ಕಳೆದ ಒಂದು ವರ್ಷದಿಂದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಜನರ ಪಾಲಿಗೆ ಯಮನಂಥಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಇತ್ತೀಚೆಗಷ್ಟೇ ಕೇರಳದ ಅರಣ್ಯಾಧಿಕಾರಿಗಳು ಸಫಲರಾಗಿದ್ದಾರೆ. ಪ್ರವಾಸಿ ತಾಣವಾದ ಮುನ್ನಾರ್ನಲ್ಲಿ ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ದಾಳಿ ನಡೆಸುತ್ತಿದ್ದ ಪುಂಡಾನೆ, ಜ.9ರಂದು ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಕೇರಳಿಗರ ಆಗ್ರಹ ಹೆಚ್ಚಿತ್ತು. ಕೇರಳದಲ್ಲಿ ಈ ಕಾಡಾನೆಗಳ ದಾಳಿ ಹೊಸದೇನೂ ಅಲ್ಲ, ಆನೆದಾಳಿ ಹಲವು ಬಾರಿ ರಾಜಕೀಯ ದಾಳವಾಗಿಯೂ ಮಾರ್ಪಾಡಾಗಿದೆ..ಆದರೆ ವಾಸ್ತವವೇನು? ಮನುಷ್ಯ-ಕಾಡಾನೆಗಳ ಸಂಘರ್ಷದ ಅಸಲಿಯತ್ತೇನು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಬಿಂಬಿಸುವಷ್ಟು ಕೈ ಮೀರಿಲ್ಲ
ಕೇರಳದಲ್ಲಿ ಕಾಡಾನೆಗಳ ದಾಳಿ ತೀವ್ರವಾಗಿದೆ ಎಂದು ಹೇಳ ಲಾಗುತ್ತದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ ಎಂದು ದತ್ತಾಂಶಗಳು ತೋರ್ಪಡಿಸಿವೆ. ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 2017ರಲ್ಲಿದ್ದ ಒಟ್ಟು ಕಾಡಾನೆಗಳ ಸಂಖ್ಯೆಯೇ 30,000. ಇದರಲ್ಲಿ ಕೇರಳದಲ್ಲಿ ಶೇ.9 ಅಂದರೆ 5,700 ಕಾಡಾನೆಗಳಿವೆ. 2018-2022ರ ವರೆಗೆ 4 ವರ್ಷದ ಅವಧಿಯಲ್ಲಿ ದೇಶದಲ್ಲಿ 2,036 ಮಂದಿ ಆನೆಗಳ ದಾಳಿಯಿಂದ ಮೃತಪಟ್ಟಿದ್ದು, ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 81.(ಸ್ಥಳೀಯರ ಪ್ರಕಾರ 92) ಇತ್ತೀಚಿನ ದಿನಗಳಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿದೆಯಾದರೂ ಉತ್ತರ ಬಂಗಾಲ, ಒಡಿಶಾದ ಪರಿಸ್ಥಿತಿಗೆ ಹೋಲಿಸಿದರೆ ಇಲ್ಲಿನ ಸಾವು-ನೋವಿನ ಪ್ರಮಾಣ ಕಡಿಮೆ.
ಬೆಳೆ ಬದಲಾವಣೆ ಪರಿಹಾರ
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಆನೆಗಳಿಂದ ಬೆಳಹಾನಿಯ ಪ್ರಮಾಣವೂ ಕಡಿಮೆ ಎಂದೇ ಪರಿಗಣಿಸಬಹುದು. ಕಾರಣ, ಆನೆಗಳು ಹೆಚ್ಚು ದಾಳಿ ಇಡುವುದು ಭತ್ತ-ಬಾಳೆಯಂಥ ಬೆಳೆಗಳ ಮೇಲೆ. ಕೇರಳದಲ್ಲಿ ಕಾಫಿ, ಮೆಣಸು, ಚಹಾ ಪ್ರಮುಖ ಬೆಳೆಗಳಾಗಿದ್ದು, ಅವುಗಳ ಮೇಲೆ ಆಸಕ್ತಿ ಇಲ್ಲದ ಕಾರಣ ಆನೆಗಳು ತೋಟಗಳ ಮೇಲೆ ದಾಳಿ ಮಾಡುವ ಸಂಭವ ಕೂಡ ಕಡಿಮೆ. ಈ ವಿಚಾರ ಅವುಗಳ ಸಂರಕ್ಷಣೆಗೂ ಸಹಕಾರಿಯಾಗಿವೆ.2018 ರಿಂದ 21ರ ನಡುವೆ ದೇಶದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ಕಳ್ಳ ಬೇಟೆಗಾರರ ದಾಳಿಯಿಂದ 251ಆನೆಗಳು ಮೃತಪಟ್ಟಿದ್ದು, ಇದರಲ್ಲಿ ಕೇರಳದ 14 ಆನೆಗಳು ಸೇರಿವೆ.
