Advertisement

ಯಡಿಯೂರಪ್ಪ ನಾಯಕತ್ವ ಪ್ರಶ್ನಾತೀತ

09:05 PM Dec 11, 2019 | Lakshmi GovindaRaj |

ಬೆಂಗಳೂರು: ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ 104 ಸ್ಥಾನ ಗೆದ್ದರೂ ಸರ್ಕಾರ ರಚಿಸಲಾಗದೆ 14 ತಿಂಗಳು ಪ್ರತಿಪಕ್ಷದಲ್ಲಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಳಿಕ ಎದುರಾದ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದು ತಮ್ಮ ಸರ್ಕಾರವನ್ನು ಭದ್ರ ಗೊಳಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ನಾಯಕತ್ವ ಹಾಗೂ ಸರ್ಕಾರದ ನೇತೃತ್ವ ಕೂಡ ಅಬಾಧಿತ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಸರ್ಕಾರ ರಚಿಸಿದ ಯಡಿಯೂರಪ್ಪ, ಜು.26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರದ ಪ್ರತಿ ಸಂದರ್ಭದಲ್ಲೂ ಸೂಕ್ತ ನಿರ್ಧಾರ ಕೈಗೊಂಡು, ಯೋಜಿತ ಕಾರ್ಯತಂತ್ರ ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದರ ಫ‌ಲ ಎಂಬಂತೆ ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲ ಅರಳಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಭದ್ರವಾಗಿ ನೆಲೆಯೂರಲು ಸಾಧ್ಯವಾದಂತಾಗಿದೆ.

2018ರ ವಿಧಾನಸಭಾ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸಿದ ಬಿಜೆಪಿ, ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದರೂ 104 ಸ್ಥಾನ ಗೆಲ್ಲಲ್ಲಷ್ಟೇ ಸಾಧ್ಯವಾಯಿತು. ಆಗ ಕಾಂಗ್ರೆಸ್‌, ಜೆಡಿಎಸ್‌ ಮತದಾನೋತ್ತರ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಸ್ಥಾನ ತೊರೆಯಬೇಕಾಯಿತು.

ಮಾತು ಉಳಿಸಿಕೊಂಡ “ಛಲದಂಕಮಲ್ಲ’: ಆಗ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಒಂದು ಮಾತು ಹೇಳಿದ್ದರು. “ಈ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ನಾವು ಮತ್ತೆ ಸರ್ಕಾರ ರಚಿಸುತ್ತೇವೆ’ ಎಂದು ಗುಡುಗಿದ್ದರು. ಅದರಂತೆಯೇ 14 ತಿಂಗಳಲ್ಲೇ ಪಕ್ಷೇತರ ಶಾಸಕ ಆರ್‌.ಶಂಕರ್‌ ಸೇರಿ ಕಾಂಗ್ರೆಸ್‌, ಜೆಡಿಎಸ್‌ನ 17 ಶಾಸಕರು ರಾಜೀ ನಾಮೆ ನೀಡಿದ ಹಿನ್ನೆಲೆಯಲ್ಲಿ ವಿಧಾನ ಸಭೆಯಲ್ಲಿ ಸಂಖ್ಯಾಬಲ ಕುಸಿದ ಸಂದರ್ಭದಲ್ಲಿ ವಿಶ್ವಾಸಮತ ಸಾಬೀತುಪಡಿಸಿ ಯಡಿಯೂರಪ್ಪ ಸರ್ಕಾರ ರಚಿಸಿದರು. ಆಗಿನಿಂದಲೇ ಸುಸ್ಥಿರ ಸರ್ಕಾರ ರಚನೆ ನಿಟ್ಟಿನಲ್ಲಿ ಸದ್ದಿಲ್ಲದೆ ಕೆಲಸ ಆರಂಭಿಸಿದ್ದರು.

