Advertisement

ಯೋಗ ಎಂಬ ಯೋಗಾನುಯೋಗ

06:24 PM Nov 28, 2019 | mahesh |

ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು ಸ್ಪಿಸ್‌ನವರಿಂದ. ನಮ್ಮ ಊರಿನಲ್ಲಿ ಸ್ಪಿಸ್‌ನವರಿಂದ ಯೋಗ ತರಗತಿ ಆರಂಭವಾಯಿತು. 5 ಗಂಟೆಗೆ ತರಗತಿ ಆರಂಭ ಆಗುವುದಾದರೆ 4 ಗಂಟೆಗೆ ಏಳಬೇಕು. ಯೋಗದ ಬಗ್ಗೆ ತಿಳಿಯಬೇಕೆಂಬ ತವಕ ಹೆಚ್ಚು ಇದ್ದುದರಿಂದ ಹೆಚ್ಚೇನೂ ಕಷ್ಟವಾಗಲಿಲ್ಲ. ಅಂತೂ ಇಂತೂ ಬೆಳಗ್ಗೆ ಎದ್ದು ಅಪ್ಪನೊಂದಿಗೆ ಯೋಗ ತರಗತಿಗೆ ಹೋದೆ.

Advertisement

ಯೋಗ ಶುರುವಾದ ಮೇಲೆ ಬೆಳಗ್ಗೆ ಬೇಗ ಏಳುವುದು ಅಭ್ಯಾಸ ಇಲ್ಲದಿದ್ದುದರಿಂದ ತರಗತಿಯಲ್ಲಿ ಪಾಠ ಕೇಳುವಾಗ ನಿದ್ರಾಯೋಗ ಆರಂಭವಾಯಿತು. ಕೆಲವೊಮ್ಮೆ ತಡೆದುಕೊಳ್ಳಲು ಆಗದಷ್ಟು ನಿದ್ದೆ. ನಿದ್ದೆಯ ಅಮಲಿನಲ್ಲಿ ಮುಖಕ್ಕೆ ಕೈಇಟ್ಟು ಮಲಗಿ ಕೈತಪ್ಪಿದ್ದೂ ಉಂಟು.
“ಮಾವಿನ ಹಣ್ಣಿನ ರುಚಿ ತಿಂದರೇ ತಿಳಿಯುತ್ತದೆ’ ಎಂಬಂತೆ ಯೋಗದ ಅಭ್ಯಾಸವಾಯಿತು. ನಿದ್ದೆ ದೂರವಾಯಿತು. ಯೋಗದ “ಗಂಧಗಾಳಿ’ ಗೊತ್ತಿಲ್ಲದ ನನ್ನಂಥವರಿಗೆ ತುಂಬಾ ತಾಳ್ಮೆಯಿಂದ ಶಿಕ್ಷಕಿಯು, ವಿದ್ಯಾರ್ಥಿಗೆ ಕೈಹಿಡಿದು ಅಕ್ಷರವನ್ನು ಅಭ್ಯಾಸ ಮಾಡುವಂತೆ ಯೋಗಾಭ್ಯಾಸ ಮಾಡಿಸಿದ್ದರು. ವರುಷದಲ್ಲಿ ಒಂದು ಬಾರಿಯೂ ಕೂಡ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನದೇ ಇದ್ದ ನನಗೆ ಅದರ ರುಚಿಯನ್ನು ತೋರಿಸಿದ್ದೆ ಸ್ಪಿಸ್‌.

ಈ ಸಂಘಟನೆ ಕಲಿಸಿದ ಶಿಸ್ತನ್ನು ಮರೆಯುವಂತಿಲ್ಲ. ಯೋಗ ಮಾಡುವಾಗ ಕಷ್ಟವಾದರೆ ಇತರ ಯೋಗಬಂಧುಗಳು ಕೂಡ ಸಹಕರಿಸುತ್ತ ಪ್ರೀತಿ ನೀಡುತ್ತ ಪ್ರೋತ್ಸಾಹಿಸುತ್ತಾರೆ. ನನಗೆ ಯೋಗದ ಹೆಚ್ಚು ತಿಳಿದಿದ್ದರೆ ಅದು ಸ್ಪಿಸ್‌ನಿಂದ. ಈ ಸಮಿತಿಯಲ್ಲಿ ಮಾಡಿದಂತಹ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ ಹಾಗೂ ಸಾರ್ವಜನಿಕ ಮಹಾಲಕ್ಷ್ಮಿ ಅಷ್ಟಕಂ ಸ್ತೋತ್ರ ಪಠಣೆ ಮರೆಯಲಾಗದ ನೆನಪುಗಳು.

