Advertisement

ಯೋಗದಿಂದ ದೇಹ, ಮನಸು ಕ್ರಿಯಾಶೀಲ; ಜಿಲ್ಲಾಧಿಕಾರಿ ಚಾರುಲತಾ

04:33 PM Jun 22, 2022 | Team Udayavani |

ಚಾಮರಾಜನಗರ: ದೇಹ ಮತ್ತು ಮನಸ್ಸುಗಳ ಕ್ರಿಯಾಶೀಲತೆ, ಉತ್ತಮ ಆರೋಗ್ಯ ಸಂವರ್ಧನೆಗಾಗಿ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹೇಳಿದರು.

Advertisement

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಂಗಳವಾರ ಕೇಂದ್ರ ಆಯುಷ್‌ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್‌ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗನಿರತ ಸಂಘ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ಇಲಾಖೆ ವೃಂದದೊಂದಿಗೆ ಮಾನವೀಯತೆಗಾಗಿ ಯೋಗ ಘೋಷ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಗದ ಅರಿವು ಎಲ್ಲರಿಗೂ ಅಗತ್ಯ: ಯೋಗದಲ್ಲಿ ಅಷ್ಟಾಂಗಯೋಗ ಪ್ರಮುಖವಾಗಿದೆ. ಪತಂಜಲಿ ಯೋಗ ಸೂತ್ರದನ್ವಯ ಯಮ, ನಿಯಮ, ಆಸನ, ಪ್ರಾಣಾಯಾಮ, ಪಥ್ಯಾಹಾರ, ಧ್ಯಾನ, ಧಾರಣ ಹಾಗೂ ಸಮಾಧಿಯಂತಹ ಅಷ್ಟಸೂತ್ರಗಳಿದ್ದು, ಪ್ರತಿದಿನ ಬೆಳಗಿನಿಂದ ಯಮ, ನಿಯಮದಿಂದ ಆರಂಭವಾಗಿ ರಾತ್ರಿ ಸಮಯದ ಸಮಾಧಿವರೆಗಿನ ದಿನಚರಿಯಲ್ಲಿ ನಾವೆಲ್ಲರೂ 8 ಯೋಗಗಳನ್ನು ಅನುಸರಣೆ ಮಾಡುತ್ತೇವೆ. ಜೀವನ ಕ್ರಮವನ್ನು ಉತ್ತಮ ಪಡಿಸಿಕೊಳ್ಳಲು ಯೋಗದ ಅರಿವು ಎಲ್ಲರಿಗೂ ಅಗತ್ಯವಾಗಿದೆ ಎಂದು ಹೇಳಿದರು.

ವಿಶ್ವಕ್ಕೆ ಯೋಗ ಕೊಡುಗೆ: ಆರಂಭದಲ್ಲಿ ಆಯುಷ್‌ ಇಲಾಖೆಯ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಮಾನಸಾ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಚೀನ ಪರಂಪರೆಯ ಪ್ರತೀಕವಾಗಿರುವ ಯೋಗವನ್ನು ಭಾರತ ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಯೋಗ ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆದ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗಿದೆ ಎಂದು ಹೇಳಿದರು. ನ್ಯಾಚುರೋಪಥಿ ಆಸ್ಪತ್ರೆ ವೈದ್ಯೆ ಡಾ.ಮಾನಸಾ, ಯೋಗಪಟು ದೇವಿಕಾ ಅವರು ವೇದಿಕೆಯಲ್ಲಿ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.

ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿ ಡಾ. ಸುಜಾತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ, ಜಿಪಂ ಲೆಕ್ಕಾಧಿಕಾರಿ ಗಂಗಾಧರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌, ಯೋಗ ಶಿಕ್ಷಕರಾದ ನಿಜಗುಣ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಎಲ್ಲಾ ಗಣ್ಯರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next