ಫ‌ಲ ನೀಡಿದ ಯೋಜಿತ ಕಾರ್ಯತಂತ್ರ: ಹಿಂದಿನ ಸ್ಪೀಕರ್‌ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೊರೆ ಹೋದ ಶಾಸಕರಿಗೆ ಪರೋಕ್ಷವಾಗಿಯೇ ಸೂಕ್ತ ಕಾನೂನು ನೆರವು ಒದಗಿಸುವ ವ್ಯವಸ್ಥೆ ಮಾಡಿದ್ದರು. ಜತೆಗೆ, ಅನರ್ಹಗೊಂಡ ಶಾಸಕರನ್ನೆಲ್ಲಾ ಹಿಡಿದಿಟ್ಟುಕೊಂಡು ತಮ್ಮ ನಿಲುವಿಗೆ ಬದ್ಧವಾಗಿರುವಂತೆ ನೋಡಿಕೊಳ್ಳುವಲ್ಲಿ ಸಫ‌ಲರಾಗಿ ದ್ದರು. ಇನ್ನೊಂದೆಡೆ, ಅನರ್ಹರ ಕ್ಷೇತ್ರಗಳಿಗೆ ನೂರಾರು ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ವಿಶ್ವಾಸ ಮೂಡಿಸಿ ದರು. ಜತೆಗೆ, ಭೀಕರ ನೆರೆಯಿಂದ ಸಂತ್ರಸ್ತರಾದವರಿಗೆ ಇತಿಹಾಸದಲ್ಲೇ ಪ್ರಥಮ ಎನ್ನುವಷ್ಟರ ಮಟ್ಟಿಗೆ ದಾಖಲೆ ಮೊತ್ತದ ಪರಿಹಾರ ಘೋಷಿಸಿ ಸೂಕ್ತವಾಗಿ ಸ್ಪಂದಿಸುವ ಭರವಸೆ ಮೂಡಿಸಿದ್ದರು.

Advertisement

ಅಪಸ್ವರಕ್ಕೆ ಅವಕಾಶವಿಲ್ಲದಂತೆ ಎಚ್ಚರ: ಈ ನಡುವೆ ಅನರ್ಹರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಬಹುತೇಕ ಕಡೆ ಅವರೇ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂಬ ಸಂದೇಶವನ್ನು ಯಡಿಯೂರಪ್ಪ ಮೊದಲೇ ಸ್ಪಷ್ಟ ವಾಗಿ ಸಾರಿದರು. ಇದರಿಂದ ಅಸಮಾಧಾನಕ್ಕೆ ಒಳಗಾಗಲಿದ್ದ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಲವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿದರು. ಇದು ಕೆ.ಆರ್‌.ಪುರ, ಹಿರೇಕೆರೂರು, ಯಲ್ಲಾಪುರ ಸೇರಿ ಕೆಲ ಕ್ಷೇತ್ರಗಳಲ್ಲಿ ಫ‌ಲ ನೀಡಿದಂತಿದೆ.

13 ಅನರ್ಹ ಶಾಸಕರು ಬಿಜೆಪಿಯಿಂದ ನಾಮಪತ್ರ ಸಲ್ಲಿಸುತ್ತಿದ್ದಂತೆ ಅಸಮಾಧಾನಗೊಂಡಿದ್ದ ಹಲವ ರನ್ನು ಖುದ್ದು ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಕರೆಸಿ ಕೊಂಡು ಸಮಾಧಾನಪಡಿಸಿದ್ದರಿಂದ ಅಪಸ್ವರ, ಭಿನ್ನಮತಕ್ಕೆ ಅವಕಾಶವಾಗಲಿಲ್ಲ. ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್‌ ಬಚ್ಚೇಗೌಡ ಅವರು ಗೆಲುವು ಸಾಧಿಸಿದ್ದು, ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ ಸೋತಿರುವುದು ಸ್ವಲ್ಪ ಹಿನ್ನಡೆಯಾದಂತಾಯಿತು. ಉಳಿದಂತೆ ಎಲ್ಲಿಯೂ ಬಂಡಾಯ ಬಿಜೆಪಿಯ ಗೆಲುವಿಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗಿಲ್ಲ.

ಅನರ್ಹ ಶಾಸಕರೇ ಅಭ್ಯರ್ಥಿ: ಸುಪ್ರೀಂಕೋರ್ಟ್‌ ರಾಜೀ ನಾಮೆ ನೀಡಿದ್ದ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದರೂ ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದಂತೆ ಆರ್‌.ರೋಷನ್‌ ಬೇಗ್‌ ಅವರನ್ನು ಹೊರತುಪಡಿಸಿ ಉಳಿದ 16 ಮಂದಿ ನ.14ರಂದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರ ಹಿತ ಕಾಪಾಡಲು ಬದ್ಧ ಎಂದು ಹೇಳುತ್ತಲೇ ಬಂದ ಯಡಿಯೂರಪ್ಪ, ಗೆದ್ದರೆ ಬಹುಪಾಲು ಮಂದಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಕಟಿಸಿದ್ದರು. ಸಚಿವರಾದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆತು ಅಭಿವೃದ್ಧಿಯಾಗುವ ನಿರೀಕ್ಷೆ ಹುಟ್ಟಿಸುವಲ್ಲಿಯೂ ತಕ್ಕ ಮಟ್ಟಿಗೆ ಯಶಸ್ವಿಯಾದರು.

