Advertisement

ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ; ಮೂವರ ಬಂಧನ

04:10 PM Nov 27, 2022 | Team Udayavani |

ಮಂಗಳೂರು : ಹಿಂದೂ ಯುವತಿಯೊಂದಿಗೆ ಬಸ್ ನಲ್ಲಿ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಸೈಯದ್‌ ರಶೀಮ್‌ ಉಮರ್‌ ಗೆ (20) ಹಲ್ಲೆ ಗೈದಿರುವ ಆರೋಪದಲ್ಲಿ ಕದ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸುರತ್ಕಲ್ ನ ಮುತ್ತು, ಪ್ರಕಾಶ್ ಮತ್ತು ಅಸೈಗೋಳಿಯ ರಾಕೇಶ್ ಎನ್ನುವವರಾಗಿದ್ದಾರೆ.

Advertisement

ಘಟನೆ ನ.24 ರಂದು ಸಂಜೆ ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ರಶೀಮ್‌ಗೆ ತಂಡವೊಂದು ನಂತೂರಿನಲ್ಲಿ ಬಸ್‌ ಒಳಗೆ ನುಗ್ಗಿ ಹಲ್ಲೆ ನಡೆಸಿತ್ತು. ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್‌ನಲ್ಲಿ ಸಹಪಾಠಿಯಾಗಿದ್ದ ಹಿಂದೂ ಯುವತಿ ಜತೆ ಸೈಯದ್‌ ರಶೀಮ್‌ ಉಮರ್‌ ಪ್ರತೀದಿನ ಪ್ರಯಾಣಿಸುತ್ತಿದ್ದ. ಈ ವಿಚಾರದಲ್ಲಿ 3-4 ಮಂದಿ ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಆತನನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದರು. ಅಷ್ಟರಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರು ಬಂದು ಹೆಚ್ಚಿನ ಹಲ್ಲೆಯಾಗುವುದನ್ನು ತಪ್ಪಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್‌ ರಶೀಮ್‌ ಉಮರ್‌ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next