Advertisement

ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ

04:20 PM Aug 03, 2022 | Shwetha M |

ಕೊಲ್ಹಾರ: ಆ. 15ರಂದು ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆ ಪಪಂ ಕಾರ್ಯಾಲಯದಲ್ಲಿ ಧ್ವಜ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ ಎಂದರು. ತದ ನಂತರ ಪಪಂ ಸದಸ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮ ಕುಂದುಕೊರತೆಗಳ ಸಮಾಲೋಚನಾ ಸಭೆ ನಡೆಸಿದರು.

ಈ ವೇಳೆ ಸದಸ್ಯರಾದ ಬಾಬು ಬ್ಯಾಲ್ಯಾಳ, ತೌಶಿಪ್‌ ಗಿರಗಾಂವಿ ಪಟ್ಟಣಕ್ಕೆ ಮಂಜೂರಾದ 50 ಕೋಟಿ ಅನುದಾನ ಹಾಗೂ ಆಶ್ರಯ ಯೋಜನೆ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರು ಹೇಳಿದಾಗ, ಪಟ್ಟಣ ಅಭಿವೃದ್ದಿಗಾಗಿ ಸದಸ್ಯರು ರಾಜಕೀಯ ಬೆರಸದೇ ಪಕ್ಷಾತೀತವಾಗಿ ಒಮ್ಮತ ಅಭಿಪ್ರಾಯ ಮೇರೆಗೆ ಸಾಗಬೇಕು ಎಂದರು.

ಪಟ್ಟಣದಲ್ಲಿರುವ ಮನೆಗಳ ಉತಾರಿಗಳ ಹಂಚಿಕೆಯಲ್ಲಿ ವಿಳಂಬವಾಗುತ್ತಿರುವದು ನನ್ನ ಗಮನಕ್ಕೆ ಬಂದಿದೆ. ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದ ತನಿಖಾ ತಂಡ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಹಂಚಿಕೆಯಾದ ಹಕ್ಕುಪತ್ರಗಳ ಸಮಗ್ರ ಮಾಹಿತಿಯನ್ನು ನಮಗೆ ಒದಗಿಸಿದೆ. ಅದರಂತೆ ಕಾನೂನಾತ್ಮಕವಾಗಿರುವ ನಿವೇಶನಗಳ ಉತಾರ ಹಂಚಿಕೆ ಮಾಡಲು ಈಗಾಗಲೇ ಪಪಂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.

ಪಟ್ಟಣದ ಅಭಿವೃದ್ದಿಗಾಗಿ ವಿಶೇಷ ಅನುದಾನ ಮಂಜೂರು ಮಾಡಬೇಕು, ಸಿಬ್ಬಂದಿಯ ಕೊರತೆಯನ್ನು ನೀಗಿಸಬೇಕು. ಹೊಸ ಪಪಂ ಕಾರ್ಯಾಲಯದ ಕಟ್ಟಡಕ್ಕಾಗಿ ಮಂಜೂರಾತಿ ದೊರಕಿಸಿಕೊಡಬೇಕು. ಸ್ಥಳೀಯ ಪುನರ್ವಸತಿ ಕೇಂದ್ರದಲ್ಲಿರುವ ಸರ್ಕಾರಿ ಜಾಗೆಗಳನ್ನು ಪಪಂಗೆ ಹಸ್ತಾಂತರಗೊಳಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ವಾರ್ಡ್‌ಗಳಲ್ಲೂ 24×7 ನೀರು ಸರಬರಾಜು ವ್ಯವಸ್ಥೆಯಾಗಬೇಕು ಮತ್ತು ನೀರಿನ ಸರಬರಾಜು ಬಿಲ್ಲನ್ನು ರದ್ದುಪಡಿಸಬೇಕು. ತಾಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ತಾಲೂಕಾಡಳಿತದ ಎಲ್ಲ ಕಚೇರಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಅದರಂತೆ ಸ್ಥಳೀಯ ಬಿಎಸ್‌ ಎನ್‌ಎಲ್‌ ಜಾಗೆಯನ್ನು ಸ್ಥಳಾಂತರ ಮಾಡಿ ಮಿನಿ ವಿಧಾನಸೌಧ ಕಟ್ಟಡ ಮಾಡಬೇಕು ಎಂದು ಹಲವಾರು ಸಮಸ್ಯೆಗಳನ್ನು ಜನರು ಡಿಸಿ ಗಮನಕ್ಕೆ ತಂದಾಗ ಸೂಕ್ತವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

ತಹಶೀಲ್ದಾರ್‌ ಪಿ.ಜಿ. ಪವಾರ, ಮುಖ್ಯಾ ಧಿಕಾರಿ ವೀರೇಶ ಹಟ್ಟಿ, ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ಅಪ್ಪಸಿ ಮಟ್ಯಾಳ, ಬಾಬು ಭಜಂತ್ರಿ, ದಸ್ತಗಿರ್‌ ಕಲಾದಗಿ, ಶ್ರೀಶೈಲ್‌ ಅಥಣಿ, ನಿಂಗಪ್ಪ ಗಣಿ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ತೌಶಿಪ್‌ ಗಿರಗಾಂವಿ, ಶಿವಪ್ಪ ವಾಲೀಕಾರ, ಶ್ರೀಶೈಲ್‌ ಮುಳವಾಡ, ಪ್ರಮುಖರಾದ ಮಲ್ಲು ಹೆರಕಲ್‌, ಅಶೋಕ ಜಿಡ್ಡಿಬಾಗಿಲ, ಎಂ.ಆರ್‌. ಕಲಾದಗಿ, ದಶರಥ ಈಟಿ, ಇಕ್ಬಾಲ್‌ ನದಾಫ್‌, ಅನ್ವರ್‌ ಕಂಕರಪೀರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next