ಒಗ್ಗಟ್ಟು ಪ್ರದರ್ಶನ: 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಬಿಜೆಪಿಯಿಂದ ಕಣಕ್ಕಿಳಿದರೂ ಯಾವುದೇ ಅಸಮಾಧಾನವಿಲ್ಲದಂತೆ ನಾಯಕರೆಲ್ಲ ಒಗ್ಗ ಟ್ಟಾಗಿ ಉಪಚುನಾವಣೆ ಎದುರಿಸುವಂತೆ ಯಡಿ ಯೂರಪ್ಪ ಅವರು ರೂಪಿಸಿದ ಕಾರ್ಯತಂತ್ರವೂ ಫ‌ಲ ನೀಡಿದಂತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು, ಕೇಂದ್ರ ಸಚಿವರು, ಉಪ ಮುಖ್ಯ ಮಂತ್ರಿಗಳು, ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಹಿರಿಯ ನಾಯಕರು, ಸಂಘಟನಾ ಕ್ಷೇತ್ರದ ಪ್ರಮುಖರನ್ನು ಕ್ಷೇತ್ರವಾರು ಉಸ್ತುವಾರಿಗಳನ್ನಾಗಿ ನಿಯೋಜಿಸಿ, ಯೋಜಿತವಾಗಿ ನಡೆಸಿದ ಪ್ರಚಾರ ಬಿಜೆಪಿಯ ಮತಗಳನ್ನು ಒಗ್ಗೂಡಿಸಲು ಸಹಕಾರಿ ಯಾದಂತಿದೆ.

ಪರಿಸ್ಥಿತಿಗೆ ತಕ್ಕಂತೆ ಕಾರ್ಯತಂತ್ರ: ಉಪಚುನಾವಣೆ ಘೋಷಣೆಗೂ ಮೊದಲೇ ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ ವಿಶ್ವಾಸ ಮೂಡಿಸಿದ್ದ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿಯೂ ಯಶಸ್ವಿಯಾದರು. ಉಪಚುನಾವಣೆ ಮತದಾನಕ್ಕೂ ಮುನ್ನ 14 ದಿನಗಳಲ್ಲಿ 28ಕ್ಕೂ ಹೆಚ್ಚು ಸಾರ್ವಜನಿಕ/ ಕಾರ್ಯಕರ್ತರ ಸಭೆ, 20ಕ್ಕೂ ಹೆಚ್ಚು ರೋಡ್‌ ಶೋ ನಡೆಸಿ, ಅಬ್ಬರದ ಪ್ರಚಾರ ನಡೆಸಿದ್ದರು. ಎರಡು ವಾರದಲ್ಲಿ 4,500 ಕಿ.ಮೀ.ಗಿಂತ ಹೆಚ್ಚು ಪ್ರವಾಸ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವುದರ ಜತೆಗೆ ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದರು.

ಬಹುತೇಕ ಕ್ಷೇತ್ರಗಳಲ್ಲಿ ಎರಡು ಸುತ್ತಿನ ಪ್ರಚಾರ ನಡೆಸಿದ್ದರು. ಯಡಿಯೂರಪ್ಪ ಅವರ ಪ್ರವಾಸದ ನಂತರವೇ ಕಾಗವಾಡ, ಅಥಣಿ, ರಾಣೆಬೆನ್ನೂರು, ಯಶವಂತಪುರ ಹಾಗೂ ಕೆ.ಆರ್‌.ಪೇಟೆ ಕ್ಷೇತ್ರಗಳ ರಾಜಕೀಯ ಚಿತ್ರಣ ಬದಲಾಯಿತು ಎಂದು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸಿ ಯಶಸ್ಸು ಕಂಡಿರುವ ಯಡಿಯೂರಪ್ಪ ಅವರು, ರಾಜ್ಯ ಬಿಜೆಪಿಯಲ್ಲಿ ತಾವೊಬ್ಬ ಪ್ರಶ್ನಾತೀತ ನಾಯಕ ಎಂಬುದನ್ನು ಸಾರಿ ಹೇಳಿದ್ದಾರೆ. ಆ ಮೂಲಕ ತಮ್ಮ ನಾಯಕತ್ವ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next