Advertisement

ಬಣ್ಣದ ವೈಭವ- 5 ; ನಮ್ಮತನ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲವೇ ?

07:15 PM Oct 05, 2022 | Team Udayavani |

ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಬೇರೆಲ್ಲಾ ಪಾತ್ರಗಳಿಂದ ಬಣ್ಣದ ವೇಷಗಳಲ್ಲಿ ಸದ್ಯಕ್ಕೆ ಹೆಚ್ಚು ಪ್ರಚಲಿತದಲ್ಲಿರುವ ರಾಕ್ಷಸ ಪಾತ್ರ ಮಹಿಷಾಸುರ. ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಸನ್ನಿವೇಶವೇ ಮಹಿಷಾಸುರನದ್ದು, ಅಷ್ಟೊಂದು ಅಬ್ಬರ, ಆರ್ಭಟ ಆ ಪಾತ್ರದ ವಿಶೇಷತೆ. ಪ್ರೇಕ್ಷಕರೂ ಮಹಿಷ ಪಾತ್ರಧಾರಿಯಿಂದ ಹೆಚ್ಚಿನದ್ದನ್ನೇ ನಿರೀಕ್ಷಿಸುತ್ತಾರೆ.

Advertisement

ತೆಂಕಿನಲ್ಲಿ ಮೊದಲು ಪ್ರದರ್ಶನಗೊಂಡು ಬಡಗು ರಂಗಕ್ಕೆ ಬಂದ ‘ದೇವಿ ಮಹಾತ್ಮೆ’ ಪ್ರಸಂಗದ ಮಹಿಷಾಸುರನ ಪಾತ್ರ ಈಗ ಸಂಪೂರ್ಣವಾಗಿ ತೆಂಕುತಿಟ್ಟಿನ ಕ್ರಮದಲ್ಲೇ ರಂಗದಲ್ಲಿ ಮೆರೆಯುತ್ತಿದೆ. ಈ ಪಾತ್ರವನ್ನು ಬಡಗು ತಿಟ್ಟಿನ ಕ್ರಮದಲ್ಲಿ ಬದಲಾಯಿಸಲು ಸಾಧ್ಯವಿಲ್ಲವೇ ? ಬಡಗುತಿಟ್ಟಿನಲ್ಲಿ ಇತರ ಬಣ್ಣದ ವೇಷಗಳು ಮರೆಯಾದಂತೆ ಮಹಿಷಾಸುರ ಪಾತ್ರವೂ ಸದ್ಯ ಪ್ರೇಕ್ಷಕರಿಗೆ ಪ್ರತ್ಯೇಕವಾಗಿ ಬಡಗುತಿಟ್ಟಿನ ಕ್ರಮದಲ್ಲಿ, ವೇಷ ಭೂಷಣಗಳಲ್ಲಿ ಗುರುತಿಸುವುದು ಕಷ್ಟ ಸಾಧ್ಯ. ಇದಕ್ಕೆ ಹಲವು ಕಾರಣಗಳೂ ಇದೆ.

ಇದನ್ನೂ ಓದಿ : ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಬಡಗುತಿಟ್ಟಿನ ಹೆಚ್ಚಿನ ಬಯಲಾಟ ಮೇಳಗಳಲ್ಲಿ ಬಡಗುತಿಟ್ಟಿನ ಮಹಿಷಾಸುರ ಪಾತ್ರ ಮರೆಯಾಗಲು ಹಲವು ಕಾರಣಗಳಿವೆ. ಪ್ರಮುಖವಾಗಿ ಪಾತ್ರದ ಕುರಿತು ಪ್ರೇಕ್ಷಕರಲ್ಲಿ, ಕಲಾವಿದರಲ್ಲಿ ತನ್ನ ತನ ತೋರುವಲ್ಲಿ ಆಸಕ್ತಿ ಕಡಿಮೆಯಾಗಿರುವುದು. ಪಾತ್ರದ ಕುರಿತು ಬೇರೆಯದ್ದೇ ಆದ ಕಲ್ಪನೆ ಹೆಚ್ಚಿನ ಪ್ರೇಕ್ಷಕರಲ್ಲಿ ಇರುವುದು ಒಂದಾದರೆ, ಅತೀಯಾದ ಅಬ್ಬರ ಪಾತ್ರಕ್ಕೆ ಅಗತ್ಯ, ಸಾಂಪ್ರದಾಯಿಕ ಹಾದಿಯಲ್ಲಿ ಪಾತ್ರ ನಿರ್ವಹಿಸುವ ಬಣ್ಣದ ವೇಷಧಾರಿ ಪಾತ್ರ ನಿರ್ವಹಿಸಿದರೆ ಬಹುಪಾಲು ಪ್ರೇಕ್ಷಕರ ನೀರಿಕ್ಷೆಯ ಮಟ್ಟವನ್ನು ತಲುಪಲು ಸಾಧ್ಯವೇ ಎಂಬ ಅಭಿಪ್ರಾಯ ಬಂದುದು ಇನ್ನೊಂದು ಕಾರಣ.

