Advertisement

ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಹುಮ್ಮಸ್ಸು: ದಾವಣಗೆರೆಯಲ್ಲಿ ಪ್ರಧಾನಿ ಮೋದಿ

05:18 PM Mar 25, 2023 | Team Udayavani |

ದಾವಣಗೆರೆ: ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ. ಕರ್ನಾಟಕದ ವಿಕಾಸಕ್ಕಾಗಿ, ಬಹುಮತದ ಸ್ಥಿರ ಸರ್ಕಾರ ಬೇಕಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಪೂರ್ಣ ಬಹುಮತದ ಸರ್ಕಾರವನ್ನು ಗೆಲ್ಲಿಸಬೇಕಿದೆ. ಮನೆ ಮನೆಗೆ ತಲುಪುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

Advertisement

ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿಯ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನ್ನು ಆರಂಭಿಸಿದರು.

ದಾವಣೆಗೆರೆಗೆ ಬರುವ ಅವಕಾಶ ಮತ್ತೆ ಸಿಕ್ಕಿದೆ. ಪ್ರತಿ ಬಾರಿ ನಿಮ್ಮ ಆರ್ಶೀವಾದ ಹೆಚ್ಚುತ್ತಿದೆ. ದಾವಣೆಗೆರೆಯ ಜನತೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಅರಳಿದೆ, ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ ಎಂದರು.

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ವೀಡಿಯೋ ನೋಡಿದೆ. ಮಾಜಿ ಸಿಎಂ ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಾರೂ ದೊಡ್ಡವಲ್ಲ ನಾವೆಲ್ಲರೂ ಒಂದೇ.  ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನ್ನ ಪರಮ ಮಿತ್ರ, ನನ್ನ ಶಕ್ತಿ, ನನ್ನ ಸಹೋದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾಗದವರು ಕರ್ನಾಟಕದ ಜನರನ್ನು ಹೇಗೆ ಗೌರವಿಸುತ್ತಾರೆ? ಬಿಜೆಪಿಗೆ ಜನರು ಮತ್ತು ಪಕ್ಷ ಸಮಾನ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತಲುಪಲೇ ಇಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ತಲುಪುವಂತಾಯಿತು ಎಂದರು.

ವಿಜಯ ಸಂಕಲ್ಪ ಯಾತ್ರೆಯ ಉತ್ಸಾಹ, ನವ ಶಕ್ತಿ, ಪ್ರತಿ ಬೂತಿಗೆ ತಲುಪಿಸಬೇಕಿದೆ. ಆ ಮೂಲಕ ಪ್ರತಿ ಬೂತನ್ನು ಗೆಲ್ಲುವ ಸಂಕಲ್ಪ ಮಾಡಬೇಕಿದೆ. ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಯಾತ್ರೆಯು ಸಾರ್ವಜನಿಕರ ಉತ್ಸಾಹ ಮತ್ತು ಬೆಂಬಲವನ್ನು ಹೇಗೆ ಗಳಿಸಿದೆ ಎಂಬುದನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಆದರೆ ಈಗ ನಮ್ಮ ಜವಾಬ್ದಾರಿಗಳು ಪ್ರಾರಂಭವಾಗುತ್ತವೆ ಎಂದು ಮೋದಿ ಕಾರ್ಯಕರ್ತರಿಗೆ ಹೇಳಿದರು.

ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ. ಇದಕ್ಕೆ ಉದಾಹರಣೆ ಹಿಮಾಚಲ ಪ್ರದೇಶ. ಅವರು ಉದ್ಯೋಗ, ಭತ್ಯೆ, ಕುರಿತಂತೆ ಗ್ಯಾರಂಟಿ ನೀಡಿದ್ದರು. ಮೊನ್ನೆ ಬಜೆಟ್ ಘೋಷಣೆ ಆಯಿತು, ಆದರೆ ಚುನಾವಣಾ ಪೂರ್ವ ಯಾವ ಗ್ಯಾರಂಟಿಯೂ ಅಲ್ಲಿ ಇರಲಿಲ್ಲ, ಇಂತಹ ಕಾಂಗ್ರೆಸ್ ಗ್ಯಾರಂಟಿ ನಂಬಬೇಕೆ ಎಂದ ಅವರು, ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು ಎಂದು ಕರೆ ನೀಡಿದರು.

ಇಡೀ ವಿಶ್ವ ಭಾರತದೆಡೆ ನೋಡಿದರೆ, ಇಡೀ ಭಾರತ ಕರ್ನಾಟಕದ ಕಡೆ ನೋಡುತ್ತದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಕೋವಿಡ್ ನಡುವೆಯೂ ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದಕ್ಕೆ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟಕ್ಕೆ ಅಭಿನಂದನೆ ಕೋರುತ್ತೇನೆ. ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು ಎಂದರು.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ನಿಮ್ಮ ದರ್ಶನಕ್ಕಾಗಿ ನಾನು ಬರುತ್ತೇನೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next