ‌ಳನ್ನು ಬೇಕಾಬಿಟ್ಟಿಯಾಗಿ ನೀಡುವುದಿಲ್ಲ. ಈ ಸೇವೆ ಪಡೆಯಬೇಕಾದರೆ ಮುಂಚಿತವಾಗಿ ನೋಂದಣಿ ಮಾಡಿಸಿ ಕಾರ್ಡ್‌ ಪಡೆಯಬೇಕು. ಇದಕ್ಕಾಗಿ ಸ್ಮಾರ್ಟ್‌ ಸಿಟಿ ಕಚೇರಿ, ತೋಳನಕೆರೆ ಮುಖ್ಯದ್ವಾರ, ನೃಪತುಂಗ ಬೆಟ್ಟ ಡಾಕಿಂಗ್‌ ಕೇಂದ್ರದಲ್ಲಿ ಕಾರ್ಡ್‌ ಪಡೆಯಬಹುದಾಗಿದೆ. 100 ರೂ. ಶುಲ್ಕವಿದ್ದು, ಈ ಹಣ ಸಂಪೂರ್ಣ ಕಾರ್ಡಿಗೆ ಜಮೆಯಾಗಲಿದೆ. ಇದಕ್ಕಾಗಿ ಮೂಲ ಆಧಾರ ಕಾರ್ಡ್‌ ಅಥವಾ ವಿಳಾಸ ಹೊಂದಿರುವ ದಾಖಲೆ ತೆಗೆದುಕೊಂಡು ಹೋದರೆ ಸ್ಕ್ಯಾನ್‌ ಮಾಡಿಕೊಂಡು ಕಾರ್ಡ್‌ ನೀಡುವರು. ಕಾರ್ಡ್‌ನಲ್ಲಿರುವ ಹಣ ಬಳಕೆಗೆ ಯಾವುದೇ ಕಾಲಮಿತಿ ಇರುವುದಿಲ್ಲ.

ಎಲೆಕ್ಟ್ರಿಕ್‌ ಸೈಕಲ್‌ ಮೊದಲ ಪ್ರಯತ್ನ
ಯೋಜನೆಯಲ್ಲಿ ಬಳಸಿರುವ 34 ಎಲೆಕ್ಟ್ರಿಕ್‌ನೊಂದಿಗೆ ಪೆಡಲ್‌ ಹೊಂದಿರುವ ಸೈಕಲ್‌ಗ‌ಳು ವಿಶೇಷವಾಗಿದ್ದು, ಹಿರಿಯರು ಹೆಚ್ಚು ಇಷ್ಟಪಡುವ ಸೈಕಲ್‌ ಗಳಾಗಿವೆ. ಎಲೆಕ್ಟ್ರಿಕ್‌ ಜೊತೆಗೆ ಪೆಡಲ್‌ ಹೊಂದಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಬಳಸಬಹುದಾಗಿದೆ. ಪ್ರತಿ ನಿಲ್ದಾಣದಲ್ಲಿ ಒಂದೊಂದು ಈ ಸೈಕಲ್‌ಗ‌ಳು ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ನಗರಗಳ ಪೈಕಿ ಈ ಪ್ರಯತ್ನ ಮೊದಲು.

ಯೋಜನೆ ವಿಸ್ತಾರ ಸಾಧ್ಯವೇ?
ಪ್ರಮುಖವಾಗಿ ವಿದ್ಯಾರ್ಥಿಗಳು ಹಾಗೂ ಸೈಕಲ್‌ ಮಾರ್ಗದ ಹಿನ್ನೆಲೆಯಲ್ಲಿ ಒಂದು ಭಾಗದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆ ಸಾರ್ವಜನಿಕರು ಬಂದು ಹೋಗುವ ಪ್ರಮುಖ ಸ್ಥಳಗಳಾದ ಪಾಲಿಕೆ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಕ್ಕೂ ವಿಸ್ತರಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಪರಿಸರ ಹಾಗೂ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿರುವ ಸಿಬ್ಬಂದಿ ಕೂಡ ಬಳಸಬಹುದಾಗಿದೆ ಎನ್ನುವ ಅಭಿಪ್ರಾಯಗಳಿವೆ. ಸಾರಿಗೆ ಸಂಪರ್ಕ ಇಲ್ಲದ ಪ್ರದೇಶ ಕೇಂದ್ರೀಕರಿಸಿ ಈ ಸೇವೆ ವಿಸ್ತರಿಸುವ ಚರ್ಚೆಗಳು ನಡೆದಿವೆ.

ಪೂರ್ಣ ಪ್ರಮಾಣದಲ್ಲಿ ಆರಂಭವಾದ ಮೊದಲ ತಿಂಗಳು ಸೈಕಲ್‌ಪ್ರಿಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಭಾಗದ 25,000 ಸಾವಿರ ಜನರನ್ನುದ್ದೇಶಿಸಿ ಈ ಯೋಜನೆ ರೂಪಿಸಲಾಗಿದೆ. ಇತರೆಡೆಗೆ ವಿಸ್ತರಿಸಬೇಕೆನ್ನುವ ಬೇಡಿಕೆಗಳಿವೆ. ಸಾಧಕ-ಬಾಧಕಗಳ ಬಗ್ಗೆ ಚಿಂತನೆ ಮಾಡಿ ಹಂತ ಹಂತವಾಗಿ ವಿಸ್ತರಿಸಲಾಗುವುದು. ನೋಂದಣಿ ಸೇರಿದಂತೆ ಪ್ರತಿಯೊಂದು ಹಂತವೂ ಬಳಕೆದಾರರ ಸ್ನೇಹಿಯಾಗಿದೆ.
ಶಕೀಲ್‌ ಅಹ್ಮದ್‌, ವ್ಯವಸ್ಥಾಪಕ ನಿರ್ದೇಶಕ,
ಸ್ಮಾರ್ಟ್‌ಸಿಟಿ ಕಂಪನಿ

ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next