ತೆಂಕಿಗೂ- ಬಡಗಿಗೂ ವ್ಯತ್ಯಾಸವೇನು?

Advertisement

ಪೌರಾಣಿಕ ಕಥಾ ವಸ್ತುಗಳು, ಪ್ರಸಂಗಗಳ ಪದ್ಯಗಳು ಒಂದೇ ಆದರೂ ಪಾತ್ರ ಪ್ರಸ್ತುತಿ ಯಲ್ಲಿ ಎರಡೂ ತಿಟ್ಟುಗಳಿಗೆ ವ್ಯತ್ಯಾಸಗಳಿವೆ. ಎಲ್ಲಾ ಪಾತ್ರಗಳ ಮುಖವರ್ಣಿಕೆ ಮತ್ತು ವೇಷ ಭೂಷಣಗಳಲ್ಲಿ ಭಿನ್ನತೆ ಇದೆ. ಅದೇ ರೀತಿಯಲ್ಲಿ ರಾಕ್ಷಸ ಪಾತ್ರಗಳಲ್ಲಿಯೂ ಕೂಡ. ಬಡಗುತಿಟ್ಟಿನಲ್ಲಿ ಹಿಂದೆ ರಾಕ್ಷಸ ಪಾತ್ರಗಳಿಗೆ ಚಕ್ರ ತಾಳ ಬಳಸುವ ಕ್ರಮವಿರಲಿಲ್ಲ, ಈಗ ಹೆಚ್ಚಿನ ರಾಕ್ಷಸ ಪಾತ್ರಗಳಿಗೆ ಚಕ್ರತಾಳ ಬಳಕೆಯ ಕ್ರಮವಿದೆ. ಇಲ್ಲಿ ತೆಂಕಿನ ವಿಚಾರಗಳನ್ನು ಆಮದು ಮಾಡಿಕೊಂಡಿರುವುದನ್ನು ಕಾಣಬಹುದು.

ವೇಷಭೂಷಣದಲ್ಲೂ ಅನೇಕ ಬದಲಾವಣೆಗಳಿದ್ದು, ಸ್ವಲ್ಪ ಸ್ವಲ್ಪವೇ ಬದಲಾವಣೆಯಾಗುತ್ತ ಸದ್ಯ ಬಹುಪಾಲು ರಾಕ್ಷಸ ಪಾತ್ರಗಳಿಗೆ ಈಗ ತೆಂಕುತಿಟ್ಟಿನ ಆಹಾರ್ಯ (ವೇಷಭೂಷಣ) ವೇ ಬಳಕೆಯಾಗುತ್ತಿದ್ದು, ಮಹಿಷಾಸುರನ ಪಾತ್ರ ಇದರಿಂದ ಹೊರತಾಗಿ ಕಾಣಿಸುವುದು ದೂರದ ಮಾತಾಗಿದೆ. ಪ್ರಮುಖ ಪಾತ್ರವಾದ ಮಹಿಷಾಸುರನನ್ನು ಭುಜಕೀರ್ತಿ ಇಲ್ಲದೆ ವಿಶಿಷ್ಟ ಕಲ್ಪನೆಯಿಂದ ರಂಗಕ್ಕೆ ಇತ್ತೀಚಿನ ದಿನಗಳಲ್ಲಿ ರಂಗಕ್ಕೆ ತಂದು ಬಣ್ಣದ ವೈಭವಕ್ಕೆ, ಪಾತ್ರದ ಘನತೆ, ಗೌರವ ಕಳೆಯುವಂತಹ ಮನಸ್ಥಿತಿ ಬಡಗಿನಲ್ಲಿ ಇದೆ ಎಂದು ಹಿರಿಯ ವಿಮರ್ಶಕರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಯತ್ನ ಮಾಡಬಹುದೇ?

