ಬೆಳಗಾವಿ: “ಮಾನವೀಯತೆಗಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದ ಆವರಣದಲ್ಲಿ ಮಂಗಳವಾರ 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಆಯುಷ್ ಇಲಾಖೆ, ಯುವ ಸಬಲೀಕರಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ನೆಹರೂ ಯುವ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ, ಜಿಲ್ಲಾ ಆಯುಷ್ ಅಧಿಕಾರಿಗಳಾದ ಶ್ರೀಕಾಂತ ಸುಣಧೋಳಿ, ಶಂಕರಗೌಡ ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಚಾಲನ ಕ್ರಿಯೆಗಳು, ಸ್ಕಂದ ಸಂಚಾಲನೆ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಭುಜಂಗಾಸನ, ಶಲಭಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಸೇರಿದಂತೆ ವಿವಿಧ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಪ್ರದರ್ಶಿಸಲಾಯಿತು.
Related Articles
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಯೋಗ ಶಿಕ್ಷಕರಾಗಿರುವ ಅಂತರಾಷ್ಟ್ರೀಯ ಯೋಗ ರೆಫರಿಯಾಗಿರುವ ಸಂಕಲ್ಪ ಯೋಗ ಶಾಹುನಗರದ ಆರತಿ ಸಂಕೇಶ್ವರಿ ಅವರು ಯೋಗಾಸನಗಳನ್ನು ಹೇಳಿಕೊಟ್ಟರು.
ಇದಲ್ಲದೇ ಆರತಿ ಸಂಕೇಶ್ವರಿ ಅವರು ಯೋಗ ಸಂಕಲ್ಪ ಮತ್ತು ಪ್ರಾರ್ಥನೆಯನ್ನು ಬೋಧಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸುವರ್ಣ ಪದಕ ವಿಜೇತೆ ಬಾಲಕಿ ದಕ್ಷಾ ಬೇವಿನಮರದ ಭರತನಾಟ್ಯದ ಮೂಲಕ ಅದ್ಭುತ ಯೋಗವನ್ನು ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಇದಾದ ಬಳಿಕ ಅಥರ್ವ ಸವನೂರ ನಾಟ್ಯ ಪ್ರದರ್ಶಿಸಿದರು.
ಜೈನ್ ಹೆರಿಟೇಜ್ ಶಾಲೆ ವಿದ್ಯಾರ್ಥಿಗಳ ತಂಡ ಯೋಗ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನಸೆಳೆಯಿತು. ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.