ಗಂಡಾನೆಗಳ
ದಾಳಿಗೆ ಕಾರಣ ?
ಕೇರಳದಲ್ಲಿ ಗಂಡಾನೆಗಳ ದಾಳಿಯೇ ಹೆಚ್ಚು. ಇದಕ್ಕೆ ಪ್ರಮುಖ ಕಾರಣ, ಗಂಡು ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ. ಆನೆಗಳದ್ದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ತಾಯಿಯ ಜತೆಗಿರುವ ಗಂಡಾನೆ ತನ್ನ ಪ್ರೌಢಾವಸ್ಥೆಯಲ್ಲಿ ಗುಂಪಿನಿಂದ ಚದುರಿ, ಆಹಾರಕ್ಕಾಗಿ ಹುಡುಕಾಟ ನಡೆಸುತ್ತದೆ. ಈ ಸ್ಥಳಾಂತರದ ಸಂದರ್ಭದಲ್ಲೇ ಮನುಷ್ಯರೊಂದಿಗೆ ಸಂಘರ್ಷ ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ದಂತಕಳ್ಳರ ಬೇಟೆಗೆ ಕಡಿವಾಣ ಬಿದ್ದಿರುವುದು ಕೂಡ ಗಂಡಾನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಇನ್ನು ಕೇರಳ ತೇವಾಂಶ ಭೂಮಿಯಾಗಿರುವುದರಿಂದ ಗಂಡಾನೆಗಳು ಹೆಚ್ಚಾಗಿ ಕೇರಳವನ್ನು ಅರಸಿ, ವಲಸೆ ಬರುತ್ತಿವೆ.
Related Articles
ಗಂಡಾನೆಗಳ ಪ್ರತ್ಯೇಕಿಸುವುದು ಅಗತ್ಯ
ಸಾಮಾನ್ಯವಾಗಿ ಗಂಡಾನೆಗಳು ಪ್ರೌಢಾವಸ್ಥೆಗೆ ಬಂದಾಗ ಕೆರಳುವ ಸ್ವಭಾವ ಹೊಂದಿರುತ್ತದೆ. ಈ ವೇಳೆ ಮನುಷ್ಯರ ಮೇಲೆ ಗಂಡಾನೆ ದಾಳಿ ನಡೆಸಿದರೆ ಅದೇ ಪ್ರವೃತ್ತಿಯನ್ನು ಮರಿ ಗಂಡಾನೆಗಳು ಕೂಡ ಅನುಸರಿಸುತ್ತವೆ. ಹೀಗಾಗಿ ಗಂಡಾನೆಗಳನ್ನು ಪ್ರತ್ಯೇಕಿಸುವ ಅಗತ್ಯವಿದೆ. ಪ್ರತೀ ಆನೆಯ ಸ್ವತಂತ್ರ್ಯ ಅಗತ್ಯ ಹೌದಾದರೂ, ಮನುಷ್ಯ ಸಂಕುಲದ ಉಳಿವಿಗಾಗಿ ಇಂಥ ನಿರ್ಣಯಗಳು ಅಗತ್ಯ.