ಮಹಿಷಾಸುರ ಪಾತ್ರವನ್ನು ಬಡಗು ತಿಟ್ಟಿನ ವೇಷ ಭೂಷಣ ಗಳೊಂದಿಗೆ ರಂಗಕ್ಕೆ ತರಲು ಸಾಧ್ಯತೆ ಇದೆ. ಅದನ್ನೂ ಮಾಡಿದ್ದೇವೆ ಎಂದು ಹಿರಿಯ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಪೂರ್ಣವಾಗಿ ಬಡಗು ತಿಟ್ಟಿನ ಕಲ್ಪನೆಯ ಮುಖವರ್ಣಿಕೆ, ಬಣ್ಣದ ವೇಷದ ರೊಪದಲ್ಲೇ ರಂಗಕ್ಕೆ ತರಲು ಸಾಧ್ಯವಿದೆ. ಕೆಲ ಯುವ ಕಲಾವಿದರು ಪ್ರಯತ್ನಗಳನ್ನೂ ಮಾಡಿದ್ದಾರೆ. ಆದರೆ ಸದ್ಯ ಪರಿಪೂರ್ಣವಾಗಿ ಬಡಗುತಿಟ್ಟಿನ ಮಹಿಷಾಸುರ ಪಾತ್ರ ನೋಡಲು ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರ. ನಾನು ಹಲವು ಬಣ್ಣದ ವೇಷ ಮಾಡಿದ್ದೇನೆ, ಅದೇ ರೀತಿ ಮಹಿಷಾಸುರನ ಪಾತ್ರ ಮಾಡುವಾಗ ಅನೇಕ ಸವಾಲುಗಳನ್ನು ಎದುರಿಸಿದ್ದೆ.

ಪ್ರಮುಖವಾಗಿ ಮಹಿಷಾಸುರನಿಗೆ ಕೊಂಬುಗಳು ಆಕರ್ಷಕವಾಗಿ ಕಟ್ಟಿಕೊಳ್ಳಬೇಕು. ಈ ವೇಷ ಮಾಡಿಕೊಳ್ಳುವಾಗ ಇದೆ ದೊಡ್ಡ ಸಮಸ್ಯೆಯಾಗುತ್ತದೆ. ಇತರ ವೇಷಗಳಿಗೆ ಸಹಕಾರ ನೀಡುವ ಮೇಳದ ಸಹಾಯಕರು ಈ ವಿಚಾರದಲ್ಲಿ ಮಾತ್ರ ದೂರ ಉಳಿಯುತ್ತಿದ್ದರು. ಅವರು ಅಸಹಕಾರ ತೋರುತ್ತಿದ್ದರು. ಸರಿಯಾಗಿ ಕೊಂಬುಗಳನ್ನು ಕಟ್ಟಿ ಕೊಳ್ಳದೆ ಹೋದರೆ ರಂಗದಲ್ಲಿ ಕಳಚಿ ಬಿದ್ದರೆ ನಗೆಪಾಟಲಿಗೆ ಗುರಿಯಾಗುವ ಸಂದರ್ಭ ಬರಬಹುದು. ಹೀಗಾಗಿ ಈ ಪಾತ್ರ ನಿಧಾನವಾಗಿ ಇತರರ ಪಾಲಾಯಿತು ಮತ್ತು ಬಹುಪಾಲು ತೆಂಕಿನ ದಾರಿಯನ್ನೇ ಹಿಡಿಯಿತು. ಅದು ಈಗ ಪಾತ್ರ ಮಾಡುವ ಕಲಾವಿದರಿಗೆ ಸುಲಭವೂ ಮತ್ತು ಹೆಚ್ಚಿನ ಖ್ಯಾತಿ ತಂದು ಕೊಡಲು ಕಾರಣವೂ ಆಗಿರಬಹುದು ಎಂದರು.

ಕೇವಲ ಮಹಿಷಾಸುರ ಮಾತ್ರವಲ್ಲದೆ ಬಡಗಿನ ಅನೇಕ ಪಾತ್ರಗಳು ರಂಗದಲ್ಲಿ ಉಳಿಸಿಕೊಳ್ಳಲು ಶ್ರಮ ಪಡುವ ಅಗತ್ಯವಿದೆ.ಆ ಬಗ್ಗೆ ಗಂಭೀರ ಚರ್ಚೆ , ಕಮ್ಮಟಗಳು ನಡೆಯುವ ಅನಿವಾರ್ಯತೆ ಇದೆ. ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಇಲ್ಲವಾದಲ್ಲಿ ನಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡ ಹಾಗಾಗುತ್ತದೆ ಎಂದು ಜಗನ್ನಾಥ ಆಚಾರ್ಯರು ಸಲಹೆ ನೀಡಿದರು.

ವಿಷ್ಣುದಾಸ್ ಪಾಟೀಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next