ನಿತ್ಯಾಭ್ಯಾಸವಾದ ಮೇಲೆ ದುರ್ಗಾ ನಮಸ್ಕಾರ ಆರಂಭವಾಯಿತು. ದುರ್ಗಾನಮಸ್ಕಾರವನ್ನು ಮಾಡುವಾಗ ಸ್ವಲ್ಪವೂ ಆಯಾಸವಿಲ್ಲದ ಸಂತೋಷದ ಸುರಿಮಳೆ. ದೇವಸ್ಥಾನದ ಅಧಿದೇವತೆಯ ಮಡಿಲಲ್ಲಿ ನಾವೆಲ್ಲರೂ ಮಕ್ಕಳಾದೆವು. ದುರ್ಗಾನಮಸ್ಕಾರ ಮಾಡಿದ ಮೇಲೆ ಮನಸ್ಸಿಗೆ ಹಾಗೂ ದೇಹಕ್ಕೆ ನವೋಲ್ಲಾಸ. ದುರ್ಗಾನಮಸ್ಕಾರದ ನಂತರ ಮಹಾಲಕ್ಷ್ಮಿಅಷ್ಟಕಂ ಸ್ತೋತ್ರಪಠಣ. ನನ್ನ ಜೀವನದಲ್ಲಿ ಆದಂತಹ ಮಹತ್ವದ ಅನುಭವವದು. ಎಲ್ಲ ನೋವು, ದುಃಖವನ್ನು ಆ ತಾಯಿ ಮರೆಸಿದಳು.

ಮೂರುಸಾವಿರ ಯೋಗ ಬಂಧುಗಳನ್ನು ಒಟ್ಟುಗೂಡಿಸುವ ಸ್ಪಿಸ್‌ನ ಪರಿಶ್ರಮಕ್ಕೆ ತಲೆಬಾಗಲೇಬೇಕು. ಅಪಾರ ಯೋಗಬಂಧುಗಳು ಸೇರಿದ್ದರೂ ಕೂಡ ನಿಶ್ಶಬ್ದ ವಾತಾವರಣ ದೇವಸ್ಥಾನಕ್ಕೆ ಬಂದಂಥ ಭಕ್ತ ವೃಂದದವರನ್ನು ಕೂಡ ಮಂತ್ರಮುಗ್ಧರನ್ನಾಗಿಸಿತು.

Advertisement

ಸ್ಪಿಸ್‌ನಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತನನ್ನು ಸರಳ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯವಂತೂ ಅದ್ಭುತ. ನಿಜವಾಗಿಯೂ ಎಲ್ಲಾ ಯೋಗಬಂಧುಗಳು ನಾನು, ನೀನು, ಮೇಲು-ಕೀಳೆಂಬ ಭಾವನೆಯಿಲ್ಲದೆ ಒಂದೇ ಎಂದು ಬೆರೆಯುವ ರೀತಿಯೇ ಸಂತೋಷವನ್ನು ನೀಡುತ್ತದೆ. ಎಲ್ಲಾ ಯೋಗಬಂಧುಗಳು “ಹರಿ ಓಂ’ ಎಂದು ಹೇಳುವಾಗ ಆ ಪದದಲ್ಲಿನ ಶಕ್ತಿಯೇ ನಮಗೆ ಸಂತೋಷ ನೀಡುತ್ತದೆ.

ಮರೆಯಲಾಗದ ಅನುಭವವನ್ನು ಪಡೆದ ನಾನೇ ಪುಣ್ಯವಂತೆ. ಈ ಕ್ಷಣವನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಖುಷಿಯಾಗಿ ಕುಣಿಯುವ ಎಂದೆನಿಸುತ್ತದೆ. ಈ ಕ್ಷಣದ ಬಗ್ಗೆ ಎಷ್ಟು ಸಲ ಮಾತನಾಡಿದರೂ ಸಿಗುವ ಸಂತೋಷವೇ ಅಮೂಲ್ಯ. ದೇವಿಯ ಸನ್ನಿಧಾನದಲ್ಲಿ “ಯೋಗ’ ಮಾಡುವಂಥ “ಯೋಗ’ವನ್ನು ನೀಡಿದಂತಹ ಸ್ಪಿಸ್‌ಗೆ ನನ್ನ ನಮಸ್ಕಾರ.

ಯಶಸ್ವಿ ಕಟೀಲು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next