ವರ್ತನೆ ನಿರ್ಧರಿತ ದಾಳಿ
ಕಾಡಾನೆಗಳ ಜತೆಗಿನ ಸಂಘರ್ಷ ಎಷ್ಟು ತೀವ್ರವಾಗಿದೆ ಎಂಬುದನ್ನು ನಿರ್ಧರಿಸುವ ಮುಂಚೆ ನಾವು ಯಾರಲ್ಲಿ ಈ ಪ್ರಶ್ನೆ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಕೇರಳದ ಬುಡಕಟ್ಟು ಜನಾಂಗದವರನ್ನ ಕೇಳಿದರೆ, ಕಾಡಾನೆಗಳ ಜತೆಗಿನ ಅವರ ಸಂಘರ್ಷ ತೀರಾ ಕಡಿಮೆ. ಅದೇ ಪ್ರವಾಸಿ ತಾಣಗಳಲ್ಲಿನ ಜನರನ್ನು ಕೇಳಿದರೆ ಈ ಪ್ರಮಾಣ ಹೆಚ್ಚು ಎಂದೇ ಹೇಳುತ್ತಾರೆ. ವಾಸ್ತವದಲ್ಲಿ ಪ್ರವಾಸಿಗರು ಆನೆಗಳನ್ನು ಕಂಡಾಕ್ಷಣ ಅವುಗಳು ತೆರಳಲು ಮಾರ್ಗ ನೀಡದೇ, ಕಿರುಚುವುದು, ಕಿರಿ-ಕಿರಿ ಮಾಡುವುದು ಹೆಚ್ಚು ಇದರಿಂದ ಉದ್ರಿಕ್ತಗೊಂಡ ಆನೆಗಳು ದಾಳಿ ನಡೆಸಿದ ಪ್ರಸಂಗವೇ ಹೆಚ್ಚು. ಆನೆಗಳ ಜತೆಗೆ ನಾವು ಹೇಗೆ ವರ್ತಿಸುತ್ತೇವೆ ಎಂಬುದೇ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ಆದಾಗ್ಯೂ ಕೆಲವೊಮ್ಮೆ ಪ್ರಚೋದನೆ ಇಲ್ಲದೆಯೂ ಆನೆಗಳು ಉದ್ರಿಕ್ತಗೊಂಡಿದ್ದೂ ಇದೆ ಎಂಬುದು ವನ್ಯಜೀವಿ ಅಪರಾಧ ತನಿಖಾಧಿಕಾರಿ ಜೋಸ್ ಲೂಯಿಸ್ ಅವರ ಅಭಿಪ್ರಾಯ.
ಸೆರೆ ಹಿಡಿದ
ಆನೆಗಳಿಗೆ ನಾಮಕರಣ
ಕೇರಳದಲ್ಲಿ ಸೆರೆ ಹಿಡಿದ ಆನೆಗಳನ್ನು ಪಳಗಿಸಿ, ಅವುಗಳನ್ನು ಕಾಡಾನೆಗಳನ್ನು ಸೆರೆಹಿಡಿ ಯಲು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಸೆರೆ ಹಿಡಿದ ಪ್ರತೀ ಆನೆಗೂ ಅವುಗಳ ಸ್ವಭಾವನ್ನ ಆಧರಿಸಿ, ಹೆಸರನ್ನೂ ಇಡಲಾಗಿದೆ.
-ಮನುಷ್ಯನನ್ನು ತುಳಿದು ಸಾಯಿಸಿ, ಅನಂತರ ಸೆರೆ ಸಿಕ್ಕ ಆನೆಯ ಹೆಸರು ಧೋನಿ
-ಪದೇ ಪದೆ ಅಂಗಡಿಗಳ ಮೇಲೆ ದಾಳಿ ಮಾಡಿ, ಅಕ್ಕಿ ಮೂಟೆಯನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದ ಆನೆಗೆ ಅರಿಕೊಂಬನ್ ಎಂದು ಹೆಸರಿಸಲಾಗಿದೆ. ಅರಿ ಅಂದರೆ ಅಕ್ಕಿ ಎಂದರ್ಥ
-40 ವಯಸ್ಸಿನದಾದರೂ ದಾಂಧಲೆ ಮಾಡುತ್ತಿದ್ದ ಆನೆಗೆ ಪಡಿಯಪ್ಪನ್ ಅಂತ ಹೆಸರಿಡಲಾಗಿದೆ.
– ಹಲಸು (ಚಕ್ಕೆ) ಬೆಳೆಗಳನ್ನಷ್ಟೇ ನಾಶ ಪಡಿಸುತ್ತಿದ್ದ ಆನೆಗೆ ಚಕ್ಕೆಕೊಂಬನ್ ಎಂದು ನಾಮಕರಣ ಮಾಡಲಾಗಿದೆ.
-ಜನರನ್ನು ಅಟ್ಟಾಡಿಸಿ, ಕಿಚಾಯಿಸುತ್ತಿದ್ದ ಆನೆಗೆ ಕಬಾಲಿ ಎಂದು ಹೆಸರಿಡಲಾಗಿದೆ.