ಬೆಳಗಾವಿ : ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ತನ್ವೀರ್ ಹಶ್ಮಿ ಅವರು ಭಯೋತ್ಪಾದಕ ಗುಂಪು ಐಸಿಸ್ನ ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಗುರುವಾರ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡ ಕುರಿತು ಯತ್ನಾಳ್ ಅವರು ಸೈಯದ್ ತನ್ವೀರ್ ಹಶ್ಮಿ ಅವರಿಗೆ ಐಸಿಸ್ನ ನಂಟು ಇದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳ ನಡೆ ಖಂಡನೀಯ ಎಂದು ಗಂಭೀರ ಆರೋಪ ಮಾಡಿದ್ದರು.
ಆರೋಪದ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ”ಯತ್ನಾಳ್ ಅವರದ್ದೇ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಕೇಂದ್ರೀಯ ಸಂಸ್ಥೆಗಳಿಂದ ತನಿಖೆ ನಡೆಸಲಿ” ಎಂದು ಒತ್ತಾಯಿಸಿದ್ದಾರೆ.
ಹಶ್ಮಿ ಅವರಿಗೆ ಹಲವು ವರ್ಷಗಳಿಂದ ಪರಿಚಯವಿದ್ದು, ಇಷ್ಟು ಸಮಯ ಬಿಜೆಪಿ ಏಕೆ ಮೌನವಾಗಿತ್ತು ಎನ್ನುವುದು ಆಶ್ಚರ್ಯ. ಯತ್ನಾಳ್ ದ್ವೇಷದ, ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆ ಗೆಲ್ಲಲು ಈ ರೀತಿ ಮಾಡಬಾರದು. ಇದಲ್ಲದೆ, ಅವರು ದೊಡ್ಡ ಸುಳ್ಳುಗಾರ. ಹಶ್ಮಿ ಅವರೂ ಆರೋಪವನ್ನು ಸಾಬೀತುಪಡಿಸುವಂತೆ ಕೇಳಿಕೊಂಡಿದ್ದಾರೆ. ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಸರಕಾರವಿದೆ. ಇಷ್ಟು ವರ್ಷಗಳಿಂದ ಅವರು ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಯತ್ನಾಳ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಲು, ವಿಪಕ್ಷ ನಾಯಕರಾಗಲು ಪ್ರಯತ್ನಿಸಿ ವಿಫಲರಾದರು. ಈಗ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.