ಬೈಂದೂರು: ಮೌಲ್ಯಯುತ ಕಲಾ ಪ್ರಕಾರವಾಗಿ ಯಕ್ಷಗಾನ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಖ್ಯಾತ ಭಾಗವತ ಗೋಪಾಲ ಗಾಣಿಗ ಹೇರಂಜಾಲು ಹೇಳಿದರು.
ಯಕ್ಷ ಸಂಪದ ಕಲಾ ಬಳಗ ಶಿರೂರು, ಯಕ್ಷೋತ್ಸವ -2019 ಇದರ 6ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಯಕ್ಷ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅನೇಕ ಹೊಸತನದ ಪ್ರಯೋಗಗಳಿದ್ದರೂ ಮೂಲ ಸಂಪ್ರದಾಯ ಉಳಿಸಿಕೊಳ್ಳಬೇಕಾದರೆ ಇಂತಹ ಕಾರ್ಯಕ್ರಮ ಹಾಗೂ ತರಬೇತಿಯ ಆವಶ್ಯಕತೆಯಿದೆ ಎಂದು ಅವರು ತಿಳಿಸಿದರು.
ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಶಿರೂರು ಗ್ರಾ.ಪಂ. ಉಪಾಧ್ಯಕ್ಷ ನಾಗೇಶ್ ಮೊಗೇರ್, ಜಿ.ಕ.ಸಾ.ಪ. ಗೌರವ ಕಾರ್ಯದರ್ಶಿ ಡಾ| ಸುಬ್ರಹ್ಮಣ್ಯ ಭಟ್, ಮಾಜಿ ಜಿ.ಪಂ. ಸದಸ್ಯ ಎಸ್.ಮದನ್ ಕುಮಾರ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಮೇಲ್ವಿಚಾರಕ ಶಿವರಾಮ ಪೂಜಾರಿ, ಕಂದಾಯ ಇಲಾಖೆಯ ಸಿಬಂದಿ ಗಿರಿಜಾ ಮೊಗೇರ್ ಉಪಸ್ಥಿತರಿದ್ದರು.
ಯಕ್ಷಗಾನದ ಮಹಾಪೋಷಕರಾದ ಮಹಾದೇವ ಮೇಸ್ತ ಎಂ.ಡಿ. ಮುಂಬಯಿ ಮತ್ತು ಯುವಶಕ್ತಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರನ್ನು ಸಮ್ಮಾನಿಸಲಾಯಿತು.
ಯುವಶಕ್ತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿದರು. ಪತ್ರಕರ್ತ ಗಿರಿ ಶಿರೂರು ವಂದಿಸಿದರು.
ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.